ಸಿಂದಗಿಯಲ್ಲಿ ಸಹಕಾರ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿದ ಸಚಿವ ಶಿವಾನಂದ ಪಾಟೀಲ ವಿಷಾದ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ಮೊದಲು ಸಹಕಾರಿ ಚಳುವಳಿಗೆ ನಾಂದಿ ಹಾಡಿದ್ದು ಕರ್ನಾಟಕ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತೇವೆ. ಆದರೆ ಇಂದು ಕರ್ನಾಟಕ ಸಹಕಾರಿ ರಂಗದಲ್ಲಿ ತನ್ನ ಅಸ್ಥಿತ್ವ ಕ್ಷೀಣಿಸುತ್ತಿರುವುದು ವಿಷಾದನೀಯ ಎಂದು ಸಚಿವ ಶಿವಾನಂದ ಪಾಟೀಲ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಬಂದಾಳ ರಸ್ತೆಯ ಅನ್ನಪೂರ್ಣೇಶ್ವರಿ ನಗರದಲ್ಲಿ ಸಿಂದಗಿ, ಆಲಮೇಲ, ದೇವರ ಹಿಪ್ಪರಗಿ ತಾಲೂಕಿನ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ, ಅರ್ಬನ್ ಬ್ಯಾಂಕು ಹಾಗೂ ಕ್ರೆಡಿಟ್, ಸೌಹಾರ್ದ ಸಹಕಾರಿ ಸಂಘಗಳ ಸಹಯೋಗದೊಂದಿಗೆ ಹಮ್ಮಿಕೊಂಡ ಸಹಕಾರ ಭವನ ಕಟ್ಟಡದ ಭೂಮಿ ಪೂಜೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಈ ನಾಡಿನಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳು ಸಹಕಾರಿ ಸಂಘದಿಂದ ಪ್ರಾರಂಭಗೊಂಡಿವೆ ಆದರೆ ದುರ್ದೈವ ಆ ಸಕ್ಕರೆ ಕಾರ್ಖಾನೆಗಳಲ್ಲಿರುವ ಅನೇಕರು ಅವುಗಳನ್ನು ಕ್ರಮೇಣ ಮುಚ್ಚಿ ತಮ್ಮದೆ ಆದ ಸ್ವಂತ ಕಾರ್ಖಾನೆಗಳನ್ನು ನಿರ್ಮಾಣ ಮಾಡಿದ್ದಾರೆ. ಸಹಕಾರಿ ರಂಗ ಇಲ್ಲದಿದ್ದರೆ ಯಾವ ಕ್ಷೇತ್ರವು ಅಭಿವೃದ್ದಿಯಾಗುತ್ತಿರಲಿಲ್ಲ. ಭಾರತದ ಕ್ಷೀರ ಕ್ರಾಂತಿ ಮಾಡಿದೆ ಎಂದರೆ ಅದು ಸಹಕಾರಿ ಚಳುವಳಿಯಿಂದ. ಭಾರತದಲ್ಲಿ ಮೊದಲು ಸಹಕಾರಿ ಚಳುವಳಿ ಪ್ರಾರಂಭಗೊಂಡಿದ್ದು ಕರ್ನಾಟಕದಿಂದ ಪ್ರಸ್ತುತ ಉತ್ತರಪ್ರದೇಶ, ಮಹಾರಾಷ್ಟ್ರ ಕರ್ನಾಟಕಕ್ಕಿಂತಲು ಮೊದಲಿವೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಹಕಾರಿ ತತ್ವದ ಮೇಲೆ ನಂಬಿಕೆ ಇಲ್ಲ ಇದರಿಂದ ಈ ಕ್ಷೇತ್ರ ಸೊರಗುತ್ತಿದೆ.
ಭಾರತದ ಭೂಮಿ ಎಲ್ಲ ಬೆಳೆಗಳನ್ನು ಬೆಳೆಯುವ ಪವಿತ್ರ ಭೂಮಿ ಆದರೆ ನಮ್ಮ ರೈತರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅನುಸರಿಸುತ್ತಿಲ್ಲ ಇದರಿಂದ ಹೆಚ್ಚು ಕೃಷಿ ಕ್ಷೇತ್ರದಲ್ಲಿ ನಷ್ಟವನ್ನು ಎದುರಿಸುತ್ತಿದ್ದಾರೆ. ವಿಜಯಪುರ ಜಿಲ್ಲೆಯ ಭೂಮಿ ಬರಡು ಭೂಮಿ ನಿಜ ಆದರೆ ಮುಂದೊಂದು ದಿನ ಈ ಭೂಮಿ ಬಂಗಾರದ ಕಡ್ಡಿಯಾಗಲಿದೆ. ಈ ಮೊದಲು ಶೇ ೬೦-೭೦ ರಷ್ಟಿರುವ ಒಕ್ಕಲುತನ ಇಂದು ಶೇ ೨೦ ಕ್ಕೆ ಇಳಿದಿದೆ ಇದು ದೊಡ್ಡ ದುರಂತ ಎಂದರು.
ಈ ವೇಳೆ ಸಹಕಾರಿ ಸಮಿತಿ ಅಧ್ಯಕ್ಷ ರಾಮರಾವ ನಾಯಕ, ಶ್ರೀಮಂತ ಇಂಡಿ, ಶಿವಕುಮಾರ ಗುಂದಗಿ ಮಾತನಾಡಿದರು.
ವೇದಿಕೆಯ ಮೇಲೆ ಆಲಮೇಲ ಪಟ್ಟಣ ಪಂಚಾಯತ ಅಧ್ಯಕ್ಷ ಸಾಧಿಕ ಸುಂಬಡ, ಕೆಡಿಪಿ ಸದಸ್ಯೆ ಮಹಾನಂದ ಬಮ್ಮಣ್ಣಿ, ಹಣಮಂತ್ರಾಯಗೌಡ ಪಾಟೀಲ, ಗುರುಶಾಂತ ನೀಡೋಣಿ, ಸಹಾಯಕ ನಿಬಂಧಕ ಕೆ.ಎಚ್.ವಡ್ಡರ ಇದ್ದರು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಶಾಂತವೀರ ಬಿರಾದಾರ, ಪ್ರಕಾಶ ಕೋರಿ, ರವಿ ನಾಗೂರ, ವಿವೇಕಾನಂದ ಪಾಟೀಲ, ಸುರೇಶ ಮಲಗೊಂಡ, ಯಶವಂತ್ರಾಯಗೌಡ ರೋಗಿ, ಸಾಯಬಣ್ಣ ಬಾಗೇವಾಡಿ, ಅಪ್ಪಸಾಹೇಬ ಪಟ್ಟಣಶೆಟ್ಟಿ, ನೀಲಕಂಠ ಗುಣಾರಿ, ಮಲ್ಲನಗೌಡ ಪಾಟೀಲ, ಬಸವಂತ್ರಾಯ ಬಗಲೂರ, ಪ್ರತಿಭಾ ಚಳ್ಳಗಿ, ಜಯಶ್ರೀ ಹದನೂರ, ಶೈಲಜಾ ಸ್ಥಾವರಮಠ ಸೇರಿದಂತೆ ಅಖಂಡ ಸಿಂದಗಿ ತಾಲೂಕಿನ ಸಹಕಾರಿ ಸಂಘಗಳ ಅಧ್ಯಕ್ಷರು, ಸದಸ್ಯರು ಮತ್ತು ನೌಕರರು ಇದ್ದರು.

” ಅಖಂಡ ಸಿಂದಗಿ ತಾಲೂಕಿನಲ್ಲಿ ೩೬೨ ಸಹಕಾರಿ ಸಂಘಗಳಿವೆ. ಅವರಿಗೆಲ್ಲ ಸಹಕಾರಿ ತರಬೇತಿ, ಸಹಕಾರಿ ಸಪ್ತಾಹ ಸೇರಿದಂತೆ ಅನೇಕ ಸಹಕಾರಿ ಚಟುವಟಿಕೆಗಳಿಗೆ ಸೂಕ್ತ ಜಾಗೆ ಇರಲಿಲ್ಲ ಅದನ್ನು ಮನಗಂಡು ಸಿಂದಗಿಯಲ್ಲಿ ಸಹಕಾರಿ ಭವನವನ್ನು ನಿರ್ಮಾಣ ಮಾಡುವ ಭರವಸೆಯನ್ನು ನೀಡಿದ್ದೆ ಅದು ಇಂದು ಕಾರ್ಯ ರೂಪಕ್ಕೆ ಬಂದಿದೆ ಮುಂದಿನ ಒಂದು ವರ್ಷದಲ್ಲಿ ಭವನವನ್ನು ನಿರ್ಮಾಣ ಮಾಡಲಾಗುವುದು. ಈ ಭವನ ಜಿಲ್ಲೆಯಲ್ಲಿ ಪ್ರಥಮ ಎನ್ನುವದು ಅತ್ಯಂತ ಸಂತಸದ ವಿಚಾರವಾಗಿದೆ. “
– ಅಶೋಕ ಮನಗೂಳಿ
ಶಾಸಕರು, ಸಿಂದಗಿ

” ಸಹಕಾರಿ ಕ್ಷೇತ್ರವು ಒಂದು ಪವಿತ್ರ ಕ್ಷೇತ್ರವಾಗಿದೆ. ಎಲ್ಲ ಕ್ಷೇತ್ರಗಳನ್ನು ಸಮೃದ್ದಿಗೊಳಿಸುವ ಈ ಸಹಕಾರಿ ಕ್ಷೇತ್ರವು ಇನ್ನೂ ಹೆಚ್ಚು ಹೆಚ್ಚು ಯೋಜನೆಗಳನ್ನು ಮಾಡಬೇಕು.”
-ಡಾ.ಪ್ರಭುಸಾರಂಗದೇವ ಶಿವಾಚಾರ್ಯರು
ಸಾರಂಗಮಠ, ಸಿಂದಗಿ

