ಉದಯರಶ್ಮಿ ದಿನಪತ್ರಿಕೆ
ಬಸವನಬಾಗೇವಾಡಿ: ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ತೋಟದ ನಿವಾಸಿ ರೈತ ಮುತ್ತು ಸಿದ್ಲಿಂಗಪ್ಪ ಬಿರಾದಾರ ಅವರ ತೋಟದಲ್ಲಿ ನಡೆದ ಘಟನೆಯು ಸುತ್ತಮುತ್ತಲಿನ ಜನರು ವಿಸ್ಮಯವಾಗುವಂತಹ ಘಟನೆ ಸೋಮವಾರ ಜರುಗಿದೆ.
೪೧ ವಯಸ್ಸಿನ ರೈತ ಮುತ್ತು ಸಿದ್ಲಿಂಗಪ್ಪ ಬಿರಾದಾರ ಅವರು ತಮ್ಮ ನಾಲ್ಕು ಎಕರೆ ತೋಟದಲ್ಲಿ ೧೪ ಸಲ ಬೋರವೆಲ್ ಹಾಕಿದರೂ ನೀರು ಬಾರದೇ ವಿಫಲರಾಗಿದ್ದರು. ಇದರಿಂದಾಗಿ ಇವರು ಜೀವನದಲ್ಲಿ ಜಿಗುಪ್ಸೆ ಪಟ್ಟುಕೊಂಡಿದ್ದರು. ೧೪ ಸಲ ಬೋರವೆಲ್ ಹಾಕಿಸಲು ಸಾಕಷ್ಟು ಸಾಲ ಮಾಡಿದ ಪರಿಣಾಮ ತಮ್ಮ ಎರಡು ಎಕರೆ ಮಾರಾಟ ಮಾಡಿ ತಾವು ಮಾಡಿದ ರೂ.೩೬ ಲಕ್ಷ ಸಾಲವನ್ನು ಮುಟ್ಟಿಸಿದ್ದಾರೆ. ೧೪ ಸಲ ಬೋರವೆಲ್ ಹಾಕಿ ವಿಫಲರಾದರೂ ಅವರು ಆತ್ಮವಿಶ್ವಾಸ ಕಳೆದುಕೊಳ್ಳದೇ ಮತ್ತೆ ನಿನ್ನೆ ಜಯೋಲಾಜಿಸ್ಟರನ್ನು ತೋಟಕ್ಕೆ ಕರೆಸಿ ನೀರಿನ ಪಾಯಿಂಟ್ ಗುರುತಿಸಿ ಬೋರವೆಲ್ ಹಾಕಿದರೂ ನೀರು ಬಾರದೇ ಅದು ಸಹ ವಿಫಲವಾಗಿದೆ. ದೇವರನ್ನು ನೆನೆದರೂ ನೀರು ಬೀಳದೆ ಇರುವದನ್ನು ಕಂಡ ಇವರು ತಮಗೆ ಜೀವನವೇ ಸಾಕೆಂದು ಆತ್ಮಹತ್ಯೆಗೆ ಮೊರೆ ಹೋಗಬೇಕೆಂದು ನಿರ್ಧಾರ ಮಾಡಿದ್ದಾರೆ. ಇದಕ್ಕೂ ಮೊದಲು ಅವರು ತಮ್ಮ ಮನಸ್ಸಿನಲ್ಲಿ ಭಕ್ತಿಯಿಂದ ಬಸವನಬಾಗೇವಾಡಿ ಕೊರೆಮ್ಮತಾಯಿಯನ್ನು ಭಕ್ತಿಯಿಂದ ನೆನೆದು ತಮ್ಮ ಎಡಗಾಲಿನ ಚಪ್ಪಲಿಯನ್ನು ಬೀಸಿ ಒಗೆದರು. ಅದು ಎಲ್ಲಿ ಹೋಗಿ ಬೀಳುತ್ತದೆಯೋ ಅಲ್ಲಿಯೇ ಕೊನೆ ಬಾರಿಗೆ ಅಲ್ಲಿ ಬೋರವೆಲ್ ಪಾಯಿಂಟ್ ಇದೆ ಅಂದುಕೊಳ್ಳುವೆ ಎಂದುಕೊಂಡರು. ಅದು ಹೋಗಿ ಬಿದ್ದ ಸ್ಥಳದಲ್ಲಿಯೇ ಬೋರವೆಲ್ ಹಾಕಿದಾಗ ಜನ ವಿಸ್ಮಯಗೊಳ್ಳುವಂತೆ ೪೮೦ ಪೂಟ್ಗೆ ಮೂರು ಇಂಚು ಸಿಹಿನೀರು ಬಂದಿದೆ. ಇದೊಂದು ರೋಚಕವಾದ ಘಟನೆ. ಕೊರೆಮ್ಮದೇವಿ ಆಶೀರ್ವಾದ ಫಲವಾಗಿ ಗಂಗಾಮಾತೆ ರೈತನ ಕೈ ಹಿಡಿದಿದ್ದಾಳೆ. ಇದೊಂದು ವಿಸ್ಮಯ ಘಟನೆ ಎಂದು ಸುತ್ತಮುತ್ತಲಿನ ನಿವಾಸಿಗಳಾದ ಮಲ್ಲಪ್ಪ ಗಣಿ, ಬಸಪ್ಪ ಗಣಿ, ಸಂಗಪ್ಪ ಬಿರಾದಾರ, ಪ್ರವೀಣ ಪೊಲೀಸ್ಪಾಟೀಲ, ಶಂಕರಗೌಡ, ವಿಶ್ವನಾಥ, ಹಣಮಂತ್ರಾಯ, ಶ್ರೀಶೈಲ ಗಣಿ ಎಂದು ತಿಳಿಸಿದ್ದಾರೆ.

