ಲೇಖನ
– ವೀಣಾ ಹೇಮಂತ್ ಗೌಡ ಪಾಟೀಲ್
ಮುಂಡರಗಿ
ಗದಗ ಜಿಲ್ಲೆ
ಉದಯರಶ್ಮಿ ದಿನಪತ್ರಿಕೆ
ಕಳೆದ ಎರಡು ದಿನಗಳಿಂದ ಮುಖ ಕಿವುಚಿ ಓಡಾಡುತ್ತಿದ್ದ ಮೊಮ್ಮಗ ಒದ್ದಾಟವನ್ನು ಕಂಡು ಅಜ್ಜಿ ಆತನನ್ನು ತನ್ನ ಬಳಿ ಕರೆದು ಆತನ ತಲೆಯನ್ನು ನೇವರಿಸಿ ‘ಏನಾಯಿತು ಮಗು’ ಎಂದು ಕೇಳಿದರು.
ತುಸು ಸಂಕೋಚದಿಂದ ಮೊಮ್ಮಗ “ಏನಿಲ್ಲ ಅಜ್ಜಿ, ತುಸು ಹೊಟ್ಟೆ ನೋವು” ಎಂದು ಹೇಳಿದ.
ಅಜ್ಜಿ ನಸುನಗುತ್ತಾ ನಾನು ಆಡಿಸಿ ಬೆಳೆಸಿದ ಮಗು, ನನ್ನ ಮುಂದೆ ಸಂಕೋಚ ಏಕೆ? ನೀನು ಸರಿಯಾದ ಕಾರಣ ಹೇಳಿದ್ರೆ ನಿನಗೇ ಅನುಕೂಲ’ ಎಂದು ಹೇಳಲು ಮೊಮ್ಮಗ ಅಜ್ಜಿ ಸರಿಯಾಗಿ ಟಾಯ್ಲೆಟ್ ಆಗ್ತಾ ಇಲ್ಲ ಏನೋ ಒಂತರ ಅನ ಈಸಿನೆಸ್ ಫೀಲ್ ಆಗ್ತಾ ಇದೆ.
ಗಂಭೀರವಾಗಿ ತಾನು ಕುಳಿತ ಜಾಗದಿಂದ ಎದ್ದ ಅಜ್ಜಿ ‘ನಾನು ಹೇಳಿದ ಮಾತು ಕೇಳ್ತೀನಿ ಅನ್ನೋದಾದ್ರೆ ಇದಕ್ಕೆ ಪರಿಹಾರ ಹೇಳ್ತೀನಿ’ ಎಂದು ಹೇಳಿದರು.

ಒದ್ದಾಡುತ್ತಿದ್ದ ಮೊಮ್ಮಗ ಖಂಡಿತ ಅಜ್ಜಿ, ಈ ತೊಂದರೆಯಿಂದ ಪಾರಾದರೆ ಸಾಕು. ನೀನು ಹೇಳಿದ್ದನ್ನ ಮಾಡೇ ಮಾಡ್ತೀನಿ, ಅದೇನು ಅಂತ ಹೇಳಿ ಎಂದು ಅತ್ಯುತ್ಸಾಹದಿಂದ ಗೋಗರೆದ.
“ಹಾಗೆಲ್ಲ ಒಂದೇ ದಿನಕ್ಕೆ ಸರಿ ಹೋಗೋದಲ್ಲ ನಾನು ಹೇಳಿದಂತೆ ನೀನು ಕೇಳಬೇಕು ಅಂದ್ರೆ ಮಾತ್ರ ಸರಿ ಹೋಗುತ್ತೆ” ಎಂದು ಅಜ್ಜಿ ಹೇಳಿದಾಗ “ಆಯ್ತು ಅಜ್ಜಿ” ಎಂದು ಸಪ್ಪೆಯಾದ ಮುಖ ಹೊತ್ತು ಹೇಳಿದ.
ಕೂಡಲೇ ಅಜ್ಜಿ ಮೊಮ್ಮಗನಿಗೆ ಒಂದು ಚಮಚ ಹರಳೆಣ್ಣೆಯನ್ನು ಕುಡಿಸಿದರು.. ಮತ್ತೆ ತುಸು ಹರಳೆಣ್ಣೆಯನ್ನು ಬೆಚ್ಚಗೆ ಮಾಡಿ ಆತನ ಹೊಟ್ಟೆಯ ಮೇಲೆ ಹೊಕ್ಕುಳದ ಸುತ್ತಲೂ ಮೆದುವಾಗಿ ತುಸು ಹೊತ್ತು ನೀವಿದರು.
ಮರುದಿನ ಮುಂಜಾನೆಯ ಹೊತ್ತಿಗೆ ಎಲ್ಲವೂ ಸ್ವಚ್ಛವಾಗಿ ನಿರಾಳವಾದ ಭಾವದಿಂದ ಅಜ್ಜಿಯ ಬಳಿ ಬಂದು ಕುಳಿತ ಮೊಮ್ಮಗ ‘ಥ್ಯಾಂಕ್ಯೂ ಸೋ ಮಚ್ ಅಜ್ಜಿ’ ಎಂದು ಅಜ್ಜಿಯನ್ನು ಬಿಗಿಯಾಗಿ ತಬ್ಬಿ ಕೆನ್ನೆಯ ಮೇಲೆ ಮುದ್ದಿಟ್ಟ. ಆದ ತಾನೇ ಚಿಗುರುತ್ತಿದ್ದ ಮೊಮ್ಮಗನ ಮೀಸೆಗಳು ಚುಚ್ಚಿದಂತಾಗಿ ನಸುಮುನಿದ ಅಜ್ಜಿ ಆತನನ್ನು ದೂರ ಸರಿ ಎಂದು ನಸು ಮುನಿಸಿನಿಂದ ಗದರಿದರೂ ಆತನ ವರ್ತನೆ ಅವರಿಗೆ ಪ್ರಿಯವೆನಿಸಿತು.
“ಅಜ್ಜಿ.. ಅದೇನು ಮ್ಯಾಜಿಕ್ ಮಾಡಿದೆ ನೀನು.ಒಂದೇ ದಿನದಲ್ಲಿ ನನ್ನ ಮೋಶನ್ ಕ್ಲಿಯರ್ ಆಯ್ತು ಅಲ್ಲದೆ ಹೊಟ್ಟೆ ನೋವು ಕೂಡ ಮಾಯವಾಗಿ ಹೋಯಿತು” ಎಂದು ಹೇಳಿದ.
“ಏನಿಲ್ಲ ಮುದ್ದು, ಹೊರಗಿಂದ ಬಂದ ಕೂಡಲೇ ಫ್ರಿಡ್ಜ್ ಬಾಗಿಲು ತೆಗೆದು ಅದರಲ್ಲಿರುವ ನೀರನ್ನು ಗಟ-ಗಟ ಅಂತ ಕುಡೀತಿಯಲ್ಲ ಅದೇ ನಿನಗೆ ತೊಂದರೆ ಆಗಿರೋದು” ಎಂದು ಆತನ ತಲೆ ಮೊಟಕಿ ಹೇಳಿದರು.
ಅಂದ್ರೆ ಫ್ರಿಜ್ ನೀರು ಒಳ್ಳೇದಲ್ವಾ ಅಜ್ಜಿ ಅದರಿಂದ ಇಷ್ಟೆಲ್ಲಾ ತೊಂದರೆ ಆಗುತ್ತಾ? ಎಂದು ಮೊಮ್ಮಗ ಕುತೂಹಲದಿಂದ ಕೇಳಿದ.
ಖಂಡಿತ ಒಳ್ಳೆಯದಲ್ಲ.. ಅತಿಯಾದ ತಣ್ಣನೆಯ ಮತ್ತು ಅತಿಯಾದ ಬಿಸಿ ಪದಾರ್ಥ, ನೀರು ಎರಡೂ ಒಳ್ಳೆಯದಲ್ಲ. ಅತಿಯಾದ ಬಿಸಿ ನೀರನ್ನು ಕುಡಿದಾಗಲೂ ನಮ್ಮ ದೇಹದಲ್ಲಿ ಮಲ ಗಟ್ಟಿಯಾಗಿ ವಿಸರ್ಜನೆಯ ಸಮಯದಲ್ಲಿ ತೊಂದರೆಯನ್ನು ಉಂಟುಮಾಡುತ್ತದೆ, ತಣ್ಣಗಿನ ನೀರಾದರೂ ಅಷ್ಟೇ.
ಇದ್ದುದರಲ್ಲಿಯೇ ಸ್ವಲ್ಪ ಉಗುರು ಬೆಚ್ಚಗಿನ ನೀರನ್ನು ಸೇವಿಸಿದರೆ ಒಳ್ಳೆಯದು.. ಇನ್ನು ಬೇಸಿಗೆಯಲ್ಲಿ ಫ್ರಿಡ್ಜ್ ನೀರಿನ ಬದಲಾಗಿ ಗಡಿಗೆಯ ನೀರನ್ನು ಬಳಸಬೇಕು ಅದು ಎಲ್ಲ ರೀತಿಯಿಂದಲೂ ಅತ್ಯುತ್ತಮವಾದ ಆಯ್ಕೆ ಎಂದರು.
” ಅಲ್ಲ ಅಜ್ಜಿ ಬೇಸಿಗೆಯಲ್ಲಿ ಐಸ್ ಕ್ರೀಮ್, ಕೂಲ್ ಡ್ರಿಂಕ್ಸ್ ಎಲ್ಲಾ ನಮಗೆ ಒಳ್ಳೆಯದು ಅಲ್ವಾ” ಎಂಬ ಮೊಮ್ಮಗನ ಪ್ರಶ್ನೆಗೆ ಅಜ್ಜಿ
“ಇಲ್ಲ ಪುಟ್ಟ ಖಂಡಿತವಾಗಿಯೂ ಇದಾವುದೂ ನಮಗೆ ಒಳ್ಳೆಯದಲ್ಲ. ಐಸ್ ಕ್ರೀಮ್ ಮತ್ತು ಕೂಲ್ ಡ್ರಿಂಕ್ಸ್ ಗಳು ನಿಮ್ಮ ಆಗಿನ ದಾಹವನ್ನು ಪೂರೈಸುತ್ತವೆಯೇ ಹೊರತು ಅವು ನಿಮಗೆ ಒಳ್ಳೆಯದಲ್ಲ. ತಣ್ಣನೆಯ ದ್ರವವನ್ನು ಕುಡಿದಾಗ ಐಸ್ ಕ್ರೀಮ್ ತಿಂದಾಗ ತಕ್ಷಣಕ್ಕೆ ನಿಮಗೆ ಸಮಾಧಾನ ಎನಿಸುತ್ತದೆ ನಿಜ ಆದರೆ ಇವುಗಳ ಅತಿಯಾದ ಉಪಯೋಗ ನಿಮ್ಮ ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ.
ಹಾಗಾದ್ರೆ ಐಸ್ ಕ್ರೀಮ್, ಕೂಲ್ ಡ್ರಿಂಕ್ಸ್ ಯಾವುದನ್ನೂ ಬೇಸಿಗೆಯಲ್ಲಿ ಸೇವಿಸಬಾರದೇ ಅಜ್ಜಿ ಎಂದು ಮೊಮ್ಮಗ ಕೇಳಲು “ಸೇವಿಸಬಾರದು ಅಂತ ಅಲ್ಲ ಆದರೆ ಅತಿ ಸರ್ವತ್ರ ವರ್ಜಯೇತ್ ಎಂಬ ಮಾತನ್ನು ಕೇಳಿಲ್ಲವೇ?ಯಾವುದನ್ನೂ ಅತಿಯಾಗಿ ಬಳಸಬಾರದು.
ಈಗ ನಮ್ಮ ಗಡಿಗೆಯನ್ನೇ ತೆಗೆದುಕೋ.. ಗಡಿಗೆಯ ನೀರು ಈ ರೀತಿ ಯಾವ ಹಾನಿಯನ್ನು ಉಂಟುಮಾಡುವುದಿಲ್ಲ, ಆದರೆ ಆ ನೀರನ್ನು ಕುಡಿದಾಗ ಸಮಾಧಾನ, ತೃಪ್ತಿ ಮತ್ತು ನೆಮ್ಮದಿಯ ನಿಟ್ಟುಸಿರು ಹೊರಬರುತ್ತದೆ. ದಾಹ ತೀರಿದ ಅನುಭವವಾಗುತ್ತದೆ “
ಎಂದು ಅಜ್ಜಿ ಹೇಳಿದರು.
“ಓ..ಅದಕ್ಕೆ ನಿನ್ನೆಯಿಂದ ನೀವು ನನಗೆ ರೆಫ್ರಿಜರೇಟರ್ ನ ನೀರು ಕುಡಿಯೋದಕ್ಕೆ ಬೇಡ ಅಂತ ಹೇಳಿದ್ದು” ಎಂದು ಮೊಮ್ಮಗ ಸೋಜಿಗದಿಂದ ಕೇಳಿದಾಗ ‘ಹೌದು’ ಎಂದು ತಲೆದೂಗಿ ನಸುನಕ್ಕ ಅಜ್ಜಿ ಮತ್ತೆ ಮುಂದುವರೆದು
“ನೋಡು ಪುಟ್ಟ ನಮ್ಮ ಹಿರಿಯರು ಏನೇ ಮಾಡಿದರೂ ಅದಕ್ಕೊಂದು ಅರ್ಥ ಇದೆ.ಮೆದುವಾದ ಜೇಡಿ ಮಣ್ಣನ್ನು ತಂದು ಅದರಲ್ಲಿ ಕಸ ಕಡ್ಡಿಗಳೆಲ್ಲದಂತೆ ಜರಡಿಯಾಡಿ ನೀರನ್ನು ಹಾಕಿ ಕಲಸಿ ಹದವಾಗಿ ತುಳಿದು ಜೋರಾಗಿ ತಿರುಗುತ್ತಿರುವ ತಿಗರಿಯ ಮೇಲೆ ಮಣ್ಣಿನ ಮುದ್ದೆಯನ್ನು ಇಟ್ಟು ನಮಗೆ ಬೇಕಾದ ಆಕಾರಕ್ಕೆ ಗಡಿಗೆಯನ್ನು ತಿರುಗಿಸಿ ದೊಡ್ಡದಾಗಿ ಮಾಡಿಕೊಂಡು ಅದನ್ನು ಬಿಸಿಲಿನಲ್ಲಿ ಒಣಗಿಸಿ, ಮತ್ತೆ ಕಾವು ಕೊಟ್ಟು ಹದ ಮಾಡುವ ಮೂಲಕ ಮಡಿಕೆಗಳನ್ನು ತಯಾರಿಸುತ್ತಾರೆ ಹೀಗೆ ತಯಾರಾಗುವ ಮಡಿಕೆಗಳು ಸ್ವಾಭಾವಿಕವಾಗಿಯೇ ಪುಟ್ಟ ಪುಟ್ಟ ರಂಧ್ರಗಳನ್ನು ಹೊಂದಿದ್ದು ಈ ರಂಧ್ರಗಳ ಮೂಲಕ ಮಡಿಕೆಯಲ್ಲಿ ಹಾಕಿದ ನೀರು ತುಸು ಆವಿಯಾಗಿ ಉಳಿದ ನೀರನ್ನು ತಣ್ಣಗಾಗಿಸುವ ಪ್ರಕ್ರಿಯೆಯಲ್ಲಿ ತೊಡಗುತ್ತದೆ. ಈ ರೀತಿಯಾಗಿ ಗಡಿಗೆ ತನ್ನಲ್ಲಿ ಹಾಕಿದ ನೀರನ್ನು ತಣ್ಣಗಾಗಿಸುವ ಸ್ವಾಭಾವಿಕ ಗುಣವನ್ನು ಹೊಂದಿರುತ್ತದೆ.
“ಆದರೆ, ಈ ನೀರು ಇಂಪ್ಯೂರ್ ಅಲ್ವೇ ಅಜ್ಜಿ?….ಆರ್ ಓ ನೀರಿನಲ್ಲಿ ಇರುವಷ್ಟೇ ಶುದ್ಧತೆ ಈ ನೀರಿನಲ್ಲಿರುತ್ತಾ?” ಎಂದ ಮೊಮ್ಮಗನ ಪ್ರಶ್ನೆಗೆ
” ಮಣ್ಣಿನ ಪಾತ್ರೆಗಳು ನೈಸರ್ಗಿಕವಾಗಿ ನೀರನ್ನು ಶೋಧಿಸುತ್ತವೆ… ಅಷ್ಟಕ್ಕೂ ಆರ್ ಓ ಗಳಲ್ಲಿ ಫಿಲ್ಟರ್ ಆಗುವ ನೀರು ತನ್ನಲ್ಲಿರುವ ಎಲ್ಲಾ ಖನಿಜಗಳನ್ನು ಮಿನರಲ್ ಗಳನ್ನು ಮತ್ತು ಮೈಕ್ರೋ ನ್ಯೂಟ್ರಿಯೆಂಟ್ಗಳನ್ನು ಕಳೆದುಕೊಂಡು ಸಪ್ಪೆಯಾದರೆ, ಗಡಿಗೆಯ ನೀರು ಕೇವಲ ಕಶ್ಮಲಗಳನ್ನು ಮಾತ್ರ ತಳದಲ್ಲಿ ಉಳಿಸಿ ಮೇಲೆ ಶುದ್ಧವಾದ ನೀರನ್ನು ಹೊಂದಿರುತ್ತದೆ. ನಮ್ಮ ಹಿಂದಿನ ಜನರು ಹಿತ್ತಾಳೆ, ತಾಮ್ರ ಮತ್ತು ಮಣ್ಣಿನ ಪಾತ್ರೆಗಳಲ್ಲಿಯೇ ನೀರನ್ನು ಶೇಖರಿಸಿ ಬಳಸುತ್ತಿದ್ದರು. ತೆಳುವಾದ ಮಲ್ಲಿನ ಬಟ್ಟೆಯನ್ನು ಏಳು ಪದರಗಳಲ್ಲಿ ಮಾಡಿ ಈ ದೊಡ್ಡ ಪಾತ್ರೆಗಳ ಬಾಯಿಗೆ ಕಟ್ಟಿ ನೀರನ್ನು ಸೋಸುತಿದ್ದರು. ಕಶ್ಮಲಗಳು ಮಾತ್ರ ತೊಲಗಿ, ಖನಿಜಗಳು ಮಿನರಲ್ ಗಳು ಹಾಗೆಯೇ ಉಳಿದುಕೊಳ್ಳುತ್ತಿದ್ದವಾದ್ದರಿಂದ ನೀರಿನಲ್ಲಿರುವ ಈ ವಸ್ತುಗಳ ಕ್ಷಾರೀಯ ಗುಣದಿಂದಾಗಿ ನಾವು ನೀರನ್ನು ಕುಡಿದ ನಂತರ ಆ ನೀರು ದೇಹದಲ್ಲಿರುವ ಕಶ್ಮಲಗಳನ್ನು ಹೊರಹಾಕಲು ಸಹಾಯಕವಾಗುತ್ತಿತ್ತು. ಅಂದಿನ ಜನರು ಈ ರೀತಿಯ ನೀರನ್ನು ಕುಡಿಯುತ್ತಿದ್ದುದರಿಂದಲೇ ಅವರಿಗೆ ಕೈ ಕಾಲುಗಳಲ್ಲಿ, ಸಂದುಗಳಲ್ಲಿ ನೋವು ಇರುತ್ತಿರಲಿಲ್ಲವಾಗಿ ಅಂದಿನ ಜನರಿಗೆ ನೀರಿನಿಂದ ಬರುವ ಯಾವುದೇ ರೀತಿಯ ಆರೋಗ್ಯ ಸಂಬಂಧಿ ತೊಂದರೆಗಳು ಇರುತ್ತಿರಲಿಲ್ಲ.
ಇನ್ನು ಜ್ವರ ಬಂದಾಗ ಕಾದಾರಿದ ನೀರನ್ನು ಬಳಸುತ್ತಿದ್ದರು.. ಅದೂ ಅಲ್ಲದೆ ನಮ್ಮ ಜನರಿಗೆ
ಅಂದು ದೊರೆಯುತ್ತಿದ್ದ ಆಹಾರ ಪದ್ಧತಿಯಿಂದಾಗಿ ಅವರು ನೈಸರ್ಗಿಕವಾಗಿ ರೋಗ ನಿರೋಧಕ ಶಕ್ತಿಯನ್ನು ಹೊಂದಿದ್ದರು.
ಸಹಜವಾಗಿಯೇ ದೈಹಿಕ ಶ್ರಮದ ಕೆಲಸಗಳನ್ನು ಮಾಡುತ್ತಿದ್ದ ಕಾರಣವೂ ಯಾವುದೇ ರೀತಿಯ ನೋವು ತೊಂದರೆಗಳು ಇರುತ್ತಿರಲಿಲ್ಲ ಅನ್ನು ಎಂದು ಅಜ್ಜಿ ಹೇಳಿದರು. ಇದುವರೆಗೂ ಅಜ್ಜಿಯ ಮಾತುಗಳನ್ನು
ಬೆರಗಿನಿಂದ ಕೇಳಿ ತಲೆದೂಗುತ್ತಿದ್ದ ಮೊಮ್ಮಗ
“ಮತ್ತೆ ಹೊಟ್ಟೆ ನೋವು ಯಾಕೆ ಬಂತು ಅಜ್ಜಿ? ಎಂದು ಪ್ರಶ್ನೆಸಿದ.
ಮೊಮ್ಮಗನ ಪ್ರಶ್ನೆಗೆ ಅತಿಯಾದ ತಣ್ಣಗಿನ ಮತ್ತು ಬಿಸಿಯಾದ ಪದಾರ್ಥಗಳ ಸೇವನೆಯಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗುತ್ತದೆ. ಯಾವುದೇ ಆಹಾರ ಪಚನವಾಗಲು ತಗಲುವ ಸಮಯ ಮತ್ತು ಅದು ದೇಹದಿಂದ ತ್ಯಾಜ್ಯವಾಗಿ ಹೊರಬರುವ ಸಮಯ ಮಿಕ್ಕಿದಾಗ ದೇಹದಲ್ಲಿ ವಿಷವಾಗಿ ಪರಿಣಮಿಸುತ್ತದೆ. ನೀರಿನ ಅಂಶ ಅಪಾನ ವಾಯುವಿನ ಮೂಲಕ ಹೊರ ಹೋಗುವುದರಿಂದ ಮಲ ಕಿಟ್ಟವಾಗಿ ಪರಿವರ್ತನೆಯಾಗುತ್ತದೆ. ಗಟ್ಟಿಯಾದ ಮಲ ಸಂಪೂರ್ಣವಾಗಿ ವಿಸರ್ಜನೆಯಾಗದೆ ಹೋದಾಗ ಅಸಮಾಧಾನ, ಕಿರಿಕಿರಿಯಾಗುತ್ತದೆ ಎಂದು ಅಜ್ಜಿ ನಿಧಾನವಾಗಿ ತಿಳಿಸಿ ಹೇಳಿದರು.
“ಓಹ್!.. ಅದಕ್ಕೆ ನನಗೆ ಹಾಗೆ ತೊಂದರೆಯಾಗಿತ್ತು ಅಲ್ವಾ ಅಜ್ಜಿ’ ಎಂದು ಮೊಮ್ಮಗ ಕೇಳಿದಾಗ ಹೌದು ಪುಟ್ಟ ಎಂದ ಮೊಮ್ಮಗನ ಗದ್ದ ಹಿಡಿದು ಹೌದು ಪುಟ್ಟ ಅದು ಅಲ್ದೆ ಗಡಿಗೆಯ ನೀರಿನಲ್ಲಿ ಪಿಎಚ್ ಮಟ್ಟ ಯಾವಾಗಲೂ ಸರಿಯಾಗಿರುತ್ತದೆ. ಹಾಗೆ ಅಡಿಗೆಯ ನೀರನ್ನು ಸೇವಿಸುವುದರಿಂದ ದೇಹಕ್ಕೆ ಮತ್ತು ಮನಸ್ಸಿಗೆ ಹಿತಕರವಾದ ಅನುಭವ ಉಂಟಾಗುತ್ತದೆ, ಜೊತೆಗೆ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಇರುವುದಿಲ್ಲ ಎಂದು ಹೇಳಿದರು ಅಜ್ಜಿ.
ನಿಜ ಅಜ್ಜಿ, ನೀನು ಹೇಳುವ ಮಾತುಗಳಲ್ಲಿ ಅದೆಷ್ಟು ಸತ್ಯ ಇದೆ.. ಬಹುತೇಕ ನಾವುಗಳು ಟಿವಿಗಳಲ್ಲಿ, ಚಲನಚಿತ್ರಗಳಲ್ಲಿ ತೋರಿಸುವಂತೆ ಮನೆಗೆ ಬಂದೊಡನೆ ಫ್ರಿಡ್ಜ್ ನ ಬಾಗಿಲನ್ನು ತೆರೆದು ಅದರಲ್ಲಿ ತುಂಬಿಟ್ಟ ನೀರಿನ ಬಾಟಲಿಯನ್ನು ಹಾಗೆಯೇ ಎತ್ತಿ ಕುಡಿಯುವ ಮೂಲಕ ಅವರನ್ನು ಅನುಕರಿಸುತ್ತೇವೆ.. ಆ ಮೂಲಕ ನಾವು ಆಧುನಿಕರಾಗಿದ್ದೇವೆ ಎಂದು ಭಾವಿಸುತ್ತೇವೆ ಅಲ್ವಾ ಎಂದು ಕೇಳಲು ಮೊಮ್ಮಗನ ಮುಖವನ್ನು ಸವರಿ ನೆಟಿಗೆ ಮುರಿದ ಅಜ್ಜಿ “ನನ್ನ ಜಾಣ ಬಂಗಾರ ಅಲ್ವಾ ನೀನು ಎಷ್ಟು ಬೇಗ ಎಲ್ಲವನ್ನು ಅರಿತುಕೊಂಡೆ. ಇದೀಗ ಅಷ್ಟೇ ಚೆನ್ನಾಗಿ ಅದನ್ನು ಪಾಲಿಸಿದರೆ ನಿನಗೆ ಯಾವುದೇ ರೀತಿಯ ತೊಂದರೆಗಳು ಕಾಡುವುದಿಲ್ಲ… ನಾನು ಹೇಳಿದಂತೆ ಈ ನಿಯಮಗಳನ್ನು ಪಾಲಿಸ್ತೀಯಾ ತಾನೇ? ಎಂದು ಅಜ್ಜಿ ಕೇಳಲು ತನ್ನ ಬಲ ಕೈಯನ್ನು ಮುಷ್ಟಿ ಮಾಡಿ ಹೆಬ್ಬೆರಳನ್ನು ಮೇಲೆತ್ತಿ ಖಂಡಿತವಾಗಿ ಅಜ್ಜಿ ಎಂದು ಹೇಳಿದ ಮೊಮ್ಮಗನನ್ನು ಕಂಡು ಸಂತಸದಿಂದ ಅಜ್ಜಿಯು ತನ್ನ ಬಲಗೈ ಮುಷ್ಟಿಯನ್ನು ಮಾಡಿ ಹೆಬ್ಬೆರಳನ್ನು ತೋರಿದರು.
