ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪರಕೀಯರ ಆಡಳಿತ ಕಿತ್ತೊಗೆದು ಸ್ವರಾಜ್ಯ ಸ್ಥಾಪಿಸಿದ ಛತ್ರಪತಿ ಶಿವಾಜಿ ಮಹಾರಾಜರು ರಾಷ್ಟ್ರಪ್ರೇಮಿ, ನ್ಯಾಯವಂತ, ದಕ್ಷ ಆಡಳಿತಗಾರರಾಗಿದ್ದರು ಎಂದು ರಾಷ್ಟ್ರೀಯ ಬಸವಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ರಾಷ್ಟ್ರೀಯ ಬಸವಸೈನ್ಯ ಸಂಘಟನೆಯ ನೇತೃತ್ವದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿ ಮಹಾರಾಜರ 398ನೇ ಜಯಂತೋತ್ಸವದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಮಾತನಾಡಿದ ಅವರು, ಶಿವಾಜಿಯ ತಾಯಿ ವೀರಮಾತೆ ಜೀಜಾಬಾಯಿ ಅವರು ಶಿವಾಜಿಗೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳ ಜೊತೆಗೆ ಶೌರ್ಯ ನೈತಿಕತೆಯ ಪಾಠಗಳನ್ನು ಹೇಳುತ್ತ ಜೀವನ ಮೌಲ್ಯಗಳ ಶಿಕ್ಷಣ ನೀಡಿದರು. ಇವರ ಗುರು ದಾದಾಜಿ ಕೊಂಡದೇವ ಶಸ್ತ್ರಾಸ್ತ್ರ ವಿದ್ಯೆ, ಕಲಿಸಿ, ತರುಣ ವೀರನ ಮನಸ್ಸನ್ನು ಜಾಗೃತಗೊಳಿಸಿದರು. ಹಿಂದೂ ಧರ್ಮ ಪುನರುಜ್ಜೀವನಗೊಳಿಸಬೇಕು, ಸ್ವರಾಜ್ಯ ಕಟ್ಟಬೇಕೆಂಬ ಆಕಾಂಕ್ಷೆಯಿಂದ ಮರಾಠ ಮುಖಂಡರು ಮತ್ತು ಪಶ್ಚಿಮ ಘಟ್ಟಗಳ ಮಾವಳರೆಂಬ ದೃಢಕಾಯರಾದ ಗಿರಿಜನರನ್ನು ಸೇರಿಸಿ ತರುಣರ ಪಡೆಯನ್ನು ಕಟ್ಟಿದರು. ಶಿವಾಜಿಯು ಸಂತ ರಾಮದಾಸರ ಪರಮ ಭಕ್ತರಾಗಿದ್ದರು. ಹಿಂದು ಧರ್ಮಕ್ಕೆ ಛತ್ರಪತಿ ಶಿವಾಜಿಯ ಕೊಡುಗೆ ಅಪಾರವಾಗಿದೆ. ದಕ್ಷ ಆಡಳಿತಗಾರರಿಗೆ ಅವರು ಎಂದೆಂದಿಗೂ ಪ್ರೇರಣಾದಾಯಕರಾದವರು. ಯಾವುದೇ ಮಹಾಪುರುಷರನ್ನು ಜಾತಿ, ಧರ್ಮಕ್ಕೆ ಸೀಮಿತಗೊಳಿಸುವುದು ಸರಿಯಲ್ಲ. ಶಿವಾಜಿ ಮಹಾರಾಜರು ದೇಶಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಜಯಂತೋತ್ಸವದಲ್ಲಿ ರಾಷ್ಟ್ರೀಯ ಬಸವಸೈನ್ಯದ ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ, ಸುನೀಲಗೌಡ ಚಿಕ್ಕೊಂಡ, ಜಟ್ಟಿಂಗರಾಯ ಮಾಲಗಾರ ,ಮನ್ನಾನ ಶಾಬಾದಿ ,ಪ್ರಶಾಂತ ಮುಂಜಾನೆ, ಶಿವಾನಂದ ಚವ್ಹಾಣ ,ಅಮಿತ ಗಾಯಕವಾಡ, ಮಾಂತೇಶ ಹೆಬ್ಬಾಳ, ಶ್ರೀಧರ ಗಾಯಕವಾಡ, ಮಹಾದೇವ ನಾಯ್ಕೊಡಿ, ಅರವಿಂದ ಗೊಳಸಂಗಿ, ರೋಹಿತ ಗಾಯಕವಾಡ, ಅರುಣ ಗೊಳಸಂಗಿ, ರಿತೇಶ ಗಾಯಕವಾಡ, ಹಣಮಂತ ಅಡಗಿಮನಿ, ಶ್ರೀಧರ ಕುಂಬಾರ, ಮಹೇಶ ಪಾರಶೆಟ್ಟಿ ಇತರರು ಭಾಗವಹಿಸಿದ್ದರು. ರಾಷ್ಟ್ರೀಯ ಬಸವಸೈನ್ಯದ ತಾಲೂಕಾ ಅಧ್ಯಕ್ಷ ಸಂಜುಗೌಡ ಬಿರಾದಾರ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

