2025-26ನೇ ಸಾಲಿನ ಆಯ-ವ್ಯಯ ಬಜೆಟ್ ಮಂಡಿಸಿದ ಪೌರಾಯುಕ್ತೆ ಜ್ಯೋತಿ ಗಿರೀಶ
ಉದಯರಶ್ಮಿ ದಿನಪತ್ರಿಕೆ
ಜಮಖಂಡಿ: ನಗರದ ದೇಸಾಯಿ ವೃತ್ತವನ್ನು 40 ಲಕ್ಷ ರೂಗಳಲ್ಲಿ ಅಭಿವೃದ್ಧಿಪಡಿಸಿ ಟ್ರಾಪಿಕ್ ಸಿಗ್ನಲ್ ದೀಪಗಳನ್ನು ಅಳವಡಿಸಲಾಗುವುದು ಎಂದು ಪೌರಾಯುಕ್ತ ಜ್ಯೋತಿ ಗಿರೀಶ ತಿಳಿಸಿದರು.
ನಗರದ ನಗರಸಭೆಯ ಸಭಾ ಭವನದಲ್ಲಿ 2025-26ನೇ ಸಾಲಿನ ಆಯ-ವ್ಯಯ ಬಜೆಟ್ ಸಭೆಯಲ್ಲಿ ಅವರು ಮಾಹಿತಿ ನೀಡಿದರು. 34.84 ಕೋಟಿ ರೂ ನಿರೀಕ್ಷಿತ ಸ್ವೀಕೃತಿಯಾಗಲಿದೆ, 34.78 ಕೋಟಿ ರೂ ನಿರೀಕ್ಷಿತ ಪಾವತಿಯಾಗಲಿದೆ ಒಟ್ಟು 6.60 ಲಕ್ಷ ರೂ ಉಳಿತಾಯ ವಾಗಲಿದೆ ಎಂದು ಬಜೆಟ್ ಮಂಡಿಸಿದರು.
ನಾಡಿನ ಒಳಗಡೆ ಕಾಡು ಎಂಬ ಶೀರ್ಷಿಕೆ ಅಡಿಯಲ್ಲಿ ಉದ್ಯಾನವನ ಅಭಿವೃದ್ಧಿ ಕಾಡು ಬೆಳೆಸುವುದಕ್ಕೆ 20 ಲಕ್ಷ, ಶಿವಾಜಿ ವೃತ್ತ ಅಭಿವೃದ್ಧಿಗೆ 15 ಲಕ್ಷ, ಟಿಪ್ಪು ಸುಲ್ತಾನ ಸರ್ಕಲ್ ಅಭಿವೃದ್ದಿ ಹಾಗೂ ಟ್ರಾಪಿಕ್ ಸಿಗ್ನಲ್ ದೀಪ ಅಳವಡಿಕೆಗೆ 15 ಲಕ್ಷ, ಪರಶುರಾಮ ಉದ್ಯಾನವನ ಅಭಿವೃದ್ಧಿಗೆ 25 ಲಕ್ಷ, ಹಿಂದೂ ರುದ್ರಭೂಮಿ ಅಭಿವೃದ್ಧಿಗೆ 40 ಲಕ್ಷ, ಮುಸ್ಲಿಂ ಸ್ಮಶಾನ ಅಭಿವೃದ್ಧಿಗೆ 20 ಲಕ್ಷ ರೂ, ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆಗೆ, ಬಿಡಾಡಿ ದನಗಳನ್ನು ಗೋಶಾಲೆಗಳಿಗೆ ಸಾಗಿಸಲು ಸೇರಿದಂತೆ ನಗರದ ಸಮಗ್ರ ಅಭೀವೃದ್ಧಿಗೆ ಪೂರಕವಾಗುವಂತೆ ಎಲ್ಲ ವಾರ್ಡುಗಲ್ಲಿ ಮೂಲ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಬಜೆಟ್ನಲ್ಲಿ ಹಣವನ್ನು ಕಾಯ್ದಿರಿಸಲಾಗಿದೆ ಎಂದರು.
ಶಾಸಕ ನಾಡೋಜ ಜಗದೀಶ ಗುಡಗುಂಟಿ ಮಾತನಾಡಿ, ನಗರದ ಜಾಗ ಇಕ್ಕಟ್ಟಾಗಿದೆ ಜನ ವಾಹನ ದಟ್ಟನೆ ಹೆಚ್ಚಾಗಿದೆ ಆ ನಿಟ್ಟಿನಲ್ಲಿ 2 ಸಾವಿರ ಎಕರೆ ಪ್ರದೇಶ ಜಾಗೆ ನೀಡುವಂತೆ ಸಚಿವರಿಗೆ ಮನವರಿಕೆ ಮಾಡಿದ್ದನೆ, ಆಲಮಟ್ಟಿ ಹಿನ್ನಿರಿನಿಂದ 22 ಗ್ರಾಮಗಳು ಜಮಖಂಡಿ ನಗರವನ್ನೆ ಅವಲಂಬಿಸಿವೆ ನಗರ ಪ್ರದೇಶದಲ್ಲಿ ಗ್ರಾಪಂಗಳ ವ್ಯಾಪ್ತಿಗಳು ಇರುವದರಿಂದ ಸೌಕರ್ಯ ಒದಗಿಸಲು ನಗರಸಭೆಯಿಂದ ಕಷ್ಟಸಾಧ್ಯವಾಗುತ್ತದೆ, ಗ್ರಾಮ ಪಂಚಾಯತನವರು ನಗರದಲ್ಲಿರುವ ಹಾಗೂ ಹೊಂದಿಕೊಂಡಿರುವ ವ್ಯಾಪ್ತಿಯನ್ನು ನಗರಸಭೆಗೆ ಬಿಟ್ಟುಕೊಟ್ಟರೆ ಅಭಿವೃದ್ಧಿ ಪಡಿಸಲು ಬಹಳಷ್ಟು ಸಹಕಾರಿಯಾಗುತ್ತದೆ ಹಾಗೂ ನಗರಸಭೆಗೆ ಆದಾಯ ಹೆಚ್ಚಾಗುತ್ತದೆ ಎಂದರು.
ವೇದಿಕೆಯಲ್ಲಿ ನಗರಸಭೆ ಪರಮಾನಂದ ಗವರೋಜಿ, ಉಪಾಧ್ಯಕ್ಷೆ ರೇಖಾ ಕಾಂಬಳೆ ಇದ್ದರು.

