ಲೇಖನ- ಪ್ರೊ.ಬಸವರಾಜ ನೀಲವಾಣಿಉಪನ್ಯಾಸಕರುಚಡಚಣ
ಉದಯರಶ್ಮಿ ದಿನಪತ್ರಿಕೆ
ಚಡಚಣ: ಹಬ್ಬಗಳಲ್ಲಿ ಶ್ರೇಷ್ಠವಾದ ಹಬ್ಬ ಯುಗಾದಿ ಹಬ್ಬ, ಯುಗಾದಿ ಅಂದರೆ ಹೊಸ ಯುಗ ಅಥವಾ ಹೊಸ ವರ್ಷ ಆರಂಭ ಎಂದು ಹಿಂದುಗಳು ನಂಬಿರುವ ಒಂದು ಶುಭ ದಿನ.
ಈ ಹಬ್ಬವು ಚೈತ್ರ ಮಾಸದ ಶುಕ್ಲ ಪಕ್ಷದ ಪಾಡ್ಯದಂದು ಬರುವ ದಿನ. ಹಳ್ಳಿಯ ಜನರಲ್ಲಿ ಯುಗಾದಿ ಹಬ್ಬ ಸುಖ ಸಂತೋಷದ ಹಬ್ಬವಾಗಿದೆ, ಯುಗಾದಿ ಹಬ್ಬದಂದು ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಈ ಹಬ್ಬದ ದಿನದಂದು ಗ್ರಾಮೀಣ ಪದೇಶದಲ್ಲಿ ಮನೆಯ ಮಂದಿ ಕೂಡಿಕೊಂಡು ಮುಂಜಾನೆ ಬೇಗನೆದ್ದು, ಎಣ್ಣೆಯಿಂದ ಮತ್ತು ಬೇವಿನ ಎಲೆಯಿಂದ ಸ್ನಾನ ಮಾಡುತ್ತಾರೆ. ಎಣ್ಣೆ ಸ್ನಾನದ ಉದ್ದೇಶ ವಸಂತ ಋತುವಿನ ಮುಂಬರುವ ಬಿಸಲಿಗೆ ದೇಹವನ್ನು ಸಿದ್ದಪಡಿಸುವದು. ರೋಗವನ್ನು ಹೋಗಲಾಡಿಸುವದು.
ಮನೆಯ ಮುಂದೆ ಮತ್ತು ದೇವರ ಮುಂದೆ ಮಾವಿನ ಎಲೆಯ ತಳಿರು ತೋರನವನ್ನು ಕಟ್ಟುತ್ತಾರೆ. ಮಾವಿನ ತೋರಣಗಳು ತಂಪಾದ ವಾತಾವರಣವನ್ನು ಕೊಡುತ್ತದೆ ಮತ್ತು ಬಿಸಿಲಿನಿಂದ ಶಾಂತಗೊಳಿಸುತ್ತದೆ ಎಂದು ಹಳ್ಳಿಯ ಜನರು ನಂಬಿರುವರು.
ಯುಗಾದಿಯ ದಿನ ಹಳ್ಳಿಯಲ್ಲಿ ಬೇವು ಬೆಲ್ಲ ಮಿಶ್ರಣ ಮಾಡಿ ಒಬ್ಬರಿಗೊಬ್ಬರು ಕೊಟ್ಟು ಶುಭಾಶಯಗಳು ಕೋರುತ್ತಾರೆ. ಬೆಲ್ಲ ಸುಖದ ಸಂಕೇತವಾದರೆ , ಕಹಿಯಾದ ಬೇವು ದುಃಖ ಸಂಕೇತವಾದರೆ, ಜೀವನದಲ್ಲಿ ಸುಖ-ದುಃಖ ಇರುತ್ತದೆ. ಆದ್ದರಿಂದ ಜೀವನದಲ್ಲಿ ಈ ದಿನ ಬೇವು-ಬೆಲ್ಲ ಎರಡು ತಿಂದು ಕಷ್ಟ ಸುಖಗಳನ್ನು ಅನುಭವಿಸಬೇಕೆಂಬ ಅರ್ಥ ಇದೆ. ಬೇವು-ಬೆಲ್ಲವನ್ನು ವರ್ಷದ ಆರಂಭದ ದಿನ ತಿನ್ನಬೇಕು ಎಂದು ನಮ್ಮ ಹಿರಿಯರು ಅಂದಿನಿಂದ ಪದ್ಧತಿಯಾಗಿ ಮಾಡಿಕೊಂಡು ಹಬ್ಬವನ್ನು ಅತಿ ಸಡಗರದಿಂದ ಆಚರಿಸುತ್ತಾ ಬಂದಿದ್ದಾರೆ.
ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಮುಂತಾದವುಗಳನ್ನು ಕೂಡಿಸಿ ಹಳ್ಳಿಯ ಜನರು ಕರೆಯುವ ಪಚ್ಚಡಿಯನ್ನು ತಯಾರಿಸಿ ಮನೆ ಮಂದಿ ಕೂಡಿಕೊಂಡು ಈ ಪಚ್ಚಡಿಯನ್ನು ಯುಗಾದಿ ಹಬ್ಬದಂದು ತಿನ್ನುತ್ತಾರೆ.
ಯುಗಾದಿಯು ಚೈತ್ರ ಮಾಸದಿಂದ ವಸಂತ ಋತು ಶುರುವಾಗುವ ಒಂದು ಕ್ಷಣ, ಈ ಸಮಯದಲ್ಲಿ ಮರ ಗಿಡಗಳಲ್ಲಿ ಹೊಸ ಚಿಗುರು ಬಿಡುವದನ್ನು ಮತ್ತು ಹೂವಿನಿಂದ ಮೈ ತುಂಬಿ ನಿಂತಿರುವದನ್ನು ನಾವು ಯಗಾದಿಯ ದಿವಸ ನಾವು ನೋಡುತ್ತೇವೆ.
ಈ ದಿನ ರೈತರು ಎತ್ತುಗಳನ್ನು ಶೃಂಗರಿಸಿ ಸಂಭ್ರಮದಿಂದ ಹಬ್ಬವನ್ನು ಆಚರಿಸುತ್ತಾರೆ. ರೈತರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಈ ಯುಗಾದಿಯ ಸಮಯ ಒಂದು ಶುಭ ಸಮಯವಾಗಿದೆ.
ಈ ಯುಗಾದಿ ಹಬ್ಬವನ್ನು ಬೇರೆ ಬೇರೆ ರಾಜ್ಯಗಳಲ್ಲಿ ಒಂದೊಂದು ಹೆಸರಿನಲ್ಲಿ ಕರೆಯುತ್ತಾರೆ. ಕರ್ನಾಟಕದಲ್ಲಿ ಇದನ್ನು ಯುಗಾದಿ ಅಂದು ಮತ್ತು ಮಹಾರಾಷ್ಟದಲ್ಲಿ ಗುಡಿಪಾಡವಾ, ಪಾಡ್ಯಮಿ ಎಂದು ಕರೆಯುತ್ತಾರೆ.
ಈ ದಿವಸ ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಅಥವಾ ಕಲ್ಲುಸಕ್ಕರೆಯ ಸರವನ್ನು ಹಾಕಿ ಕೋಲನ್ನು ಒಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ ಎಂದಿಗೂ ಈ ಆಚರಣೆಯನ್ನು ಜನರು ಮಾಡುತ್ತಾ ಬಂದಿದ್ದಾರೆ.
