ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋಆಪರೇಟಿವ್ ಸೊಸೈಟಿ ಠೇವಣಿದಾರರಲ್ಲಿ ಮುಗಿಲು ಮುಟ್ಟಿದ ಆತಂಕ
ಉದಯರಶ್ಮಿ ದಿನಪತ್ರಿಕೆ
ಬೆಳಗಾವಿ: ನಗರದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅರ್ಬನ್ ಕೋಆಪರೇಟಿವ್ ಸೊಸೈಟಿಯಲ್ಲಿಟ್ಟಿದ್ದ
ಠೇವಣಿದಾರರ ಹಣವನ್ನು ಮರಳಿಸಲು ಯಾವುದೇ ದಿಟ್ಟ ಕ್ರಮಕ್ಕೆ ಮುಂದಾಗದೇ ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ತೀವ್ರವಾಗಿ ಖಂಡಿಸಿದ ನೊಂದ ಠೇವಣಿದಾರರು ಆಕ್ರೋಶಭರಿತರಾಗಿ ಹೋರಾಟದ ಹಾದಿ ತುಳಿಯುವ ನಿರ್ಧಾರಕ್ಕೆ ಬಂದಿದ್ದಾರೆ.
ಈ ಕುರಿತು ಬುಧವಾರ ಪ್ರಕಟಣೆಯಲ್ಲಿ ತಿಳಿಸಿದ ನೊಂದ ಠೇವಣಿದಾರರು,
ಕರ್ನಾಟಕ ಸರಕಾರ ಬಡವರ ಪರ ಕಾಳಜಿ ಎಂದೆನ್ನುವುದು ಸಂಪೂರ್ಣ ಸುಳ್ಳು. ನಾಡು ಕಂಡ ಅತ್ಯಂತ ಭ್ರಷ್ಟ ಸರಕಾರ ಇದಾಗಿದೆ. ಸಹಕಾರ ಕ್ಷೇತ್ರ, ಕಂದಾಯ ಇಲಾಖೆ ಮಂತ್ರಿಗಳು ಜನರ ಹಣವನ್ನು ಕೊಳ್ಳೆ ಹೊಡೆಯಲು ಬಿಟ್ಟು ಮೋಜು ನೋಡುತ್ತಿದ್ದಾರೆ. ಬಹು ಕೋಟಿ ವಂಚನೆ ಹಗರಣದ ಬೆಳಗಾವಿ ಮೂಲದ ಸಂಗೊಳ್ಳಿ ರಾಯಣ್ಣ ಸಹಕಾರಿ ಸಂಸ್ಥೆಯಲ್ಲಿ ಸಾವಿರಾರು ಜನರು ತಮ್ಮ ಉಳಿತಾಯಕ್ಕಾಗಿ ಭವಿಷ್ಯಕ್ಕಾಗಿ ಠೇವಣಿ ಹಣವನ್ನ ಇಟ್ಟಿದ್ದರು. ಚಿತ್ರ ಉದ್ಯಮಿ ಆನಂದ ಅಪ್ಪುಗೋಳ ಎಂಬ ವಂಚಕ ಠೇವಣಿದಾರರಿಗೆ ಪಂಗನಾಮ ಹಾಕಿದ್ದು ಸಾವಿರಾರು ಕೋಟಿ ಆಸ್ತಿಯ ದಾಖಲೆ ಇದ್ದರೂ ಕಳೆದ ಏಳು ವರ್ಷದಿಂದ ಸಂಗೊಳ್ಳಿ ರಾಯಣ್ಣ ಸಹಕಾರಿ ಹಣಕಾಸು ಸಂಸ್ಥೆಯ ಅವ್ಯವಹಾರ ಇನ್ನೂ ಇತ್ಯರ್ಥವಾಗಿಲ್ಲ. 2021`ರಲ್ಲಿ ಬೆಳಗಾವಿ ಅಸಿಸ್ಟೆಂಟ್ ಕಮಿಷನರ್ ಕಚೇರಿಯಲ್ಲಿ ಎಲ್ಲರಿಗೂ ಠೇವಣಿ ಪಾತ್ರದ ನಕಲು ಪ್ರತಿಗಳನ್ನು ಹಚ್ಚಲು ಹೇಳಿ ಅರ್ಜಿಗಳನ್ನು ಸ್ವೀಕರಿಸಿದರು. ಬಡವರು ಕಾರ್ಮಿಕರು ಮದ್ಯಮ ವರ್ಗದವರು
ಅರ್ಜಿ ಸಲ್ಲಿಸಿ ತಾವು ತುಂಬಿದ ಠೇವಣಿ ಹಣ ಬರುವುದೆಂದು ದಾರಿ ಕಾಯ್ದರು. ನಾಲ್ಕು ವರ್ಷ ಗತಿಸಿದವು. ಕಳೆದ ಡಿಸೆಂಬರ್ ನಲ್ಲಿ ವಿಶೇಷಾಧಿಕಾರಿ ( KPID ) ಕಂದಾಯ ಇಲಾಖೆಗೆ ಒಳಪಟ್ಟ ಸಂಸ್ಥೆ ಮತ್ತೆ ಪತ್ರಿಕೆಯಲ್ಲಿ ಜಾಹಿರಾತು ಮಾಡಿ, ಠೇವಣಿದಾರರು ಮತ್ತೆ ಅರ್ಜಿ ಸಲ್ಲಿಸಲು ಹೇಳಿದರು. ಬಡವರು ಕೂಲಿ ಕಾರ್ಮಿಕರು ಬೆಂಗಳೂರಿನ ಮಹಾನಗರದಲ್ಲಿ ರಸ್ತೆ ಬದಿ ಮಲಗಿ ತಮ್ಮ ಕಾಗದ ಪತ್ರಗಳನ್ನು ಸಲ್ಲಿಸಿದರು. ಅದನ್ನು ಅತ್ಯಂತ ಶಿಸ್ತುಬದ್ಧವಾಗಿ ಪರಿಶೀಲಿಸಿ ಅದಕ್ಕೆ ರಸೀದಿ ನೀಡಿದರು. ಹಣ ಬರುತ್ತದೆ ಎಂದು ಮತ್ತೆ ಜನರ ನಂಬಿಕೆ ಈಗ ಹುಸಿಯಾಗಿದೆ. 12 ತಿಂಗಳು ಕಳೆದ ನಂತರ ಈಗ ಅಸಿಸ್ಟೆಂಟ್ ಕಮಿಷನರ್ ಕೆ ಪಿ ಐ ಡಿ ಮೂರನೆಯ ಮತ್ತು ನಾಲ್ಕನೆಯ ಮಹಡಿ ಪೋಡಿಯಂ ಬ್ಲಾಕ್ ಡಾ ಅಂಬೇಡ್ಕರ ವೀಧಿ ಬೆಂಗಳೂರ ಕಚೇರಿಯಲ್ಲಿ ದಿನವಿಡೀ ತಪಾಸಣೆ ಮಾಡಿ ಮುದುಕರು, ಮಹಿಳೆಯರು ಸಲ್ಲಿಸಿದ ಅರ್ಜಿಗಳು ಈಗ ಮತ್ತೆ ತಿರಸ್ಕ್ರತವೆಂದು ಪತ್ರ ಹಾಕಿದ್ದಾರೆ.
ಆನಂದ ಅಪ್ಪುಗೋಳ ಎಂಬ ಮೋಸಗಾರನ ಅಸ್ತಿ ಜಪ್ತಿ ಮಾಡಿ ತನಿಖೆ ನಡೆಸಿ ಶಿಕ್ಷೆ ಕೊಡುವ ಬದಲು ಕೃಷ್ಣಾ ಭೈರೇಗೌಡ ಕಂದಾಯ ಮಂತ್ರಿ, ಕೆ ಏನ್ ರಾಜಣ್ಣ ಸಹಕಾರ ಮಂತ್ರಿ ಮತ್ತು ಜಾಣ ಕುರುಡುತನ ತೋರಿಸುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಈ ಕೂಡಲೇ ನಮಗೆ ಸಹಾಯ ಮಾಡಲಿ. ಇದರಲ್ಲಿ ಎಷ್ಟೋ ಜನರು ಸತ್ತಿದ್ದಾರೆ. ಒಂದು ವೇಳೆ ಸಮಯಕ್ಕೆ ಸರಿಯಾಗಿ ಹಣ ಬರದಿದ್ದರೆ ಮತ್ತಷ್ಟು ಜನರು ಆತ್ಮ ಹತ್ಯೆ ಮಾಡಿಕೊಳ್ಳುವ ಪ್ರಸಂಗ ಬಂದಿದೆ. ಕಂದಾಯ ಇಲಾಖೆಯ ಹಿರಿಯ ಅಧಿಕಾರಿಗಳ ಕಿರುಕಳ ತಪ್ಪಿಸಿ ಸನ್ಮಾನ್ಯ ಮುಖ್ಯ ಮಂತ್ರಿಗಳೇ ಈ ಕೂಡಲೇ ಠೇವಣಿ ಇಟ್ಟ ಹಣವನ್ನು ಸಂಗೊಳ್ಳಿ ರಾಯಣ್ಣ ಅರ್ಬನ್ ಸಹಕಾರ ಸಂಸ್ಥೆಯಿಂದ ಮರುಪಾವತಿಸದಿದ್ದರೆ ಉಗ್ರ ಹೋರಾಟ ಎದುರಿಸಬೇಕಾಗುತ್ತದೆ.
ಕಾರಣ ಆನಂದ ಅಪ್ಪುಗೋಳ ಆಸ್ತಿಯನ್ನು ಹರಾಜು ಹಾಕಿ ಎಲ್ಲ ಸ್ಥಿರ ಚರ ಆಸ್ತಿ ಜಪ್ತಿ ಮಾಡಿ ಅವನ ಬೇನಾಮಿ ಆಸ್ತಿ ಸರಕಾರ ಮುಟ್ಟುಗೋಲು ಹಾಕಿ, ಬಡವರ ಕಾರ್ಮಿಕರ ಮಧ್ಯಮ ವರ್ಗದವರ ಮಹಿಳೆಯರ ಹಣವನ್ನು ನ್ಯಾಯಾಲಯದ ಆದೇಶದಂತೆ ಮರು ಪಾವತಿಸಲು ನೊಂದ ಠೇವಣಿದಾರರು ಪ್ರಕಟಣೆ ಮೂಲಕ ಕೋರಿದ್ದಾರೆ.

