ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ೧೨ನೇ ಶತಮಾನದ ಬಸವಾದಿ ಶರಣರ ವಚನಗಳು ಪ್ರಪಂಚಕ್ಕೆ ಅಪೂರ್ವ ಕಾಣಿಕೆ ನೀಡಿವೆ. ಶರಣರ ಕಾಯಕ, ದಾಸೋಹ, ಸಮಾನತೆ, ಪರಿಶುದ್ಧತೆ ಎಲ್ಲವೂ ಶರಣರ ವಚನಗಳಲ್ಲಿ ಅಡಕವಾಗಿವೆ ಎಂದು ಪ್ರೊ. ಎನ್.ಜಿ. ಕರೂರ ಹೇಳಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಇಲ್ಲಿನ ವೀರಶೈವ ಸಭಾಭವನದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ರಾಮಪ್ಪ ಚ. ಉಪ್ಪಿನ ಕೇಂದ್ರ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಯುಕ್ತ ಅಭಿನಂದನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಬಸವಾದಿ ತತ್ವ ಸಿದ್ಧಾಂತ ನಾವೆಲ್ಲ ಒಂದಾಗಿ ಅನುಸರಿಸಿ ಬಾಳಬೇಕು. ಅಂತರಂಗ, ಬಹಿರಂಗ ಶುದ್ಧವಾಗಿರಬೇಕು. ಇಂದಿನ ಯುವಕ-ಯುವತಿಯರು ಸಮಯಪಾಲನೆ ಸ್ವಚ್ಚತೆ ಸತ್ಯಶುದ್ಧ ಕಾಯಕ, ನಮ್ಮ ನಡೆ, ನುಡಿ ಮಾದರಿಯಾದಾಗ ಸಮಾಜದಲ್ಲಿ ನಮ್ಮ ಬದುಕಿಗೆ ಅರ್ಥಬರುತ್ತದೆ. ಭಾಗಿದ ತಲೆ ಮುಗಿದ ಕೈ ಭಗವಂತನಿಗೆ ಪ್ರಿಯ. ಕಾಯಕ, ದಾಸೋಹದಿಂದ ಶರಣ ಜೀವಿಗಳಾಗಿ ಬದುಕಿ ಸಮಾಜದ ಒಳತಿಗಾಗಿ ನಾವೆಲ್ಲ ಅಳವಡಿಸಿಕೊಳ್ಳಬೇಕಾಗಿದೆ ಎಂದರು.
ಕೇಂದ್ರ ಸಮಿತಿಯ ಉಪಾಧ್ಯಕ್ಷ ಸಿದ್ರಾಮಪ್ಪ ಚ. ಉಪ್ಪಿನ ಸನ್ಮಾನ ಸ್ವೀಕರಿಸಿ ಮಾತನಾಡುತ್ತ, ನಿಯಮ, ನೀತಿ ಸಾತ್ವಿಕ ಚಿಂತನೆಯಲ್ಲಿ ಬದುಕಿದರೆ ಅದು ಫಲ ಕೊಡುತ್ತದೆ. ದಾನ, ಧರ್ಮ, ಕಾಯಕ, ದಾಸೋಹ ಮೈಗೂಡಿಸಿಕೊಂಡರೆ ಮಾತ್ರ ಸಾರ್ಥಕ ಬದುಕು ಇಂದು ತಮ್ಮೆಲ್ಲರ ಪ್ರೀತಿ ಅಭಿಮಾನಕ್ಕೆ ಚಿರಋಣಿ ನನ್ನ ಮನಸ್ಸನ್ನು ಕಟ್ಟಿಹಾಕಿದೆ ಎಂದು ಭಾವುಕರಾಗಿ ನುಡಿದರು.
ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ, ವೀರಶೈವ ಲಿಂಗಾಯತ ಮಹಾಸಭಾ ಕಟ್ಟಡ ನಿರ್ಮಾಣಕ್ಕೆ ಸಿದ್ರಾಮಪ್ಪ ಉಪ್ಪಿನ ಅವರ ಕೊಡುಗೆ ತುಂಬಾ ಇದೆ. ಅವರೊಬ್ಬ ಕೊಡಗೈದಾನಿಗಳು. ಕೇಂದ್ರ ಸಮಿತಿಯವರು ಅವರನ್ನು ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದ್ದು ನಮಗೆಲ್ಲ ಸಂತಸ ತಂದಿದೆ. ಕರ್ನಾಟಕದಲ್ಲಿಯೇ ವಿಜಯಪುರ ವೀರಶೈವ ಲಿಂಗಾಯತ ಮಹಾಸಭಾ ಪ್ರಥಮ ಸ್ಥಾನದಲ್ಲಿದೆ ಎಂದರು.
ಉಪಾದ್ಯಕ್ಷ ಸಹದೇವ ನಾಡಗೌಡ ಸ್ವಾಗತಿಸಿ ಪರಿಚಯಿಸಿದರು. ಸಾಹಿತಿ ಜಂಬುನಾಥ ಕಂಚ್ಯಾಣಿ, ಅರುಣ ಶಹಾಪೂರ, ಬಸವರಾಜ ಕುಮಸಗಿ, ರಾಜು ಬಿರಾದಾರ, ಬಿ.ಎಚ್. ಬಾದರಬಂಡಿ ಮಾತನಾಡಿದರು. ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರೂಪಿಸಿದರು. ಮ.ಗು. ಯಾದವಾಡ ವಂದಿಸಿದರು.
ಕಾರ್ಯಕ್ರಮದಲ್ಲಿ ಬಿ.ಟಿ. ಈಶ್ವರಗೊಂಡ, ವಿದ್ಯಾವತಿ ಅಂಕಲಗಿ, ಜ್ಯೋತಿ ಬಾಗಲಕೋಟ, ಬಸವರಾಜ ಒಂಟಗೋಡಿ, ದೊಡ್ಡಣ್ಣ ಭಜಂತ್ರಿ, ಕಾಶಿನಾಥ ಅಣೆಪ್ಪನವರ, ಶಾರದಾ ಕೊಪ್ಪ ಐಹೊಳ್ಳಿ, ಡಾ. ಸತೀಶ ಜಿಗಜಿಣಗಿ ದಂಪತಿಗಳು, ಡಾ. ಎಂ.ಎಸ್. ಮಧಭಾವಿ, ಡಾ. ವಿ.ಡಿ. ಐಹೊಳ್ಳಿ, ವಿಠ್ಠಲ ತೇಲಿ, ಮಹಾದೇವ ಹಾಲಳ್ಳಿ ಉಪಸ್ಥಿತರಿದ್ದರು.

