ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ ಲೋಣಿ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ತಿಗೆ ನಾಮ ನಿರ್ದೇಶನ ಮಾಡಬೇಕು ಎಂದು ಜಿಲ್ಲಾ ಗಾಣಿಗ ಸಮಾಜದ ಮುಖಂಡರು ಒತ್ತಾಯಿಸಿದರು.
ಈ ಕುರಿತು ನಗರದಲ್ಲಿ ಜಿಲ್ಲಾ ಗಾಣಿಗ ಸಮಾಜ ಸಂಘದಿಂದ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಡಾ.ಬಾಬು ಸಜ್ಜನ ಮಾತನಾಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಒಬ್ಬ ಅತ್ಯುತ್ತಮ ಸಂಘಟಕರಾಗಿದ್ದು, ಈ ಹಿಂದೆ ಜಿಲ್ಲಾ ಪಂಚಾಯತ ಸದಸ್ಯರಾಗಿ, ಉಪಾಧ್ಯಕ್ಷರಾಗಿ ಹಾಗೂ ಪ್ರಸ್ತುತ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ಬಲವರ್ಧನೆಗೆ ತಮ್ಮದೇ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ.
ಈ ಹಿಂದೆ ಲೋಣಿಯವರು ಸ್ಥಳೀಯ ಸಂಸ್ಥೆಗಳ ಎಂಎಲ್ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೇಟ್ ವಂಚಿತರಾದಾಗ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬೆರಳಣಿಕೆ ಮತಗಳಿಂದ ಪರಭಾವಗೊಂಡರೂ ತೀವ್ರ ಸ್ಪರ್ಧೆ ನೀಡಿ ತಮ್ಮ ಸಾಮರ್ಥ್ಯ ಸಾಭೀತುಪಡಿಸಿದ್ದರು. ತದ ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ, ಎಂಎಲ್ಸಿ ಸುನೀಲಗೌಡ ಪಾಟೀಲ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕರು ಅವರನ್ನು ಸಿಎಂ,ಡಿಸಿಎಂ ಸಮ್ಮುಖದಲ್ಲಿ ಮರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ವೇಳೆ ಮಲ್ಲಿಕಾರ್ಜುನ ಲೋಣಿ ಅವರಿಗೆ ಎಂಎಲ್ಸಿ ಸ್ಥಾನದಂತಹ ಉತ್ತಮ ಸ್ಥಾನಮಾನ ನೀಡುವ ಭರವಸೆ ನೀಡಿದ್ದರು. ಈಗ ಆ ಸಮಯ ಕೂಡಿ ಬಂದಿದೆ. ರಾಜ್ಯದಲ್ಲಿ ವಿಧಾನ ಪರಿಷತ್ ನಾಮನಿರ್ದೇಶನ ಚಟುವಟಿಕೆಗಳು ನಡೆದಿದ್ದು, ಗಾಣಿಗ ಸಮಾಜದ ರಾಜ್ಯಾಧ್ಯಕ್ಷರು ಆಗಿರುವ ಮಲ್ಲಿಕಾರ್ಜುನ ಲೋಣಿಯವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಮೂಲಕ ಬಹುಸಂಖ್ಯಾತ ಗಾಣಿಗ ಸಮಾಜಕ್ಕೆ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಗಾಣಿಗ ಸಮಾಜ ಸಂಘದ ಜಿಲ್ಲಾಧ್ಯಕ್ಷ ಬಿ.ಬಿ. ಪಾಸೋಡಿ ಮಾತನಾಡಿ, ಚಾಣಕ್ಷ ಹಾಗೂ ಸಂಘಟನಾ ಚತುರರಾಗಿರುವ ಮಲ್ಲಿಕಾರ್ಜುನ ಲೋಣಿ ಅವರನ್ನು ಮರಳಿ ಪಕ್ಷಕ್ಕೆ ಮರು ಸೇರ್ಪಡೆಯಾಗುವಾಗ ಎಲ್ಲ ದಿಗ್ಗಜ ಕಾಂಗ್ರೆಸ್ ನಾಯಕರು ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ನೀಡುವ ಆಶ್ವಾಸನೆ ನೀಡಿದ್ದಾರೆ, ಗಾಣಿಗ ಸಮಾಜದ ಪ್ರಮುಖರ ನಿಯೋಗ ಹಲವಾರು ಬಾರಿ, ಸಿಎಂ,ಡಿಸಿಎಂ, ಸಚಿವರುಗಳಾದ ಡಾ. ಎಂ.ಬಿ.ಪಾಟೀಲ, ಶಿವಾನಂದ ಪಾಟೀಲ ಹಾಗೂ ಎಲ್ಲಾ ಕಾಂಗ್ರೆಸ್ ಪ್ರಮುಖರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇವೆ, ಕಾಂಗ್ರೆಸ್ ನಾಯಕರು ಈಗ ಲೋಣಿ ಅವರಿಗೆ ನೀಡಿರುವ ಆಶ್ವಾಸನೆ ಈಡೇರಿಸಲಿ, ಇದು ಸಮಸ್ತ ಗಾಣಿಗ ಸಮಾಜದ ಬೇಡಿಕೆಯಾಗಿದೆ ಎಂದರು.
ಈ ವೇಳೆ ಜಿಲ್ಲಾ ಗಾಣಿಗ ಸಮಾಜದ ಗೌರವಾಧ್ಯಕ್ಷ ಬಿ.ಎಂ.ಪಾಟೀಲ ಕತ್ನಳ್ಳಿ, ಉಪಾಧ್ಯಕ್ಷ ಶರಣಪ್ಪ ಶ್ಯಾಪೇಟಿ, ಕೋಶಾಧ್ಯಕ್ಷ ಬಿ.ಕೆ.ಚೌಧರಿ, ಉದ್ಯಮಿ ಶಿವಕುಮಾರ ಸಜ್ಜನ, ಯುವ ಗಾಣಿಗ ಘಟಕದ ಜಿಲ್ಲಾಧ್ಯಕ್ಷ ಗುರುನಾಥ ಅಂದೇವಾಡಿ ಹಾಗೂ ಇತರೆ ಸಮಾಜದ ಪ್ರಮುಖರು ಉಪಸ್ಥಿತರಿದ್ದರು.

