ದಾವಣಗೆರೆಯಲ್ಲಿ ಪುಟ್ಟರಾಜರ ಅಭಿಮಾನಿ ಭಕ್ತರ ಬೃಹತ್ ಸಮಾವೇಶ
ಉದಯರಶ್ಮಿ ದಿನಪತ್ರಿಕೆ
ಗದಗ: ನಗರದ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯು, ಪೂಜ್ಯ ಗುರು ಪುಟ್ಟರಾಜರ ನಿಜವಾದ ಅಭಿಮಾನಿ ಭಕ್ತರ ಮಹಾ ಮನೆಯಾಗಿರುವ ದಾವಣಗೆರೆಯಲ್ಲಿ, ಮಾರ್ಚ್ ಕೊನೆಯ ಅಥವಾ ಏಪ್ರಿಲ್ ಮೊದಲ ವಾರ ಡಾ. ಪಂ. ಪುಟ್ಟರಾಜರ ಅಭಿಮಾನಿ ಭಕ್ತರ ಬೃಹತ್ ಸಮಾವೇಶ ಹಮ್ಮಿಕೊಂಡಿದೆ. ಒಂದು ದಿನದ ಈ ಸಮಾವೇಶದಲ್ಲಿ ಡಾ. ಪಂ. ಪುಟ್ಟರಾಜ ಕವಿ ಗವಾಯಿಗಳವರ ಸಾಹಿತ್ಯ ಚಿಂತನ-ಮಂಥನ, ರಾಜ್ಯಮಟ್ಟದ ಭಕ್ತಿಗೀತೆ ಗೋಷ್ಠಿ ಮತ್ತು ವಚನ ಗೋಷ್ಠಿ, ಭಕ್ತಿಗೀತೆ ಗಾಯನ ಮತ್ತು ವಚನ ಗಾಯನ ಹಾಗೂ ಶಾಸ್ತ್ರೀಯ ನೃತ್ಯ ಗೋಷ್ಠಿಗಳನ್ನು ಆಯೋಜಿಸಿದೆ. ಈ ಸಮಾವೇಶದಲ್ಲಿ ಅಭಿಮಾನಿ ಭಕ್ತ ಪ್ರತಿನಿಧಿಯಾಗಿ ಭಾಗವಹಿಸಿ ಭಕ್ತಿ ಗೀತ ಗೋಷ್ಠಿ, ವಚನಗೋಷ್ಠಿ, ಭಕ್ತಿ ಗೀತೆ ಗಾಯನ ಮತ್ತು ನೃತ್ಯ ಮತ್ತು ನುಡಿ ನಮನ ಸಲ್ಲಿಸಲು ವಿನಂತಿಸಿಕೊಳ್ಳಲಾಗಿದೆ.
ಪ್ರತನಿಧಿಯಾಗಿ ಹೆಸರು ನೋಂದಾಯಿಸಿಕೊಂಡು ಗೋಷ್ಠಿಗಳಲ್ಲಿ ಭಾಗವಹಿಸುವ ಪೂಜ್ಯರ ಅಭಿಮಾನಿ ಭಕ್ತ, ಕವಿ; ಕಲಾವಿದರಿಗೆ ಅಭಿಮಾನಿ ಭಕ್ತ ಶ್ರೇಷ್ಠ, ಪುಟ್ಟರಾಜ ಸಾಹಿತ್ಯ, ಸಂಗೀತ ಮತ್ತು ನೃತ್ಯ ಸೇವಾಶ್ರೀ ಸತ್ಕಾರ ನೀಡಿ ಗೌರವ ಸಲ್ಲಿಸಲಾಗುವುದು. ಬೆಳಗಿನ ತಿಂಡಿ, ಮಧ್ಯಾಹ್ನದ ಪ್ರಸಾದ ಸಂಜೆ ಲಘು ಉಪಹಾರ ವ್ಯೆವಸ್ಥೆ ಮಾಡಲಾಗಿದ್ದು, ದಾವಣಗೆರೆ ಜಿಲ್ಲೆಯ ಹೊರಗಿನಿಂದ ಬರುವ ಅಭಿಮಾನಿ ಭಕ್ತರಿಗೆ ಸಾಮೂಹಿಕ ವಸತಿ ಸಹಿತ ವ್ಯವಸ್ಥೆ ಮಾಡಲಾಗುವುದು.
ಇದೇ ಸಂದರ್ಭದಲ್ಲಿ ಡಾ. ಪಂ. ಪುಟ್ಟರಾಜ ಸೇವಾ ಸಮಿತಿಯ ಸದಸ್ಯರಾಗಿ ಸಮಿತಿಗೆ ಅನುಪಮ ಸೇವೆ ಸಲ್ಲಿಸಿದ ಅಭಿಮಾನಿ ಭಕ್ತರಿಗೆ ಪುಟ್ಟರಾಜ ಗುರು ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಸೇವಾ ಸಮಿತಿಯ ಸದಸ್ಯರು ಮತ್ತು ಅಭಿಮಾನಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳಾಗಿ ಭಾಗವಹಿಸಿ ತನು, ಮನ, ಧನದಿಂದ ಸೇವೆ ಸಲ್ಲಿಸಿ ಗುರು ಕೃಪೆಗೆ ಪಾತ್ರರಾಗಲು ಕೋರುತಿದ್ದೇವೆ.
ಆಸಕ್ತರು, ಗೋಷ್ಠಿಗಳ ನಿರ್ವಾಹಕಿ ಶ್ರೀಮತಿ ವಾಣಿ ಬಸವರಾಜ್, ದಾವಣಗೆರೆ ಇವರ ವ್ಯಾಟ್ಸಪ್ ನಂ: ೯೯೦೨೦ ೫೨೧೨೧ ಅಥವಾ ೯೮೮೬೭ ೧೭೭೩೨ ಸಂದೇಶದ ಮೂಲಕ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಡಾ. ಪಂ. ಪುಟ್ಟರಾಜ ಸೇವಾ ಸಮಿತಿ ಸಂಸ್ಥಾಪಕ ವೇ. ಚನ್ನವೀರ ಸ್ವಾಮಿಗಳು ಹಿರೇಮಠ (ಕಡಣಿ) ಗದಗ ಇವರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

