(ಏ.೦೨ ಬುಧವಾರ) ಆದ್ಯ ವಚನಕಾರ ದೇವರ ದಾಸಿಮಯ್ಯ ಅವರ ಜಯಂತಿ ಪ್ರಯುಕ್ತ ಈ ವಿಶೇಷ ಲೇಖನ
ಲೇಖನ
– ಮಲ್ಲಪ್ಪ. ಸಿ. ಖೊದ್ನಾಪೂರ
ತಿಕೋಟಾ
ವಿಜಯಪುರ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ನಮ್ಮದು ಭರತ ಭೂಮಿ. ವಿಶ್ವದಲ್ಲೇ ಅಧ್ಯಾತ್ಮಿಕತೆ ಮತ್ತು ಧಾರ್ಮಿಕತೆಯಲ್ಲಿ ಅತ್ಯಂತ ಸಮೃದ್ಧವಾದ ದೇಶ. ಅಧ್ಯಾತ್ಮಿಕೆಯನ್ನು ಸಾರಿದ ಪೂಣ್ಯಭೂಮಿ. ಅಂತಹ ಪುಣ್ಯ ಪುರುಷರಲ್ಲಿ ೧೦ ನೇಯ ಶತಮಾನದಲ್ಲಿ ಆದ್ಯ ವಚನಕಾರರಾಗಿ ಹೆಸರುವಾಸಿಯಾವರು ಶ್ರೀ ದೇವರ ದಾಸಿಮಯ್ಯ. ವೃತ್ತಿಯಲ್ಲಿ ನೇಯ್ಗೆಕಾರರಾಗಿದ್ದ ಅವರು ಶಿವನಿಗೆ ಬಟ್ಟೆಯನ್ನು ಕೊಟ್ಟು ಅಪೂರ್ವ ಭಕ್ತಿ ಮೆರೆದಂತಹ ಐತಿಹ್ಯಗಳು ಪುರಾಣಗಳಲ್ಲಿ ಉಲ್ಲೇಖವಾಗಿವೆ. ಅವರು ತಮ್ಮ ವಚನದಲ್ಲಿ,
“ಕಡೆಗೀಲಿಲ್ಲದ ಬಂಡಿ ಹೊಡೆಗೆಡೆಯದೆ ಮಾಣ್ಬುದೆ? ಕಡೆಗೀಲು ಬಂಡಿಗಾಧಾರ. ಈ ಕಡುದರ್ಪವೇರಿದ ಒಡಲೆಂಬ ಬಂಡಿಗೆ ಮೃಢಭಕ್ತರ ನುಡಿಗಡಣವೆ ಕಡೆಗೀಲು ಕಾಣಾ ರಾಮನಾಥ// ”
ಎಂಬ ವಚನದ ಮೂಲಕ ಇಡೀ ಬಸವಾದಿ ಶರಣರಲ್ಲಿ ಅಗ್ರ ಪಂಕ್ತಿಯ ವಚನಕಾರರಾಗಿದ್ದರು.
ದೇವರ ದಾಸಿಮಯ್ಯನವರು ಈಗೀನ ಯಾದಗೀರ ಜಿಲ್ಲೆಯ ಸುರಪುರ ತಾಲೂಕಿನ ಸಪ್ತ ತೀರ್ಥಗಳ ನಿಸರ್ಗ ಸೌಂದರ್ಯದ ನಡುವಿರುವ ಮುದನೂರು ಎಂಬ ಪುಟ್ಟ ಗ್ರಾಮದಲ್ಲಿ ರಾಮನಾಥನ ಪರಮಭಕ್ತರು ಮತ್ತು ಅಧ್ಯಾತ್ಮಿಕ ಜೀವಿಗಳಾದ ರಾಮಯ್ಯ ಮತ್ತು ಶಂಕರಿ ದಂಪತಿಗಳ ಸುಪುತ್ರರಾಗಿ ಜನಿಸಿದರು. ಮನೆತನ ಉದ್ಯೋಗ ನೇಕಾರಿಕೆ ನೇಯ್ಗೆ ಕಾಯಕದಲ್ಲಿದ್ದರೂ ದಾಸಿಮಯ್ಯನವರಿಗೆ ಬಾಲ್ಯದಲ್ಲಿಯೇ ಅಧ್ಯಾತ್ಮ ಮತ್ತು ಆತ್ಮಜ್ಞಾನದ ಬಗ್ಗೆ ಬಹಳ ಹಸಿವು ಹೊಂದಿದ್ದರು. ದಾಸಿಮಯ್ಯನವರು ತಮ್ಮ ಊರಿನ ಆರಾಧ್ಯ ದೈವ ರಾಮನಾಥ ಹೆಸರಿನಲ್ಲಿ ತಮ್ಮ ವಚನಗಳ ಅಂಕಿತನಾಮ ಹೊಂದಿದ್ದರು. ಶಿವಜ್ಞಾನ ಸಂಪನ್ನರಾಗಿದ್ದ ಅವರು ಲೋಕ ಕಲ್ಯಾಣದ ಕೈಂಕರ್ಯ ತೊಟ್ಟು ಚಾಲುಕ್ಯ ರಾಜ್ಯದ ಪೊಟ್ಟಲ ಕೆರೆಯತ್ತ ಸಾಗುತ್ತಾ, ದಾರಿಯಲ್ಲಿ ಶಿವಾನುಭವ ಗೋಷ್ಠಿಗಳನ್ನು ಮಾಡುತ್ತಾ, ಸಾವಿರಾರು ಜನರಿಗೆ ಶಿವದೀಕ್ಷೆ ನೀಡುತ್ತಿದ್ದರು.
ದಾಸಿಮಯ್ಯನವರು ಎದಿರು ನುಡಿಯದೇ ಸಂಸಾರದ ಒಳ ಅರಿವನ್ನು ಅರಿತು ದೇವೆ ಮಾಡಿಕೊಂಡಿರಬಲ್ಲ ತನ್ನ ಸತಿ ದುಗ್ಗಳೆಯಂತಹ ಸತಿ ಇದ್ದರೆ ಸಂಸಾರ ಲೇಸು ಇಲ್ಲದಿದ್ದರೆ ಸನ್ಯಾಸು ಲೇಸು ಎಂದು ಹೇಳುತ್ತಾ, ಸತಿಪತಿಗಳೊಂದಾದ ಭಕ್ತಿ ಹಿತವಾಗಿಪ್ಪುದು ಶಿವಂಗೆ” ಎಂಬ ತಮ್ಮ ವಚನಗಳ ಮೂಲಕ ದಾಂಪತ್ಯ ಜೀವನದ ಮಹತ್ವವನ್ನು ಸಾರುತ್ತಾ ಸ್ತ್ರೀಯರನ್ನು ಗೌರವಿಸಿದವರಲ್ಲಿ ದಾಸಿಮಯ್ಯನವರು ಮೊದಲಿಗರಾಗಿದ್ದಾರೆ. ದೇವರ ದಾಸಿಮಯ್ಯ ಅವರನ್ನು ದೇವಲ ದಾಸಿಮಯ್ಯ ಮತ್ತು ಜೇಡರ ದಾಸಿಮಯ್ಯ ಎಂತಲೂ ಕರೆಯುತ್ತಾರೆ. ಅವರು ಕನ್ನಡದ ಆದ್ಯ ವಚನಕಾರ. ತನ್ನ ಬದುಕಿಗಾಗಿ ಮಾಡುತ್ತಿದ್ದ ನೇಯ್ಗೆವೃತ್ತಿಯ ಜೊತೆಗೆ, ತನ್ನ ಕಾಯಕ ಮತ್ತು ದರ್ಶನದ ಅನುಭವಗಳ ಸಾರವನ್ನು ಬಳಸಿಕೊಂಡು ವಚನಗಳನ್ನು ರಚಿಸಿದ ಶ್ರೇಷ್ಠ ವಚನಕಾರ ಮತ್ತು ಮಹಾ ಕಾಯಕಯೋಗಿ ದಾಸಿಮಯ್ಯನವರು. ಆರಾಧ್ಯ ದೈವನಾಗಿದ್ದ ರಾಮನಾಥ ಲಿಂಗದಿಂದ ಶಿವದೀಕ್ಷೆ ಪಡೆದು ಶ್ರೀಶೈಲಕ್ಕೆ ಹೋಗಿ ತಪಸ್ಸಿನಿಂದ ಶಿವನನ್ನು ಮೆಚ್ಚಿಸಿ, ಮಠಾಧಿಪತಿಗಳಾಗಿದ್ದ ಚಂದ್ರಕೊಂಡ ದೇಶಿಕೇಂದ್ರನಿಂದ ಶಿವಾನುಭವವನ್ನು ಪಡೆದು ವಸ್ತçಗಳನ್ನು ತಯಾರಿಕೆಯ ಕಾಯಕದಿಂದ ಗುರು ಲಿಂಗ ಮತ್ತು ಜಂಗಮಗಳ ಆರಾಧನೆಯನ್ನು ಮಾಡುತ್ತಿದ್ದರು.
ದಾಸಿಮಯ್ಯನವರ ವಚನಗಳು ದಾಂಪತ್ಯ ಜೀವನ, ಕಾಯಕ ನಿಷ್ಠೆ, ಶಿವತತ್ವ, ಲಿಂಗ ಸಮಾನತೆ, ಆತ್ಮಜ್ಞಾನ, ಅನುಭಾವ-ಅನುಭವ ಮತ್ತು ಭಕ್ತಿತತ್ವಗಳ ಸಾರ-ಸಂದೇಶಗಳಿಂದ ಕೂಡಿವೆ. “ಮೊಲೆ ಮೂಡಿ ಬಂದರೆ ಹೆಣ್ಣೆಂಬರು, ಗಡ್ಡ ಮೀಸೆ ಬಂದರೆ ಗಂಡೆಂಬರು, ನಡುವೆ ಸುಳಿವಾತ್ಮ ಹೆಣ್ಣೂ ಅಲ್ಲ ಗಂಡೂ ಅಲ್ಲ ರಾಮನಾಥ” ಎಂಬ ವಚನದಲ್ಲಿ ದಾಸಿಮಯ್ಯನವರು ಸಮಾಜದಲ್ಲಿ ಗಂಡು-ಹೆಣ್ಣು ಸಮಾನವಾಗಿ ಕಾಣುವ ಬಹು ಎತ್ತರದ ನಿಲುವನ್ನು ತಾಳುತ್ತಾ, ಸಮಾಜದಲ್ಲಿನ ಅಂಕು-ಡೊಂಕುಗಳನ್ನು ತಿದ್ದಿ ಸಾಮಾಜಿಕ ಪರಿವರ್ತನೆಗೆ ಶ್ರಮಿಸಿದವರು. ಇವರು ಷಟ್ಸ್ಥಲಾಚರಣೆ ಮತ್ತು ಶಿವಯೋಗ ಸಾಧನೆಗೆ ಅನುಸಂಧಾನ ಮೊದಲ ಮೆಟ್ಟಿಲು. ವ್ಯಕ್ತಿಯ ಜೀವನದಲ್ಲಿ ಅಂತರಂಗ – ಬಹಿರಂಗಗಳ ನಡುವಿನ ಸೂಕ್ಷ್ಮತೆಗಳನ್ನು ಪರಿಶೋಧಿಸಿ, ಮನದಲ್ಲಿನ ಕಲ್ಮಶವನ್ನು ದೂರ ಮಾಡಿ ಅಂತರಂಗ ಶುದ್ಧಿಯನ್ನು ಹೊಂದಬೇಕೆಂಬುದು ದಾಸಿಮಯ್ಯನವರ ವಚನಗಳ ಸಂದೇಶವಾಗಿತ್ತು. ಯೋಗ್ಯ ಗುರುವಿನ ಲಕ್ಷಣ, ಭಕ್ತಾಭಿಮಾನ, ದಾಸ್ಯಭಾವ, ಸಮರ್ಪಣಾಭಾವ, ಧರ್ಮ ಮತ್ತು ನೀತಿ ಇನ್ನಿತರ ವಿಷಯಗಳ ಕುರಿತು ದಾಸಿಮಯ್ಯನವರ ವಚನಗಳಲ್ಲಿ ಬಹಳ ಅರ್ಥಪೂರ್ಣವಾಗಿ ಪ್ರತಿಪಾದಿತವಾಗಿವೆ. ಅವರು ಬಹಳ ಸರಳ ಭಾಷೆಯಲ್ಲಿ ವಚನಗಳನ್ನು ರಚಿಸಿದರೂ ಭಾವದಲ್ಲಿ ಶ್ರೀಮಂತಿಕೆಯ ಅರ್ಥ ಇರುವುದು ಎದ್ದು ಕಾಣುತ್ತದೆ. ವಚನಗಳ ಭಾಷೆಯಲ್ಲಿ ಸಾಹಿತ್ಯದ ಭಾವ, ಕಾವ್ಯ, ಭಾಷಾ ಸೌಂದರ್ಯ, ಹೊಸತನ ಮತು ಜೀವಂತಿಕೆ ಎಲ್ಲ ದೃಷ್ಟಿಯಿಂದಲೂ ದಾಸಿಮಯ್ಯನವರ ವಚನಗಳು ಎಲ್ಲ ವಚನಕಾರರಿಗಿಂತಲೂ ಎತ್ತರಕ್ಕೆ ನಿಲ್ಲುತ್ತವೆ ಎಂದು ಹೇಳಬಹುದು.

ಕೊನೆಯ ನುಡಿ
ಬಸವ ಯುಗದ ಪೂರ್ವದಲ್ಲಿಯೇ ತರ್ಕ, ವಿಡಂಬನೆ, ಜ್ಞಾನದ ಮೂಲಕ ವಚನಗಳನ್ನು ರಚಿಸಿದ ದಾಸಿಮಯ್ಯನವರು ಇಂದಿಗೂ ಅವಿಸ್ಮರಣೀಯರಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರು ನೀಡಿದ ಕೊಡುಗೆ ಅನನ್ಯವಾದುದು. “ಇಳೆ ನಿಮ್ಮದಾನ ಬೆಳೆ ನಿಮ್ಮದಾನ , ಸುಳಿದು ಸೂಸುವ ಗಾಳಿ ನಿಮ್ಮದಾನ, ನಿಮ್ಮ ದಾನವನುಂಡು ಅನ್ಯರನು ಹೊಗಳುವ ಕುನ್ನಿಗಳನೇಂಬೆನಯ್ಯ ರಾಮನಾಥ// ಎಂಬ ವಚನದ ಮೂಲಕ ಈ ಜಗತ್ತು ಶಿವಮಯವಾಗಿದ್ದು, ಈ ಭೂಮಿಯ ಮೇಲೆ ನಡೆಯುತ್ತಿರುವ ಎಲ್ಲವೂ ಕ್ರಿಯೆಗಳು ಆ ಸೃಷ್ಟಿಕರ್ತನ ಮಹಿಮೆಯಿಂದಲೇ. ಅದಕ್ಕಾಗಿ ನಾನು, ನನ್ನದು, ನನ್ನಿಂದಲೇ ಎಂಬ ಅಹಂಭಾವ ಬಿಟ್ಟು, ಎಲ್ಲದಕ್ಕೂ ಕಾರಣನಾದ ಆ ಪರಶಿವನನ್ನು ಸದಾ ಧ್ಯಾನಿಸಬೇಕೆಂಬ ಜೀವನದ ತಿರುಳ ಕುರಿತು ಹೇಳಿದ್ದಾರೆ. ಇಂತಹ ರಾಮನಾಥಪ್ರಿಯ ದಾಸಿಮಯ್ಯನವರು ತಮ್ಮ ವಚನಗಳನ್ನು ಕೇವಲ ಭಕ್ತಿಗಾಗಿ ರಚಿಸಿದ್ದಲ್ಲ ಹೊರತು ಸಾಮಾಜಿಕ ಸಮಾನತೆ, ಕಂದಾಚಾರ, ಮೂಢನಂಬಿಕೆ ಮತ್ತು ಅನಿಷ್ಠ ಪದ್ಧತಿಗಳ ವಿರುದ್ಧ ವಚನಗಳ ಮೂಲಕವೇ ಸಮರ ಸಾರಿದ್ದವರು. ಆದ್ದರಿಂದ ದೇವರ ದಾಸಿಮಯ್ಯನವರ ಜೀವನಾದರ್ಶ, ತತ್ವೋಪದೇಶ, ನೀತಿ, ಸಾರ-ಸಂದೇಶ, ಜೀವನ-ಮೌಲ್ಯಗಳನ್ನು ನಾವೆಲ್ಲರೂ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅವರ ಜಯಂತಿಯನ್ನು ಕೇವಲ ಆಚರಣೆ ಮಾಡಿದರೆ ಸಾಲದು. ನಮ್ಮ ದೈನಂದಿನ ಜೀವನದಲ್ಲಿ ಎಷ್ಟರಮಟ್ಟಿಗೆ ಅಳವಡಿಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗಿದೆ. ಇಂತಹ ಸರ್ವ ಶ್ರೇಷ್ಠ ವಚನಕಾರರ ಜಯಂತಿ ಆಚರಣೆಯ ಮೂಲಕ ಶಾಲೆ-ಕಾಲೇಜುಗಳ ವಿದ್ಯಾರ್ಥಿಗಳಿಗೆ ಇವರ ತತ್ವಾದರ್ಶ ಮತ್ತು ಜೀವನ-ಮೌಲ್ಯಗಳ ಬಗ್ಗೆ ತಿಳಿಸಿ ಕೊಡಬೇಕು. ಅಂದಾಗ ಮಾತ್ರ ಜಯಂತಿ ಆಚರಣೆಯು ಅರ್ಥಪೂರ್ಣವಾಗುತ್ತದೆ ಎಂದು ಹೇಳಬಹುದು.