ಲೇಖನ- ಡಾ. ಶಶಿಕಾಂತ ಪಟ್ಟಣರಾಮದುರ್ಗ
ಉದಯರಶ್ಮಿ ದಿನಪತ್ರಿಕೆ
ಕಲ್ಯಾಣ ಕ್ರಾಂತಿಯ ಕೊನೆಯ ಹೆಜ್ಜೆ ಗುರುತುಗಳು ಎಂಬ ನನ್ನ ಸಂಶೋಧನಾ ಲೇಖನ ಸಿದ್ಧ ಪಡಿಸುವಲ್ಲಿ ಮತ್ತು ಕ್ಷೇತ್ರ ಕಾರ್ಯ ಮಾಡುವಲ್ಲಿ ಹಲವಾರು ಶರಣರ ಸಮಾಧಿ ಕುರುಹುಗಳನ್ನು ಗುರುತಿಸಲು ಸಹಾಯಕವಾದದ್ದು ಜನರ ನಂಬಿಕೆ, ಜನಪದಿಗರ ಹೇಳಿಕೆ ಸಮಾಧಿಗಳನ್ನು ಪತ್ತೆ ಹಚ್ಚುವಲ್ಲಿ ಸಾಧ್ಯವಾಯಿತು.
ಬಸವಣ್ಣನವರು ಕಲ್ಯಾಣವನ್ನು ತೊರೆದ ಮೇಲೆ ಸೋಮಿದೇವ ಶರಣರ ಹತ್ಯೆಗೆ ಆದೇಶಿಸುತ್ತಾನೆ. ಬಸವಣ್ಣನವರ ಗಡಿಪಾರಿನ ನಂತರ ಕಲ್ಯಾಣ ಕ್ರಾಂತಿಯ ರಕ್ತ ಸಿಕ್ತ ಹೋರಾಟದಲ್ಲಿ ಚೆನ್ನ ಬಸವಣ್ಣನವರ ನೇತೃತ್ವದಲ್ಲಿ ಮಡಿವಾಳ ಮಾಚಿದೇವರು ಶರಣ ಸೇನೆಯನ್ನು ಹುರುದುಂಬಿಸಿ ಶರಣರ ವಚನಗಳ ಕಟ್ಟನ್ನು ವ್ಯವಸ್ಥಿತವಾಗಿ ಸಂಗ್ರಹಿಸಿ ಸೋವಿದೇವನ ಸೈನಿಕರಿಗೆ ಪ್ರತಿರೋಧ ತೋರಿಸುತ್ತಾ. ಮಾದನ ಹಿಪ್ಪರಗಿ, ಬೆಳಗಾವಿ , ಕಾದ್ರೊಳ್ಳಿ , ಹುಣಶೀಕಟ್ಟಿ , ಮೂಗಬಸವ ,ಮುರಗೋಡ ,ತಲ್ಲೂರು ,ಕಾರಿಮನಿ , ಕಟಕೋಳ , ಚಂದರಗಿ, ಗೊಡಚಿಗೆ ಬಂದು ಮಾಚಿದೇವರು ಐಕ್ಯರಾಗುತ್ತಾರೆ. ಮುದಿ ವೀರಣ್ಣನ ಗುಡಿ ಶರಣ ಮಡಿವಾಳ ಮಾಚಿದೇವರ ಐಕ್ಯಸ್ಥಳ. ಮುದಿ ವೀರಣ್ಣನ ಕೈಯಲ್ಲಿ ಖಡ್ಗ ಮತ್ತು ಎದೆಯ ಮೇಲೆ ಇಷ್ಟಲಿಂಗದ ಕರಡಗಿ ಇದೆ.ಮಡಿವಾಳ ಮಾಚಿದೇವನನ್ನು ಪುರಾಣಗಳಲ್ಲಿ ವೀರಭದ್ರನ ಅವತಾರವೆಂದು ಬಿಂಬಿಸುತ್ತಾರೆ. ಗೊಡಚಿ ಇದು ರಾಮದುರ್ಗದಿಂದ 15 ಕಿಮಿ ಅಂತರದಲ್ಲಿದೆ ಮತ್ತು ಮುನೇನಕೊಪ್ಪದಿಂದ 25 ಕಿಮಿ ಅಂತರದಲ್ಲಿದೆ. ಜಾನಪದ ಸಾಹಿತಿಗಳು ಅನೇಕ ಸಂಶೋಧಕರು , ತಜ್ಞರು ಮಡಿವಾಳ ಮಾಚಿದೇವನ ಐಕ್ಯ ಸ್ಥಳವನ್ನು ಗೊಡಚಿಯ ಮುದಿ ವೀರಣ್ಣನ ಗುಡಿಯೆಂದು ಅಭಿಮತಕ್ಕೆ ಬರುತ್ತಾರೆ.
ಒಂದು ತಂಡ ತೊರಗಲ್ಲ ಮುನವಳ್ಳಿ ಸವದತ್ತಿ ಧಾರವಾಡ ಉಳವಿಗೆ ಹೋಯಿತು ಇನ್ನೊಂದು ತಂಡ ಉಣಕಲ್ ಹುಬ್ಬಳ್ಳಿ ಎಣ್ಣೆ ಹೊಳೆ ನುಲೇನೂರು ಮುಂತಾದ ಪ್ರದೇಶಕ್ಕೆ ಚದುರಿದರು. ‘ಕಲ್ಯಾಣ ಕ್ರಾಂತಿ’ಯ ಸಂದರ್ಭದಲ್ಲಿ ಶರಣರ ‘ಜವಾಬ್ಧಾರಿ’ ಗುರುತರವಾದುದು. ಶರಣ ಧರ್ಮ ಸಂರಕ್ಷಣೆ- ವಚನ ಸಾಹಿತ್ಯದ ರಕ್ಷಣೆಯ ದಂಡ ನಾಯಕತ್ವ ಜವಾಬ್ಧಾರಿ ಹೊತ್ತು , ಚನ್ನ ಬಸವಣ್ಣ , ಅಕ್ಕ ನಾಗಮ್ಮ, ಕಿನ್ನರಿ ಬೊಮ್ಮಣ್ಣ ಮೊದಲಾದವರೊಂದಿಗೆ ಮನುಮುನಿ ಗುಮ್ಮಟದೇವ ಶರಣ ಸಮೂಹದ ‘ಭೀಮ ರಕ್ಷೆಯಾಗಿ’ ನಿಂತರು. ಕಲಚೂರ್ಯ ರಾಯ ಮುರಾರಿಯನ್ನು ಎದುರಿಸಿ ಭೀಮ ನದಿಯನ್ನು ದಾಟಿ ತಲ್ಲೂರು, ಮುರಗೋಡ, ಕಡಕೋಳ,ತಡ ಕೋಡ, ಮೂಗ ಬಸವ, ಕಾದರವಳ್ಳಿಯಲ್ಲಿ ಅಲ್ಲಲ್ಲಿ ಕಾಳಗ ನಡೆಸಿದರು. ತಮ್ಮ ಧೈರ್ಯ, ಅನುಪಮ ಬಲದಿಂದ ಶರಣರನ್ನು, ವಚನ ಸಾಹಿತ್ಯವನ್ನು ರಕ್ಷಿಸಿ ಮುಂದಿನ ಜನಾಂಗಕ್ಕೆ ಕೊಟ್ಟವರು ಸಾಹಸಿ ಶರಣರ ಕಾರ್ಯ ದೊಡ್ಡದು.
ಗೋಡಚಿಯಲ್ಲಿ ಮಡಿವಾಳ ಮಾಚಿದೇವರ ಸಮಾಧಿ ಮುನೇನಕೊಪ್ಪದಿಂದ 25 ಕಿಮಿ ಮತ್ತು 8 ವರುಷ ಹಿಂದೆ ನರಗುಂದ ತಾಲೂಕಿನ ಕೊನೆಯ ಹಳ್ಳಿ ಬೆಳ್ಳೇರಿಯಲ್ಲಿ ಕಂಡು ಹಿಡಿದ ಬಳ್ಳೇಶ ಮಲ್ಲಯ್ಯನ ಸಮಾಧಿ ( ಜೈನ ಶರಣ ) ಹುಡುಕಿ ಖಚಿತ ಪಡಿಸುವಲ್ಲಿ ಯಶವನ್ನು ಕಂಡೆನು ಇದು ಮುನೇನಕೊಪ್ಪದಿಂದ 10 ಕಿಮಿ ಅಂತರದಲ್ಲಿದೆ. ಅದೇ ರೀತಿ ಕಲಹಾಳದಲ್ಲಿ ಸಮಯಾಚಾರದ ಆಪ್ತಚರ ಮಲ್ಲಿಕಾರ್ಜುನನ ಸಮಾಧಿ ಇದ್ದು ಇದು ಮುನೇನಕೊಪ್ಪದಿಂದ 9 ಕಿಮಿ ಅಂತರದಲ್ಲಿದೆ.
ಐದು ವರುಷದ ಹಿಂದೆ ರಾಮದುರ್ಗ ತಾಲೂಕಿನ ಕಲ್ಲೂರಿಗೆ ಹೋದಾಗ ಅಲ್ಲಿ ಕಲ್ಲಿನ ಬಂಡೆಯ ಸಂಧುವಿನಲ್ಲಿ ಬರುವ ಜಲ ಅಲ್ಲಿರುವ ಕಲ್ಯಾಣ ಬಸವೇಶ್ವರ ದೇವಸ್ಥಾನ ,ಜನರ ನಂಬಿಕೆ ಹೇಳಿಕೆ ಕಲ್ಯಾಣ ಕ್ರಾಂತಿಯ ನಂತರ ಶರಣರು ಕಲ್ಲೂರಿನಲ್ಲಿ ಇದ್ದು ಹೋಗಿದ್ದಾರೆಂದು ಕೇಳಿ ತಿಳಿದು ಕೊಂಡೆ ಕಲ್ಲೂರು ಶರಣರ ಸ್ಮಾರಕಗಳು ಚಾಲುಕ್ಯ ಶೈಲಿಯ ಮಂದಿರವೊಂದಿದೆ ಇದೊಂದು ಐತಿಹಾಸಿಕ ಮಂದಿರವಾಗಿದೆ. ಇದು ಮುನೇನಕೊಪ್ಪದಿಂದ ಕೇವಲ 2 ಕಿಮಿ ಅಂತರದಲ್ಲಿದೆ . ಮುಳ್ಳೂರಿನಲ್ಲಿ ನಮ್ಮ ಜಮೀನು ಹೊಲ ಇದ್ದು ಬಾಲ್ಯದಿಂದಲೂ ಮೇಲಿಂದ ಮೇಲೆ ಹೊಲಕ್ಕೆ ಹೋಗುವಾಗ ಬರುವಾಗ , ಮುನೇನಕೊಪ್ಪ(ಮುದೇನಕೊಪ್ಪ ) ಎಂಬ ಪುಟ್ಟ ಗ್ರಾಮದಲ್ಲಿ ಒಂದು ಬಸವೇಶ್ವರ ದೇವಸ್ಥಾನ , ಒಳಗೆ ಗದ್ದುಗೆ ,ಗುಡಿಯ ಆವರಣದಲ್ಲಿಯೇ ಒಂದು ಬಾವಿ , ಇಲ್ಲೊಬ್ಬ ಶರಣರು ಐಕ್ಯ ಆಗಿರಬಹುದೆಂದು ಶೋಧ ಆರಂಭಿಸಿದೆ, ಆ ಊರಿನ ಗ್ರಾಮಸ್ಥರಲ್ಲಿ ವಿಚಾರಿಸಿದೆ ಒಂದೆರಡು ಕುಲಕರ್ಣಿ ಮನೆತನ ಬಿಟ್ಟರೆ ಊರು ತುಂಬೆಲ್ಲ ಕುರುಬರು ಮತ್ತು ದಲಿತ ಸಮುದಾಯದವರು. ಅಲ್ಲೊಬ್ಬ ಅತ್ಯಂತ ಹಿರಿಯ ವಯಸ್ಸಿನ ಅಂದಾಜು 89 ವರುಷದ ವ್ಯಕ್ತಿಯನ್ನು ಈ ಗುಡಿ ಮತ್ತು ಮುನಿಯನಕೊಪ್ಪ ನಾಮ ವಿಶೇಷಣದ ಬಗ್ಗೆ ಕೇಳ ಹತ್ತಿದೆ. ಅವನಿಗೆ ಈ ಊರಿನ ಬಗ್ಗೆ ಅಲ್ಪ ಸ್ವಲ್ಪ ಜ್ಞಾನವಿತ್ತು, ಮುನಿಯ ಅಂದರೆ ಒಬ್ಬ ಜೈನ ಸನ್ಯಾಸಿ ಈ ಊರಲ್ಲಿ ಇದ್ದ ಕರಣ ಇದನ್ನು ಮುನೇನಕೊಪ್ಪ ಅಥವಾ ಮುನಿಯನ ಕೊಪ್ಪ ಎಂದು ಕರೆಯುತ್ತಿದ್ದರು ಎಂದು ಹೇಳಿದ ಸಂಗತಿ ರೋಚಕವೆನಿಸಿತು. ನನ್ನ ಕೂತುಹಲಕ್ಕೆ ರೆಕ್ಕೆ ಪುಕ್ಕ ಬಂದವು ಆಗ ನಾನು ಅವನನ್ನು ಗುಡಿಯೊಳಗೆ ಒಂದು ಆಳವಾದ ಬಾವಿ ಇರುವುದರ ಬಗ್ಗೆ ಕೇಳಿದೆ, ಆಗ ಅವನು ಜೈನ ಮುನಿಯು ನೀರಡಿಕೆ ಬಳಲಿಕೆ ಇದ್ದವರಿಗೆ ನೀರನ್ನು ಕೊಡುತ್ತಿದ್ದನು ಎಂದನು. ಆಗ ನನಗೆ ಮನುಮುನಿ ಗೊಮ್ಮಟದೇವ ಅರವಟ್ಟಿಗೆ ಸೇವೆ ಮಾಡುತ್ತಿರಬಹುದು ಎಂದೆನಿಸಿತು, ಇತ್ತೀಚಿಗೆ ಹೋದಾಗ ಗುಡಿಯ ಆವರಣದೊಳಗಿನ ಬಾವಿಯನ್ನು ಮುಚ್ಚಿದ್ದಾರೆ. ಅದು ಒಳಗೆ ಗದ್ದುಗೆ ಇದ್ದ ಕರಣ ಮತ್ತು ಜನರ ಹೇಳಿಕೆ ನಂಬಿಕೆ ಮತ್ತು ಮುದೇನಕೊಪ್ಪ ಸುತ್ತಲೂ 25 ಕಿಮಿ ಅಂತರದಲ್ಲಿ ಸುಮಾರು 4 ಶರಣರ ಸ್ಮಾರಕಗಳು ಸಮಾಧಿ ದೊರೆತಿವೆ. ಈ ಎಲ್ಲ ಕಾರಣಗಳಿಂದ ,ಇದು ಮನುಮುನಿ ಗೊಮ್ಮಟನ ಸಮಾಧಿ ಇರುವ ಖಚಿತತೆಯನ್ನು ಹೊಂದಿದೆನು.
ವಚನ ಸಂಪುಟ
ಗೊಡಚಿ ಬೆಳ್ಳೇರಿ ಕಲಹಾಳ -ಮಡಿವಾಳ ಮಾಚಿದೇವ ಸಮಾಧಿ, ಬಲ್ಲೇಶ ಮಲ್ಲಯ್ಯ ಸಮಾಧಿ
,ಸಮಯಾಚಾರದ ಮಲ್ಲಿಕಾರ್ಜುನನ ಸಮಾಧಿಯ ಕ್ಷೇತ್ರ ಕಾರ್ಯಗಳು


