ಉದಯರಶ್ಮಿ ದಿನಪತ್ರಿಕೆ
ಯಾದಗಿರಿ: ನಾರಾಯಣಪುರ ಬಲ, ಎಡದಂಡೆ ಕಾಲುವೆಗೆ ಏ. 15 ರವರೆಗೆ ನೀರು ಹರಿಸುವಂತೆ ಆಗ್ರಹಿಸಿ, ಬುಧವಾರ ನಾರಾಯಣಪುರ ಕೆಬಿಜೆಎನ್ ಎಲ್ ಮುಖ್ಯ ಅಭಿಯಂತರ ಕಚೇರಿ ಮುಂಭಾಗ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ ನೇತೃತ್ವದಲ್ಲಿ ವಿವಿಧ ಪಕ್ಷದ ಮುಖಂಡರು, ರೈತ ಸಂಘಟನೆ ಹಾಗೂ ಕನ್ನಡಪರ ಸಂಘಟನೆ ಮುಖಂ ಡರು ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಸುವ ಮೂಲಕ ಪ್ರತಿಭಟನೆ ನಡೆಸಿದರು.
ಬೆಳಗ್ಗೆ ಹುಣಸಗಿ ಪಟ್ಟಣದಿಂದ ಹೊರಟ ನೂರಾರು ಟ್ರ್ಯಾಕ್ಟರ್ಗಳು ನಾರಾಯಣಪುರ ಜಲಾಶಯದವರೆಗೆ ಬಂದು ತಲುಪಿದವು. ದಾರಿಯುದ್ದಕ್ಕೂ ರೈತರು ಟ್ರ್ಯಾಕ್ಟರ್ಗಳಲ್ಲಿ ನಿಂತುಕೊಂಡು ಹಸಿರು ಟವೆಲ್ ಬೀಸುವ ಮೂಲಕ ಹೋರಾಟ ನಿರತರಿಗೆ ಸ್ಫೂರ್ತಿ ತುಂಬಿದರು. ರಾತೋರಾತ್ರಿ ತೆಲಂಗಾಣಾಕ್ಕೆ ನೀರು ಹರಿಸಿರುವ ರಾಜ್ಯ ಸರಕಾರದ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಕೆಬಿಜೆಎನ್ ಎಲ್ ಕಚೇರಿ ಮುಂಭಾಗ ನಡೆದ ಧರಣಿ ವೇಳೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ ಮಾತನಾಡಿ, ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆಗೆ ನೀರು ಸ್ಥಗಿತಗೊಳಿಸಿದ್ದರಿಂದ ರೈತರಿಗೆ ತೀವ್ರ ತೊಂದರೆಯಾಗಿದೆ. ತಕ್ಷಣದಿಂದಲೇ ಕಾಲುವೆಗೆ ಮತ್ತೆ ಏ.15 ರವರೆಗೆ ನೀರು ಹರಿಸಬೇಕು ಎಂದು ಒತ್ತಾಯಿಸಿದರು.
ಬೇಸಿಗೆ ವೇಳೆ ಕುಡಿವ ನೀರನ್ನು ಮಾನವೀಯತೆ ಮೇಲೆ ಬಿಡುಗಡೆ ಮಾಡಿದರೆ ರೈತರದ್ದು ಯಾವುದೇ ತಕರಾರು ಇರುತ್ತಿರಲಿಲ್ಲ.ಆದರೆ, ಕಾಂಗ್ರೆಸ್ ಸರಕಾರ ತಮ್ಮ ಸ್ವಾರ್ಥ ಸಾಧನೆಗಾಗಿ ನಮ್ಮ ರೈತರ ಕತ್ತು ಹಿಸುಕಿ ರಾತೋರಾತ್ರಿ ತೆಲಂಗಾಣ ರಾಜ್ಯಕ್ಕೆ ನೀರು ಹರಿಸಿ ರುವುದು ಯಾವ ಪುರುಷಾರ್ಥಕ್ಕಾಗಿ ಎಂದು ಅವರು ಪ್ರಶ್ನಿಸಿದರು.
ಈಗಾಗಲೇ ಶೇಂಗಾ, ಸಜ್ಜೆ, ಮೆಣಸಿನಕಾಯಿ, ಹತ್ತಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಬಿತ್ತನೆ ಮಾಡಲಾಗಿದೆ. ಇದೀಗ ಬೇಸಿಗೆ ಹಿನ್ನಲೆ ಅಧಿಕ ನೀರು ಬೆಳೆಗೆ ಬೇಕಾಗುತ್ತದೆ. ಕಾಲುವೆಗೆ ನಿರಂತರ ನೀರು ಹರಿಸಿದರೆ ಯಾವುದೇ ಸಮಸ್ಯೆ ಉಂಟಾಗಲ್ಲ. ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಲ್ಲಿ ಸಾಕಷ್ಟು ನೀರಿನ ಸಂಗ್ರಹವಿದೆ. ನಿಗಮದ ಅಧಿಕಾರಿಗಳು ಯಾವುದೇ ಕಥೆ ಹೇಳದೇ ರೈತರನ್ನು ಯಾಮಾರಿಸಬೇಡಿ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಅಮೀನ್ ರೆಡ್ಡಿ ಯಾಳಗಿ, ನಮ್ಮ ಕರ್ನಾಟಕ ಸೇನೆ ರಾಜ್ಯಾಧ್ಯಕ್ಷ ಬಸವರಾಜ ಪಡುಕೋಟೆ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ, ಶ್ರವಣಕುಮಾರ ನಾಯಕ, ವೆಂಕಟೇಷ ಸಾಹುಕಾರ ಗೆದ್ದಲಮರಿ ಮಾತನಾಡಿದರು.
ಬೇಡಿಕೆ ಕುರಿತು ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರಗೆ ಬರೆದ ಮನವಿಯನ್ನು ಕೆಬಿಜೆಎನ್ ಎಲ್ ಮುಖ್ಯ ಎಂಜಿನಿಯರ್ ಮಂಜುನಾಥ ಮೂಲಕ ಸಲ್ಲಿಸಲಾಯಿತು. ಅಲ್ಲದೇ ಸಿಎಂ, ಡಿಸಿಎಂ, ನೀರಾವರಿ ಸಲಹಾ ಸಮಿತಿ ಅಧ್ಯಕ್ಷ ಆರ್.ಬಿ.ತಿಮ್ಮಾಪುರ ಅವರಿಗೆ ಬರೆದ ಮನವಿಯನ್ನು ಹುಣಸಗಿ ತಹಸೀಲ್ದಾರ ಮೂಲಕ ಸಲ್ಲಿಸಲಾಯಿತು.
ಈ ವೇಳೆ ವಿರೇಶ್.ಬಿ.ಚಿಂಚೋಳಿ, ಮಹೇಶಗೌಡ ಮುದ್ದಾಳ, ಬಿಜೆಪಿ ತಾಲೂಕು ಅಧ್ಯಕ್ಷ ಸಂಗಣ್ಣ ವೈಲಿ. ಜಿಪಂ ಮಾಜಿ ಸದಸ್ಯ ಎಚ್.ಸಿ.ಪಾಟೀಲ್, ಬಸವರಾಜ ಸ್ವಾಮಿ ಸ್ಥಾವರಮಠ, ಚಂದ್ರಶೇಖರಗೌಡ ಮಾಗನೂರು, ಮೇಲಪ್ಪ ಗುಳಗಿ, ಕೃಷ್ಣಾರೆಡ್ಡಿಮುದನೂರು ಸೇರಿ ಸಾವಿರಾರು ಸಂಖ್ಯೆಯಲ್ಲಿ ರೈತರು ಪಾಲ್ಗೊಂಡಿದ್ದರು.
ರಾಜುಗೌಡ ಬಂಧನ, ರೈತರ ಆಕ್ರೋಶಕ್ಕೆ ಮಣಿದ ಪೊಲೀಸರು
ಪ್ರತಿಭಟನಾ ನಿರತ ಮಾಜಿ ಸಚಿವ ರಾಜುಗೌಡ ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದವೇಳೆ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ಉಂಟಾಗಿತ್ತು .ರಾಜುಗೌಡ ಅವರನ್ನು ಪೊಲೀಸರು ತಮ್ಮ ವಾಹನದಲ್ಲಿ ಕರೆದೊಯ್ಯಲು ಸಿದ್ದತೆ ನಡೆಸುತ್ತಿದ್ದ ವೇಳೆ ರೈತರು ಪೊಲೀಸರ ಜತೆ ವಾಗ್ವಾದ ನಡೆಸಿ, ಪೊಲೀಸ್ ಅಧಿಕಾರಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರಾಜುಗೌಡ ಅವರನ್ನು ಪೊಲೀಸ್ ವಾಹನದಿಂದ ಇಳಿಸುವಂತೆ ಬಿಗಿಪಟ್ಟು ಹಿಡಿದರು. ಕೊನೆಗೂ ರೈತರ ಆಕ್ರೋಶಕ್ಕೆ ಮಣಿದ ಪೊಲೀಸರು ರಾಜುಗೌಡರನ್ನು ವಾಹನದಿಂದ ಇಳಿಸಿದರು.
ಕಾಲಾವಕಾಶಕ್ಕೆ ಮನವಿ
“ಈಗಾಗಲೇ ಶೇಂಗಾ, ಸಜ್ಜೆ, ಮೆಣಸಿನಕಾಯಿ,ಭತ್ತ, ಹತ್ತಿ, ಸೂರ್ಯಕಾಂತಿ ಮುಂತಾದ ಬೆಳೆಗಳನ್ನು ಕಾಲುವೆ ನೀರನ್ನು ನಂಬಿಕೊಂಡು ರೈತರು ಬಿತ್ತನೆ ಮಾಡಿದ್ದಾರೆ, ಆದರೆ ತಟಸ್ಥವಾಗಿ ನೀರು ಬಂದ್ ಮಾಡಿರುವ ಹಿನ್ನಲೆಯಲ್ಲಿ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನರಸಿಂಹ ನಾಯಕ ರಾಜುಗೌಡ ನೇತೃತ್ವದಲ್ಲಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿಯ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು, ಕೆಬಿಜೆಎನ್ ಅಧಿಕಾರಿಗಳು ಪ್ರತಿಭಟನಾನಿರತ ಮಾಜಿ ಸಚಿವ ರಾಜುಗೌಡ ಅವರ ಜತೆ ಚರ್ಚೆ ನಡೆಸಿದರು. ಈ ವೇಳೆ ಅಧಿಕಾರಿಗಳು ಒಂದು ದಿನ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಈ ಹಿನ್ನಲೆ ರಾಜುಗೌಡ ಅವರು ಪ್ರತಿಭಟನೆ ವಾಪಸ್ ಪಡೆದರು.”

