ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ನಮ್ಮ ಮನಸ್ಸು ಯಾವದನ್ನು ಮಾಡಬೇಕೆಂಬುದನ್ನು ಸಂಕಲ್ಪ ಮಾಡಿಕೊಂಡರೆ ಮನಸ್ಸು ಆ ಕೆಲಸವನ್ನು ಮಾಡಿ ಅದರಲ್ಲಿ ಯಶಸ್ವಿಯಾಗುತ್ತದೆ. ಜೀವನದಲ್ಲಿ ನಾವೆಲ್ಲರೂ ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ಮೂಲಕ ಜೀವನವನ್ನು ಸಂತೋಷವಾಗಿ, ಆರೋಗ್ಯಕರವಾಗಿ ಕಳೆಯಬೇಕೆಂದು ಸಂಚಾರಿ ಯೋಗ ಗುರು ಪರಮಪೂಜ್ಯ ನಿರಂಜನ ಶ್ರೀಗಳು ಹೇಳಿದರು.
ಪಟ್ಟಣದ ವೀರಭದ್ರೇಶ್ವರ ನಗರದ ಉದ್ಯಾನವನದಲ್ಲಿ ಬುಧವಾರ ಸಂಜೆ ಕಳೆದ ಹನ್ನೊಂದು ದಿನಗಳ ಕಾಲ ಜರುಗಿದ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ಸಮಾರೋಪ ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಾವು ಪ್ರತಿದಿನ ಬೆಳಗ್ಗೆ ಬೇಗ ಏಳುವ ಮೂಲಕ ನಿತ್ಯವೂ ಗರಿಷ್ಠ ಒಂದು ಗಂಟೆ ಇಲ್ಲವೇ ಕನಿಷ್ಠ ಅರ್ಧಗಂಟೆಯಾದರೂ ಪ್ರಾಣಾಯಾಮ, ಯೋಗ, ವಾಯುವಿಹಾರ ನಿರಂತರವಾಗಿ ಮಾಡಿದರೆ ಆರೋಗ್ಯಕರ ಬದುಕು ಸಾಗಿಸಬಹುದು. ಇದಾದ ನಂತರ ಲಿಂಗಪೂಜೆ ಇಲ್ಲವೇ ಧ್ಯಾನ ಮಾಡಬೇಕು. ರಾತ್ರಿ ಬೇಗ ಮಲಗಬೇಕು. ಇದು ಜೀವನದಲ್ಲಿ ನಿರಂತತೆಯಿಂದ ಇದ್ದರೆ ಚೈತನ್ಯಮಯವಾದ ಜೀವನ ನಮ್ಮದಾಗುತ್ತದೆ ಎಂದರು.
ನಾವು ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುತಿರಲಿ ಆ ಕೆಲಸವನ್ನು ಖುಷಿಯಾಗಿ, ನಗು ನಗುತ್ತಾ ಮಾಡುವಂತಾಗಬೇಕು. ಯಾವುದೇ ಕಾರಣಕ್ಕೂ ತಮ್ಮ ಕೆಲಸವನ್ನು ಬೇಸರದಿಂದ ಮಾಡಕೂಡದು. ಆ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ. ನಮ್ಮಲ್ಲಿ ದಾಸೋಹ ಭಾವವಿರಬೇಕು. ಪೂಜ್ಯರ ಪ್ರವಚನ ಆಲಿಸುವ ಅವಕಾಶ ಇದ್ದಾಗ ಅದನ್ನು ಕೇಳಬೇಕು. ಇದು ಇಲ್ಲದೇ ಇದ್ದಾಗ ಒಳ್ಳೆಯ ಪುಸ್ತಕಗಳನ್ನು ಓದುವ ರೂಢಿ ಇಟ್ಟುಕೊಳ್ಳಬೇಕೆಂದರು.
ಜೀವನದಲ್ಲಿ ಎಲ್ಲರನ್ನು ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳಬೇಕು. ಯಾರು ಮಿತ್ರರನ್ನು,ಶತ್ರುಗಳನ್ನು, ಬೇಕಾದವರನ್ನು, ಬೇಡವಾದವರನ್ನು ಪ್ರೀತಿಸುವ ಗುಣ ಮೈಗೂಡಿಸಿಕೊಳ್ಳುತ್ತಾರೋ ಅವರಲ್ಲಿ ಭಗವಂತನ ತರಂಗ ಹರಿಯಲು ಆರಂಭವಾಗುತ್ತದೆ. ಅವರಲ್ಲಿ ಪ್ರೇಮದ ಝರಿ ಹರಿಯಲು ಆರಂಭವಾಗುತ್ತದೆ. ನಮ್ಮಲ್ಲಿ ಜಗತ್ತನ್ನು ಪ್ರೀತಿಸುವ ಭಾವ ಬರಬೇಕು. ಈ ಭಾವ ಬಂದರೆ ಅಲ್ಲಿ ಪರಮಾತ್ಮ ಸುಳಿಯುತ್ತಾನೆ. ಇದರಿಂದಾಗಿ ಅವರಲ್ಲಿ ನಗು, ಪ್ರಸನ್ನತೆ ತಂಗಾಳಿ ರೂಪದಲ್ಲಿ ಪರಮಾತ್ಮ ಹರಿಯುತ್ತಾನೆ. ಎಂದಿಗೂ ಪ್ರೇಮದ ದೀಪ ಆರಬಾರದು ಎಂದರು.
ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಬೇಕು. ಎಂದಿಗೂ ಕೆಟ್ಟದರ ಬಗ್ಗೆ ಆಲೋಚನೆ ಮಾಡಬಾರದು. ಮಹಾತ್ಮರು ದೇಶ, ಸಮಾಜಕ್ಕೆ ಬದುಕಿದ್ದಾರೆ. ಜೀವನ ಕ್ಷಣಿಕವಾಗಿದೆ. ಇದನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದರು.
ಸರ್ವಮಂಗಳಾ ಕಡಿವಾಲ, ಶಾಂತಾ ಬಾರಿಕಾಯಿ, ಗಾಯತ್ರಿ ಪಾಟೀಲ, ಎಲ್.ಎನ್. ಇಟಗಿ, ಬಿ.ಎಸ್.ಅವಟಿ, ರಘು, ಆರ್.ಎಚ್.ಚಾಂದಕವಟೆ, ವಿನೋದ ಸಜ್ಜನ ಇತರರು ಶಿಬಿರದ ಅನಿಸಿಕೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಶಿವರುದ್ರಯ್ಯ ಹಿರೇಮಠ, ರವಿಗೌಡ ಚಿಕ್ಕೊಂಡ, ಪ್ರಭಾಕರ ಖೇಡದ, ವಿನುತ ಕಲ್ಲೂರ, ಶಿವಾನಂದ ತೋಳನೂರ, ಕಾಶೀನಾಥ ಅವಟಿ, ವಿವೇಕಾನಂದ ಕಲ್ಯಾಣಶೆಟ್ಟಿ, ಮಂಜುನಾಥ ಗುಳೇದಗುಡ್ಡ, ಕೊಟ್ರೇಶ ಹೆಗ್ಡಾಳ, ಸಂಗಪ್ಪ ಜಂಗಶೆಟ್ಟಿ, ಆರ್.ಐ. ಬಿರಾದಾರ, ಶ್ರೀಶೈಲ ಕೋಲಕಾರ, ಎನ್.ಎನ್.ಹೊಸಮನಿ, ಸಂಗಣ್ಣ ದಂಡಿನ, ಮಹಾಂತೇಶ ಹಿಟ್ನಳ್ಳಿ, ಶಿವಯೋಗಿ ಒಣರೊಟ್ಟಿ, ಶರಣು ಬಸ್ತಾಳ, ಬಸವರಾಜ ಜೀರ, ಅರುಣ ನಾಲತವಾಡ, ಪರಮಾನಂದ ಓಲೇಕಾರ, ನಿಂಗಪ್ಪ ಬೂದಿಗೋಳಿ, ಗೀತಾ ಬಾಗೇವಾಡಿ, ಮಹಾದೇವಿ ನಿಡಗುಂದಿ, ಶ್ರೀದೇವಿ ಬೀಳಗಿ, ಪುಷ್ಪಾ ಚಿಕ್ಕೊಂಡ, ವಿಶಾಲಾಕ್ಷಿ ಹಿರೇಮಠ, ಸುನಂದಾ ಚಿಕ್ಕೊಂಡ, ಸುವರ್ಣಾ ಡೋಮನಾಳ, ಮುಂಜಾನೆ, ಕಮಲಾ ಪಡಶೆಟ್ಟಿ, ಲಕ್ಷ್ಮೀ, ನೀಲಮ್ಮ ಚೌಕಿಮಠ, ಲಲಿತಾ ಹಳ್ಳಿ ಸೇರಿದಂತೆ ಇತರರು ಇದ್ದರು. ಹನ್ನೊಂದು ದಿನಗಳ ಕಾಲ ಯೋಗ ಶಿಬಿರ, ಸಾಮೂಹಿಕ ಭಜನೆ, ಆಧ್ಯಾತ್ಮಿಕ ಪ್ರವಚನ ನೀಡಿದ ಸಂಚಾರಿ ಯೋಗ ಗುರು ನಿರಂಜನ ಶ್ರೀಗಳಿಗೆ ಸಾಂಸ್ಕ್ರತಿಕ ನಾಯಕ ಬಸವೇಶ್ವರರ ಭಾವಚಿತ್ರ ನೀಡಿ ಭಕ್ತಿಯಿಂದ ಗೌರವಿಸಲಾಯಿತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

