ಉದಯರಶ್ಮಿ ದಿನಪತ್ರಿಕೆ
ಇಂಡಿ: ವಿವಿಧ ಬೇಡಿಕೆ ಆಗ್ರಹಿಸಿ ಕಪ್ಪು ಕಟ್ಟಿಕೊಂಡು ಗ್ರಾಮ ಆಡಳಿತ ಅಧಿಕಾರಿಗಳು ತಾಲೂಕು ಆಡಳಿತ ಸೌಧದ ಎದುರು ಅನಿರ್ಧಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ.
ಸೋಮವಾರ ರಾಜ್ಯದಾದ್ಯಂತ ರಾಜ್ಯ ಸಂಘ 2 ನೇ ಹಂತದ ಪ್ರತಿಭಟನೆ ಕರೆ ಹಿನ್ನೆಲೆಯಲ್ಲಿ ಇಂಡಿ ತಾಲ್ಲೂಕಿನಲ್ಲಿಯೂ ಅನಿರ್ಧಿಷ್ಟಾವಧಿ ಮುಷ್ಕರ ನಡೆಸಲಾಗುತ್ತದೆ ಎಂದು ಗ್ರಾಮ ಆಡಳಿತ ತಾಲೂಕು ಘಟಕದ ಅಧ್ಯಕ್ಷ ಯಲ್ಲು ಪೂಜಾರಿ ಮಾತನಾಡಿದರು.
ಗ್ರಾಮ ಆಡಳಿತ ಅಧಿಕಾರಿಗಳು ಅನೇಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ. ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಮೊಬೈಲ್, ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರಲಾಗುತ್ತಿದೆ. ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್ನೆಟ್ ಹಾಗೂ ಸ್ಕ್ಯಾನರ್ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ’ ಎಂದರು.
ಆಧುನಿಕ ತಂತ್ರಾಂಶಕ್ಕೆ ಸಂಬಂಧಿಸಿದಂತೆ ಅವಶ್ಯ ಸೌಲಭ್ಯವನ್ನು ಕಲ್ಪಿಸುವವರೆಗೆ ಸೆ. 22ರಿಂದ ಆಧಾರ್ ಸೀಡ್, ಲ್ಯಾಂಡ್ ಬೀಟ್, ಬಗರ್ಹುಕುಂ, ಹಕ್ಕುಪತ್ರ, ನಮೂನೆ 1–5 ವೆಬ್ ಅಪ್ಲಿಕೇಷನ್ ಮತ್ತು ಪೌತಿ ಆಂದೋಲನ ಆ್ಯಪ್ ತಂತ್ರಾಂಶಗಳ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಪದೋನ್ನತಿ, ವರ್ಗಾವಣೆ, ನೌಕರರ ಅಮಾನತ್ತು ಸೇರಿ ಹಲವಾರು ಬೇಡಿಕೆಗಳನ್ನು ಸರ್ಕಾರದ ಮುಂದಿಟ್ಟಿದ್ದು, ಅವುಗಳಗೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಸೆ. 26ರಿಂದ ಎಲ್ಲ ಬಗೆಯ ಮೊಬೈಲ್ ಆ್ಯಪ್ ಹಾಗೂ ನೆಟ್ ಅಪ್ಲಿಕೇಶನ್ ಸ್ಥಗಿತಗೊಳಿಸಿ ರಾಜ್ಯವ್ಯಾಪಿ ಮುಷ್ಕರ ನಡೆಸಲಾಗುತ್ತಿದೆ ಎಂದರು.
ಇದೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರ ಸಂಘದ ತಾಲ್ಲೂಕು ಅಧ್ಯಕ್ಷ, ಶಿರಸ್ತೆದಾರ ಬಿ ಎ ರಾವೂರ ಪ್ರತಿಭಟನೆಗೆ ಬೆಂಬಲ ಸೂಚಿಸಿ ಮಾತನಾಡಿದ ಅವರು, ಗ್ರಾಮ ಆಡಳಿತ ಅಧಿಕಾರಿಗಳಿಗೆ ಅನೇಕ ಸಮಸ್ಯೆಗಳಿದ್ದು, ಅವುಗಳನ್ನು ಸರಕಾರ ಶೀಘ್ರವಾಗಿ ಪರಿಹರಿಸಬೇಕು. ಅತೀ ಹೆಚ್ಚಾಗಿ ಗ್ರಾಮೀಣ ಭಾಗದ ರೈತರ ಕೆಲಸ ಕಾರ್ಯಗಳು ಮಾಡುತ್ತಿದ್ದು, ಮೊಬೈಲ್ ನೆಟ್ ವರ್ಕ ಸೇರಿದಂತೆ, ಪುಡಾರಿ ಪುಂಡರ್ ತಕರಾರು ಒತ್ತಡ ಕೂಡಾ ಅವರ ಮೇಲಿದೆ. ಹಾಗಾಗಿ ಸರಕಾರ ಸಕಾರಾತ್ಮಕ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂ.ಇ ನೌಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಪೂಜಾರಿ, ಶಿರಸ್ತೆದಾರ ಆರ್ ಬಿ ಮೂಗಿ, ಕಂದಾಯ ನಿರೀಕ್ಷಕ ಎಚ್ ಎಚ್ ಗುನ್ನಾಪೂರ, ಎಸ್ ಎಚ್ ಲಾಳಸಂಗಿ, ಕೆ ಎಸ್ ಚೌಧರಿ , ಎಮ್ ಎಸ್ ಹೊಸೂರ, ವಿ ಎಮ್ ಕೋಳಿ, ಜಿ ಎಮ್ ಬಿರಾದಾರ, ಎಸ್ ಎಸ್ ಮೋದಿ, ಎಮ್ ಆರ್ ರಾಠೋಡ, ಎಸ್ ಬಿ ಹಿರೇಬೆನೂರ ಸೇರಿದಂತೆ ಗ್ರಾಮ ಆಡಳಿತ ಅಧಿಕಾರಿಗಳು ಹಾಗೂ ಕಂದಾಯ ಇಲಾಖೆ ನೌಕರಸ್ಥರು ಉಪಸ್ಥಿತರಿದ್ದರು.

