ಲೇಖನ
– ಬಸವರಾಜು ಆರ್ ಪೂಜಾರ
ಹವ್ಯಾಸಿ ಬರಹಗಾರರು
ಯ ಬೂದಿಹಾಳ
ಉದಯರಶ್ಮಿ ದಿನಪತ್ರಿಕೆ
ಜಗತ್ತು ಅತ್ಯಂತ ಮುಂದುವರೆದರೂ ಭೂಮಾಪನ ಕಾರ್ಯದಲ್ಲಿ ಅದೇ ಹಳೆ ಪದ್ದತಿಯನ್ನು ಬಳಸುವುದು ಅಮಾನವೀಯ, ಆಧುನಿಕ ಕಾಲದಲ್ಲಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕೆಂಬ ಮಹತ್ವಾಕಾಂಕ್ಷೆಯ ಯೋಜನೆಯೊಂದಿಗೆ ರೋವರ್ ಎಂಬ ಆಧುನಿಕ ತಂತ್ರಜ್ಞಾನ ಉಳ್ಳ ಯಂತ್ರವನ್ನು ಭೂಮಾಪನ ಮಾಡಲು ಬಳಸಲು ಕರ್ನಾಟಕ ಸರ್ಕಾರ ಅಧಿಕೃತವಾಗಿ ಹೊಸ ಹೆಜ್ಜೆ ಇಟ್ಟಿದ್ದು ಒಂದು ಮೈಲುಗಲ್ಲೆ ಸರಿ.
ಈ ರೋವರ್ ಸರ್ವೆಯು ಸೆಟ ಲೈಟ್ ಆಧರಿತವಾದ ಅಳತೆ ಮಾಡುವ ಮಾಪನವಾಗಿದ್ದು .ಇದು ಈ ಹಿಂದೆ ಮಾಡುವ ಚೈನು ಆಧಾರಿತ ಸರ್ವೆಗಿಂತ ಸ್ವಲ್ಪ ಬಿನ್ನವಾಗಿರುತ್ತದೆ. ಚೈನು ಆಧರಿತ ಸರ್ವೆಗೆ ಕನಿಷ್ಠ ಮೂರು ಜನ ಸಿಬ್ಬಂದಿ ಒಳಗೊಂಡಂತೆ ಕನಿಷ್ಠ 50 ರಿಂದ 180 ನಿಮಿಷಗಳು ಬೇಕಾಗುತ್ತಿತ್ತು ತದ ನಂತರ ಸರ್ವೆ ಪೂರ್ಣಗೊಂಡು ಆ ದಾಖಲೆಗಳನ್ನು ತಯಾರಿಸಲು ಕನಿಷ್ಠ ಮೂರು ರಿಂದ ಐದು ಗಂಟೆ ಕಾಲಾವಧಿ ತೆಗೆದುಕೊಳ್ಳುತ್ತಿತ್ತು. ಅನಾವ್ಯಶಕವಾಗಿ ಮಾನವ ಸಂಪನ್ಮೂಲ ಬಳಕೆ ಮಾಡಿಕೊಳ್ಳುವುದು ಮತ್ತು ಸಮಯ ಉಳಿಸಲು ರೋವರ್ ತಂತ್ರಜ್ಞಾನ ಬಳಸಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ಈ ರೋವರ್ ತಂತ್ರಜ್ಞಾನದಿಂದ ಕನಿಷ್ಠ 8-10 ನಿಮಿಷಗಳಲ್ಲಿ ನಾವು ಸರ್ವೆ ಮುಗಿಸಬಹುದು ಮತ್ತು ಡಿಜಿಟಲ್ ಸ್ಕೆಚ್ ಪಡೆಯಬಹುದಾಗಿದೆ.
ಆದಿಮಾನವ ಪ್ರಬುದ್ಧಗೊಂಡತೆ ತನ್ನ ಬುದ್ದಿ ಸಾಮರ್ಥ್ಯ ಉಪಯೋಗಿಸಿಕೊಂಡು ತನ್ನ ಜೀವನಕ್ಕೆ ಅನುಕೂಲವಾಗುವಂತೆ ಕಾಡು ಗಿಡ ಮರಗಳನ್ನು ಕಡೆದು ಹೊಲ ಗದ್ದೆಗಳನ್ನು ನಿರ್ಮಿಸಿ ಬೆಳೆಯನ್ನು ಬೆಳೆಯಲಾರಂಬಿಸಿದ. ತದ ನಂತರ ಚಾಣಕ್ಷತನ ದಿನ ಅಭಿವೃದ್ಧಿ ಹೊಂದುತ್ತಾ ಕೆರೆ,ಕಟ್ಟೆ,ರಸ್ತೆ ನಿರ್ಮಾಣ ಮಾಡಿಕೊಂಡು, ಒಂದೇ ಕಡೆ ವಾಸಿಸಲು ಆರಂಭಿಸಿದನು. ಮಾನವರ ಗುಂಪು ಒಂದೇಡೆ ನೆಲೆಯುರಿದನ್ನು ಗ್ರಾಮಗಳೆಂದು ಕರೆದರು. ಆ ಗುಂಪುಗಳಲ್ಲಿ ಜನಸಂಖ್ಯೆ ಹೆಚ್ಚಾದಂತೆ ಅವರಲ್ಲಿ ಪಾಲುದಾರಿಕೆ ಆರಂಭವಾಯಿತು. ಅವರ ಪಾಲುದಾರಿಕೆ ಮಾಡಿ ವ್ಯಾಜ್ಯ ಕಡಿಮೆ ಮಾಡಲು ಹುಟ್ಟಿದೇ ಎಲ್ಲೆ (ಬದ್ದು) ನಿರ್ಮಿಸುವುದು. ಎಲ್ಲೆ ಎಂದರೆ ಗಡಿ ಎಂದರ್ಥ. ಇದನ್ನು ವಿವಿಧ ಭಾಗಗಳಲ್ಲಿ ಬದ್ದು, ಹೊಡ್ಡು, ಹದ್ದು, ಹರಿಕೆ, ಹೀಗೆ ಅನೇಕ ಪದಗಳಿಂದ ಕರೆಯಲಾಗುತ್ತದೆ.ಈ ರೀತಿಯಾಗಿ ಮಾನವ ತನ್ನ ಪಾಲುದಾರಿಕೆಗಾಗಿ ಗಡಿ ನಿರ್ಮಿಸಲು ಹುಟ್ಟಿಕೊಂಡಿದ್ದೆ ಭೂಮಾಪನ ಶಾಖೆ. ಇದು ಅನಾದಿಕಾಲದಿಂದಲೂ ಇಲ್ಲಿಯವರೆಗೂ ನಾನಾ ರೀತಿಯಲ್ಲಿ ಅಳತೆ ಕಾರ್ಯನಿರ್ವಹಿಸಿ ವಿವಿಧ ರೀತಿಯ ಮಾನದಂಡಗಳ ಮೇಲೆ ತನ್ನ ಕಾರ್ಯ ಮಾಡಲಾಗುತ್ತಿತ್ತು. ಭಾರತದ ಸಿಂಧೂ ನಾಗರಿಕತೆಯಲ್ಲಿ ತೂಕ ಮತ್ತು ಅಳತೆ ಮಾಪನವು ವೈಜ್ಞಾನಿಕವಾಗಿ ಮುಂದುವರೆದು ಒಂದು ಸ್ಟಾಂಡರ್ಡ್ ಪದ್ದತಿಯನ್ನು ಅಳವಡಿಕೊಂಡಿತ್ತು. ಅಲ್ಲಿ 2,4,6,8,12,16,32,64 ಆಣೆ ಪ್ರಮಾಣದಲ್ಲಿ ಅಳತೆ ಮತ್ತು ಮಾಪನ ಮಾಡುತ್ತಿದ್ದರು. ಇದೇ ಕ್ರಮೇಣ ಮುಂದುವರೆದು ಭಾರತದಲ್ಲಿ 16 ಆಣೆ ಎಂದರೆ 1 ರೂಪಾಯಿಯ ಮಾನದಂಡದಲ್ಲಿ ಬಳಕೆ ಮಾಡಲು ಆರಂಭಿಸಿದರು. 4 ಆಣೆ, 8 ಆಣೆ , 16 ಆಣೆ (1ರೂಪಾಯಿ) ಅತಿ ಹೆಚ್ಚು ಪ್ರಚಲಿತದಲ್ಲಿರುವ ಮಾಪನಗಳಾದವು. ಹಳ್ಳಿಗಳಲ್ಲಿ ಈಗಲೂ ಈ ಆಣೆ ಪದ್ದತಿ ತುದಿ ನಾಲಿಗೆಯಲ್ಲಿ ಇವೆ. ತದ ನಂತರ ಮಾನವನ ಬುದ್ದಿ ಸಾಮಾರ್ಥ್ಯ ಬೆಳದಂತೆ ಕೆಲಸವನ್ನು ಸರಳಿಕರಣಗೊಳಿಸಲು ಮತ್ತು ನಿಖರತೆಗಾಗಿ ಹಗ್ಗ, ಕೋಲುಗಳನ್ನು ಬಳಸಲಾರಂಬಿಸಿದನು. ರೋಮನರ ಕಾಲದಲ್ಲಿ ಒಡೋಮೀಟರ್ ಎಂಬ ಸಾಧನವನ್ನು ಬಳಸಿ ಅಳತೆ ಕೆಲಸ ಮಾಡುತ್ತಿದ್ದರು. ಅದೇ ಮಾದರಿಯಲ್ಲಿ ಮೌರ್ಯರು ರಜ್ಜಕ ಎಂಬ ಹಗ್ಗವನ್ನು ಭೂಮಾಪನ ಮಾಡಲು ಬಳಸಿದರು. ಈ ರೀತಿಯಾಗಿ ತಮ್ಮದೇ ಯಾದ ರೀತಿಯಲ್ಲಿ ಕಾಲ ಕಾಲ ತಕ್ಕಂತೆ ಸ್ಟಾಂಡರ್ಡ್ ಗಳನ್ನು ಬಳಸುತ್ತಾ ವಾಜ್ಯಗಳನ್ನು ಕಡಿಮೆ ಮಾಡಿಕೊಂಡು ಬರುತ್ತಿದ್ದರು. ಆದರೆ ಮೊಟ್ಟ ಮೊದಲ ಬಾರಿಗೆ ಭಾರತವನ್ನು ವೈಜ್ಞಾನಿಕವಾಗಿ ನಿಖರವಾಗಿ ಅಳತೆಮಾಡಿ ಕಂದಾಯ ನಿಗದಿಸಿಪಡಿಸಿದವರು ಬ್ರಿಟಿಷರು.
ತಮ್ಮ ಸುಪರ್ದಿಯಲ್ಲಿದ್ದ ಭಾರತದಲ್ಲಿ ಯಾವುದೇ ನಿರ್ದಿಷ್ಟ ಜಮೀನಿನ ವಿಸ್ತೀರ್ಣವನ್ನು ಗುರುತಿಸದೇ ಕಂದಾಯವನ್ನು ನಿರ್ಧರಿಸುವುದು ಸೂಕ್ತವಲ್ಲ ಎಂಬ ನಿರ್ಧಾರಕ್ಕೆ ಬ್ರಿಟಿಷರು ಬಂದರು.ಆ ಕಾರಣಕ್ಕೆ ಭೂಮಾಪನ ಮಾಡಬೇಕೆಂಬ ಅಲೋಚನೆ ಮಾಡಿದರು. ಅಂದಿನಿಂದ ಭೂಮಿಯನ್ನು ಮಾಪನ ಮಾಡಬೇಕೆಂದು ಹೆಗ್ಗುರಿನಿಂದ ಕಾರ್ಯ ಪ್ರವೃತ್ತಿಯಾದರು ಬ್ರಿಟಿಷರು. ಅವರ ಉದ್ದೇಶ ಕಂದಾಯ ನಿರ್ಧರಿಸುವುದಾದರು. ಅವರು ನೀಡಿದ ದಾಖಲೆಗಳು ಮಾತ್ರ ಇಂದಿಗೂ ಅನೇಕ ವ್ಯಾಜ್ಯಗಳಿಗೆ ಪರಿಹಾರ ನೀಡುತ್ತವೆ. ಈ ಕಾರ್ಯಕ್ಕೆ ಹೆಚ್ಚು ಆಸಕ್ತಿ ತೋರಿಸಿದ್ದು ಮದ್ರಾಸ್ ಪ್ರಾಂತ್ಯ. ಇಲ್ಲಿ ಮೊಟ್ಟಮೊದಲ ಬಾರಿಗೆ ಭೂಮಾಪನ ಕಾರ್ಯ ಆರಂಭಗೊಳಿಸಿದ್ದರು. ಅಲ್ಲಿನ ಸೇನಾಧಿಕಾರಿ ಕರ್ನಲ್ ವಿಲಿಯಂ ಲ್ಯಾಂಬ್ಟನ್ ಎಂಬ ಅಧಿಕಾರಿವು ಮುತುವರ್ಜಿ ವಹಿಸಿ ಅವರು ಮದ್ರಾಸಿನ ಸೆಂಟ್ ಥಾಮಸ್ ಮೌಂಟ ಎಂಬ ಸ್ಥಳದಿಂದ ಎಪ್ರೀಲ್ -10 -1802ರಲ್ಲಿ ಭೂಮಾಪನ ಕಾರ್ಯ ಪ್ರಾರಂಬಿಸಿದರು. ಆದಕಾರಣ ಪ್ರತಿ ವರ್ಷ ಎಪ್ರೀಲ್ 10 ನ್ನು ಭೂಮಾಪನ ದಿನವನ್ನಾಗಿ ಆಚರಿಸಲಾಗುತ್ತದೆ.
ಭೂಮಾಪನ ಮಾಡಲು ಸರಪಳಿ(ಚೈನ್ ) ಗಳನ್ನು ಬಳಸಿಕೊಂಡು ಅಳತೆ ಕಾರ್ಯನಿರ್ವಹಿಸಲು ಪ್ರಾರಂಭಿಸಿದರು. ಈ ವಿಶಾಲವಾದ ಭೂಮಿಯನ್ನು ಹೇಗೆ ಅಳತೆ ಮಾಡುತ್ತಾರೆಂಬ ಆಲೋಚನೆ ಮೂಡುತ್ತದೆ. ಇವರು ಈ ಭೂಮಿಯನ್ನು ಅನಿರ್ದಿಷ್ಟ ಆಕೃತಿಯಿಂದ,ನಿರ್ದಿಷ್ಟ ಆಕೃತಿಗೆ ಪರಿವರ್ತಿಸಿಕೊಳ್ಳುತ್ತಾರೆ. ಅವುಗಳೆಂದರೆ ತ್ರಿಭುಜ, ತ್ರ್ಯಾಪಿಜ್ಯ್ ,ಚೌಕ, ಆಯತ, ಪ್ಯಾರಲೋಗ್ರಾಮ್ ಹೀಗೆ ಅಲ್ಲಿನ ಬೌಗೋಳಿಕ ಸನ್ನಿವೇಶ ತಕ್ಕಂತೆ ಅನುಕೂಲವಾಗುವ ರೀತಿಯಲ್ಲಿ ನಿರ್ದಿಷ್ಟ ಆಕೃತಿಗೆ ಮಾರ್ಪಡಿಸಿಕೊಂಡು ಆ ಆಕೃತಿಗಳ ವಿಸ್ತೀರ್ಣ ಕಂಡುಕೊಳ್ಳತ್ತಾರೆ.ಆ ಸಣ್ಣ ಸಣ್ಣ ಆಕೃತಿಯ ಒಟ್ಟು ವಿಸ್ತೀರ್ಣವೇ ಆ ಜಮೀನಿನ ವಿಸ್ತೀರ್ಣವಾಗಿರುತ್ತದೆ. ಅಳತೆಗಳನ್ನು ಎರಡು ದೃಷ್ಟಿಯಿಂದ ಅಳತೆ ಮಾಡಬೇಕಾಗುತ್ತದೆ. ಒಂದು ನೇರ ಅಳತೆ ( Linear measurement) ಇನ್ನೊಂದು ಕೋನಿಯ ಅಳತೆ (angular measurement). ಈ ಎರಡು ರೀತಿಯ ದೃಷ್ಟಿಯಿಂದ ಅಳತೆ ಕಾರ್ಯ ನಿರ್ವಹಿಸಿದರೆ ವಿಸ್ತೀರ್ಣಗಳಲ್ಲಿ ನಿಖರತೆ ಬರುತ್ತದೆ.ಇದು ಒಂದು ತಾಂತ್ರಿಕ ಕಾರ್ಯವಾಗಿದ್ದು ಇಲ್ಲಿ ರೇಖಾಗಣಿತವು ಬಹು ಮುಖ್ಯ ಪಾತ್ರವಹಿಸುತ್ತದೆ. ಅಷ್ಟೇ ಅಲ್ಲದೇ ಇಲ್ಲಿ ಗಣಿತದ ಆಟವೇ ಹೆಚ್ಚು ಗಣಿತದ ಮೂಲ ಪರಿಕಲ್ಪನೆಗಳು ಹೆಚ್ವು ಪ್ರಾಮುಖ್ಯತೆ ಪಡೆಯುತ್ತವೆ.ಟ್ರಿಗ್ನಾಮೆಟ್ರಿಯಿಂದ ವಿಶ್ವದ ಅತಿ ಎತ್ತರದ ಮೌಂಟ್ ಎವರೆಸ್ಟ್ ಅಳೆಯಲು ಸಾಧ್ಯವಾಯಿತು.

ಭಾರತೀಯ ಭೌಗೋಳಿಕ ಸನ್ನಿವೇಶವು ವಿವಿಧ ರೀತಿಯ ವೈಶಿಷ್ಟ್ಯಗಳಿಂದ ಕೂಡಿದ್ದು ಗಿಡ, ಮರಗಳು, ಬೆಟ್ಟ,ಗುಡ್ಡಗಳು, ನದಿ ಕೊಳಗಳು ಹೀಗೆ ಅನೇಕ ನೈಸರ್ಗಿಕ ಅಡಚಣೆಗಳು ಸರ್ವೆ ಕಾಲಕ್ಕೆ ಕಂಡುಬಂದವು. ಇವುಗಳನ್ನು ಹೇಗೆ ಅಳತೆ ಮಾಡುವುದು ಎಂದು ಯೋಚಿಸುವಾಗ ಆಲೋಚನೆಗೆ ಬಂದಿದ್ದೆ ಸುತ್ತುಗಾಮಿ ಪದ್ದತಿ. ಇದು ಮಾನವ ಹೋಗಲಾಗದ ಪ್ರದೇಶಗಳನ್ನು ಅಳೆಯಲು ಬಳಸುವ ಪದ್ದತಿಯಾಗಿದೆ. ಸುತ್ತುಗಾಮಿ ಪದ್ದತಿ ಎಂದರೆ ಒಂದು ಬೆಟ್ಟವನ್ನು ಅಳೆಯ ಬೇಕಾದರೆ ,ಆ ಬೆಟ್ಟವನ್ನು ನೇರವಾಗಿ ಅಳತೆ ಮಾಡಲು ಕಷ್ಟವಾಗುತ್ತದೆ ಆಗ ಬೆಟ್ಟದ ಸುತ್ತಲೂ ಇರುವ ಪ್ರದೇಶವನ್ನು ಅಳತೆ ಮಾಡಿ, ಆ ಜಮೀನಿನ ನಕ್ಷೆಯನ್ನು ಒಂದೊಕ್ಕೊಂದು ಜೋಡಿಸುತ್ತಾ ಹೋದಾಗ ಮದ್ಯೆ ಉಳಿಯುವ ವಿಸ್ತೀರ್ಣವೇ ಆ ಬೆಟ್ಟದ ಪ್ರದೇಶವೆಂದು ಪರಿಗಣಿಸಲಾಗುತ್ತದೆ. ಈ ಕಾರ್ಯವು ಸಹ ಬಹಳ ಕಷ್ಟದ ಕಾರ್ಯವು ಮತ್ತು ಬಹಳ ಸಮಯ ಹಾಗೂ ಅಧಿಕ ಮಾನವ ಸಂಪನ್ಮೂಲ ಬೇಕಾಗುತ್ತಿತ್ತು. ನದಿ ಹಳ್ಳ ಕೊಳ್ಳ ಬೆಟ್ಟ ಗುಡ್ಡಗಳನ್ನು ಅಳತೆ ಮಾಡಲು ಈ ಪದ್ದತಿಯನ್ನು ಬಳಸಿಕೊಂಡರು.ಅಳತೆ ಮಾಡುವ ಪದ್ಧತಿ ಬೇರೆಯಾದರು ಅಳತೆಯ ವಿಧಾನ ಬದಲಾಗಲಿಲ್ಲ. ಆದರಿಂದ ಅಳತೆಯ ಮಾಡುವ ವಿಧಾನದಲ್ಲಿ ಬದಲಾವಣೆ ತರಲು ಆಲೋಚಿಸಿದ್ದಾಗ. ಸರಪಳಿಯ ಕಾರ್ಯ ಕಡಿಮೆಗೊಳಿಸಲು ಸಮತಲ ಮೋಜು ಮೋಜಿಣಿ ಎಂಬ ಅಳತೆಯ ಸಾಧನ ಮೆಲ್ಲನೆ ಬಂದಿತ್ತು. ಈ ಸಮತಲ ಮೇಜು ಮೋಜಣಿಯನ್ನು ಬ್ರಿಟಿಷರು ವಿಶಾಲವಾದ ಬಯಲು ಸೀಮೆಯ ಮುಂಬೈ ಪ್ರಾಂತ್ಯದಲ್ಲಿ ಹೆಚ್ಚಾಗಿ ಬಳಸಿ ಅಳತೆ ಕಾರ್ಯ ಕೈಗೊಂಡರು.
ಈ ಸಮತಲ ಮೇಜು ಮೋಜಣಿ ವಿಧಾನದ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ETS ಮತ್ತು DGPS ಎಂಬ ಆಧುನಿಕ ಯಂತ್ರಗಳು ಬಳಕೆಗೆ ಬಂದವು. ಅದು ಮುಂದುವರೆದ ಭಾಗವೇ (Rover )ರೋವರ್ ತಂತ್ರಜ್ಞಾನ ಬೆಳಕಿಗೆ ಬಂತು.ಈ ರೋವರ್ ತಂತ್ರಜ್ಞಾನವನ್ನು ಕರ್ನಾಟಕ ಸರ್ಕಾರವು ಅಧಿಕೃತವಾಗಿ ಭೂಮಾಪನ ಇಲಾಖೆಯಲ್ಲಿ ಅಳವಡಿಸಿಕೊಂಡಿದ್ದು ಶ್ಲಾಘನೀಯವಾದದ್ದು.
ರೋವರ್ ತಂತ್ರಜ್ಞಾನಕ್ಕೆ ದಿಟ್ಟ ಹೆಜ್ಜೆ ಇಟ್ಟಿತ್ತು. ಆ ಕಾರ್ಯಕ್ರಮ ದಲ್ಲಿ ಕರ್ನಾಟಕ ಸರ್ಕಾರದ ಕಂದಾಯ ಸಚಿವರಾದ ಸನ್ಮಾನ್ಯ ಶ್ರೀ ಕೃಷ್ಣ ಬೈರಗೌಡರು ಒಂದು ಮಾತನ್ನು ಹೇಳುತ್ತಾರೆ. ಆಧುನಿಕವಾಗಿ ಇಷ್ಷೇಲ್ಲ ಮುಂದುವರೆದರು ಇನ್ನೂ ಮ್ಯಾನವಲ್ ಪದ್ದತಿಯಲ್ಲಿ ಇರುವುದು ಶೋಚನೀಯ, ದುಡಿಯುವವರು ಜನ ಇದ್ದಾರೆಂದು ಅವರ ಕೈಯಿಂದ ಅನಾವಶ್ಯಕವಾಗಿ ದುಡಿಸೋದು ಸರಿನಾ? ಇದು ಮಾನವ ಸಂಪನ್ಮೂಲಕ್ಕೆ ನಾವು ಕೊಡುವ ಗೌರವನಾ? ಎಂಬ ಪ್ರಶ್ನೆಗಳನ್ನು ಹಾಕಿದರು. ಮುಂದುವರೆದು ಮಾನವನ ಡಿಗ್ನಿಟಿಯಲ್ಲಿ ನೋಡಿದಾಗ ದುಡಿಯುವವರು ಇದ್ದಾರೆಂದು ಅನಗತ್ಯವಾಗಿ ಅವರನ್ನು ಬೀದಿಯಲ್ಲಿ ಬಿಸಿಲಿನಲ್ಲಿ ನಿಲ್ಲಿಸೋದು ಸರಿನಾ? ಇದು ನ್ಯಾಯ ಸಮತನಾ ಎಂದು ಪ್ರಶ್ನೆಗಳನ್ನು ಸುರಿಮಳೆಗೈದರು.
ಇದು ನಿಜವಾಗಿಯೂ ಪ್ರಜ್ಞೆವಂತ ಪ್ರಜೆಗಳು ಆಲೋಚಿಸಬೇಕಾದುದ್ದು. ಸಾಮಾಜಿಕ ನ್ಯಾಯ ಎಲ್ಲರಿಗೂ ಸಿಗಬೇಕಾಗುತ್ತದೆ. ಮಾನವನ್ನು ಅನಗತ್ಯವಾಗಿ ಹೆಚ್ವಿನ ಕಾರ್ಯವನ್ನು ಮಾಡುತ್ತಿದ್ದಾನೆಂದರೆ ಅದು ಅವನ ಜೀವಿನದ ಅನಿವಾರ್ಯತೆಯಾಗಿರುತ್ತದೆ ವಿನಃಹ ಆತನಲ್ಲಿ ಸಂತೃಪ್ತಿ ಭಾವನೆ ಇರುವುದಿಲ್ಲ.ಯಾವಾಗ ಸಂತೃಪ್ತಿ ಇರುವುದಿಲ್ಲವೋ ಆ ಕಾರ್ಯದಲ್ಲಿ ದಕ್ಷತೆ ಇರುವುದಿಲ್ಲ, ಎಲ್ಲಿ ದಕ್ಷತೆಯ ಕೊರತೆ ಇರುತ್ತದೆಯೋ ಅಲ್ಲಿ ನ್ಯಾಯ ಸಮತದ ಕೊರತೆ ಇರುತ್ತದೆ.ಇಂತಹ ಆಧುನಿಕ ತಂತ್ರಜ್ಞಾನದ ಕಾಲದಲ್ಲಿಯೂ, ಯಾವುದೇ ಆಧುನಿಕ ತಂತ್ರಜ್ಞಾನ ಸೌಲಭ್ಯವಿಲ್ಲದೆ ಅಡವಿಯಲ್ಲಿ ಏಕಾಂಗಿಯಾಗಿ ಕಾರ್ಯ ನಿರ್ವಹಿಸುವ ಭೂಮಾಪಕರ ಮಾನವೀಯತೆ ಬಗ್ಗೆ ಯೋಚಿಸಬೇಕಾಗುತ್ತದೆ. ಒಂದು ಸರ್ವೆ ಕಾರ್ಯ ನಿರ್ವಹಿಸಲು ಕನಿಷ್ಠ ಮೂರು ಜನ ಸಿಬ್ಬಂದಿಗಳ ಅವಶ್ಯಕತೆ ಇದೆ. ಆದರು ಇಲಾಖೆಯಲ್ಲಿರು ಪರವಾನಗಿ ಭೂಮಾಪಕರು ಏಕಾಂಗಿಯಾಗಿ ಒಬ್ಬರೇ ಯಾವುದೇ ಸಹಾಯಕರು ಇಲ್ಲದೇ ಹುಳ ಹುಪ್ಪಡಿ ಜಿನ್ನಿ ಕಂಟಿಗಳ ಮದ್ಯೆ ಜಮೀನಿನಲ್ಲಿ ನಿಂತು ರೈತರ ಸಹಾಯ ಪಡೆದು ಮೂರು ಜನ ಮಾಡುವ ಕಾರ್ಯವನ್ನು ಆತರೊಬ್ಬರೆ ಕಾರ್ಯ ನಿರ್ವಹಿಸುವುದು ಅಷ್ಟು ಸುಲಭದ ಕಾರ್ಯವೆನಲ್ಲ. ಹದ್ದಬಸ್ತ ಪ್ರಕರಣಗಳು ಅತಿ ಸೂಕ್ಷ್ಮ ಪ್ರಕರಣಗಳಾಗಿರುತ್ತದೆ ರೈತರ ಮದ್ಯೆ ದಿನ ಜಗಳಗಳು ಇರುತ್ತದೆ ಅವುಗಳನ್ನು ಬಗ್ಗೆ ಹರಿಸಲು ಭೂಮಾಪಕನು ಅತಿ ಸೂಕ್ಷ್ಮತೆಯಿಂದ ಜಾಣತನದಿಂದ ಬಗ್ಗೆ ಹರಿಸಿ ನ್ಯಾಯ ಕೊಡುವುದಾಗಿರುತ್ತದೆ. ತದನಂತರ ಕಛೇರಿಗೆ ಬಂದು ಅದರ ನಕ್ಷೆಯನ್ನು ತಯಾರಿಸಿ ಮೋಜಣಿ ತಂತ್ರಾಂಶದಲ್ಲಿ ಅಪಲೊಡ್ ಮಾಡಬೇಕಾಗುತ್ತದೆ ಇದು ಸುಮಾರು ಮೂರು ಗಂಟೆಗಳ ಕಾಲಾವಕಾಶ ತೆಗೆದುಕೊಳ್ಳುತ್ತದೆ. ಆ ನಕ್ಷೆಯು, ಆ ಗ್ರಾಮದ ಹೋಬಳಿ ನೆಮ್ಮದಿ ಕಛೇರಿಯಲ್ಲಿ ಅರ್ಜಿದಾರರು ಆ ನಕ್ಷೆಯನ್ನು ಪಡೆಯಬಹುದಾಗಿದೆ.
ಆಧುನಿಕ ರೋವರ್ ತಂತ್ರಜ್ಞಾನ ಬಳಕೆಯಿಂದ ಭೂ ಸರ್ವೆ ಕಾರ್ಯವು ವೇಗ ಪಡೆದುಕೊಂಡು,ಕಾರ್ಯ ಕ್ಷಮತೆಯಲ್ಲಿ ದಕ್ಷತೆ ಬಂದು ಭೂಮಾಪಕರ ಮೇಲಿರು ಒತ್ತಡ ಕಡಿಮೆಯಾಗಿ ಗೌರವ ಹೆಚ್ಚಾಗಬೇಕಿದೆ. ಭೂಮಾಪಕರ ಕಾರ್ಯವು ಅತಿ ಸೂಕ್ಷ್ಮವಾಗಿರುತ್ತದೆ ಯಾವುದೇ ರಕ್ಷಣೆ ಇಲ್ಲದೆ ನಿರ್ಜನ ಪ್ರದೇಶದಲ್ಲಿ ಧೈರ್ಯವಾಗಿ ಗಡಿ ನಿರ್ಧಾರ ಮಾಡುವುದು ಅಷ್ಟು ಸುಲಭದ ಕೆಲಸವೇನಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರು ಅನಾಹುತಗಳೆ ನಡೆಯುತ್ತದೆ. ಇಂತಹ ಸಾವಿರಾರು ಪ್ರಕರಣಗಳು ಬಾಕಿ ಇವೆ.ರೋವರ್ ತಂತ್ರಜ್ಞಾನ ಬಳಕೆಯಿಂದ ಅಳತೆಯಲ್ಲಿ ನಿಖರತೆ ಬಂದು ವ್ಯಾಜ್ಯಗಳು ಕಡಿಮೆಗೊಂಡರೆ ಈ ದೇಶದ ಬೆನ್ನೆಲುಬು ರೈತನು ನೆಮ್ಮದಿಯಾಗಿರಬೇಕು.


