ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶಾಸಕ ರಾಜುಗೌಡ ಅಭಿಮತ
ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ವೀರಶರಣ ಮಡಿವಾಳ ಮಾಚಿದೇವ ಸೇರಿದಂತೆ ಅಸಂಖ್ಯಾತ ಶರಣರು ನೀಡಿದ ಸಮಾನತೆಯ ಸಂದೇಶವನ್ನು ನಾವು ಅರಿಯಬೇಕಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ (ಕುದರಿಸಾಲವಾಡಗಿ) ಹೇಳಿದರು.
ಪಟ್ಟಣದ ಕಲ್ಮೇಶ್ವರ ದೇವಸ್ಥಾನ ಸಭಾಭವನದಲ್ಲಿ ಗುರುವಾರ ಜರುಗಿದ ಶ್ರೀಮಡಿವಾಳ ಮಾಚಿದೇವ ಜನ್ಮಭೂಮಿ ಪ್ರತಿಷ್ಠಾನ ಕಲೆ, ಸಾಹಿತ್ಯ, ಸಾಂಸ್ಕೃತಿಕ ವೇದಿಕೆಯ ಚತುರ್ಥ ವಾರ್ಷಿಕೋತ್ಸವ ಹಾಗೂ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಶರಣರು ಕಾಯಕದಲ್ಲಿಯೇ ಸತ್ಯ ಹಾಗೂ ಸ್ವರ್ಗ ಕಂಡುಕೊಂಡಿದ್ದಾರೆ. ಅವರು ತಮ್ಮ ವಚನಗಳ ಮೂಲಕ ತಿಳಿಸಿದ ಸಾಮಾಜಿಕ ನ್ಯಾಯವನ್ನು ಇಂದು ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಸಾನಿಧ್ಯ ವಹಿಸಿ ಮಾತನಾಡಿದ ಸ್ಥಳೀಯ ಗದ್ದಿಗೆಮಠದ ಮಡಿವಾಳೇಶ್ವರ ಸ್ವಾಮೀಜಿ ಪಟ್ಟಣದಲ್ಲಿ ಪ್ರತಿಷ್ಠಾನದ ಮೂಲಕ ಪ್ರತಿವರ್ಷ ಇಂಥ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ ಎಂದರು.
ಶಿಕ್ಷಕ ಅಶೋಕ ಹಂಚಲಿ ಮಾತನಾಡಿ, ನಮ್ಮ ಬದುಕು ಜನ ಮೆಚ್ಚುವಂತಿರಬೇಕು. ನಮ್ಮ ಉತ್ತಮ ಕಾರ್ಯಗಳ ಮೂಲಕ ಬದುಕಿನಲ್ಲಿ ಸಾರ್ಥಕತೆ ಕಂಡುಕೊಳ್ಳಬೇಕು ಎಂದರು.
ಬಸವನಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗಶ್ರೀ ಸಾನಿಧ್ಯ ವಹಿಸಿದ್ದರು. ಸಂಚಾಲಕ ಬಿ.ಎಂ.ಪಾಟೀಲ ಪ್ರಾಸ್ತಾವಿವಾಗಿ ಮಾತನಾಡಿದರು. ಸದಾನಂದ ಬಬಲೇಶ್ವರ ಪ್ರಾರ್ಥಿಸಿ, ಸ್ವಾಗತಿಸಿದರು. ಗಾಯಕ ಸಿದ್ದು ಮೇಲಿನಮನಿ ಹಾಗೂ ಅಮೂಲ್ಯರಿಂದ ವಚನಸುಧೆ ಜರುಗಿತು.
ಇದೇ ಸಂದರ್ಭದಲ್ಲಿ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಪಟ್ಟಣದ ಹಿರಿಯರನ್ನು ಸನ್ಮಾನಿಸಲಾಯಿತು.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ರಮೇಶ ಮಸಬಿನಾಳ, ಡಿ.ಕೆ.ಪಾಟೀಲ, ಬಸಪ್ಪ ದೇವಣಗಾಂವ, ಸಂಗಪ್ಪ ತಡವಲ್, ಬಿ.ಸಿ.ಹಿರೇಮಠ, ಆರ್.ಆರ್.ಮಣೂರ, ಶಾಂತಗೌಡ ಬಿರಾದಾರ, ನಾಗರಾಜ್ ಬಿರಾದಾರ, ಮಲ್ಲಪ್ಪ ಅಗಸರ, ರಮೇಶ ಹಡಪದ, ಸೇರಿದಂತೆ ಚುಟಕು, ಕಸಾಪ, ಅಖಿಲ ಭಾರತ ವಚನ ಸಾಹಿತ್ಯ ಪರಿಷತ್, ಬಸವಶರಣ ಸಂಗಮ ಸೇವಾಸಮಿತಿ, ನಿವೃತ್ತ ನೌಕರರ ಸಂಘ ಹಾಗೂ ದೇವರಹಿಪ್ಪರಗಿ ಗೆಳೆಯರ ಬಳಗದ ಸರ್ವಸದಸ್ಯರು, ಮಡಿವಾಳ ಮಾಚಿದೇವ ಪ್ರತಿಷ್ಠಾನದ ಪದಾಧಿಕಾರಿಗಳು ಇದ್ದರು.
ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಸಮಾರಂಭದಲ್ಲಿ ರಾಷ್ಟ್ರೀಯ ವೀರಗಣಾಚಾರಿ ಪ್ರಶಸ್ತಿ ಪುರಸ್ಕೃತರಾದ ಡಾ.ಆರ್.ಆರ್.ನಾಯಿಕ (ಸಹಕಾರಿ), ಅನೀಲಪ್ರಸಾದ ಏಳಗಿ (ಸಹಕಾರಿ), ಡಾ.ವ್ಹಿ.ಬಿ.ದೇಸಾಯಿ (ವೈದ್ಯಕೀಯ), ನಾಗನಾಥಗೌಡ ಬಿರಾದಾರ (ಕೃಷಿ), ಜಗದೀಶ ಸಾಲಳ್ಳಿ (ಸಾಹಿತ್ಯ), ಕಲ್ಲನಗೌಡ ಬಿರಾದಾರ (ಶಿಕ್ಷಣ) ಮಹಾಂತಯ್ಯ ತಂಬೂರಿಮಠ (ವಿಜ್ಞಾನ), ಬಸನಗೌಡ ಬಿರಾದಾರ (ಶಿಕ್ಷಣ) ಗಣ್ಯರಿಗೆ ವಿಶೇಷ ಸನ್ಮಾನ ಜರುಗಿತು.

