ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಉತ್ತರ ಕರ್ನಾಟಕದ ಅಭಿವೃದ್ಧಿಗೆ, ಪಂಚಮಸಾಲಿ ಸಮಾಜದ ಮೀಸಲಾತಿಗೆ, ಹಿಂದೂ ಪರ ನಿಲುವುಗಳಿಗೆ ಯತ್ನಾಳ ಅವರು ಯಾವಾಗಲೂ ಮುಂದೆ ಬಂದಿದ್ದಾರೆ. ಎಲ್ಲ ಜಾತಿ ಸಮಾಜದವರೊಂದಿಗೆ ನಿಂತಿದ್ದಾರೆ. ಈಗ ಎಲ್ಲರೂ ಅವರ ಬೆಂಬಲಕ್ಕೆ ನಿಲ್ಲಲಿದ್ದಾರೆ ಎಂದು ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ಎಂ.ಎಂ.ಹಂಗರಗಿ ಹೇಳಿದ್ದಾರೆ.
ಸಿಂದಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ೨ಎ ಮೀಸಲಾತಿ ಹೋರಾಟ ಸಮಿತಿ ರಾಷ್ಟ್ರೀಯ ಗೌರವಾಧ್ಯಕ್ಷ, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿಯಿಂದ ಉಚ್ಚಾಟಿಸಿರುವುದನ್ನು ಖಂಡಿಸಿ ಶುಕ್ರವಾರ ಅಖಿಲ ಭಾರತ ಪಂಚಮಸಾಲಿ ಸಮಾಜ ತಾಲೂಕು ಘಟಕ ಸಿಂದಗಿ ವತಿಯಿಂದ ಪ್ರತಿಭಟನೆ ನಡೆಸಿ ಮಾತನಾಡಿದ ಅವರು, ಪಕ್ಷದಲ್ಲಿರುವ ಕೆಲವರ ಹೊಂದಾಣಿಕೆ ರಾಜಕಾರಣ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ವಿರೋಧಿಸಿದ್ದಕ್ಕೆ ತಳಮಟ್ಟದಿಂದ ಪಕ್ಷವನ್ನು ಸಂಘಟಿಸಿದ ಯತ್ನಾಳರನ್ನು ಬಿಜೆಪಿ ಪಕ್ಷದ ಕೇಂದ್ರ ವರಿಷ್ಠರು ೬ವರ್ಷಗಳ ಕಾಲ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟನೆ ಮಾಡಿರುವುದು ಖೇದಕರ ಸಂಗತಿ. ಪಂಚಮಸಾಲಿ ಸಮಾಜದ ೨ಎ ಮೀಸಲಾತಿಗಾಗಿ ವಿಧಾನ ಸೌಧದ ಒಳಗೂ ಮತ್ತು ಹೊರಗೂ ಸಮಾಜದ ಪರವಾಗಿ ಧ್ವನಿ ಎತ್ತದ ಏಕೈಕ ವ್ಯಕ್ತಿ. ಇಂತಹ ಕಳಂಕ ರಹಿತವಾಗಿ ರಾಜಕೀಯ ಮಾಡಿದ ವ್ಯಕ್ತಿಗೆ ಉಚ್ಚಾಟನೆ ಮಾಡಿದ್ದು ಸಮಾಜ ಖಂಡಿಸುತ್ತದೆ. ಇದನ್ನು ಮರು ಪರಿಶೀಲನೆ ಮಾಡಿ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.
ಈ ವೇಳೆ ಶ್ರೀರಾಮ ಸೇನೆ ತಾಲೂಕಾಧ್ಯಕ್ಷ ಮಹೇಶ ಪಾಟೀಲ ನಾಗರಹಳ್ಳಿ ಮಾತನಾಡಿ, ಸಮಾಜ ಮತ್ತು ಧರ್ಮದ ದಾರಿ ಬಿಟ್ಟು ಹೋಗಬಾರದೆಂದು ಬಿಜೆಪಿಯಲ್ಲಿಳಿದು ಯುಪಿ ಯೋಗಿಯಂತೆ ರಾಜ್ಯದಲ್ಲಿ ಪಕ್ಷಕ್ಕಾಗಿ ಹಗಲಿರುಳು ಸಂಚರಿಸಿದ ಇವರನ್ನು ಕೇಂದ್ರದ ಹೈಕಮಾಂಡ್ ರಾಜ್ಯದ ಯಾವೋ ನಾಲ್ಕು ಬಿಜೆಪಿಯ ಶಕುನಿಗಳ ಮಾತು ಕೇಳಿ ಉಚ್ಚಾಟನೆ ಮಾಡಿ ಬಸನಗೌಡ್ರ ಭವಿಷ್ಯ ಹಾಳು ಮಾಡಲಿಲ್ಲ. ಬದಲಾಗಿ ಕರ್ನಾಟಕದ ಹಿಂದೂಗಳ ಭಾವನೆಗಳಿಗೆ ಧಕ್ಕೆಉಂಟು ಮಾಡಿದ್ದೀರಿ. ಬಿಜೆಪಿ ಪಕ್ಷವನ್ನು ನಾಶ ಮಾಡುತ್ತಿದ್ದೀರಿ. ಮುಂಬರುವ ತಾಪಂ ಮತ್ತು ಜಿಪಂ ಚುನಾವಣೆಯಲ್ಲಿ ಯತ್ನಾಳ ಗೌಡರ ತಾಕತ್ತು ಏನೆಂಬುದು ಗೊತ್ತಾಗುತ್ತದೆ. ರಾಜ್ಯದಲ್ಲಿ ಈಗ ಬಂದ್ದದ್ದು ೬೬ ಸೀಟ್ ಮುಂದಿನ ದಿನಮಾನಗಳಲ್ಲಿ ೩೦ ಸೀಟ್ ಗೆದ್ದು ತೋರಿಸಲಿ ಎಂದು ಗುಡುಗಿದರು.
ಈ ವೇಳೆ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು, ಟೈರ್ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಉಚ್ಚಾಟನೆ ಮಾಡಿರುವ ಪಕ್ಷದ ವರಿಷ್ಠರ ಕ್ರಮವನ್ನು ಖಂಡಿಸಿ ಘೋಷಣೆ ಕೂಗಿದರು. ಬಳಿಕ ಬಸವೇಶ್ವರ ವೃತ್ತದಲ್ಲಿ ಕೆಲಹೊತ್ತು ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಭಾರತೀಯ ಕಿಸಾನ ಸಂಘದ ಅಧ್ಯಕ್ಷ ಬಸವರಾಜ ಐರೋಡಗಿ, ಶಿವರಾಜ ಪೊಲೀಸಪಾಟೀಲ, ಕಾರ್ಯದರ್ಶಿ ಆನಂದ ಶಾಬಾದಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಪ್ರಶಾಂತ ಬಿರಾದಾರ, ಮಲ್ಲನಗೌಡ ಪಾಟೀಲ ಇಬ್ರಾಹಿಂಪುರ, ಕಲ್ಯಾಣಿ ಬಿರಾದಾರ, ಸಂಗಮೇಶ ಯಲಗೋಡ, ನವೀನ ಚಟ್ಟರಕಿ, ಶಿವು ಬಡಾನೂರ, ಕುಮಾರ ಬಗಲಿ, ಮಹೇಶ ದೇಸಾಯಿ, ಶರಣು ಪಾಟೀಲ ಡಂಬಳ, ರಾಜು ಮುಜಗೊಂಡ, ಅಶೋಕ ಬಾದನ್, ಈರಣ್ಣ ಕಲಬುರ್ಗಿ, ಸಂತೋಷ ನಂದಶೆಟ್ಟಿ, ನಾನಾಗೌಡ ಪಾಟೀಲ, ಗಿರೀಶ ಪಾಟೀಲ ಕೊರಳ್ಳಿ, ಶ್ರೀಶೈಲ ಗಾಡದ, ಅನೀಲ ಪಾಟೀಲ, ಅಮಿತ ಬಿರಾದಾರ, ಗುರು ನೆಗಿನಾಳ, ಶ್ರೀಶೈಲ ಗುಂದಗಿ, ಮಲ್ಲು ನಂದಶೆಟ್ಟಿ, ಕಿರಣ ನಂದಶೆಟ್ಟಿ, ಗುರು ಬಡಾನೂರ, ರಾಮನಗೌಡ ಬಂದಾಳ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
“ತಂದೆ-ಮಕ್ಕಳು ಸೇರಿ ರಾಜ್ಯದಲ್ಲಿರುವ ಹಿಂದೂ ನಾಯಕರಾದ ಅನಂತಕುಮಾರ ಹೆಗಡೆ, ಕೆ.ಎಸ್.ಈಶ್ವರಪ್ಪ, ಪ್ರತಾಪ ಸಿಂಹ ಹೀಗೆ ಹಲವಾರು ನಾಯಕರನ್ನು ಪಕ್ಷದಿಂದ ಅಮಮಾನಗೊಳಿಸಿ ಬಿಜೆಪಿ ಟಿಕೆಟ್ ನೀಡದೇ ಪಕ್ಷವನ್ನು ಕುಟುಂಬ ಪಕ್ಷವನ್ನಾಗಿ ಮಾಡಿಟ್ಟುಕೊಂಡ ಅಪ್ಪ-ಮಕ್ಕಳಿಗೆ ಧಿಕ್ಕಾರವಿರಲಿ. ಕೇಂದ್ರದ ಅಮಿತ ಶಾ ಮತ್ತು ನರೇಂದ್ರ ಮೋದಿ ಅವರು ಸ್ವತಃ ವಿಜಯಪುರ ನಗರಕ್ಕೆ ಆಗಮಿಸಿ ಸಕಲ ಗೌರವದೊಂದಿಗೆ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಸ್ವಾಗತ ಮಾಡಿಕೊಳ್ಳಬೇಕು.”
– ಮಹೇಶ ಪಾಟೀಲ ನಾಗರಹಳ್ಳಿ
ಶ್ರೀರಾಮ ಸೇನೆ ತಾಲೂಕಾಧ್ಯಕ್ಷ

