ಉದಯರಶ್ಮಿ ದಿನಪತ್ರಿಕೆ
ದೇವರಹಿಪ್ಪರಗಿ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಛಾಟಿಸಿದ ಕ್ರಮ ಖಂಡಿಸಿ ಯತ್ನಾಳ ಅಭಿಮಾನಿಗಳು ಪ್ರತಿಭಟನೆ ಕೈಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಮೊಹರೆ ಹಣಮಂತ್ರಾಯ ವೃತ್ತದಲ್ಲಿ ಮಂಗಳವಾರ ಬೆಳಿಗ್ಗೆ ಸಭೆ ಸೇರಿದ ತಾಲ್ಲೂಕಿನ ವಿವಿಧ ಗ್ರಾಮಗಳ ಅಭಿಮಾನಿಗಳು ರಾಷ್ಟ್ರೀಯ ಹೆದ್ದಾರಿ-೫೦ರಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ವಿರುಧ್ದ ಧಿಕ್ಕಾರ ಕೂಗುತ್ತ ಅಂಬೇಡ್ಕರ ವೃತ್ತದಲ್ಲಿ ಅರ್ಧಘಂಟೆಗಳ ಕಾಲ ಹೆದ್ದಾರಿ ಬಂದ್ ಮಾಡಿ ಸಭೆ ಆರಂಭಿಸಿದರು.
ಈ ಸಂದರ್ಭದಲ್ಲಿ ಮತಕ್ಷೇತ್ರದ ಬಿಜೆಪಿ ಧುರೀಣ ಬಸನಗೌಡ ಪಾಟೀಲ (ನಾಗರಾಳಹುಲಿ), ಮಾತನಾಡಿ, ಯತ್ನಾಳರನ್ನು ಪಕ್ಷದಿಂದ ಹೊರಹಾಕುವುದರ ಮೂಲಕ ಎಲ್ಲ ಲಿಂಗಾಯತ ಪ್ರಮುಖ ನಾಯಕರನ್ನು ಮೂಲೆಗುಂಪು ಮಾಡುವುದಾಗಿದೆ. ರಾಜ್ಯದಲ್ಲಿ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಹಿಂದೂಗಳ ಬೆನ್ನಿಗೆ ನಿಂತವರು ಯತ್ನಾಳರು ಮಾತ್ರ ಎಂದು ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಮಡುಗೌಡ ಬಿರಾದಾರ, ಎ.ಎಸ್.ಪಾಟೀಲ (ನಡಹಳ್ಳಿ) ನಡೆಯನ್ನು ಪ್ರಸ್ತಾಪಿಸಿ ಮಾತನಾಡುತ್ತ, ದೇವರಹಿಪ್ಪರಗಿ ಮತಕ್ಷೇತ್ರದ ಎರಡು ಅವಧಿಯ ಅಧಿಕಾರ ಅನುಭವಿಸಿದ ತಾವು ಈ ಮತಕ್ಷೇತ್ರದ ಅಭಿವೃದ್ದಿಗೆ ಮಾತ್ರ ಶೂನ್ಯ ಕೊಡುಗೆ ನೀಡಿದ್ದೀರಿ. ನಿಮಗೆ ಯತ್ನಾಳರ ಬಗ್ಗೆಯಾಗಲಿ ಅವರ ನಾಯಕತ್ವದ ಬಗ್ಗೆಯಾಗಲಿ ಮಾತನಾಡುವ ಯಾವ ನೈತಿಕತೆ ಇಲ್ಲ. ಸುಮ್ಮನೆ ಬೇಕಾಬಿಟ್ಟಿ ಬಾಯಿ ಹರಿಬಿಡಬೇಡಿ ಎಂದು ಎಚ್ಚರಿಕೆ ನೀಡಿದರು.
ರೈತಸಂಘದ ಜಿಲ್ಲಾಧ್ಯಕ್ಷ ಶಂಕರಗೌಡ ಹಿರೇಗೌಡರ, ಪಂಚಮಸಾಲಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಗುರುರಾಜ್ ಆಕಳವಾಡಿ, ಸಂಗನಗೌಡ ಬಿರಾದಾರ(ಮುಳಸಾವಳಗಿ), ಕಾಶೀಪತಿ ಕುದರಿ ಮಾತನಾಡಿ, ಉಚ್ಚಾಟನೆ ಮರು ಪರಿಶೀಲಿಸಿ ಯತ್ನಾಳರನ್ನು ಗೌರವಯುತವಾಗಿ ಪಕ್ಷಕ್ಕೆ ಸೇರ್ಪಡೆಗೊಳಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದರು.
ಪಟ್ಟಣ ಪಂಚಾಯಿತಿ ಸದಸ್ಯ ಕಾಸುಗೌಡ ಜಲಕತ್ತಿ, ಮಡಿವಾಳಪ್ಪಗೌಡ ಪಾಟೀಲ, ಪ್ರಕಾಶ ದಾನಗೊಂಡ, ವಿನೋದಗೌಡ ಪಾಟೀಲ, ನಾಗೇಂದ್ರ ಇಂಡಿ, ಮಾಂತೇಶ ವಂದಾಲ, ವೀರೇಶ ಕುದರಿ, ನಿಂಗು ಯಂಭತ್ನಾಳ, ರಾಜೇಂದ್ರ ಭಾವಿಮನಿ, ಮಲ್ಲನಗೌಡ ಜಿಡ್ಡಿಮನಿ, ಕುಮಾರ ಜೋಗೂರ, ಸಾಹೇಬಗೌಡ ಬಿರಾದಾರ, ರಮೇಶ ಮಾಳನೂರ, ಸೋಮು ದೇವೂರ ಸಹಿತ ತಾಲ್ಲೂಕಿನ ಪ್ರಮುಖರು ಇದ್ದರು.

