ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಾಡಿನಲ್ಲಿ ಹನ್ನೆರಡನೇ ಶತಮಾನದ ಬಸವಾದಿ ಶರಣರ ಸಂದೇಶಗಳನ್ನು ಬಿತ್ತರಿಸುವಲ್ಲಿ ಶರಣ ಸಾಹಿತ್ಯ ಪರಿಷತ್ತು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದು ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹೇಳಿದರು.
ಪಟ್ಟಣದ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ತು ಶಿವಾನುಭವ ಸವಿನೆನಪು, ಲಿಂ.ಶಾಂತಾಬಾಯಿ ಮೇಟಿ, ವಿರುಪಾಕ್ಷಪ್ಪ ಆಲಗೂರ, ಲಿಂ.ಷಣ್ಮುಖಪ್ಪ ಶೀಲವಂತ ಸ್ಮರಣಾರ್ಥ ಶನಿವಾರ ಹಮ್ಮಿಕೊಂಡಿದ್ದ ದತ್ತಿ ಸ್ಮರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶರಣ ಸಾಹಿತ್ಯ ಪರಿಷತ್ತು ಅಗಲಿದ ಹಿರಿಯರ ಸ್ಮರಣಾರ್ಥವಾಗಿ ದತ್ತಿ ಸ್ಮರಣೆ ಕಾರ್ಯಕ್ರಮ, ವಿವಿಧ ಕಾರ್ಯಕ್ರಮ, ಸಮ್ಮೇಳನ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಶರಣರ ಸಂದೇಶ ಜನಮಾನಸಕ್ಕೆ ಮುಟ್ಟಿಸುತ್ತಿದೆ ಎಂದರು.
ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಕುರಿತು ಪ್ರವಚನಕಾರ ಬಸಯ್ಯ ಹಿರೇಮಠ ಮಾತನಾಡಿ, ಬಸವೇಶ್ವರರು ಸರ್ವಸಮಾಜದ ಸಮಾನತೆಗಾಗಿ, ಏಕತೆಗಾಗಿ, ಜಾತಿಧರ್ಮವೆನ್ನದೇ ಎಲ್ಲರನ್ನು ಒಂದುಗೂಡಿಸುವದಕ್ಕಾಗಿ ಜನಿಸಿದರು.
ಸಮಾಜದ ಉದ್ಧಾರಕ್ಕಾಗಿ ಉದಯಿಸಿದ ಬಸವೇಶ್ವರರು ಹುಟ್ಟಿದಾಗಲೇ ಸಾಂಸ್ಕ್ರತಿಕ ನಾಯಕರೆಂದು ಗುರುತಿಸಿಕೊಂಡಿದ್ದಾರೆ. ಭಾರತ ಸಂಸ್ಕಾರವಂತ ದೇಶವಾಗಿದೆ ಎಂದರು.
ಮುದ್ದೇಬಿಹಾಳ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಮಾತನಾಡಿ, ೧೨ ನೇ ಶತಮಾನದ ಶರಣರ ವಚನಗಳು ಯುವಜನಾಂಗಕ್ಕೆ ಮಾರ್ಗದರ್ಶಿಯಾಗಿವೆ. ಶರಣರ ವಚನಗಳು ನಮಗೆ ಬದುಕನ್ನು ಕಲಿಸುತ್ತವೆ. ವಚನಗಳನ್ನು ಅರ್ಥೈಸಿಕೊಂಡು ಬದುಕಿದರೆ ಜೀವನ ಸುಂದರವಾಗುತ್ತದೆ. ವಚನ ಸಂರಕ್ಷಣೆಯಲ್ಲಿ ಫ.ಗು.ಹಳಕಟ್ಟಿ, ಎಂ.ಎಂ.ಕಲಬುರ್ಗಿ, ಉತ್ತಂಗಿ ಚನ್ನಪ್ಪ ಸೇರಿದಂತೆ ಹಲವರ ಕೊಡುಗೆ ಮರೆಯುವಂತಿಲ್ಲ ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಮಾತನಾಡಿ,ಧಾರ್ಮಿಕ ಕಾರ್ಯಕ್ರಮಗಳು ಮನಸ್ಸಿಗೆ ನೆಮ್ಮದಿ ನೀಡುತ್ತವೆ ಎಂದರು.
ಚಂದ್ರಶೇಖರ ನಾಗರಾಳ, ಸಾಹಿತಿ ಗಿರಿಜಾ ಪಾಟೀಲ, ಡಾ.ಭೀಮಾಶಂಕರ ಹಡಪದ ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಫ್.ಡಿ.ಮೇಟಿ, ವಿರೇಶ ಕುಂಟೋಜಿ, ಎಚ್.ಎಸ್.ಬಿರಾದಾರ, ಸಾವಿತ್ರಿ ಕಲ್ಯಾಣಶೆಟ್ಟಿ, ದತ್ತಿ ದಾನಿಗಳ ಬಂಧುಗಳು ಇತರರು ಇದ್ದರು. ಎಸ್.ಎಲ್.ಓಂಕಾರ ಪ್ರಾರ್ಥಿಸಿದರು. ಆರ್.ಜಿ.ಅಳ್ಳಗಿ ಪ್ರಾಸ್ತವಿಕವಾಗಿ ಮಾತನಾಡಿದರು. ಜಿ.ಬಿ.ಕನ್ನೂರ ಸ್ವಾಗತಿಸಿದರು. ಎಸ್.ಐ.ಮನಗೂಳಿ ನಿರೂಪಿಸಿ, ವಂದಿಸಿದರು.
ಇದೇ ಸಂದರ್ಭದಲ್ಲಿ ಎಂಎಸ್ಸಿಯಲ್ಲಿ ಮೂರನೇ ರ್ಯಾಂಕ್ ಪಡೆದ ತಾಲೂಕಿನ ನಾಗವಾಡದ ತೇಜಶ್ವಿನಿ ಖೇಡದ, ಎಂ.ಎ.ಯಲ್ಲಿ ರ್ಯಾಂಕ್ ಪಡೆದ ರೋಹಿಣಿ ಕಂಬಾಳೆ, ಡಾಕ್ಟರೇಟ್ ಪದವಿ ಪಡೆದ ಪ್ರಾಧ್ಯಾಪಕ ಭೀಮಾಶಂಕರ ಹಡಪದ ಅವರನ್ನು ಸನ್ಮಾನಿಸಲಾಯಿತು.

