ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಮ್ಮ ದೇಶದ ಸಂಸ್ಕೃತಿ ಜಾನಪದದ ಮೂಲಕ ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದೆ. ಜಾನಪದ ಆಚಾರ, ವಿಚಾರ, ನಂಬಿಕೆ, ಸಂಪ್ರದಾಯಗಳು ಮಾನವೀಯ ಮೌಲ್ಯಗಳನ್ನು ಬಿಂಬಿಸುತ್ತಿವೆ. ಜಾನಪದವು ಮೇರುಸ್ತರದ ವಿಚಾರಗಳನ್ನು ಕಲಿಸುತ್ತದೆ ಎಂದು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ (ಪಡಗಾನೂರ) ಅಭಿಪ್ರಾಯಪಟ್ಟರು.
ವಿಜಯಪುರ ನಗರದ ( ನವಬಾಗ) ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಘಟಕದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ “ಜಾನಪದ ಉತ್ಸವ ೨೦೨೫ ” ಅಡಿಯಲ್ಲಿ ” ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತ ವಿದೇಶಿ ವ್ಯಾಮೋಹ ಮತ್ತು ವೈಜ್ಞಾನಿಕ ಪ್ರಭಾವದಿಂದ ಯುವ ಜನಾಂಗ ಜಾನಪದ ಸಂಸ್ಕೃತಿಯನ್ನು ಮರೆಯುತ್ತಿದ್ದಾರೆ. ಸಂಸ್ಕಾರವಿಲ್ಲದ ಶಿಕ್ಷಣ ಪಡೆದು ಸಂಸಾರಕ್ಕೆ ಕಂಟಕವಾಗುತ್ತಿದ್ದಾರೆ. ಅದಕ್ಕಾಗಿ ಯುವಕರು ಜಾನಪದ ಸಂಸ್ಕೃತಿ ಪ್ರೀತಿಸಬೇಕು ಅದರಂತೆ ಬದುಕಬೇಕು ಎಂದರು.
ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ ಎ ಆಯ್ ಹಂಜಗಿ, ಜಾನಪದ ನಡೆ- ನುಡಿ ತಾಯಿಯ ಎದೆಹಾಲಿನಂತೆ ಅಮೃತಕ್ಕೆ ಸಮಾನವಾಗಿವೆ. ಪ್ರಾಚೀನರು ಹಾಕಿಕೊಟ್ಟ ಜಾನಪದದ ಹೆಜ್ಜೆ ಗುರುತುಗಳು ಇಂದು ನಮ್ಮ ಬದುಕಿಗೆ ದಾರಿದೀಪಗಳಾಗಿವೆ. ತಾಯಿ ಜಾನಪದ ಸಂಸ್ಕೃತಿ ಮಕ್ಕಳಲ್ಲಿ ತುಂಬುವ ಮೊದಲ ಗುರುವಾಗಿದ್ದಾಳೆ. ಆದ್ದರಿಂದ ಯುವಜನ ಜಾನಪದ ಸಂಸ್ಕೃತಿಯಂತೆ ಬದುಕಿ ಬಾಳಿಲಿ ಎಂದು ಕರೆ ನೀಡಿದರು.
ಪ್ರಾಸ್ತಾವಿಕವಾಗಿ ಕಾಲೇಜಿನ ಸಾಂಸ್ಕೃತಿಕ ಸಂಚಾಲಕ ಡಾ ಬಸವನಗೌಡ ಶ್ಯಾಡದಳ್ಳಿ ಮಾತನಾಡಿದ ಕಾಲೇಜು ಶಿಕ್ಷಣ ಇಲಾಖೆ ಜಾನಪದ ಕಾರ್ಯಕ್ರಮ ನಡೆಸಲು ಆದೇಶ ನೀಡಿದ್ದು ಎರಡು ದಿನಗಳ ಕಾಲ ವಿಧ್ಯಾರ್ಥಿಗಳಿಗೆ ಏರ್ಪಡಿಸಿದ ಕಾರ್ಯಕ್ರಮ ಕುರಿತು ವಿವರಿಸಿದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ ಆರ್ ಎಸ್ ಕುರಿ ಮಾತನಾಡಿದರು.
ಕಾಖಂಡಕಿಯ ಕಮಲವ್ವ ಸಿದರಡ್ಡಿ ಮತ್ತು ತಂಡದವರಿಂದ ಚೌಡಕಿ ಪದಗಳ ಪ್ರದರ್ಶನ ನಡೆಯಿತು.ಕಲಾವಿದರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಿಧ್ಯಾರ್ಥಿಗಳಿಗೆ ಜಾನಪದದ ವಿವಿಧ ಸ್ಪರ್ಧೆಗಳಾದ ಹಗ್ಗಜಗ್ಗಾಟ, ಲಗೋರಿ, ಬುಗುರಿ, ಗೋಣಿಚೀಲ ಆಟ, ಕುಂಟೆಬಿಲ್ಲೆ, ಜಾನಪದ ನೃತ್ಯ, ದೇಶಿಆಹಾರ, ಡೊಳ್ಳು ಕುಣಿತ ಮುಂತಾದ ಸ್ಫರ್ಧೆ ಏರ್ಪಡಿಸಲಾಗಿತ್ತು
ಕನ್ನಡ ಜಾನಪದ ಪರಿಷತ್ ವಿಜಯಪುರ ಜಿಲ್ಲಾ ಕಾರ್ಯದರ್ಶಿ ಡಾ ರಮೇಶ ಕೆ ತೇಲಿ ನಿರೂಪಿಸಿದರು. ಉಪನ್ಯಾಸಕ ಪ್ರೊ ಎಂ ಎಸ್ ಖೋದ್ನಾಪುರ ವಂದಿಸಿದರು. ಕಾಲೇಜಿನ ಎಲ್ಲ ವಿಭಾಗದ ಮುಖ್ಯಸ್ಥರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

