ಗಣೇಶ ನಗರದಲ್ಲಿ ಎಕ್ಸಲಂಟ್ ಕೋಚಿಂಗ್ ಕ್ಲಾಸ್ನ ನೂತನ ಶಾಖೆ ಪ್ರಾರಂಭ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಉತ್ತಮವಾದ ತರಬೇತಿ ನೀಡುವ ಮೂಲಕ ಸೈನಿಕಶಾಲೆ, ನವೋದಯ, ಕಿತ್ತೂರು, ಆರ್ಎಂಎಸ್ ಸೇರಿದಂತೆ ಅತೀ ಹೆಚ್ಚು ಫಲಿತಾಂಶ ನೀಡುವ ಹೆಗ್ಗಳಿಕೆ ಹೊಂದಿರುವ ಎಕ್ಸಲಂಟ್ ಕೋಚಿಂಗ್ ಕ್ಲಾಸ್ನ ಶಾಖೆಯನ್ನು ಗಣೇಶ ನಗರದ ಭಾಗದಲ್ಲಿ ಪ್ರಾರಂಭಿಸಬೇಕು ಎಂದು ಪಾಲಕರು ಬಹುದಿನಗಳಿಂದ ಒತ್ತಾಯಿಸುತ್ತಿದ್ದರು. ಅವರ ಭಾವನೆಗಳಿಗೆ ಸ್ಪಂಧಿಸುವ ನಿಟ್ಟಿನಲ್ಲಿ ಇಂದು ಗಣೇಶ ನಗರದಲ್ಲಿ ಎಸ್ಕೆ ಹಿರಿಯ ಪ್ರಾಥಮಿಕ ಶಾಲೆಯ ಸಹಯೋಗದಲ್ಲಿ ಹೊಸ ಶಾಖೆ ಪ್ರಾರಂಭಿಸುವ ಮೂಲಕ ಇನ್ನೂ ಹೆಚ್ಚಿನ ಮಕ್ಕಳಿಗೆ ತರಬೇತಿ ನೀಡುವ ಕಾರ್ಯಕ್ಕೆ ಅಣಿಯಾಗುತ್ತಿದ್ದೇವೆ ಎಂದು ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಬಸವರಾಜ್ ಕೌಲಗಿ ಹೇಳಿದರು.
ನಗರದ ಎಸ್ಕೆ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು; ಸ್ಪರ್ಧಾತ್ಮಕ ಪ್ರಪಂಚದಲ್ಲಿ ಮಕ್ಕಳನ್ನು ಅದೇ ವೇಗಕ್ಕೆ ಅನುಗುಣವಾಗಿ ಸಿದ್ಧಗೊಳಿಸಲು ಅತ್ಯುತ್ತಮವಾದ ತರಬೇತಿಯ ಅಗತ್ಯವಿದೆ ಎನ್ನುವುದನ್ನು ಮನಗಂಡ ಎಕ್ಸಲಂಟ್ ಸಮೂಹ ಶಿಕ್ಷಣ ಸಂಸ್ಥೆಯು ಬದಲಾಗುತ್ತಿರುವ ಸನ್ನಿವೇಶಕ್ಕನುಗುಣವಾಗಿ ತರಬೇತಿ ನೀಡಿ ಕರ್ನಾಟಕದಲಿಯೇ ಅತೀ ಹೆಚ್ಚು ಫಲಿತಾಂಶ ನೀಡುವ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಈ ನಿಟ್ಟಿನಲ್ಲಿ ಪಾಲಕರು ಬಹಳ ದಿನಗಳಿಂದ ತಮ್ಮ ಮಕ್ಕಳಿಗೆ ಉತ್ತಮವಾದ ತರಬೇತಿ ನೀಡುವುದಕ್ಕೆ ಎಕ್ಸಲಂಟ್ ಕೋಚಿಂಗ್ ಕ್ಲಾಸ್ನ ಶಾಖೆಯನ್ನು ಗಣೇಶ ನಗರದಲ್ಲಿ ತೆರೆಯಬೇಕು ಎಂದು ಒತ್ತಾಯಿಸುತ್ತಲೇ ಬಂದಿದ್ದರು. ಆ ಕಾಲ ಈಗ ಕೂಡಿ ಬಂದಿದ್ದು ವಿಕಾಸ ಎಜ್ಯೂಕೇಶನ್ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಸೋಮನಾಥ ಸುಳಿಬಾವಿಯವರ ಪ್ರಯತ್ನದ ಫಲದಿಂದ ನಮ್ಮ ಸಂಸ್ಥೆಯೂ ಗಣೇಶ ನಗರದ ಎಸ್ಕೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಶಾಖೆ ಪ್ರಾರಂಭಿಸುತ್ತಿದ್ದು ಉತ್ತಮ ನಾಡು ಕಟ್ಟುವ ಕಾರ್ಯದಲ್ಲಿ ಪಾಲಕರು ಕೈ ಜೋಡಿಸಬೇಕು ಎಂದು ಹೇಳಿದರು.
ವಿಶ್ರಾಂತ ಪ್ರಾಚಾರ್ಯ ಜಿ.ಆರ್ ಸುಳಿಬಾವಿ ಮಾತನಾಡಿ; ಈ ಸಂಸ್ಥೆಗಳು ಕೇವಲ ಶಿಕ್ಷಣ ಪ್ರಸಾರ ಮಾತ್ರ ಮಾಡುತ್ತಿಲ್ಲ. ಬದಲಿಗೆ ಮಕ್ಕಳಲ್ಲಿ ಮೌಲ್ಯವರ್ಧನೆ ಮಾಡುವ ಕಾಯಕವನ್ನು ಸಹ ಮಾಡುತ್ತಿದ್ದು ಭಾರತ ನಿರ್ಮಾಣಕ್ಕೆ ಬೇಕಾದ ಯುವಶಕ್ತಿಯನ್ನು ತಯಾರು ಮಾಡುತ್ತಿವೆ. ಹೀಗಾಗಿ ಈ ಭಾಗದ ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಕಾಸ ಎಜ್ಯೂಕೇಶನ್ ಫೌಂಡೇಷನ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಬಾಪುಗೌಡ ಪಾಟೀಲ್; ಇಷ್ಟು ದಿನಗಳ ಕಾಲ ಎಸ್.ಕೆ ಶಾಲೆಯು ಮಕ್ಕಳಿಗೆ ಉತ್ತಮವಾದ ಶಿಕ್ಷಣವನ್ನು ನೀಡುತ್ತ ಬಂದಿದೆ. ಈಗ ಎಕ್ಸಲಂಟ್ ಸಂಸ್ಥೆಯ ಸಹಯೋಗದಿಂದಾಗಿ ತರಬೇತಿಯನ್ನು ಸಹ ನೀಡುವ ಅವಕಾಶ ಒದಗಿ ಬಂದಿರುವುದು ನಮ್ಮೆಲ್ಲರ ಸುದೈವವಾಗಿದೆ ಎಂದರು.
ಬಿಸಿಡಬ್ಲೂಡಿಯ ಉಪ ನಿರ್ದೇಶಕ ಈರಣ್ಣ ಆಶಾಪುರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ಧಪ್ಪಜ್ಜನ ಕಟ್ಟೆ ಮಾವಿನಬಾವಿಯ ಬಸವರಾಜ್ ಗುರೂಜಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಆರ್.ಎಸ್.ಪಾಟೀಲ್, ಬಸನಗೌಡ ಪಾಟೀಲ್, ಎಕ್ಸಲಂಟ್ ಸಂಸ್ಥೆಯ ಗೌರವ ಸದಸ್ಯ ರಾಜಶೇಖರ ಕೌಲಗಿ, ದಿಕ್ಸೂಚಿ ಕೋಚಿಂಗ್ ಕ್ಲಾಸ್ನ ಪ್ರಕಾಶ ಬಿರಾದಾರ, ಮಹೇಶ ನಿಡೋಣಿ, ವಿರೇಶ ಇಂಡಿ, ಮಲ್ಲನಗೌಡ ಪಾಟೀಲ್, ಅಶ್ವಿನಿ ಭಜಂತ್ರಿ ಸೇರಿದಂತೆ ಎಸ್.ಕೆ ಶಾಲೆಯ ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.

