ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಮುದ್ದೇಬಿಹಾಳದ ನಗರಕ್ಕೆ ಹೊಸದಾಗಿ ಸೃಜಿಸಲಾದ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಲಯಕ್ಕೆ ಹೋಗಿ ಬರುವ ಕಕ್ಷಿದಾರರು, ನ್ಯಾಯವಾದಿಗಳು, ವಕೀಲರು ನ್ಯಾಯಾಲಯದ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವ ಹಿನ್ನೆಲೆಯಲ್ಲಿ ವಿಜಯಪುರ ನಗರದಿಂದ ಮುದ್ದೇಬಿಹಾಳ ನಗರಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಿಂದ ವತಿಯಿಂದ ನೂತನವಾಗಿ ವೇಗದೂತ ಬಸ್ ಆರಂಬಿಸಲಾಗಿದೆ.
ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ನಗರದ ಕೋರ್ಟ್ ಆವರಣದಲ್ಲಿ ೫ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ವಿಜಯಪುರ (ಕಾರ್ಯಸ್ಥಳ ಮುದ್ದೇಬಿಹಾಳ) ಶ್ರೀಮತಿ ಸಿಂಧೂ ಪೋತದಾರ ಅವರು ನೂತನವಾಗಿ ಕಲ್ಯಾಣ ಕರ್ನಾಟಕ ಆರಂಭಿಸಲಾದ ಬಸ್ಗೆ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ವಿಜಯಪುರದಿಂದ ಬೆಳಿಗ್ಗೆ ೮ ಗಂಟೆಗೆ ಹೊರಟು ೧೦ ಗಂಟೆಗೆ ಮುದ್ದೇಬಿಹಾಳನ್ನು ತಲುಪುತ್ತದೆ. ಸಾಯಂಕಾಲ ೬ ಗಂಟೆಗೆ ಮುದ್ದೇಬಿಹಾಳದಿಂದ ಹೊರಟು ವಿಜಯಪುರಕ್ಕೆ ರಾತ್ರಿ ೮ ಗಂಟೆಗೆ ತಲುಪಲಿದ್ದು, ಇದರ ಸದುಪಯೋಗ ಪಡಿಸಿಕೊಳ್ಳಬೆಕೆಂದು ಸಿಂಧೂ ಪೋತದಾರ ಹೇಳಿದರು.
ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಅರವಿಂದ ಹಾಗಲಗಿ, ೨ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸತೀಶ ಎಲ್.ಪಿ, ೧ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸಿ.ಜೆ.ಎಮ್ ಲೋಕೇಶ ಧನಪಾಲ ಹವಳೆ, ೨ನೇ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಸಿ.ಜೆ.ಎಮ್ ಮಹಾಜನ ರಮೇಶ ಅಪ್ಪಾಸಾಬ್, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ, ಕೇಂದ್ರ ಬಸ್ ನಿಲ್ಧಾಣ ಸಹಾಯಕ ಸಂಚಾರ ವ್ಯವಸ್ಥಾಪಕರಾದ ಜೆ.ಕೆ ಹುಗ್ಗೆನ್ನವರ ಹಾಗೂ ಇತರರು ಉಪಸ್ಥಿತರಿದ್ದರು.

