ರಂಜಾನ್ ಮಾಸಾಚರಣೆಗಾಗಿ ನಡೆದ ಇಫ್ತಿಹಾರ ಕೂಟದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ ಅಭಿಮತ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆ ಸರ್ವಜನಾಂಗದ ಶಾಂತಿಯ ತೋಟವಾಗಿದೆ ಎಂದು ವಿಧಾನ ಪರಿಷತ್ ಶಾಸಕ ಸುನೀಲಗೌಡ ಪಾಟೀಲ ಹೇಳಿದ್ದಾರೆ.
ಗುರುವಾರ ಮುಸ್ಸಂಜೆ ನಗರದ ಲಾಲ ಬಹದ್ದೂರ ಶಾಸ್ತ್ರೀ ಮಾರುಕಟ್ಟೆಯಲ್ಲಿ ರಂಜಾನ್ ಮಾಶಾಚರಣೆ ಅಂಗವಾಗಿ ಆಯೋಜಿಸಲಾದ ಇಫ್ತಿಹಾರ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಿಂದೂ, ಮುಸ್ಲಿಂ, ಕೈಸ್ತ ಸೇರಿದಂತೆ ಎಲ್ಲ ಧರ್ಮದವರು ವಿಜಯಪುರ ಜಿಲ್ಲೆಯಲ್ಲಿ ಸಾಮರಸ್ಯದಿಂದ ಜೀವನ ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಡೆಯುವ ಜಾತ್ರೆ ಮತ್ತು ಉರುಸುಗಳಲ್ಲಿ ಎಲ್ಲರು ಪಾಲ್ಗೊಳ್ಳುತ್ತಾರೆ. ತಿಕೋಟಾ ಹಾಜಿಮಸ್ತಾನ ದರ್ಗಾಕ್ಕೆ ಹಿಂದೂಗಳ ಮನೆಯಿಂದ ಮಾದಲಿ ನೈವೇದ್ಯ ಅರ್ಪಿಸಲಾಗುತ್ತದೆ. ತಿಗಣಿಬಿದರಿಯಲ್ಲಿ ಲಾಲಸಾಬ ಜಾತ್ರೆಯಲ್ಲಿ ಎಲ್ಲರೂ ಸೇರಿ ಜಾತ್ರೆ ಮಾಡುತ್ತಾರೆ. ಉಪ್ಪಲದಿನ್ನಿಯಲ್ಲಿ ಸಂಗಮನಾಥ ಜಾತ್ರೆಯಲ್ಲಿ ಮುಸ್ಮಿಮರು ಸಂಭ್ರಮದಿಂದ ಪಾಲ್ಗೊಳ್ಳುತ್ತಾರೆ. ಜಿಲ್ಲೆಯಲ್ಲಿ ಇಂಥ ಹಲವಾರು ಜಾತ್ರೆಗಳಲ್ಲಿ ಯಾವುದೇ ಧರ್ಮ ಭೇದವಿಲ್ಲದೆ ಎಲ್ಲರೂ ಭ್ರಾತೃತ್ವದಿಂದ ಪಾಲ್ಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.
ರಂಜಾನ್ ಪವಿತ್ರ ಮಾಸವಾಗಿದೆ. ಈ ಅವಧಿಯಲ್ಲಿ ಮನಃಪೂರ್ವಕವಾಗಿ ಉಪವಾಸ ಮಾಡುವುದರಿಂದ, ಉಪವಾಸ ಮಾಡುವವರಿಗೆ ಅಹಾರ ನೀಡುವುದರಿಂದ ದೇವರು ಅವರಿಗೆ ಒಳ್ಳೆಯ ಪುಣ್ಯ ಬರುತ್ತದೆ ಎಂಬ ನಂಬಿಕೆಯಿದೆ. ಇದಕ್ಕೆ ಈ ತಿಂಗಳಲ್ಲಿ ಆಯೋಜಿಸಲಾಗುವ ಇಫ್ತಿಹಾರ ಕೂಟಗಳು ಸಾಕ್ಷಯಾಗಿವೆ. ಎಲ್ಲರಿಗೂ ರಂಜಾನ್ ಹಬ್ಬ ಒಳ್ಳೆಯದನ್ನು ಮಾಡಲಿ ಎಂದು ಅವರು ಶುಭಾಷಯ ಕೋರಿದರು.
ಈ ಸಂದರ್ಭದಲ್ಲಿ ಗುಣದಾಳದ ಕಲ್ಯಾಣೇಶ್ವರ ಹಿರೇಮಠದ ಡಾ. ವಿವೇಕಾನಂದ ದೇವರು, ವಿಜಯಪುರ ನಗರದ ಸಂತ ಅನ್ನಮ್ಮನವರ ದೇವಾಲಯದ ರೆ. ಪಾದರ್ ಜೊಸೆಫ್ ವಾಝ್ ಎಸ್. ಜೆ, ಮುಖಂಡರಾದ ಹಮೀದ ಮುಶ್ರಿಫ್, ಟಪಾಲ ಎಂಜಿನೀಯರ್, ತಾಜುದ್ದೀನ ಅತ್ತಾರ, ಅಬ್ದುಲ್ ಪೀರಾ ಜಮಖಂಡಿ, ಫಯಾಜ್ ಕಲಾದಗಿ ಮುಂತಾದವರು ಉಪಸ್ಥಿತರಿದ್ದರು.

