ವಿಜಯಪುರದಲ್ಲಿ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಿಷ್ಠೆಗೆ ಮತ್ತೊಂದು ಹೆಸರೇ ಶ್ವಾನ. ಅಂಥ ಶ್ವಾನ ಪ್ರದರ್ಶನ ಪ್ರತಿವರ್ಷ ಹಮ್ಮಿಕೊಳ್ಳುತ್ತಿರುವುದು ಉತ್ತಮ ಕಾರ್ಯ ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಶಸಂಸಿದರು.
ಜಿಲ್ಲಾ ಪಶುಪಾಲನೆ ಮತ್ತು ಪಶು ವೈದ್ಯ ಸೇವಾ ಇಲಾಖೆ, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಇಲ್ಲಿನ ಪೊಲೀಸ್ ಕವಾಯತು ಮೈದಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಶ್ವಾನ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರಾತ್ರಿ ವೇಳೆ ಎಲ್ಲರೂ ನಿದ್ರೆಗೆ ಜಾರಿದ ವೇಳೆ ಶ್ವಾನಗಳು ಸದಾ ಜಾಗೃತಿಯಿಂದಿದ್ದು, ಕುಟುಂಬ ಸದಸ್ಯರನ್ನು ರಕ್ಷಣೆ ಮಾಡುತ್ತವೆ. ಅಂಥ ಶ್ವಾನಗಳೆಂದರೆ ಎಲ್ಲರಿಗೂ ಬಲು ಪ್ರೀತಿ ಎಂದರು.
ಆದರೆ ನಗರದಲ್ಲಿ ಬಿಡಾಡಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಇದರ ಹಾವಳಿ ನಿಯಂತ್ರಣಕ್ಕೆ ಪಾಲಿಕೆ ವತಿಯಿಂದ ಸಂತಾನಹರಣ ಚಿಕಿತ್ಸೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಜಿಪಂ ಸಿಇಒ ರಿಷಿ ಆನಂದ ಮಾತನಾಡಿ, ನಾನಾ ತಳಿಯ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದನ್ನು ಪ್ರಶಂಸಿದರು. ಇಂಥ ಪ್ರದರ್ಶನವನ್ನು ಜಿಲ್ಲಾ ಪಶು ಮತ್ತು ಪಶುಪಾಲನಾ ಇಲಾಖೆ ಪ್ರತಿವರ್ಷ ಶ್ವಾನ ಪ್ರದರ್ಶನ ಹಮ್ಮಿಕೊಳ್ಳುತ್ತಿರುವುದನ್ನು ಶ್ಲಾಘಿಸಿದರು.
ಇದಕ್ಕೂ ಮುನ್ನ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ರಿಂಗ್ ಉದ್ಘಾಟಿಸಿ, ಪ್ರತಿವರ್ಷ ಶ್ವಾನ ಪ್ರದರ್ಶನ ಹಮ್ಮಿಕೊಳ್ಳುತ್ತಿರುವ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು. ವರ್ಷದಿಂದ ವರ್ಷಕ್ಕೆ ಪ್ರದರ್ಶನದಲ್ಲಿ ಶ್ವಾನಗಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಪ್ರದರ್ಶನ ಸಾರ್ಥಕವಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಶು ಮತ್ತು ಮಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಅಶೋಕ ಗೊಣಸಗಿ, ಮುಖ್ಯಪಶು ವೈದ್ಯಾಧಿಕಾರಿ (ಆಡಳಿತ) ಡಾ. ಬಸವರಾಜ ಕನಮಡಿ ಸೇರಿದಂತೆ ಇಲಾಖೆ ಪಶು ವೈದ್ಯಾಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
262 ಶ್ವಾನ ಭಾಗಿ
ಶ್ವಾನ ಪ್ರದರ್ಶನದಲ್ಲಿ 262 ಶ್ವಾನಗಳು ಭಾಗವಹಿಸಿದ್ದವು. 21 ನಾನಾ ತಳಿಯ ಶ್ವಾನಗಳು ಭಾಗವಹಿಸಿ ಶ್ವಾನಪ್ರಿಯರ ಗಮನಸೆಳೆದವು. ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ರಾಜ್ಯದ ನಾನಾ ಜಿಲ್ಲೆಗಳ ಶ್ವಾನಗಳು ಹಾಗೂ ಶ್ವಾನಪ್ರಿಯರು ಭಾಗವಹಿಸಿದ್ದರು.

