ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಸಾಹಿತ್ಯಕ್ಕೆ ತನ್ನದೇಯಾದ ಸ್ಥಾನಮಾನ ಗೌರವವಿದೆ. ಉತ್ತಮ ಸಾಹಿತ್ಯ ಸಮಾಜಕ್ಕೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ ಎಂದು ವಿಜಯಪುರದ ಶರಣಬಸವೇಶ್ವರ ಸಂಸ್ಥೆಯ ಅಧ್ಯಕ್ಷೆ ಭಾಗ್ಯಶ್ರೀ ಪಾಟೀಲ ಹೇಳಿದರು.
ಪಟ್ಟಣದ ಶಿವಲಿಂಗೇಶ್ವರ ವಿರಕ್ತಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಾಂತಾ ಬಿರಾದಾರ(ಚೌರಿ) ಅವರ ಮನದೈಸಿರಿ ಕೃತಿ ಲೋಕಾರ್ಪಣೆ ಹಾಗೂ ಸನ್ಮಾನ ಸಮಾರಂಭವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತಿಗಳು ತಮ್ಮ ಮನದಾಳದಲ್ಲಿರುವ ವಿಚಾರ,ಭಾವನೆ, ಆಲೋಚನೆ ಸಾಹಿತ್ಯದ ಮೂಲಕ ಅಭಿವ್ಯಕ್ತಗೊಳಿಸುತ್ತಾರೆ. ಈ ಸಾಹಿತ್ಯ ನಮ್ಮೆಲ್ಲರ ಮನದಾಳಕ್ಕೆ ತಲುಪುತ್ತದೆ. ಅನೇಕರಿಗೆ ಇದು ಜ್ಞಾನ ಒದಗಿಸುತ್ತದೆ. ಸಾಹಿತ್ಯದಿಂದ ಸಮಾಜಕ್ಕೆ ಉತ್ತಮ ಸಂದೇಶ ಸಿಗುತ್ತದೆ. ಕನ್ನಡ ನಾಡಿನಲ್ಲಿ ಕುವೆಂಪು, ದ.ರಾ.ಬೇಂದ್ರೆ, ಶಿವರಾಮ ಕಾರಂತ ಸೇರಿದಂತೆ ಅನೇಕ ಸಾಹಿತಿಗಳು ಸಾಹಿತ್ಯವನ್ನು ನೀಡಿದ್ದಾರೆ. ಇಲ್ಲಿನ ಶಾಂತಾ ಬಿರಾದಾರ ಅವರ ಕವನ ಸಂಕಲನವನ್ನು ಸಾಹಿತ್ಯ ಲೋಕದಲ್ಲಿ ಮಿಂಚುವಂತಾಗಲಿ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಮೌಲಿಕ ಕೃತಿಗಳು ಹೊರಬರುವಂತಾಗಲೆಂದರು.
ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಮನದೈಸಿರಿ ಕೃತಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ೧೨ ನೇ ಶತಮಾನದಲ್ಲಿ ಬಸವಣ್ಣನವರ ನೇತೃತ್ವದಲ್ಲಿ ಸಾಮಾನ್ಯ ವರ್ಗದಿಂದ ಬಂದ ಶರಣ-ಶರಣೆಯರು ವಚನ ಸಾಹಿತ್ಯ ರಚಿಸಿದರು. ಕನ್ನಡ ಸಾಹಿತ್ಯದಲ್ಲಿ ವಚನ ಸಾಹಿತ್ಯ ಅಮೂಲ್ಯ ಕೊಡುಗೆಯಾಗಿದೆ. ಬಸವಣ್ಣನವರು ಸಮ ಸಮಾಜ ನಿರ್ಮಾಣದ ಕನಸು ಕಂಡವರು. ಇಂತಹ ನಾಡಿನಲ್ಲಿ ಯುವ ಮಹಿಳಾ ಸಾಹಿತಿ ಶಾಂತಾ ಬಿರಾದಾರ ಅವರ ಕವನ, ಹನಿಗವನ ಸಂಕಲನ ಲೋಕಾರ್ಪಣೆ ಮಾಡಲು ನನಗೆ ತುಂಬಾ ಸಂತಸವಾಗಿದೆ. ಈ ಸಂಕಲನ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಈ ಕೃತಿಯಲ್ಲಿರುವ ಕವನ, ಹನಿಗವನ ಓದುಗರನ್ನು ಸಲೀಸಾಗಿ ಓದಿಸಿಕೊಂಡು ಹೋಗುತ್ತವೆ. ಸಾಹಿತಿಗಳನ್ನು ಬೆಳೆಸುವ ಅಗತ್ಯವಿದೆ ಎಂದರು.
ಕೃತಿ ಪರಿಚಯಿಸಿದ ಮಡಿಕೇಶ್ವರ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕ ಬಸವರಾಜ ಹಂಚಲಿ ಮಾತನಾಡಿ, ನನ್ನಿಂದ ಎಷ್ಟು ಜನರು ಸುಖವಾಗಿ ಇರುತ್ತಾರೋ ಎಂದು ಜೀವನ ಮಾಡುವವರ ಬದುಕು ಸಾರ್ಥಕ ಬದುಕಾಗುತ್ತದೆ. ಸಾಹಿತಿಗಳಿಗೆ, ಲೇಖಕರಿಗೆ ತಮ್ಮಲ್ಲಿರುವ ಭಾವನೆಯನ್ನು ವ್ಯಕ್ತಗೊಳಿಸಲು ಸಾಹಿತ್ಯ ನೆರವಾಗುತ್ತದೆ. ಸಾಹಿತ್ಯ ಸೃಷ್ಟಿ ಮಾಡುವುದು ಸುಲಭದ ಕೆಲಸವಲ್ಲ. ನಾವು ರಚಿಸಿದ ಸಾಹಿತ್ಯ ನಾವು ಸಂತೋಷ ಪಟ್ಟರೆ ಸಾಲದು ಅದನ್ನು ಓದಿದವರು ಸಂತಸ ಪಟ್ಟರೆ ಮಾತ್ರ ಸಾಹಿತ್ಯದ ಗೆಲುವು ಸಾಧ್ಯ. ಈ ನಿಟ್ಟಿನಲ್ಲಿ ಶಾಂತಾ ಬಿರಾದಾರ(ಚೌರಿ) ಅವರ ಕೃತಿ ಮನದೈಸಿರಿ ಓದಿದಾಗ ನಮ್ಮೆಲ್ಲರ ಜೀವನ ಕಥೆಗಳು ಮೂಡಿಬಂದಿವೆ ಎಂಬಂತೆ ಭಾಸವಾಗುತ್ತದೆ. ಈ ಕೃತಿಯಲ್ಲಿ ೫೦ ಕವನ, ೯೦ ಕ್ಕೂ ಹೆಚ್ಚು ಹನಿಗವನಗಳು ಮೂಡಿ ಬಂದಿವೆ. ಎಲ್ಲ ಕವನ,ಹನಿಗವನಗಳು ಮಾರ್ಮಿಕವಾಗಿ ಮೂಡಿಬಂದಿವೆ. ಇಂದು ನಾವೆಲ್ಲರೂ ಶುಭ ಕಾರ್ಯಕ್ರಮಗಳಲ್ಲಿ ಪುಸ್ತಕದ ಉಡುಗೊರೆ ಕೊಡುವದನ್ನು ರೂಢಿಸಿಕೊಂಡರೆ ಸಾಹಿತಿಗಳನ್ನು ಪ್ರೋತ್ಸಾಹಿಸಿದಂತಾಗುವ ಜೊತೆಗೆ ಜನರಿಗೆ ಮೌಲಿಕ ಕೃತಿಗಳನ್ನು ಮುಟ್ಟಿಸಿದ ಫಲ ಸಿಗುತ್ತದೆ ಎಂದರು.
ಸಾನಿಧ್ಯ ವಹಿಸಿದ್ದ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭಗವಂತನು ಎಲ್ಲರಿಗೂ ಎಲ್ಲ ಕಲೆಗಳನ್ನು ನೀಡಿಲ್ಲ. ನಮಗೆ ನೀಡಿರುವ ಕಲೆಗಳನ್ನು ನಾವು ಸದುಪಯೋಗ ಪಡಿಸಿಕೊಳ್ಳುವ ಅಗತ್ಯವಿದೆ. ಸಾಹಿತ್ಯವನ್ನು ಬರೆಯುವವರಿಗೆ ಪ್ರೋತ್ಸಾಹ ನೀಡುವ ಕಾರ್ಯ ನಡೆಯಬೇಕು. ಪುಸ್ತಕಗಳಿಂದ ಜ್ಞಾನ ಪಡೆಯಲು ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಓದುವದನ್ನು ರೂಢಿಸಿಕೊಳ್ಳಬೇಕು. ಇಂದು ಮಹಿಳೆಯರು ಎಲ್ಲ ರಂಗಗಳಲ್ಲಿಯೂ ಮುನ್ನೆಡೆ ಸಾಧನೆ ಮಾಡಿದ್ದಾರೆ ಎಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ, ದ್ರಾಕ್ಷಾಯಣಿ ಅಮ್ಮ, ಶರಣ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ವೀರಣ್ಣ ಮರ್ತುರ, ಭಾರತೀಯ ಸೃಜನಶೀಲ ಬಳಗದ ಜಿಲ್ಲಾಧ್ಯಕ್ಷೆ ಗಿರಿಜಾ ಪಾಟೀಲ, ಸಾಹಿತಿ ಶಾಂತಾ ಬಿರಾದಾರ ಮಾತನಾಡಿದರು.
ಅಧ್ಯಕ್ಷತೆಯನ್ನು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಬಸನಗೌಡ ಬಿರಾದಾರ, ಡಾ.ಎಸ್.ಎಸ್.ಪಾಟೀಲ ಇತರರು ಇದ್ದರು. ಶರಣು ಬಸ್ತಾಳ ಪ್ರಾರ್ಥಿಸಿದರು. ಪ್ರಭಾಕರ ಖೇಡದ ಸ್ವಾಗತಿಸಿದರು. ಲಕ್ಷ್ಮೀ ಕಳ್ಳಿಗುಡ್ಡ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿರುವ ವಿವೇಕಾನಂದ ಕಲ್ಯಾಣಶೆಟ್ಟಿ, ಮಹಾಂತೇಶ ಸಂಗಮ, ಪ್ರಭಾಕರ ಖೇಡದ, ನೀಲಪ್ಪ ಅಂಗಡಿ, ಜಯಶ್ರೀ ತೆಗ್ಗಿನಮಠ ಇತರರನ್ನು ಸನ್ಮಾನಿಸಲಾಯಿತು.

