ವಿಜಯಪುರದಲ್ಲಿ ಸ್ಪರ್ಶ ಕುಷ್ಠರೋಗ ಅರಿವು ಅಭಿಯಾನ ಜಾಥಾಕ್ಕೆ ಚಾಲನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ
ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಪದವಿ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿಗಳ ಕಾರ್ಯಾಲಯ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಜ.೩೦ರಂದು ಹಮ್ಮಿಕೊಂಡ “ಸ್ವರ್ಶ ಕುಷ್ಠರೋಗ ಅರಿವು ಅಭಿಯಾನ ಕಾರ್ಯಕ್ರಮದ ಜಾಗೃತಿ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್ತ ಗುಣಾರಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣದ ಉಪ ನಿರ್ದೇಶಕಿ ಡಾ. ಚನ್ನಮ್ಮ ಕಟ್ಟಿ ಜಂಟಿಯಾಗಿ ಚಾಲನೆ ನೀಡಿದರು.
ಕುಟುಂಬ ಕಲ್ಯಾಣದ ಉಪ ನಿರ್ದೇಶಕರಾದ ಡಾ. ಚನ್ನಮ್ಮ ಕಟ್ಟಿ ಕುಷ್ಠರೋಗ ಯಾವುದೇ ಪಾಪ ಅಥವಾ ಶಾಪದಿಂದ ಬರುವದಿಲ್ಲ. ಇದು ಸಹ ಒಂದು ಸಮಾನ್ಯ ಕಾಯಿಲೆಯಂತೆ ಎಲ್ಲರಿಗೂ ಬರಬಹುದು. ಮೈಕೋಬ್ಯಾಕ್ಟಿರಿಯಂ ಲೆಪ್ರೇ ಎನ್ನುವ ರೋಗಾಣುವಿನಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಕುಷ್ಠರೋಗದಿಂದ ಬಳಲುತ್ತಿರುವ ವ್ಯಕ್ತಿಗಳು ಸೀನುವದರಿಂದ, ಕೆಮ್ಮುವದರಿಂದ, ಗಾಳಿಯ ಮೂಲಕ ರೋಗಾಣುಗಳು ಹೊರಗಡೆ ಬಂದು ಆರೋಗ್ಯವಂತ ಮನುಷ್ಯರಿಗೆ ಉಸಿರಾಟದ ಮೂಲಕ ಹರಡುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಪುಣ್ಯದ ದಿನದ ಅಂಗವಾಗಿ ಪ್ರತಿ ವರ್ಷ ಜನೇವರಿ-೩೦ ರಂದು ರಾಷ್ಟ್ರೀಯ ಕುಷ್ಠರೋಗ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ: ೩೦-೦೧-೨೦೨೪ ರಿಂದ ೧೩-೦೨-೨೦೨೪ರ ವರೆಗೆ ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ ಕಾರ್ಯಕ್ರಮವನ್ನು ಜಿಲ್ಲೆಯಲ್ಲಿ ಹಮ್ಮಿಕೊಂಡು ಜನ ಸಮಾನ್ಯರಲ್ಲಿ ತಿಳುವಳಿಕೆಯನ್ನು ನೀಡಲಾಗುತ್ತದೆ ಎಂದು ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ|| ಅರ್ಚನಾ ಕುಲಕರ್ಣಿ ಹೇಳಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ॥ ಸಂಪತ್ತ ಗುಣಾರಿ ರವರು ಮಾತನಾಡಿ, ೧೮೭೩ರಲ್ಲಿ ನಾರ್ವೇ ದೇಶದ ವಿಜ್ಞಾನಿ ಡಾ|| ಹ್ಯಾನ್ಸನ್ ಎಂಬುವರು ಮೈಕೋ ಬ್ಯಾಕ್ಕೇರಿಯಂ ಲೆಪ್ರೇ ಎನ್ನುವ ರೋಗಾಣುವಿಂದ ಕುಷ್ಠರೋಗ ಬರುತ್ತದೆ ಎಂದು ಕಂಡು ಹಿಡಿದರು. ಅಂದಿನಿಂದ ಈ ರೋಗಕ್ಕೆ ಹ್ಯಾನ್ಸನ್ ಡಿಸೀಸ್ ಎಂದು ಕರೆಯುತ್ತಾರೆ. ಒಟ್ಟಾಗಿ ನಾವು ಕುಷ್ಠರೋಗದ ಬಗ್ಗೆ ಅರಿವು ಮೂಡಿಸೋಣ, ತಪ್ಪು ಕಲ್ಪನೆಗಳನ್ನು ಹೋಗಲಾಡಿಸೋಣ ಮತ್ತು ಕುಷ್ಠರೋಗದಿಂದ ಯಾರೂ ಬಾಧಿತರಾಗದಂತೆ ನೋಡಿಕೊಳ್ಳೋಣ ಎಂದು ಹೇಳಿದರು.
ಜಿಲ್ಲಾ ಆರೋಗ್ಯ ಶೀಕ್ಷಣಾಧಿಕಾರಿ ಜಿ ಎಮ್ ಕೊಲೂರ ರವರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಕುಷ್ಠರೋಗ ಪ್ರತಿಜ್ಞಾ ವಿಧಿಯನ್ನು ಭೋಧಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಅಧಿಕಾರಿಗಳಾದ ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ|| ಕೆ.ಡಿ ಗುಂಡಬಾವಡಿ, ಜಿಲ್ಲಾ ಮಲೇರಿಯಾ ಅಧಿಕಾರಿಗಳಾದ ಡಾ॥ ಜಾನ್ ಕಟವಟೆ, ಸಹಾಯಕ ಆಡಳಿತಾಧಿಕಾರಿಗಳು ಹೇಮಂತ ಕುಲಕರ್ಣಿ, ತಾಲೂಕಾ ಆರೋಗ್ಯ ಅಧಿಕಾರಿಗಳು ಬ.ಬಾಗೇವಾಡಿ ಡಾ|| ಕವಿತಾ ದೊಡಮನಿ, ತಾಲೂಕಾ ಆರೋಗ್ಯ ಅಧಿಕಾರಿಗಳು ವಿಜಯಪುರ ಡಾ|| ಪರಸುರಾಮ ಹಿಟ್ನಳ್ಳಿ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಬೆಳಗಾವಿ ಸುರೇಶ ಹೊಸಮನಿ, ಜಿಲ್ಲಾ ಮೇಲ್ವಿಚಾರಣಾಧಿಕಾರಿಗಳು ಮೋತಿಲಾಲ ಲಮಾಣಿ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳು ಶ್ರೀಮತಿ ರೇಖಾ ದಶವಂತ, ಆರೋಗ್ಯ ಇಲಾಖೆಯ ಸಿಬ್ಬಂದಿವರ್ಗದವರು, ನರ್ಸಿಂಗ್ ಕಾಲೇಜಿನ ಭೋದಕ ಸಿಬ್ಬಂದಿವರ್ಗ ಮತ್ತು ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ಕುಷ್ಠರೋಗದ ಲಕ್ಷಣಗಳು
“ಕುಷ್ಠರೋಗದ ಲಕ್ಷಣಗಳೆಂದರೆ, ಸ್ಪರ್ಶ ಜ್ಞಾನವಿಲ್ಲದ ತಿಳಿ-ಬಿಳಿ ತಾಮ್ರ ವರ್ಣದ ಕಲೆಗಳು ಚರ್ಮದ ಮೇಲೆ ಕಾಣಿಸಿಕೊಳ್ಳುತ್ತವೆ. ಅಲ್ಲದೆ ಎಣ್ಣೆ ಸವರಿಸಿದಂತ ಹೊಳೆಯುವ ಚರ್ಮ, ದೇಹದ ಮೇಲಿನ ಗಂಟುಗಳು, ಕಣ್ಣಿನ ರೆಪ್ಪಗಳನ್ನು ಮುಚ್ಚವಲ್ಲಿ ತೊಂದರೆ, ಕೈ ಅಥವಾ ಕಾಲುಗಳಲ್ಲಿನ ಗಾಯ ಬಹುದಿನದವರೆಗೆ ವಾಸಿಯಾಗದೇ ಇರುವದು, ಕೈ ಅಥವಾ ಕಾಲುಗಳ ಬೆರಳುಗಳು ಮಡಚಿಕೊಂಡಿರುವದು, ನಡೆಯುವಾಗ ಕಾಲು ಎಳೆಯುವದು, ಕೈ ಅಥವಾ ಕಾಲುಗಳಲ್ಲಿ ಜುಮ್ಮೆನುಸುವಿಕೆ ಅಥವಾ ಮರಗಟ್ಟುವದು, ಕೈಯಿಂದ ವಸ್ತುಗಳು ಹಿಡಿಯಲು ಹಾಗೂ ಪಾದರಕ್ಷೆ ತೊಡುವಲ್ಲಿ ಬಲಹೀನತೆ ಇತ್ಯಾದಿ ಲಕ್ಷಣಗಳಿದ್ದವರು ಶಂಕಿತ ಕುಷ್ಠರೋಗವಿರಬಹುದು. ಹತ್ತಿರದ ಎಲ್ಲ ಸರಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸಿ ಉಚಿತ ತಪಾಸಣೆ ಮತ್ತು ಚಿಕಿತ್ಸೆಯನ್ನು ಪಡೆದುಕೊಳ್ಳಬಹುದು.”
– ಡಾ॥ ಸಂಪತ್ ಗುಣಾರಿ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ವಿಜಯಪುರ