ಪೊಲೀಸರಿಂದ ರೂ.೬೨ ಲಕ್ಷಕ್ಕೂ ಅಧಿಕ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳ ವಶ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲೆಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ ನಡೆಸುವವರ ಮೇಲೆ ದಾಳಿ ಮಾಡಿ ಶೋಧನೆ ಕೈಕೊಂಡು ರೂ.೬೨ ಲಕ್ಷ ನಗದು, ೫೫ ಗ್ರಾಂ ಚಿನ್ನ ಸೇರಿದಂತೆ ಅನೇಕ ದಾಖಲೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಅವರು ಗುರುವಾರ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿ, ಈಗಾಗಲೇ ಜಾರಿಯಲ್ಲಿರುವ ಕಾನೂನುಗಳ ಅಡಿ ಮತ್ತು ಮೈಕ್ರೋ ಫೈನಾನ್ಸ್ ಗಳಿಗೆ ಸಂಬಂಧಿಸಿದಂತೆ, ಇತ್ತೀಚೆಗೆ ಜಾರಿಗೆ ಬಂದಿರುವ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025 ರ ಅಧಿಸೂಚನೆಯ ಹಿನ್ನೆಲೆಯಲ್ಲಿ, ವಿಜಯಪುರ ಜಿಲ್ಲೆಯಾದ್ಯಂತ ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಿರುಸಾಲ, ಬಡ್ಡಿ ವ್ಯವಹಾರ (ಲೇವಾದೇವಿ) ನಡೆಸುತ್ತಿದ್ದ ವ್ಯಕ್ತಿಗಳ ಬಗ್ಗೆ ಮಾಹಿತಿ ಬಂದ ಆಧಾರದಲ್ಲಿ ಅಂತವರ ಮನೆ/ಕಚೇರಿ/ಸಂಸ್ಥೆಗಳ ಮೇಲೆ ದಾಳಿ ನಡೆಸಿ, ಅವರು ಬಡ್ಡಿ ವ್ಯವಹಾರದಲ್ಲಿ ಬಲವಂತದ ಕ್ರಮ ಅಥವಾ ನಿಯಮ ಬಾಹಿರವಾಗಿ ವ್ಯವಹಾರ ನಡೆಸುತ್ತಿರುವ ಬಗ್ಗೆ ಪರಿಶೀಲಿಸಲು ಮಾನ್ಯ ಜಿಲ್ಲಾಧಿಕಾರಿಗಳು, ವಿಜಯಪುರ ರವರಿಂದ ಶೋಧನೆಗಾಗಿ ಅನುಮತಿ ಪಡೆದುಕೊಂಡು, ವಿಜಯಪುರ ಜಿಲ್ಲೆಯ 25 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಒಟ್ಟು 104 ಜನರ ಮೇಲೆ ಬಂದಂತಹ ಮಾಹಿತಿಯನ್ನು ಆಧರಿಸಿ, ದಾಳಿ ಕೈಕೊಂಡು ಶೋಧನೆ ಮಾಡಲಾಗಿರುತ್ತದೆ. ಈ ಪೈಕಿ 37 ಜನರ ಹತ್ತಿರ ಅನಧೀಕೃತ ಲೇವಾದೇವಿಗೆ ಸಂಬಂಧಿಸಿದ ನಗದು ಹಣ, ಖಾಲಿ ಬಾಂಡ್, ಚೆಕ್, ಕೈಗಡ ಪತ್ರ, ಪಹಣಿ ಪತ್ರಗಳು, ಬ್ಯಾಂಕ್ ಪಾಸ್ಬುಕ್ಗಳು ಸೇರಿದಂತೆ ಇತರೆ ದಾಖಲಾತಿಗಳು ದೊರೆತಿರುತ್ತವೆ, ಶೋಧನೆ ವೇಳೆ ದೊರೆತ ವಸ್ತುಗಳ ವಿವರ ಈ ಕೆಳಗಿನಂತಿದೆ.
1) ಖಾಲಿ ಬಾಂಡ್ – 489, 2) ಖಾಲಿ ಚೆಕ್ – 285, 3) ಪಾಸ್ ಬುಕ್ – 95, 4) ಕರಾರು ಪತ್ರ – 26, 5) ಪಹಣಿ ಉತಾರೆ – 26, 6) ಹಕ್ಕು ಪತ್ರ- 16, 7) ಇಸಾರ ಪತ್ರ- 15, 8) ಖರೀದಿ ಪತ್ರ- 13, 9) ಆಧಾರ್ ಕಾರ್ಡ್ – 14, 10) ಮೋಬೈಲ್ – 12, 11) ಬಕ್ಷೀಸ್ ಪತ್ರ- 05, 12) ಕೈಗಡ ಪತ್ರ- 03, 13) ಒಪ್ಪಿಗೆ ಪತ್ರ- 05, 14) ಜಮೀನು ಖರೀದಿ ಪತ್ರ- 02, 15) ಎ.ಟಿ.ಎಮ್ – 02, 16) ಡೆಬಿಟ್ ಕಾರ್ಡ್- 02, 17) ಒತ್ತಿ ಪತ್ರ- 01, 18) ನೊಂದಣಿ ಪತ್ರ – 01, 19)ನಗದು ಹಣ- 62,29,000/-, 20) ಬಂಗಾರದ ಆಭರಣಗಳು- 55 ಗ್ರಾಮ್, 21) ಇತರೆ ವಸ್ತುಗಳು- 154
ಈ ಮೇಲಿನಂತೆ ಒಟ್ಟು 62,29,000/- ನಗದು ಹಣ, 55 ಗ್ರಾಂ. ಬಂಗಾರದ ಆಭರಣಗಳು, 489 ಖಾಲಿ ಬಾಂಡ್, 285 ಖಾಲಿ ಚೆಕ್, 95 ಪಾಸ್ಬುಕ್, 26 ಕರಾರು ಪತ್ರಗಳು ಹಾಗೂ 245 ಇತರೆ ದಾಖಲಾತಿಗಳು ಸೇರಿದಂತೆ ಸೂಕ್ತ ದಾಖಲೆಗಳಿಲ್ಲದ ವಸ್ತುಗಳನ್ನು ಪಂಚನಾಮೆ ಜರುಗಿಸಿ ವಶಕ್ಕೆ ಪಡೆಯಲಾಗಿದೆ. ವಶಪಡಿಸಿಕೊಂಡ ದಾಖಲಾತಿಗಳನ್ನು ಮುಂದಿನ ಕ್ರಮಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳ ಕಾರ್ಯಾಲಯಕ್ಕೆ ವರದಿಯನ್ನು ಸಲ್ಲಿಸಲಾಗುವುದು ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

