ಉದಯರಶ್ಮಿ ದಿನಪತ್ರಿಕೆ
ಕೊಲ್ಹಾರ: ಚುನಾಯಿತ ಪ್ರತಿನಿಧಿಗಳಾಗಿ ಮೂರು ವರ್ಷದ ನಂತರ ಬಹುನಿರೀಕ್ಷಿತ ಕೊಲ್ಹಾರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ, ಚುನಾವಣೆ ಆಯೋಗ ಮೀಸಲಾತಿಯನ್ನು ಪ್ರಕಟಿಸಿದ ಪ್ರಕಾರ ಚುನಾವಣೆ ಆರು ತಿಂಗಳ ಹಿಂದೆಯೇ ನಡೆಯಬಹುದಾಗಿತ್ತು ನ್ಯಾಯಾಲಯದಲ್ಲಿ ಇದ್ದಂತಹ ತಕರಾರು ಬಗೆಹರಿದು ಆಯೋಗದವು ಪ್ರಕಟಿಸಿರುವ ಮೀಸಲಾತಿಯಂತೆ ಕೊಲ್ಹಾರ ಪಟ್ಟಣ ಪಂಚಾಯತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಫೆ.೧೨ ಬುಧವಾರದಂದು ನಡೆಯುವದು ಎಂದು ತಿಳಿದುಬಂದಿದೆ.
ಪಟ್ಟಣ ಪಂಚಾಯತಿಯಲ್ಲಿ ಒಟ್ಟು ೧೭ ಸ್ಥಾನಗಳಿದ್ದು ೧೧ಜನ ಸದಸ್ಯರು ಕಾಂಗ್ರೆಸ್ ಪಕ್ಷದ ಬಿ-ಫಾರ್ಮ್ ಪಡೆದ ಚುನಾಯಿತ ಸದಸ್ಯರಿದ್ದು ಇಬ್ಬರೂ ಎಐಎಮ್ಐಎಮ್ ಸದಸ್ಯರಿದ್ದು, ಒಬ್ಬನೇ ಒಬ್ಬ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿರುತ್ತಾರೆ, ಇವರಲ್ಲರೂ ಈಗಾಗಲೇ ಸಚಿವ ಕ್ಷೇತ್ರದ ಶಾಸಕ ಶಿವಾನಂದ ಪಾಟೀಲರಿಗೆ ಬೆಂಬಲ ಸೂಚಿಸಿರುವುದನ್ನು ನೋಡಿದರೆ ಕಾಂಗ್ರೆಸ್ ಪಕ್ಷವು ಅಧಿಕಾರ ಚುಕ್ಕಾಣೆ ಹಿಡಿಯುವುದರಲ್ಲಿ ಯಾವುದೆ ಅನುಮಾನವಿಲ್ಲ, ಮೂವರು ಸದಸ್ಯರನ್ನು ಹೊಂದಿದ ಬಿಜೆಪಿ ಪಕ್ಷವು ಅದರ ನಾಯಕರು ಮನಸ್ಸು ಮಾಡಿದರೆ ಏನುಬೇಕಾದರೂ ಆಗುವ ಸಾಧ್ಯತೆ ಅಧಿಕವಾಗಿದೆ.
ಮೀಸಲಾತಿ ಪಟ್ಟಿ ಪ್ರಕಟಗೊಳ್ಳಲು ಅಪಾರ ಸಮಯ ಕಳೆದು ಹೋಗಿರುವುದರಿಂದ ಅಧಿಕಾರದ ಅವಧಿ ಎಷ್ಟು ವರ್ಷದಾಗಿರುವದು ಎನ್ನುವದು ಚುನಾಯಿತ ಸದಸ್ಯರಲ್ಲಿ ಆತಂಕ ಮೂಡಿಸಿದರೆ ಕಾನೂನು ಯಾವ ರೀತಿ ಹೇಳುತ್ತದೆ ಎನ್ನುವದು ಕಾನೂನು ಅನುಭವದ ಪರಿಪಾಲಕರನ್ನು ವಿಚಾರಿಸಿದಾಗ ತಿಳಿಯುತ್ತದೆ.
ಕ್ಷೇತ್ರದ ಶಾಸಕರು ಸಚಿವರು ಆಗಿರುವ ಶಿವಾನಂದ ಪಾಟೀಲರವರ ಅಂಗಳದಲ್ಲಿ ಕೊಲ್ಹಾರ ಪಟ್ಟಣ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚಂಡು ಇದ್ದು ಅವರು ಯಾರ ಪರವಾಗಿ ಬ್ಯಾಟ್ ಬೀಸುತ್ತಾರೆ ಎನ್ನುವದೇ ಪಟ್ಟಣದ ಜನತೆಯ ಮನದಲ್ಲಿ ಕುತೂಹಲ ಮೂಡಿಸುತ್ತಿದೆ ಕಾರಣ ಕಾಂಗ್ರೆಸ್ ಪಕ್ಷದ ಬಿಫಾರ್ಮ್ ಪಡೆದು ಚುನಾಯಿತರಾದ ೧೧ ಸದಸ್ಯರಲ್ಲಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡುತ್ತಾರೋ ಅಥವಾ ಬೆಂಬಲ ಸೂಚಿಸಿರುವ ಪಕ್ಷೇತರ ಅಭ್ಯರ್ಥಿಯಾದ ಚನಮಲ್ಲಪ್ಪ ಸಿ ಗಿಡ್ಡಪ್ಪಗೋಳ ಅವರು ಎರಡು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡಿರುವದನ್ನು ನೋಡಿದರೆ ಸಚಿವರಾದ ಶಿವಾನಂದ ಪಾಟೀಲರು ಸ್ಥಳಿಯ ಜನರ ನಿರೀಕ್ಷೆಯಂತೆ ಚನಮಲ್ಲಪ್ಪ ಗಿಡ್ಡಪ್ಪಗೋಳ ಅವರ ಪರವಾಗಿ ನಿಲ್ಲುತ್ತಾರೆ ಎನ್ನುವ ಸ್ಪಷ್ಟ ಸೂಚಣೆ ಸಿಕ್ಕಂತಾಗಿದೆ.
ಅಧ್ಯಕ್ಷ ಸ್ಥಾನ ಸಾಮಾನ್ಯವಾದರೆ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾತಿಯಾಗಿದ್ದು ಅಧ್ಯಕ್ಷ ಸ್ಥಾನ ಗಿಡ್ಡಪ್ಪಗೋಳ ಅವರಿಗೆ ಒಲಿದು ಬರುತ್ತದೆ ಎನ್ನುವದರಲ್ಲಿ ಯಾವುದೆ ಸಂಶಯವಿಲ್ಲ, ಉಪಾಧ್ಯಕ್ಷ ಸ್ಥಾನ ಮಾತ್ರ ಮಹಿಳಾ ಕೋಟಾದಲ್ಲಿ ಬರುವ ಸಚಿವರ ಸ್ವಜಾತಿಯವಾರದ ಲಕ್ಷಿಂಬಾಯಿ ಹೆರಕಲ್ ಅವರಿಗೆ ದೊರಕುತ್ತದೆಯೋ ಅಥವಾ ಶ್ರೀಮತಿ ಯಾಸ್ಮಿನಬೇಗಂ ಕಲಾದಗಿ ಮತ್ತು ಶ್ರೀಮತಿ ಆಕೇರಾ ಅನ್ವರ ಕಂಕರಪೀರ, ಶ್ರೀಮತಿ ರಾಜಮಾ ನಧಾಪ ಈ ನಾಲ್ವರಲ್ಲಿ ಯಾರ ಅದೃಷ್ಟ ಕುಲಾಯಿಸುತ್ತದೆ ಎನ್ನುವದು ಕುತೂಹಲ ಮೂಡಿಸುತ್ತಿದೆ.
ನಮಗೆ ಸಿಗಬೇಕೆಂದು ಹಲವಾರು ಸದಸ್ಯರು ಈಗಿನಿಂದಲೇ ತಮ್ಮ ತಮ್ಮ ಬೆಂಬಲಿಗರ, ನಾಯಕರ, ಜಾತಿ ಮುಖಂಡರ ಮೂಲಕ ಸಚಿವರ ಮೇಲೆ ಒತ್ತಡ ಹಾಕುತ್ತಾ ಬಂದಿರುವದು ಸತ್ಯ ಆಗಿದ್ದರೂ ಸಚಿವರು ಸ್ಥಳೀಯ ಕಾಂಗ್ರೆಸ್ ಪಕ್ಷದ ನಾಯಕರ ಮತ್ತು ಸರ್ವ ಸದಸ್ಯರ ಒಪ್ಪಿಗೆಯನ್ನು ಪಡೆದು ಅಭಿಪ್ರಾಯ ಸಂಗ್ರಹಿಸಿ ಅಧ್ಯಕ್ಷ ಸ್ಥಾನಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಎರಡು ಕೋಮಿನ ಸದಸ್ಯರಲ್ಲಿ ಒಬ್ಬಬ್ಬರನ್ನು ಆಯ್ಕೆ ಮಾಡಲು ಒಪ್ಪಿಗೆ ಪಡೆದುಕೊಂಡರೆ ಸರ್ವ ಸಮ್ಮತ ಒಪ್ಪಿಗೆ ದೊರೆಯಬಹುದು ಇಲ್ಲವಾದರೆ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡುವುದಂತೂ ಸಹಜ, ಇಂತಹ ಸಂದಿಗ್ದ ಪರಸ್ಥಿತಿಯನ್ನು ನ್ಯಾಯ ಸಮ್ಮತವಾಗಿ ನಿಭಾಯಿಸಿ ಪಟ್ಟಣದ ಜನತೆಗೆ ಉತ್ತಮ ಆಡಳಿತ ನೀಡುವ ಆಲೋಚನೆ ಹೊಂದಿದ ಸದಸ್ಯರನ್ನು ಗುರುತಿಸಿ ಆಯ್ಕೆ ಮಾಡಬೇಕೆಂಬುವುದೇ ಸ್ಥಳೀಯ ಜನತೆಯ ಆಶೆಯಾಗಿದೆ.

