ಲೇಖನ
ಜಯಶ್ರೀ.ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಮೊ: ೯೪೪೯೨೩೪೧೪೨
ಉದಯರಶ್ಮಿ ದಿನಪತ್ರಿಕೆ
ಗಾಜಿನ ಲೋಟವು ಅರ್ಧ ಖಾಲಿಯಾಗಿದೆ ಅಥವಾ ಅರ್ಧ ತುಂಬಿದೆ ಎನ್ನುವ ಸಕಾರಾತ್ಮಕ ಚಿಂತನೆಗೆ ಕುರಿತಾದ ಹಳೆಯ ಪ್ರಶ್ನೆಗೆ ನಾವು ಹೇಗೆ ಉತ್ತರಿಸುತ್ತೇವೆ ಎನ್ನುವುದು ಜೀವನದ ಮೇಲಿನ ದೃಷ್ಟಿಕೋನವನ್ನು ತೋರಿಸುತ್ತದೆ. ಆಶಾವಾದಿಯೇ, ನಿರಾಶಾವಾದಿಯೇ ಎಂಬುದನ್ನು ಪ್ರತಿಬಿಂಬಿಸಬಹುದು. ವಿನಸ್ಟನ್ ಚರ್ಚಿಲ್ ಅವರ ಮಾತೊಂದು ಹೀಗಿದೆ: ‘ನಿರಾಶಾವಾದಿ ಪ್ರತಿ ಅವಕಾಶದಲ್ಲೂ ಕಷ್ಟವನ್ನು ನೋಡುತ್ತಾನೆ. ಆಶಾವಾದಿ ಪ್ರತಿ ಕಷ್ಟದಲ್ಲೂ ಅವಕಾಶವನ್ನು ನೋಡುತ್ತಾನೆ.’ ಈ ತೆರನಾದ ಚಿಂತನೆ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ವಾಸ್ತವವಾಗಿ ಆಶಾವಾದ ಮತ್ತು ನಿರಾಶಾವಾದದಂತಹ ವ್ಯಕ್ತಿತ್ವ ಗುಣಲಕ್ಷಣಗಳು ಆರೋಗ್ಯ ಮತ್ತು ಯೋಗಕ್ಷೇಮದ ಹಲವು ಕ್ಷೇತ್ರಗಳ ಮೇಲೆ ಪರಿಣಾಮ ಬೀರಬಹುದು ಎಂದು ಕೆಲವು ಅಧ್ಯಯನಗಳು ತೋರಿಸುತ್ತವೆ.

ನಮ್ಮ ಆಲೋಚನೆ ಚೆನ್ನಾಗಿದ್ದರೆ ನಮ್ಮ ಸುತ್ತಲಿನ ವಾತಾವರಣವೂ ಚೆನ್ನಾಗಿ ಇರುತ್ತದೆ. ಎಂಬ ವಿಚಾರ ಸರ್ವವೇದ್ಯ. ಹಾಗಾದರೆ ಆಲೋಚನೆಗಳು ಅದ್ಹೇಗೆ ನಮ್ಮ ಕಣ್ತೆರೆಸುತ್ತವೆ ನೋಡೋಣ ಬನ್ನಿ.
ಧನಾತ್ಮಕ ಚಿಂತನೆ
ನಮ್ಮ ಬಳಿ ಏನಿದೆಯೋ ಅದನ್ನು ನೋಡಿದಾಗ, ನಮ್ಮ ಜೀವನದ ಅಗತ್ಯಗಳಿಗಿಂತ ಹೆಚ್ಚೇ ನಮ್ಮ ಬಳಿ ಇರುತ್ತದೆ ಎಂಬ ಸಂಗತಿ ಅರಿವಿಗೆ ಬರುತ್ತದೆ. ನಮ್ಮಲ್ಲಿಲ್ಲದ್ದನ್ನು ಹುಡುಕಿದಾಗ ನಮಗೆ ಎಂದಿಗೂ ಸಾಕಾಗುವುದಿಲ್ಲ. ನಮ್ಮ ಬಳಿ ಇರುವುದೆಲ್ಲ ನಮಗೆ ಕಡಿಮೆ ಎನಿಸುತ್ತದೆ ಮತ್ತು ಅತೃಪ್ತ ಭಾವ ಮೂಡಿಸುತ್ತದೆ. ಹಾಗಾದರೆ ಜೀವನದ ಬಹುಮುಖ್ಯ ವಿಚಾರಗಳೆಲ್ಲ ಆಲೋಚನೆಗಳ ನಿಯಂತ್ರಣದಲ್ಲಿವೆ ಎಂದಂತಾಯಿತು. ಸಾಮಾನ್ಯವಾಗಿ ಧನಾತ್ಮಕ ಚಿಂತನೆಯು ಪರಿಣಾಮಕಾರಿ ಒತ್ತಡ ನಿರ್ವಹಣೆಯ ಪ್ರಮುಖ ಭಾಗವಾಗಿದೆ. ಅಷ್ಟೇ ಅಲ್ಲ ಅನೇಕ ಆರೋಗ್ಯ ಪ್ರಯೋಜನೆಗಳಿಗೂ ಸಂಬಂದಿಸಿದೆ. ನಿರಾಶವಾದಿಗಳಾಗಿದ್ದರೆ ಹತಾಶೆ ಬೇಡ. ಧನಾತ್ಮಕ ಚಿಂತನೆಯ ಕೌಶಲ್ಯಗಳನ್ನು ಕಲಿಯಬಹುದು. ಕಲಿಕೆಯ ವಿಚಾರದಲ್ಲಿ ಕಂಗಳಲ್ಲಿ ಅಚ್ಚರಿ ತುಂಬಿಕೊಂಡಿರಬೇಕು. ಪುಂಖಾನುಪುಂಖವಾಗಿ ಬರುವ ಇಲ್ಲಸಲ್ಲದ ವ್ಯರ್ಥ ಆಲೋಚನೆಗಳನ್ನು ಹೊರದಬ್ಬಬೇಕು. ಉತ್ತಮ ಆಲೋಚನೆಗಳನ್ನು ಜೋಪಾನ ಮಾಡಿಕೊಂಡರಷ್ಟೇ ಮನಸ್ಸು ಹಗುರಾಗಿ ಧೈರ್ಯದಿಂದ ಹಾರಲು ಸಾಧ್ಯ. ಹಾರಿದರಷ್ಟೇ ಗೆಲುವಿನ ತುತ್ತತುದಿ ತಲುಪಲು ಸಾಧ್ಯ.
ಸರಿ ಎಂದುಕೊಂಡರೆ

ಚದುರಂಗದ ಆಟದಲ್ಲಿ ಆನೆ, ಒಂಟೆ, ರಾಜ, ಮತ್ತು ರಾಣಿ ಪ್ರತಿ ಸೈನಿಕನಿಗೆ ಆರು ಹೆಜ್ಜೆಗಳು ಸಾಕು ರಾಜ ರಾಣಿಯರಾಗಲು. ನಮ್ಮನ್ನು ನಾವು ಯಾವಾಗಲೂ ಸರಿ ಎಂದುಕೊಂಡರೆ ಬದುಕಿನಲ್ಲಿ ಸರಿಯಾದ ಯಾವುದನ್ನೂ ಕಲಿಯಲು ಸಾಧ್ಯವಿಲ್ಲ. ತಪ್ಪುಗಳು ಸಂಭವಿಸುತ್ತವೆ. ಸಂಭವಿಸಲೇಬೇಕು. ನಮ್ಮನ್ನು ಸರಿಪಡಿಸುವ ಸಲುವಾಗಿ ಮತ್ತು ಬೆಳೆಸುವ ಸಲುವಾಗಿ. ದೊಡ್ಡ ಕುರ್ಚಿ ರಾಜನನ್ನು ಮಾಡುವುದಿಲ್ಲ. ದೊಡ್ಡ ಕುರ್ಚಿ ಮೇಲೆ ಕುಳಿತ ತಕ್ಷಣ ಯಾವ ಮನುಷ್ಯನು ರಾಜನಾಗುವುದಿಲ್ಲ. ರಾಜ ಪದವಿ ಶುದ್ಧ ಆಲೋಚನೆಗಳ ಯೋಗ್ಯತೆಯಿಂದ ಸಂಪಾದಿಸಬೇಕಷ್ಟೆ. ಆದ್ದರಿಂದ ನಾನೇ ಸರ ಎನ್ನುವ ಆಲೋಚನೆಯನ್ನು ಬದಿಗೆ ಸರಿಸಿ ಸರಿಯಾದ ಆಲೋಚನೆಯ ತೆಕ್ಕೆಯಲ್ಲಿ ಬೀಳಬೇಕು.
ತಾತ್ಸಾರವೇ ಪ್ರೇರಣೆ
ಬದುಕಿಗೆ ಉತ್ತಮ ಆಲೋಚನೆಗಳು ತುಂಬಾ ಮುಖ್ಯ. ಮತ್ತೊಬ್ಬರ ನಿರ್ಲಕ್ಷ್ಯ ತಾತ್ಸಾರ ಅಸಡ್ಡೆಗಳು ಯಾವುದೇ ಸಮಯದಲ್ಲಿ ನಮ್ಮ ಉತ್ತಮ ಆಲೋಚನೆಗಳನ್ನು ಕೆಳಕ್ಕೆ ತಳ್ಳಲು ಬಿಡಬಾರದು. ಹಾಗೆ ತಳ್ಳಲು ಬಿಟ್ಟರೆ ಅದು ನಮ್ಮ ಮಾನಸಿಕ ಶಕ್ತಿಯನ್ನು ಕುಗ್ಗಿಸುತ್ತದೆ. ಮತ್ತೊಬ್ಬರ ನಿರ್ಲಕ್ಷ್ಯವನ್ನೇ ಅಸ್ತ್ರವನ್ನಾಗಿಸಿಕೊಂಡು ಬದುಕುವುದು ಕಲಿಯಬೇಕು. ತಾತ್ಸಾರ ಪ್ರೇರಣೆಯಾದಾಗಷ್ಟೇ ಒಳ್ಳೆಯ ಆಲೋಚನೆಗಳಿಂದ ಒಳ್ಳೆಯ ಕೆಲಸಗಳು ಸಾಧ್ಯ. ಅತ್ಯಂತ ಕಷ್ಟಪಟ್ಟು ಗುಡ್ಡವನ್ನು ಹತ್ತಿದ ಮೇಲೆಯೇ ಚೆಂದದ ದೃಶ್ಯ ನೋಡಲು ಸಿಗುತ್ತದೆ. ಧನಾತ್ಮಕ ಆಲೋಚನೆಗಳನ್ನು ಕಾರ್ಯಕ್ಕೆ ಇಳಿಸುವುದರಿಂದ ಹುಟ್ಟು ಬಡವರ ಮನೆಯಯಲ್ಲಾದರೂ ವಿದ್ವಾನನಾಗಿ ಸಾಯಬಹುದು. ಉತ್ತಮ ಆಲೋಚನೆಗಳಿಂದ ಸಕಲ ಸಿದ್ಧಿಯೂ ಪ್ರಾಪ್ತಿರಸ್ತು.
ನಮ್ಮ ಕೈಯಲ್ಲಿದೆ
‘ಆನಂದಮಯ ಈ ಜಗ ಹೃದಯ ಏತಕೆ ಭಯ ಮಾಣೋ.’ ಎಂಬ ಕವಿ ಕುವೆಂಪುರವರ ನುಡಿಯಂತೆ ಭಯದ ಆಲೋಚನೆ ತರವಲ್ಲ. ನಮ್ಮ ಆಲೋಚನೆಗಳ ಮೇಲೆ ನಮ್ಮ ಬದುಕು ರೂಪುಗೊಳ್ಳುತ್ತದೆ. ಅಂದರೆ ಆಲೋಚನೆಗಳು ಬದುಕಿನಲ್ಲಿ ನಿರ್ಣಾಯಕ ಸ್ಥಾನವನ್ನು ಹೊಂದಿವೆ ಎಂದಂತಾಯಿತು. ಇಂದಿನ ಬದುಕೆಲ್ಲವೂ ನಿನ್ನೆ ಮೊನ್ನೆಗಳ ಆಲೋಚನೆಗಳನ್ನು ಕಾರ್ಯಗತಗೊಳಿಸಿದ್ದರ ಫಲವಾಗಿದೆ. ಇಂದು ನಾವು ಏನಾಗಿದ್ದೇವೆಯೋ ಅದಕ್ಕೆ ಮೂಲ ಕಾರಣ ನಿನ್ನೆಯ ಆಲೋಚನೆಗಳು. ಸದ್ಯ ನಾವು ಸುಖವಾಗಿದ್ದೇವೆ ಇಲ್ಲವೇ ದುಃಖಿತರಾಗಿದ್ದೇವೆ ಎಂದರೆ ಅದು ನಮ್ಮ ಆಲೋಚನೆಯ ಪರಿಣಾಮವಾಗಿದೆ. ಪ್ರತಿಯೊಂದು ಸಂದರ್ಭದಲ್ಲಿಯೂ ಆಲೋಚನೆಗಳನ್ನು ಸ್ವೀಕರಿಸುವುದು ಬಿಡುವುದು ನಮ್ಮ ಕೈಯಲ್ಲಿರುತ್ತದೆ. ವಾಸ್ತವದಲ್ಲಿ ಸ್ವೀಕರಿಸುವುದು ಮತ್ತು ಬಿಡುವುದು ಎರಡನ್ನು ಏಕ ಕಾಲದಲ್ಲಿ ಮಾಡಲಾಗುವುದಿಲ್ಲ.
ಒಳಗಿನ ಆಲೋಚನೆ
ಅನೇಕ ಆಲೋಚನೆಗಳನ್ನು ಅವು ಉದ್ಭವವಾದ ಮನಸ್ಸಿನಿಂದ ತೆಗೆದು ಬೇರೊಂದು ಮನಸ್ಸಿನಲ್ಲಿ ನಾಟಿದಾಗ ಚೆನ್ನಾಗಿ ಬೆಳೆಯುತ್ತವೆ ಅನ್ನೋದು ಬಲ್ಲವರ ನುಡಿ. ಅನೇಕರು ಚಿಂತಕರಾಗಲು ವಿಫಲರಾಗುತಾರೆ. ಎಕೆಂದರೆ ಅವರ ಜ್ಞಾಪಕಶಕ್ತಿ ತುಂಬಾ ಉತ್ತಮವಾಗಿರುತ್ತದೆ ಆಲೋಚನೆಗಳು ಸರಿಯಾಗಿರದಿದ್ದರೆ ನೋಟ ಎಷ್ಟೇ ಸುಂದರವಾಗಿದ್ದರೂ ಸುಂದರವಾಗಿ ಕಾಣಿಸುವುದಿಲ್ಲ. ಅತ್ಯುತ್ತಮ ದೃಶ್ಯಗಳು ಅತ್ಯುತ್ತಮ ಆಲೋಚನೆಗಳಿಂದ ಮಾತ್ರ ನೋಡಲು ಸಿಗಬಹುದು. ನಮ್ಮೊಳಗಿನ ಆಲೋಚನೆ ಶಕ್ತಿ ಅಗಾಧ. ಅದನ್ನು ಪೋಷಿಸಿ ವಿಸ್ತಾರಗೊಳಿಸಬೇಕು. ಹಳೆಯ, ಕೆಟ್ಟ ಆಲೋಚನೆಗಳಿಂದ ಹೊರ ಬಂದಾಗಲೇ ನಮಗೆ ಹೆಚ್ಚು ಬೆಲೆ. ಆಗಾಗ ಪೊರೆಯನ್ನು ಕಳಚಿದರಷ್ಟೇ ಹೊಸ ಆಲೋಚನೆಗಳ ಚಿಗುರು ನಮ್ಮಿಂದ ಹುಟ್ಟಲು ಸಾಧ್ಯ.
ಮೊದಲ ಹೆಜ್ಜೆ
ಪ್ರತಿದಿನ ಮುಂಜಾನೆ ಒಂದು ಸುಂದರ ಆಲೋಚನೆ ಮತ್ತು ಕಿರುನಗೆಯಿಂದ ಏಳುವ ಹವ್ಯಾಸ ಹೊಂದಬೇಕು. ಆ ದಿನದ ನಮ್ಮ ಕಾರ್ಯಗಳು ಮತ್ತು ಆಲೋಚನೆಗಳ ಮೇಲೆ ಈ ಸಣ್ಣ ಕಾರ್ಯ ಎಂತಹ ಉತ್ತಮ ಪರಿಣಾಮ ಬೀರುತ್ತದೆಂಬುದು ಆಶ್ಚರ್ಯಕರ. ಎಲ್ಲದಕ್ಕೂ ಮೊದಲು ಮನಸ್ಸನ್ನು ತಯಾರು ಮಾಡಬೇಕು. ಮನಸ್ಸು ಒಮ್ಮೆ ಸಿದ್ಧಗೊಂಡರೆ ಸಾಕು ಯಾವುದೇ ಕಠಿಣವೆನಿಸುವ ಕೆಲಸವಾದರೂ ಆಗಿಯೇ ಆಗುತ್ತದೆ. ನಮ್ಮ ಮುಂದಿನ ಎಲ್ಲ ಕೆಲಸಗಳ ಮೊದಲ ಹೆಜ್ಜೆ ಉತ್ತಮ ಆಲೋಚನೆ. ಉಳಿದವೆಲ್ಲ ನಂತರದವು. ಸುಂದರ ಆಲೋಚನೆಗಳು ಕಾರ್ಯ ರೂಪಕ್ಕೆ ಇಳಿದಾಗ ಬೆರಗುಗೊಳಿಸುತ್ತವೆ. ಅಷ್ಟೇ ಅಲ್ಲ ಆ ಬೆರಗಿಗೆ ಸೋಜಿಗವನ್ನು ಚಮತ್ಕಾರವನ್ನೂ ಬೆರೆಸುತ್ತವೆ. ನಾಗರಿಕತೆಯ ಬೆಳವಣಿಗೆಗೆ ಆಲೋಚನೆಗಳೇ ಮೂಲಾಧಾರ. ಉತ್ತಮ ಆಲೋಚನೆಗಳ ಸಾಕಾರದಿಂದಲೇ ಪ್ರಗತಿ ಸಾಧ್ಯವಾಗಿದೆ. ನಮ್ಮ ಆಲೋಚನೆಗಳು ನಮ್ಮ ಪ್ರಗತಿ ಇಲ್ಲವೇ ಅಧೋಗತಿ ಸೂಚಿಸುತ್ತವೆ. ಒಬ್ಬ ಮನುಷ್ಯನು ಬುದ್ಧಿವಂತನೋ ಮೂರ್ಖನೋ ಎಂಬುದನ್ನು ಅವನ ಆಲೋಚನೆಗಳಿಂದಲೇ ಕಂಡುಕೊಳ್ಳಬಹುದು.
ಕೊನೆ ಹನಿ
ಸಮುದ್ರ ದಂಡೆಯಲ್ಲಿ ಮಕ್ಕಳು ಏನು ಮಾಡುತ್ತಾರೋ, ಅದನ್ನು ಬಹಳಷ್ಟು ಜನ ಆಲೋಚನೆಗಳೊಡನೆ ಮಾಡುತ್ತಾರೆ. ತಮ್ಮ ಪುಟ್ಟ ಕೈಗಳಲ್ಲಿ ಮರಳನ್ನು ತುಂಬಿಕೊಂಡು ನಿಧಾನವಾಗಿ ತಮ್ಮ ಬೆರಳ ಸಂದುಗಳಿಂದ ಅದನ್ನು ಪೂರ್ಣವಾಗಿ ಕೆಳಕ್ಕೆ ಚೆಲ್ಲುತ್ತಾರೆ. ಹಾಗೆಯೇ ನಾವು ಉತ್ತಮ ಆಲೋಚನೆಗಳನ್ನು ಜಾರಲು ಬಿಡುತ್ತೇವೆ. ಹಾರಬೇಕು ಆಲೋಚನೆಗಳ ರೆಕ್ಕೆ ಬಿಚ್ಚಿ ಹುಚ್ಚು ಆಲೋಚನೆಗಳಿಂದ ಕಟು ವಾಸ್ತವದ ಕಡೆಗೆ. ಗೆಲುವು ಒಂದು ಮಂತ್ರದಂಡದಂತೆ ಅದನ್ನು ಬಯಸದವರು ಯಾರೂ ಇಲ್ಲ. ‘ನೀವು ನಿಜವಾಗಲೂ ಯಶಸ್ವಿಯಾಗಲು ಬಯಸಿದಲ್ಲಿ, ಉತ್ತಮ ಆಲೋಚನೆಗಳನ್ನು ಹುಟ್ಟುಹಾಕಬೇಕು. ಪರಾಜಿತರು ಮಾಡಲು ಇಚ್ಛಿಸದಿರುವುನ್ನು ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ.’ ಒಳಗೆ ನಡೆದಿದ್ದೇ ಹೊರಗೆ ನಡೆಯುತ್ತದೆ. ಆದ್ದರಿಂದ ಆಲೋಚನೆಗಳ ಮೇಲೆ ಹತೋಟಿ ಸಾಧಿಸಬೇಕು. ಆಗ ಮಾತ್ರ ಆಲೋಚನೆಗಳು ಕಣ್ತೆರೆಸುವ ವಿಚಾರಗಳು ಆಗುತ್ತವೆ. ಅದರ ಪರಿಣಾಮವಾಗಿ ಸುಂದರ ಬದುಕು ಎರಡು ಕೈ ಚಾಚಿ ತಬ್ಬಿಕೊಳ್ಳುತ್ತದೆ.


