ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಕಳೆದ ಒಂದು ವಾರದಿಂದ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಗ್ರಾಮ ಆಡಳಿತಾಧಿಕಾರಿಗಳು ರಾಜ್ಯಾದ್ಯಂತ ಮುಷ್ಕರ ಹಮ್ಮಿಕೊಂಡಿದ್ದು, ಸರಕಾರ ಅವರ ಮುಷ್ಕರಕ್ಕೆ ಕಿವಿಗೊಡದೇ ಇರುವುದು ದುರಂತ ಎಂದು ಮಾಜಿ ಶಾಸಕ ರಮೇಶ ಭೂಸನೂರ ಅಸಮಾಧಾನ ವ್ಯಕ್ತಪಡಿಸಿದರು.
ಸಿಂದಗಿ ಪಟ್ಟಣದ ಆಡಳಿತ ಸೌಧದಲ್ಲಿ ಗ್ರಾಮ ಆಡಳಿತಾಧಿಕಾರಿಗಳು ಹಮ್ಮಿಕೊಂಡ ೨ನೆಯ ಹಂತದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ಸರಕಾರದ ಪ್ರದಾನ ಕಾರ್ಯದರ್ಶಿಗಳು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡಿತ್ತು. ಕಾರಣ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರವನ್ನು ಕೈ ಬಿಟ್ಟಿದ್ದರು. ಆದರೆ ಕೊಟ್ಟ ಭರವಸೆ ಇಲ್ಲಿಯವರೆಗೆ ಈಡೆರಿಲ್ಲ. ಇದರಿಂದ ಬೇಸರಗೊಂಡ ಗ್ರಾಮ ಆಡಳಿತಾಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರ ಕಾರ್ಯಗಳಿಗೆ ತೊಂದರೆಯಾಗುತ್ತಿದೆ. ಅವರ ೨೨ ಬೇಡಿಕೆಗಳಲ್ಲಿ ಸರಕಾರ ಕನಿಷ್ಠ ೧೦ ಬೇಡಿಕೆಗಳನ್ನು ಈಡೇರಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ಎಸ್ಟಿ ಮೋರ್ಚಾ ತಾಲೂಕಾಧ್ಯಕ್ಷ ಪ್ರಶಾಂತ ಕದ್ದರಕಿ, ಗ್ರಾಮ ಆಡಳಿತಾಧಿಕಾರಿಗಳಾದ ನಿಖಿಲ ಖಾನಾಪೂರ, ಪಿ.ಕೆ.ಹುಡೇದ, ವಿನೋದ ಕರ್ನಾಳ, ಎಚ್.ಜಿ.ಶೇಖ್, ಎನ್.ಬಿ.ದೊಡಮನಿ, ಎಂ.ಬಿ.ಕುಳಗೆರಿಮಠ, ಆಶಿಫ್ ಜಮಾದಾರ, ವಿಜಯಲಕ್ಷ್ಮಿ, ಆರ್.ಎಂ.ಕಣಮೇಶ್ವರ ಸೇರಿದಂತೆ ಇನ್ನಿತರರಿದ್ದರು.
“ಮಳೆಗಾಲದಲ್ಲಿ ಮನೆಗಳು ಬಿದ್ದಾಗ ಸ್ಥಳ ಪರಿಶೀಲನೆಗೆ ತಮ್ಮ ಸ್ವಂತ ಖರ್ಚಿನಲ್ಲಿಯೇ ಹೋಗಬೇಕು. ಮತ್ತು ಮಹಿಳಾ ಗ್ರಾಮ ಆಡಳಿತಾಧಿಕಾರಿಗಳು ಒಬ್ಬರೇ ಗುಡ್ಡ ಗಾಡು ಪ್ರದೇಶದಲ್ಲಿ ಸಂಚರಿಸಬೇಕು. ಮೊಬೈಲ್ ನೆಟ್ವರ್ಕ್ ಇಲ್ಲದ ಸ್ಥಳದಲ್ಲಿ ಹೆಚ್ಚು ಕಷ್ಟಪಡುತ್ತಿದ್ದಾರೆ. ರಾಜ್ಯ ಸರಕಾರ ಇವರ ಬೇಡಿಕೆಗಳನ್ನು ಶೀಘ್ರ ಈಡೇರಿಸುವ ಮೂಲಕ ಜನರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು.”
– ರಮೇಶ ಭೂನಸೂರ
ಮಾಜಿ ಶಾಸಕರು

