ಉದಯರಶ್ಮಿ ದಿನಪತ್ರಿಕೆ
ಚಡಚಣ: ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಯನ್ನು ಕೇವಲ ಪಠ್ಯ ಪುಸ್ತಕಗಳು ಮಾಡಲಾರವು. ಅದರೊಟ್ಟಿಗೆ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳು ಇದ್ದಾಗ ಮಾತ್ರ ಯಶಸ್ಸಿನ ಜೀವನದತ್ತ ಸಾಗಲು ಸಾಧ್ಯ ಎಂದು ಬಿಇಒ ಸುಜಾತಾ ಹುನ್ನೂರ ಹೇಳಿದರು.
ಪಟ್ಟಣದ ಎಂಇಎಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ವಾರ್ಷಿಕ ಕ್ರೀಡಾಕೂಟಕ್ಕೆ ಕ್ರೀಡಾ ಜ್ಯೋತಿಯನ್ನು ಬೆಳಗಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಕ್ರೀಡಾಭ್ಯಾಸ ಶಿಕ್ಷಣದ ಅವಿಭಾಜ್ಯ ಅಂಗ. ಮಾನಸಿಕ ಮತ್ತು ದೈಹಿಕ, ಸಮತೋಲನ ಬೆಳವಣಿಗೆಗೆ ಅತ್ಯವಶ್ಯ ಎಂದರು.
ಈ ವೇಳೆ ತಾಲೂಕು ದೈಹಿಕ ಶಿಕ್ಷಣ ಪರೀಕ್ಷಕರಾದ ಪ್ರಭಾರಿ ಎನ್.ಎಂ.ಬಿರಾದಾರವರು ಮಾತನಾಡುತ್ತ. ಪುಸ್ತಕದ ಶಿಕ್ಷಣ ದೈಹಿಕ ಶಿಕ್ಷಣಕ್ಕೆ ಸ್ಪೂರ್ತಿ. ದೈಹಿಕ ಶಿಕ್ಷಣ ಬೌದ್ಧಿಕ ವಿಷಯಗಳಿಗೆ ಪೂರಕ ಅಂಶಗಳನ್ನು ನೀಡಿ ಕಲಿಕಾ ಸಾಮರ್ಥ್ಯ ಹೆಚ್ಚಿಸಿ ಪ್ರಗತಿಗೆ ಅನುಕೂಲ ಕಲ್ಪಿಸಲಿದೆ. ಕ್ರೀಡೆ ದೈಹಿಕ, ಮಾನಸಿಕ, ಭಾವನಾತ್ಮಕ ಮತ್ತು ಸಾಮಾಜಿಕ ಆರೋಗ್ಯ ಹೆಚ್ಚಿಸುತ್ತದೆ. ಇದರಿಂದ ವಿದ್ಯಾರ್ಥಿಗಳು ಪಠ್ಯದ ಮಾಹಿತಿಯನ್ನು ಬೇಗನೆ ಗ್ರಹಿಸಿಕೊಳ್ಳಲು ಸಹಾಯವಾಗುತ್ತದೆ ಎಂದರು.
ದೈಹಿಕ ಶಿಕ್ಷಣ ಶಿಕ್ಷಕ ಎಂ.ಕೆ.ಮಾನೆಯವರು ಮಾತನಾಡುತ್ತ. ಮಕ್ಕಳಲ್ಲಿ ಅದ್ಭುತವಾದ ಪ್ರತಿಭೆ ಇರುತ್ತದೆ. ಅದಕ್ಕೆ ಪಾಲಕರು ಪ್ರೋತ್ಸಾಹ ನೀಡಿದರೆ, ಶಿಕ್ಷಕರು ಸೂಕ್ತ ಮಾರ್ಗದರ್ಶನ ಮಾಡಿದರೆ ಒಳ್ಳೆಯ ಪ್ರತಿಭೆ ಹೊರಹೊಮ್ಮಲು ಸಾಧ್ಯವಾಗುತ್ತದೆ. ಆದ್ದರಿಂದ ಮಕ್ಕಳಿಗಾಗಿ ಆಸ್ತಿ ಮಾಡದೇ ಮಕ್ಕಳನ್ನೆ ಆಸ್ತಿಯನ್ನಾಗಿ ಮಾಡಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಿಂದ ಆರಂಭಗೊಂಡ ಕ್ರೀಡಾ ಜ್ಯೋತಿಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತ ಎಂಇಎಸ್ ಶಾಲಾ ಆವರಣ ತಲುಪಿತು. ಈ ವೇಳೆ ಸಂಸ್ಥೆಯ ಅಧ್ಯಕ್ಷರಾದ ಮೋಹನ್ ಚೋಳಕೆಯವರು ಸ್ವೀಕರಿಸಿದರು. ಕ್ರೀಡಾ ಧ್ವಜಾರೋಹಣವನ್ನು ಆಕಾಶ ಭೂಸನೂರರವರು ನೇರವೇರಿಸಿದರು.
ಕ್ರೀಡಾ ಪ್ರತಿಜ್ಞೆ ವಿಧಿಯನ್ನು ಎಂ.ಕೆ.ಮಾನೆಯವರು ನೆರವೇರಿಸಿದರು.
ಈ ವೇಳೆ ಹಲವಾರು ಆಟೋಟಗಳನ್ನು ಹಮ್ಮಿಕೊಳ್ಳಲಾಗಿತ್ತು.

