ಅಂಜುಮನ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಸ್ಪಷ್ಟನೆ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಪಟ್ಟಣದ ಮುಸ್ಲಿಂ ಸಮುದಾಯದ ಸರ್ವೇ ನಂಬರ್ ೧೦೨೭, ೧೦೨೯, ೮೩೪ ಮೂರು ಖಬರಸ್ತಾನಗಳಿದ್ದು, ಅವುಗಳು ಅಂಜುಮನ ಒಡೆತನದ ಆಸ್ತಿಗಳಾಗಿವೆ ಹೊರತು ವಕ್ಫ್ ಆಸ್ತಿಗಳಲ್ಲ. ಜನರಲ್ಲಿ ತಪ್ಪು ಭಾವನೆ ತುಂಬಿ ವಕ್ಫ್ ಅಧಿಕಾರಿಗಳು ಹಾಗೂ ಸ್ವಯಂ ಘೋಷಿತ ಖಬರಸ್ತಾನ ಕಮಿಟಿಯು ತಾರಾತುರಿಯಲ್ಲಿ ಜಾಗೆಯನ್ನು ಖಾಲಿ ಮಾಡಿಸಿ ಬಡಜನರ ಹೊಟ್ಟೆ ಮೇಲೆ ಬರೆ ಎಳೆಯುವ ಕೆಲಸ ಮಾಡಿದ್ದಾರೆ. ಅದಕ್ಕೆ ಅವರ ವಿರುದ್ಧ ಅಂಜುಮನ್ ಸಂಸ್ಥೆಯು ಇದೆ ೧೫ರಂದು ಹೈಕೊರ್ಟ್ನಿಂದ ತಡೆಯಾಜ್ಞೆ ತಂದಿದೆ ಎಂದು ಅಂಜುಮನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಎಂ.ಪಾಟೀಲ ಗಣಿಹಾರ ಹೇಳಿದರು.
ಪಟ್ಟಣದ ಅಂಜುಮನ ಶಿಕ್ಷಣ ಸಂಸ್ಥೆಯಲ್ಲಿ ವಕ್ಫ ಆಸ್ತಿಗಳ ಕುರಿತು ಹಮ್ಮಿಕೊಂಡ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
೧೯೩೭-೩೮ರಲ್ಲಿ ಸ್ಥಾಪನೆಯಾದ ಅಂಜುಮನ ಶಿಕ್ಷಣ ಸಂಸ್ಥೆಯ ಸ್ವಂತ ಈ ಮೂರು ಆಸ್ತಿಗಳ ನಿರ್ವಹಣೆ ಮಾಡುತ್ತಿತ್ತು. ಅದನ್ನು ಇನ್ನಷ್ಚು ಅಭಿವೃದ್ಧಿ ಪಡಿಸಲು ವಕ್ಫಗೆ ಸಂರಕ್ಷಣೆ ಮಾಡಲು ಈ ಎಲ್ಲ ಆಸ್ತಿಗಳನ್ನು ನೀಡಿದ್ದು ಅವುಗಳು ಬೋರ್ಡ್ ಆಸ್ತಿಗಳಲ್ಲ, ಅಂಜುಮನ್ ಆಸ್ತಿಗಳು ಸಂಘ-ಸಂಸ್ಥೆಗಳು ವಕ್ಫ್ ಆಗುವುದಿಲ್ಲ. ಅಂಜುಮನ ಮತ್ತು ವಕ್ಫ ಒಂದೇ ಎಂದು ಮುಸ್ಲಿಂ ಜನರಲ್ಲಿ ಎರಡು ಪಂಗಡಗಳನ್ನಾಗಿ ಒಡೆದು ಜಗಳ ಹಚ್ಚುವಂತ ಕಾರ್ಯಕ್ಕೆ ಮುಂದಾಗಿದೆ. ಅಂಜುಮನ ಸಂಸ್ಥೆಗೆ ೧೨ವರ್ಷಗಳಲ್ಲಿ ೧೫ಬಾರಿ ಮುತುವಲ್ಲಿಗಳನ್ನು ನೇಮಕ ಮಾಡಿದೆ. ನಾವು ಕಾನೂನಾತ್ಮಕ ಹೋರಾಟ ಮಾಡಿ ತಮ್ಮದಾಗಿಸಿಕೊಂಡಿದ್ದೇವೆ. ವಕ್ಫ್ ಸಂಸ್ಥೆಯ ಕೆಲಸ ಅಭಿವೃದ್ಧಿಪರವಾಗಿವೆ. ಆದರೆ ಅದನ್ನು ಆಡಳಿತ ನಡೆಸುವವರು ಸರಿಯಾಗಿ ಬರುತ್ತಿಲ್ಲ ಎಂದು ದೂರಿದರು.
ಅಂದಿನ ಅಧ್ಯಕ್ಷರಾಗಿದ್ದ ನಬಿಸಾಬ್ ಹಸನಸಾಬ್ ಅಂಡೆವಾಲೆ ಇದ್ದಾಗ ಆ ಆಸ್ತಿಗಳನ್ನು ಯಾರು ಉಪಯೋಗಿಸಿಕೊಂಡು ಬಂದಿದ್ದರೋ ಅಂತಹ ಆಸ್ತಿಗಳು ವಕ್ಫ್ ಆಸ್ತಿಗಳು. ಅದನ್ನು ೧೯೬೪ರಲ್ಲಿ ಹುಟ್ಟಿಕೊಂಡ ವಕ್ಫ್ ಬೋರ್ಡ್ ಸಂಸ್ಥೆಯು ಅಂಜುಮನ ಎಂದರೆ ನಾನೇ ಎಂದು ಬಿಂಬಿಸುತ್ತ ಜನರಿಗೆ ಮಂಕು ಬೂದಿ ಎರಚುವ ಕಾರ್ಯದಲ್ಲಿ ತೊಡಗಿದೆ. ಮೊದಲು ಅಂಜುಮನ ಹುಟ್ಟಿದೆ ನಂತರ ವಕ್ಫ್ ಬೋರ್ಡ್ ಹುಟ್ಟಿದೆ. ಈ ಕಾರ್ಯ ಮಗನಿಂದ ಅಪ್ಪನಿಗೆ ಬುದ್ದಿ ಹೇಳುವ ಕೆಲಸ ಇದಾಗಿದೆ. ಅದಕ್ಕೆ ನಾವು ಕಾನೂನಾತ್ಮಕ ಮೊರೆ ಹೋಗಿದ್ದು, ಇದೆ ೧೫ರಂದು ತಡೆಯಾಜ್ಞೆ ಸಿಕ್ಕಿದೆ. ಸರಕಾರ, ವಕ್ಫ್ ಬೋರ್ಡ್ ಮತ್ತು ಶಾಸಕರು ಸಹಕಾರ ನೀಡಿದರೆ, ಸ್ಮಶಾನ ಮಧ್ಯದಲ್ಲಿ ಬಿಟ್ಟು ಸುತ್ತಲೂ ಮಳಿಗೆಗಳನ್ನು ನಿರ್ಮಿಸಿ ಬಡಜನರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಎ.ಎ.ದುದ್ದನಿ, ನಿರ್ದೇಶಕ ಮಹಿಬೂಬ ಹಸರಗುಂಡಗಿ ಇದ್ದರು.

