ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಯುಗಾದಿ, ರಂಜಾನ್ ಹಬ್ಬಗಳು ಹಾಗೂ ಆರ್ಥಿಕ ವರ್ಷಾಂತ್ಯ ಹಿನ್ನೆಲೆ 2025ರ ಫೆಬ್ರವರಿ-ಮಾರ್ಚ್ ತಿಂಗಳ ವೇತನವನ್ನು ಮಾ.28-29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮನವಿಗೆ ಸ್ಪಂದಿಸಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ಮಾ. 27 ರಂದೇ ವೇತನ ಪಾವತಿಸಿರುವ ಕಾರಣ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಹಾಗೂ ಸಾರಿಗೆ ಸಚಿವರಿಗೆ ಫೆಡರೇಷನ್ ಮುಖಂಡರು, ಸದಸ್ಯರು ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಕೆಕೆಆರ್ಟಿಸಿ ನಿಗಮದ ಅಧಿಕಾರಿಗಳು, ನೌಕರರಿಗೆ ಪ್ರತಿ ತಿಂಗಳು 01 ನೇ ತಾರೀಖು ವೇತನ ಪಾವತಿಯಾಗುತ್ತಿದೆ. ಆದರೆ ಮಾರ್ಚ್ 30 ರಂದು ಚಂದ್ರಮಾನ ಯುಗಾದಿ ಹಬ್ಬದ ರಜೆ, ಮಾರ್ಚ್ 31 ರಂದು ರಂಜಾನ್ ಹಬ್ಬದ ರಜೆ ಹಾಗೂ ಏ.01 ರಂದು ಬ್ಯಾಂಕ್ ರಜೆ ಇರುವ ಕಾರಣ ಏ.02 ರ ನಂತರ ವೇತನ ಪಾವತಿಯಾದರೆ ನೌಕರರಿಗೆ ಹಬ್ಬಗಳಿಗೆ ಆಚರಣೆ ಕಷ್ಟಕರವಾಗಲಿದೆ. ಹಾಗಾಗಿ ಫೆಬ್ರವರಿ-ಮಾರ್ಚ್ ತಿಂಗಳ ನೌಕರರ ವೇತನವನ್ನು ಮಾ.28 ಅಥವಾ ಮಾ.29 ರಂದು ಪಾವತಿಸುವಂತೆ ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ವತಿಯಿಂದ ಎಂಡಿ ಅವರಿಗೆ ಮನವಿ ಮಾಡಿಕೊಳ್ಳಲಾಗಿತ್ತು. ಮನವಿಯಂತೆ 2024-25 ನೇ ಸಾಲಿನ ರಜೆ ನಗದಿಕರಣ ಹಾಗೂ ಹಬ್ಬದ ಮುಂಗಡವನ್ನು ದಿನಾಂಕ ಮಾ.27 ರಂದು ಜಮಾ ಆಗಿದೆ.
ಕೆಎಸ್ಆರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ಮನವಿಗೆ ಸ್ಪಂದಿಸಿರುವ ಕೆಕೆಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಹಾಗೂ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಯೂನಿಯನ್ ನ ವಿಜಯಪುರ ವಿಭಾಗದ ಪ್ರಧಾನ ಕಾರ್ಯದರ್ಶಿ ಕಾಮ್ರೇಡ್ ಮುಸ್ರೀಫ್, ಜಿಲ್ಲಾಧ್ಯಕ್ಷ ಅರುಣಕುಮಾರ್ ಹಿರೇಮಠ, ರಾಜ್ಯ ಸಂಘಟನಾ ಕಾರ್ಯದರ್ಶಿ ಎಸ್. ಡಿ. ಪಟ್ಟಣಶೆಟ್ಟಿ, ರಫಿಕಹಮದ್ ನಧಾಪ್ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
