ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಬಡವಿದ್ಯಾರ್ಥಿಗಳಿಗೆ ವಿದ್ಯಾದಾನ, ಅನ್ನದಾನ ಮಾಡಿ ಸಮಾಜಮುಖಿ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಉನ್ನತಮಟ್ಟದ ಸಂಸ್ಕಾರಯುತ ಶಿಕ್ಷಣವನ್ನು ನೀಡುವಲ್ಲಿ ಜಿದ್ದಿಯವರ ಕಾರ್ಯ ಮೆಚ್ಚಲೇಬೇಕು ಎಂದು ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು.
ವಿಜಯಪುರದಲ್ಲಿ ಸೋಮವಾರ ಮಾಜಿ ವಿಧಾನಪರಿಷತ್ ಸದಸ್ಯ, ಶ್ರೀ ಕಾಳಿದಾಸ ಶಿಕ್ಷಣಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ದಿ. ಎಸ್. ಎ. ಜಿದ್ದಿಯ ಪ್ರತಿಮೆ ಅನಾವರಣ ಹಾಗೂ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತ, ಇಂದಿನ ಜೀವನದಲ್ಲಿ ಶಿಕ್ಷಣ ಒಂದು ವ್ಯಾಪಾರಿಕರಣವಾಗುತ್ತ ಹೊರಟಿದೆ ಎಂದು ಖೇದ ವ್ಯಕ್ತಪಡಿಸಿದ ಅವರು ಬಡವರಿಗಾಗಿಯೆ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ವಿದ್ಯಾರ್ಥಿಗಳಿಗೂ ವಿದ್ಯಾರ್ಜನೆ ಬದುಕನ್ನು ಕಲ್ಪಿಸಿಕೊಟ್ಟು ಪ್ರೇರಣಾಶಕ್ತಿಯಾಗಿ ಜಿದ್ದಿಯವರು ನಡೆದುಕೊಂಡರು. ಸಮಾಜಕ್ಕಾಗಿ ದುಡಿಯುವ ವ್ಯಕ್ತಿ ಅಜರಾಮರವಾಗಿ ಇರುತ್ತಾರೆ ಎನ್ನುವುದಕ್ಕೆ ಜಿದ್ದಿಯರನ್ನೆ ಕಾಣಬೇಕು ಎಂದರು.
ಉತ್ತಮ ಸಮಾಜಕ್ಕೆ ಕೊಡುಗೆಯನ್ನು ನೀಡುವಲ್ಲಿ ಸಂಸ್ಕಾರಯುತ ಶಿಕ್ಷಣ ನೀಡುವಲ್ಲಿ ಜಿದ್ದಿಯವರ ಕಾರ್ಯ ಅಪಾರ ಎಂದು ರೂಗಿ ಅಡವಿ ಸಿದ್ದೇಶ್ವರ ಆಶ್ರಮದ ಶ್ರೀ ನಿತ್ಯಾನಂದ ಮಹಾಸ್ವಾಮಿಗಳು ನುಡಿದರು.
ನುಡಿನಮನ ಕಾರ್ಯಕ್ರಮದಲ್ಲಿ ಡಾ. ಕಂಠೀರವ ಕುಲ್ಲಳ್ಳಿ ವಿ. ಡಿ. ವಸ್ತ್ರದ ಗುರುಗಳು, ಬಿ. ಆರ್. ಬನಸೂಡೆ ಮತ್ತು ಅಧ್ಯಕ್ಷತೆ ವಹಿಸಿದ ಸಂಸ್ಥೆಯ ಅಧ್ಯಕ್ಷ ಅಶೋಕ ಎಸ್. ಜಿದ್ದಿ ಮಾತನಾಡಿದರು.
ಇದಕ್ಕೂ ಪೂರ್ವದಲ್ಲಿ ದಿ.ಎಸ್.ಎ. ಜಿದ್ದಿಯವರ ಪ್ರತಿಮೆ ಅನಾವರಣ ಕಾರ್ಯಕ್ರಮವು ನಡೆಯಿತು. ವೇದಿಕೆಯ ಮೇಲೆ ಜಿದ್ದಿಯವರಿಗೆ ಕಲಿಸಿದ ಗುರುಗಳಾದ ಡೋಂಗ್ರಿಸಾಬ ಕಣವಿ, ಆರ್. ಯರನಾಳ, ಅಪ್ಪಾಸಾಬ ಈರಗೌಡ, ಕೆ.ಆರ್. ನಾಗೋಡ ಹಾಗೂ ಪ್ರಧಾನ ಕಾರ್ಯದರ್ಶಿ ಸುಭಾಸ ಎಸ್. ಜಿದ್ದಿ ಅವರು ಉಪಸ್ಥಿತರಿದ್ದರು.
ಗುರನಗೌಡ ಪಾಟೀಲ, ಅಪ್ಪಾಸಬ ಯರನಾಳ, ರೈತ ಹೋರಾಟಗಾರ ಅರವಿಂದ ಕುಲಕರ್ಣಿ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಾಚಾರ್ಯ ಕೆ.ಆರ್. ಜಾಧವ ಸ್ವಾಗತಿಸಿದರು, ನಿರೂಪಣೆಯನ್ನು ಜಿ.ಎಚ್. ಮರನೂರ ಹಾಗೂ ಎಸ್. ಡಿ. ದುರಗಣ್ಣವರ ನಡೆಸಿಕೊಟ್ಟರು ಆರ್. ಎಸ್. ವಾಡೇದ ವಂದಿಸಿದರು.

