ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿಶೇಷಚೇತನ ಮಕ್ಕಳಲ್ಲಿ ಆತ್ಮ ವಿಶ್ವಾಸ ತುಂಬುವ ಕಾರ್ಯವನ್ನು ಪೋಷಕರು ಮತ್ತು ಶಿಕ್ಷಕರು ಮಾಡಬೇಕು ಎಂದು ತಾಲೂಕ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎಚ್ ಕೆ ಮಾಳಗೊಂಡ ಹೇಳಿದರು.
ಬುಧವಾರದಂದು ತಾಲೂಕಿನ ತಡವಲಗ ಜೋಡಗುಡಿಯ
ಎಲ್ ಪಿ ಎಸ್ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮತ್ತು ಸಮನ್ವಯ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ಜರುಗಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿಶೇಷಚೇತನ ಮಕ್ಕಳ ಕ್ರೀಡೆ, ಅರಿವು ಹಾಗೂ ಕ್ಷೇತ್ರ ಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವಿಶೇಷ ಚೇತನರಿಗೆ ಸ್ವತಂತ್ರರಾಗಿ ಬದುಕುವ ಶಕ್ತಿ ತುಂಬಬೇಕು. ಅವರಿಗೆ ಸಹಾನುಭೂತಿ, ಅನುಕಂಪಕ್ಕಿಂತ ಅವಕಾಶ ಕಲ್ಪಿಸಬೇಕು. ಸದಾಕಾಲ ಪೋಷಕರ ಪ್ರೋತ್ಸಾಹ ಆ ಮಕ್ಕಳಿಗೆ ಇರಬೇಕು ಎಂದರು.
ಶಿಕ್ಷಣ ಸಂಯೋಜಕ ಆನಂದ ಹುಣಸಗಿ ಮಾತನಾಡಿ,
ವಿಶೇಷ ಚೇತನ ಮಕ್ಕಳಲ್ಲಿ ಅದ್ವಿತೀಯ ಪ್ರತಿಭೆ ಇರುತ್ತದೆ. ಪೋಷಕರು ಅಂಗವಿಕಲತೆಯನ್ನು ಶಾಪ ಎಂದು ಪರಿಗಣಸದೇ ಅದೊಂದು ವರ ಎಂದು ತಿಳಿದು, ಅವರ ವಿಶೇಷತೆಗಳನ್ನು ಗುರುತಿಸಿ ಅವರಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಬಿಆರ್ಪಿ ಅಧಿಕಾರಿ ಎ ಜಿ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿಕಲಚೇತನ ಮಕ್ಕಳಲ್ಲಿ ಕ್ರೀಡಾ ಸ್ಫೂರ್ತಿ ತುಂಬಿ, ಜೀವನದ ಎಲ್ಲ ಸವಾಲುಗಳನ್ನು ಎದುರಿಸುವ ಶಕ್ತಿ ಬೆಳೆಸಬೇಕು ಎಂದು ಹೇಳಿದರು.
ಸಿದ್ಧರಾಮ ಪೂಜಾರಿ ಸಾನಿಧ್ಯ ವಹಿಸಿದ್ದರು. ಎಸ್ ಡಿ ಎಂ ಸಿ ಅಧ್ಯಕ್ಷ ರಾಜಕುಮಾರ ಮಿರ್ಜಿ ಅಧ್ಯಕ್ಷತೆ ವಹಿಸಿದ್ದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಟಿ ಕೆ ಜಂಬಗಿ, ಮುಖ್ಯ ಶಿಕ್ಷಕಿ ಆರ್ ಆಯ್ ಗುಂದಗಿ, ಸಿ ಆರ್ ಪಿ ಗಳಾದ ಸಂತೋಷ ನೆರಕಿ, ಪ್ರಕಾಶ ರಾಠೋಡ, ಬಸವರಾಜ ವಾಲೀಕಾರ, ಮುಖ್ಯ ಶಿಕ್ಷಕರಾದ ಎಸ್ ಬಿ ದಳವಾಯಿ, ಮಲ್ಲಪ್ಪ ಬಡದಾಳ, ಶಿಕ್ಷಕ ಸಂತೋಷ ಬಂಡೆ, ಶರಣು ತಾರಾಪುರ, ಬಿ ಐ ಈ ಆರ್ ಟಿ ಗಳಾದ ಆರ್ ಪಿ ಗುರವ, ಆರ್ ಸಿ ಗೌರಿ, ಎಸ್ ಎಸ್ ಹಣಮಶೆಟ್ಟಿ ಸೇರಿದಂತೆ ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿಕಲಚೇತನ ಮಕ್ಕಳು ಭಾಗವಹಿಸಿದ್ದರು.
ಬಿ ಆರ್ ಪಿ ಬಸವರಾಜ ಗೊರನಾಳ ಸ್ವಾಗತಿಸಿದರು. ಶಿಕ್ಷಕ ಎಸ್ ಆರ್ ಚಾಳೇಕರ ನಿರ್ವಹಿಸಿದರು.