ಹುತ್ಮಾತ್ಮ ದಿನದ ಪ್ರಯುಕ್ತ ಉಘೇ ವೀರಭೂಮಿ ಕಾರ್ಯಕ್ರಮ | ವಾಗ್ಮಿ ಪ್ರಕಾಶ ಮಲ್ಪೆ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಭಾರತದ ಸ್ವಾತಂತ್ರ ಹೋರಾಟಕ್ಕೆ ಕ್ರಾಂತಿಕಾರಿ ಬದಲಾವಣೆಯ ದಿಕ್ಕನ್ನು ನೀಡಿ ಭಾರತ ಮಾತೆ ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಯಾಗಬೇಕು ಅನ್ನುವ ಉದ್ದೇಶಕ್ಕೆ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಅಮರ ಕಲಿಗಳು ಸ್ಮರಿಸುವುದು ದೇಶದ ಪ್ರತಿಯೊಬ್ಬರ ಕರ್ತವ್ಯ ಎಂದು ವಾಗ್ಮಿ ಪ್ರಕಾಶ ಮಲ್ಪೆ ಮಾತನಾಡಿದರು.
ನಗರದ ಹುತಾತ್ಮ ವೃತ್ತದಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ಭಗತ್ ಸಿಂಗ್, ರಾಜಗುರು, ಸುಖದೇವ, ಅವರ ಹುತಾತ್ಮ ದಿನದ ಪ್ರಯುಕ್ತ ಆಯೋಜಿಸಿದ್ದ ಉಘೇ ವೀರಭೂಮಿ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು ತಾಯ್ನಾಡನ್ನು ಸ್ವತಂತ್ರಗೊಳಿಸುವ ಮಹಾನ್ ಗುರಿಯನ್ನು ಸಾಧಿಸಲು ಯಾವುದೇ ತ್ಯಾಗವು ಸಾಕಾಗುವುದಿಲ್ಲ’ ಸ್ವಾತಂತ್ರ್ಯ ಹೋರಾಟದಲ್ಲಿ ಅವರ ಸಹಚರರಾದ ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಅವರ ಸ್ಪೂರ್ತಿದಾಯಕ ದೃಷ್ಟಿಕೋನವಾಗಿತ್ತು. ಚಂದ್ರಶೇಖರ್ ಆಜಾದ್ ಅವರ ಸಹಾಯದಿಂದ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ (ಎಚ್ಎಸ್ಆರ್ಎ) ಅನ್ನು ರಚಿಸಿದರು ಅದರ ಮೂಲಕ ಸ್ವಾತಂತ್ರದ ಜಾಗೃತಿ ಕಾರ್ಯಕ್ಕೆ ಇಳಿದರು, ಸ್ವಾತಂತ್ರಕ್ಕಾಗಿ ನಾವುಗಳು ಪ್ರಾಣವನ್ನು ತ್ಯಾಗ ಮಾಡಲು ಸಿದ್ಧವೆಂದು ನೇಣಿಗೆ ಹಾಕುವ ದಿನವೂ ನಗು ನಗುತ್ತಾ ” ರಂಗ ದೇ ಬಸಂತಿ ಚೋಲಾ” ಹಾಡನ್ನು ಹಾಡುತ್ತಾ ನೇಣಿಗೆ ಎರಿ ತಮ್ಮ ಪ್ರಾಣವನ್ನು ಅರ್ಪಿಸಿದ ಮೂರು ರತ್ನಗಳು ಎಂದರು.
ಎಬಿವಿಪಿಯ ರಾಜ್ಯ ಕಾರ್ಯದರ್ಶಿ ಸಚಿನ ಕುಳಗೇರಿ ಮಾತನಾಡಿ, ದೇಶದ ಬಲಿದಾನವನ್ನು ಮಾಡಿದ ವ್ಯಕ್ತಿಗಳನ್ನು ಸ್ಮರಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ, ರಾಷ್ಟ್ರೀಯ ಸ್ವಯಸೇವಕ ಸಂಘದ ೧೦೦ ವರ್ಷದ ಕಾಲಘಟ್ಟದಲ್ಲಿ ಸಮಾಜದಲ್ಲಿ ಪಂಚ ಪರಿವರ್ತನೆಯನ್ನು ತರುವ ನಿಟ್ಟಿನಲ್ಲಿ ಪರಿಸರ, ನಾಗರಿಕ ಕರ್ತವ್ಯ,ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ, ಸ್ವದೇಶಿ ವಿಷಯಗಳ ಕುರಿತು ನಮ್ಮಲ್ಲಿ ನಾವು ಬದಲಾವಣೆ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಕೀಲರಾದ ಸಂಗಮೇಶ ಡೋಂಗರಗಾಂವಿ ಮಾತನಾಡಿ ಸಮಾಜದಲ್ಲಿ ಯುವಶಕ್ತಿ ಸಶಕ್ತ ಶೀಲವಂತಾಗಬೇಕಾಗಿದೆ ದಿನನಿತ್ಯ ಅಪರಾಧ ಪ್ರಕರಣಗಳು, ಪೋಕ್ಸೊ ಪ್ರಕರಣಗಳು ಹೆಚ್ಚಾಗುತ್ತಿವೆ ಇದು ಸಶಕ್ತ ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ ಎಂದರು.
ಎಬಿವಿಪಿಯ ವಿಭಾಗ ಸಹ ಪ್ರಮುಖರಾದ ಅಮಿತಕುಮಾರ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು, ನಗರ ಅದಕ್ಷರಾದ ಸುಮಾ ಬೋಳರೆಡ್ಡಿ ಸ್ವಾಗತಿಸಿದರು, ನಗರ ಕಾರ್ಯದರ್ಶಿ ಸಂದೀಪ ಅರಳಗುಂಡಿ ವಂದನಾರ್ಪಣೆ ಮಾಡಿದರು,
ಕಾರ್ಯಕ್ರಮದ ನಂತರ ತಾಂಡವ ನೃತ್ಯ ಅಕಾಡೆಮಿ ಹಾಗೂ ವಿವಿಧ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು,ಪ್ರಮುಖರಾದ ಡಾ. ಏಚ್ ವೆಂಕಟೇಶ, ಬಸವರಾಜ ಯಾದವಾಡ ಉಪಸ್ಥಿತರಿದ್ದರು.