ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಇಲ್ಲಿಯ ಸಮೀಪದ ಮರಿಮಟ್ಟಿ ಗ್ರಾಮದಲ್ಲಿ ವಾಸವಾಗಿರುವ ಸುಡುಗಾಡುಸಿದ್ಧ ಜನಾಂಗದವರ ಕಾಲೋನಿಗೆ ಭಾನುವಾರ ರಾತ್ರಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ. ಜಿ, ಭೇಟಿ ನೀಡಿ ಅವರ ಕುಂದುಕೊರತೆ ಆಲಿಸಿದರು.
ಸುಡುಗಾಡುಸಿದ್ಧ ಜನಾಂಗ ಅಲೆಮಾರಿಯಾಗಿದ್ದರೂ, ಈಗ ನಾವೆಲ್ಲಾ ಒಂದೆಡೆ ನೆಲೆನಿಂತಿದ್ದರೂ, ಸಾಕಷ್ಟು ಮೂಲಭೂತ ಸೌಲಭ್ಯಗಳ ಕೊರತೆಯಿಂದ ಬಳಲುತ್ತಿದ್ದೇವೆ ಎಂದು ಮುಖಂಡ ಭೀಮಾಶಂಕರ ಉದಂಡಿ ಹೇಳಿದರು.
ಮರಿಮಟ್ಟಿಯಲ್ಲಿ ನೆಲೆನಿಂತು, ಅದು ಮುಳುಗಡೆಯಾದಾಗ ಇಲ್ಲಿ ಸ್ಥಳಾಂತರಗೊಂಡಿದ್ದೇವೆ, ಆದರೆ ಈಗ ನಮ್ಮ ಕುಟುಂಬಗಳು ವಿಸ್ತಾರಗೊಂಡಿವೆ, ಹೊಸ ಮನೆ ಕಟ್ಟಿಕೊಳ್ಳಲು ಗ್ರಾಮದಲ್ಲಿ ನಿವೇಶನಗಳಿಲ್ಲ, ಹೀಗಾಗಿ ಚಿಮ್ಮಲಗಿ ಭಾಗ ೧ ಬಿ ಪುನರ್ವಸತಿ ಕೇಂದ್ರದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಇಲಾಖೆಯ ಅಧೀನದಲ್ಲಿ ಸಾಕಷ್ಟು ನಿವೇಶನಗಳು ಖಾಲಿಯಿವೆ, ಅವುಗಳಲ್ಲಿ ೬೦ ನಿವೇಶನಗಳನ್ನು ನಮ್ಮ ಅಲೆಮಾರಿ ಜನಾಂಗಕ್ಕೆ ಹಂಚಬೇಕು, ಸರ್ಕಾರದ ವಸತಿ ಯೋಜನೆಯಡಿ ಮನೆ ಕಟ್ಟಿಕೊಳ್ಳಲು ಹಣಕಾಸಿನ ನೆರವು ನೀಡಬೇಕೆಂದರು.
ಹಿರಿಯರಾದ ಎಸ್.ಆರ್. ವಿಭೂತಿ ಮಾತನಾಡಿ, ಗ್ರಾಮದ ತುಂಬಾ ವಿದ್ಯುತ್ ಸೌಕರ್ಯದ ಅಭಾವವಿದೆ, ಹಳೆ ವಿದ್ಯುತ್ ಕಂಬಗಳಿದ್ದು ಬೀಳುವ ಹಂತ ತಲುಪಿವೆ, ಅವುಗಳನ್ನು ಬದಲಿಸಬೇಕು, ಕೆಪಿಟಿಸಿಎಲ್ , ಹೆಸ್ಕಾಂ ಅಧಿಕಾರಿಗಳಿಗೆ ಮನವಿ ಅರ್ಪಿಸಿದರೂ ಅವರು ಸ್ಪಂದಿಸುತ್ತಿಲ್ಲ ಎಂದು ದೂರಿದರು. ಆಲಮಟ್ಟಿಯ ವಿವಿಧ ಉದ್ಯಾನಗಳಲ್ಲಿ ಅರಣ್ಯ ಇಲಾಖೆ ೩೦೦ ಕ್ಕೂ ಅಧಿಕ ಅರಣ್ಯ ದಿನಗೂಲಿಗಳನ್ನು ನೇಮಕ ಮಾಡಿಕೊಂಡಿದೆ, ಅಲ್ಲಿ ಸುಡುಗಾಡು ಸಿದ್ಧ ಸಮಯದಾಯದ ಯುವಕರಿಗೂ, ಮಹಿಳೆಯರಿಗೂ ದಿನಗೂಲಿ ಕಾರ್ಮಿಕರಾಗಿ ನೌಕರಿ ದೊರೆತರೇ ಸಮುದಾಯ ಆರ್ಥಿಕವಾಗಿ ಸದೃಢವಾಗಲಿದೆ, ಭಿಕ್ಷಾಟನೆಯಿಂದ ಮುಕ್ತವಾಗಲಿದೆ ಎಂದರು.
ಮರಿಮಟ್ಟಿಯಲ್ಲಿ ನ್ಯಾಯಬೆಲೆ ಅಂಗಡಿ ಮಂಜೂರಿ ಮಾಡಲು ಮನವಿ ಮಾಡಿದರು.
ಸಮಸ್ಯೆ ಆಲಿಸಿದ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ, ನಿಮ್ಮ ಸಮಸ್ಯೆಗಳ ಬಗ್ಗೆ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಪರಿಹಾರ ಒದಗಿಸಲಾಗುವುದು, ಸರ್ಕಾರ ಅಲೆಮಾರಿ ಜನಾಂಗ ಮೇಲೆತ್ತಲು ಬಹಳಷ್ಟು ಕ್ರಮ ಕೈಗೊಂಡಿದೆ, ನಿಗಮದಿಂದ, ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾತನಾಡಿದರು.
ತಹಶೀಲ್ದಾರ್ ಎ.ಡಿ. ಅಮರಾವದಗಿ, ಸಮಾಜ ಕಲ್ಯಾಣ ಜಿಲ್ಲಾ ಉಪನಿರ್ದೇಶಕ ಪುಂಡಲಿಕ ಮಾನಕರ, ಬಿಇಓ ವಸಂತ ರಾಠೋಡ, ತಾ.ಪಂ ಇಓ ವೆಂಕಟೇಶ ವಂದಾಲ, ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಲಕ್ಷ್ಮಣ ವಿಭೂತಿ , ಆನಂದ ಕುಮಾರ ಮತ್ತೀತರರು ಇದ್ದರು.

