ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ನಗರಕ್ಕೆ ಖಾಸಗಿ ಕಾರ್ಯಕ್ರಮದ ನಿಮತ್ಯ ಆಗಮಿಸಿದ್ದ, ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌಧರಿ ಸಾರ್ವಜನಿಕ ಆಸ್ಪತ್ರೆ, ಸರಕಾರಿ ಪ್ರಥಮ ದರ್ಜೆ ಕಾಲೇಜು ಸೇರಿದಂತೆ ವಿವಿದೆಡೆ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಸಾರ್ವಜನಿಕ ಅಹವಾಲು ಸ್ವೀಕರಿಸಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಲ್ಲಿನ ಅವಸ್ಥೆಯನ್ನು ಕಂಡು ನನಗೆ ದಂಗು ಬಡೆದಂತಾಗಿದೆ. ಆಸ್ಪತ್ರೆ ಅಕ್ಷರಶ: ಅವ್ಯವಸ್ಥೆಯ ಆಗರವಾಗಿದೆ. ಮಹಿಳೆಯರಿಗೆ ಯಾವುದೇ ಮೂಲಭೂತ ಸೌಕರ್ಯಗಳಿಲ್ಲ. ಬಾಣಂತಿಯರಿಗೆ ಶೌಚಾಲಯದ ವ್ಯವಸ್ಥೆಯಿಲ್ಲ. ಶೌಚಕ್ಕಾಗಿ ಮಹಿಳಾ ರೋಗಿಗಳು ಆಸ್ಪತ್ರೆಯಿಂದ ಹೊರಗೆ ಸುಮಾರ ೩೦೦-೪೦೦ಮೀ ದಷ್ಟು ಹೊರ ಹೋಗಬೇಕಾಗುತ್ತದೆ. ಬಾಣಂತಿಯರು ಅಂತಹ ಅವಸ್ಥೆಯಲ್ಲಿ ಅಷ್ಟೊಂದು ದೂರ ಕ್ರಮಿಸಿ ಹೋಗುವುದು ಒಬ್ಬ ಬಾಣಂತಿಯಿಂದ ಸಾಧ್ಯವೇ? ಎಂಬುದನ್ನು ಉಹಿಸಿಕೊಳ್ಳಲೂ ಕಷ್ಟ ಸಾಧ್ಯವಾಗುವಂತಹ ಪರಿಸ್ಥಿತಿ ಇದೆ. ಆಸ್ಪತ್ರೆಗೆ ಬಂದ ಹೊರ ರೋಗಿಗಳನ್ನು ದನಗಳಂತ ಒಂದೆಡೆ ಕೂಡಿ ಹಾಕಲಾಗುತ್ತದೆ. ಕುಳಿತುಕೊಂಡ ರೋಗಿಗಳನ್ನು ಕಸಗುಡಿಸುವ ಕರ್ಮಚಾರಿಗಳು ಕಸಬರಿಗೆಯಿಂದಲೆ ತಳ್ಳಿ ದಾರಿಮಾಡಿಕೊಂಡು ಹೋಗುತ್ತಾರೆ. ಇದೆಲ್ಲವನ್ನು ಗಮನಿಸಿದರೆ ಇಲ್ಲಿ ಮಾನವೀಯತೆ ಎನ್ನುವ ಪದಕ್ಕೆ ಅರ್ಥವೇ ಇಲ್ಲದಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಾದಿಯಾಗಿ ಸಿಬ್ಬಂದಿಗಳು ಯಾರಾದರೂ ಮೇಲಾಧಿಕಾರಿಗಳು ಭೇಟಿ ನೀಡಿದಾಗಷ್ಟೇ ಕರ್ತವ್ಯದ ಮೇಲೆ ಹಾಜರಿರುತ್ತಾರೆ. ಇತರೆ ಸಂದರ್ಭಗಳಲ್ಲಿ ಅರ್ಧಕ್ಕಿಂತ ಕಡಿಮೆ ಸಂಖ್ಯೆಯ ಹಾಜರಾತಿ ಇರುತ್ತದೆ. ಅದು ಅಲ್ಲದೇ ಕರ್ತವ್ಯದ ಮೇಲೆ ಹಾಜರಿರದಿದ್ದರೂ ಹಾಜರಿ ಪುಸ್ತಕದಲ್ಲಿ ಮಾತ್ರ ಸಹಿ ಇರುತ್ತದೆ. ಬಯೋಮೆಟ್ರಿಕ್ ಕೆಟ್ಟು ಹೋಗಿ ತಿಂಗಳುಗಳೇ ಕಳೆದು ಹೋದರೂ ಅದನ್ನು ರೀಪೇರಿ ಮಾಡಿಸುವ ಗೊಡವಿಗೆ ಹೋಗದೆ ಇರುವುದಕ್ಕೂ ಜಾಣತನವೇ ಕಾರಣವಾಗಿದೆ ಎನ್ನುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದವು.
ಇದೆಲ್ಲವನ್ನು ಗಮನಿಸಿದ ಸಾರ್ವಜನಿಕರು ಇದೊಂದು ಕಾಟಾಚಾರದ ಭೇಟಿ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ಯಾವುದೇ ಸಮಸ್ಯೆಗೆ ಪರಿಹಾರ ಸಿಗುವುದಿಲ್ಲ ಎನ್ನುವ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದವು. ಈ ಎಲ್ಲ ಸಮಸ್ಯೆಗಳನ್ನು ಆಲಿಸಿದ ನಂತರ ಸಮಸ್ಯೆಗಳನ್ನು ಸಂಬಂಧಪಟ್ಟ ಸಚಿವಾಲಕ್ಕೆ ವರದಿ ಸಲ್ಲಿಸಿ ಶೀಘ್ರ ಇಲ್ಲಿನ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸುತ್ತೇನೆ ಎಂದು ಭರವಸೆ ನೀಡಿ ನಿರ್ಗಮಿಸಿದರು.
ಈ ವೇಳೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.
ಇದೇ ಸಂದರ್ಭದಲ್ಲಿ ಟಿಎಚ್ಒ ಡಾ.ಎ.ಎ.ಮಾಗಿ, ಡಾ.ಮಹಾಂತೇಶ ಹಿರೇಮಠ, ಡಾ.ರಮೇಶ ರಾಠೋಡ ಸೇರಿದಂತೆ ಇನ್ನುಳಿದ ವೈದ್ಯರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
“ಆಸ್ಪತ್ರೆಯ ನಿರ್ವಹಣೆಗೆ ತನ್ನದೆಯಾದ ಅನುದಾನ ಇರುತ್ತದೆ. ಬಂದ ಅನುದಾನ ಏನು ಮಾಡುತ್ತೀರಿ? ಒಂದು ಸಣ್ಣ ಶೌಚಾಲಯ ನಿರ್ಮಿಸಲಾಗದಷ್ಟು ಮತ್ತು ದುರಸ್ತಿ ಮಾಡುವಷ್ಟು ಅನುದಾನ ನಿಮ್ಮಲ್ಲಿ ಇಲ್ಲವೆಂದರೆ ಆಸ್ಪತ್ರೆಯನ್ನು ಅಧಿಕಾರಿಗಳೆಲ್ಲರೂ ಸೇರಿ ಮುಚ್ಚಿಬಿಡಿ.”
– ಡಾ.ನಾಗಲಕ್ಷ್ಮಿ ಚೌಧರಿ
ಮಹಿಳಾ ಆಯೋಗದ ಅಧ್ಯಕ್ಷೆ

