ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ನಗರದಲ್ಲಿ ಇತ್ತೀಚೆಗೆ ಮನೆಗಳ್ಳತನ, ಸುಲಿಗೆ ಪ್ರಕರಣಗಳು ಮೀತಿ ಮೀರಿದ್ದು, ಇದರಿಂದ ಜನರು ಭಯದಲ್ಲಿ ದಿನ ಕಳೆಯುಂತ ಸ್ಥಿತಿ ಬಂದಿದೆ. ಅದು ಹೋಗಲಾಡಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜೈನಾಪುರ ಪುನರ್ವಸತಿ ಕೇಂದ್ರದಲ್ಲಿ ಮನೆಗೆ ನುಗ್ಗಿದ್ದ ದರೋಡೆಕೋರರು ತಡೆಯಲು ಬಂದ ಮನೆಯ ಮಾಲೀಕನಿಗೆ ಚಾಕುವಿನಿಂದ ಇರಿದು ಗಂಭೀರವಾಗಿ ಹಲ್ಲೆ ಮಾಡಿರುವ ಘಟನೆಯಿಂದ ಜನರಲ್ಲಿ ಭಯ ಸೃಷ್ಟಿ ಆಗಿದೆ. ಅನೇಕ ಬಡಾವಣೆ, ಕಾಲೊನಿಗಳಲ್ಲಿ ಮಧ್ಯರಾತ್ರಿ ನಾಲ್ಕೈದು ಜನರ ತಂಡ ಕಟ್ಟಿಕೊಂಡು ದರೋಡೆಕೋರರು ಓಡಾಡುತ್ತಿದ್ದಾರೆ ಎಂದು ಅನೇಕರು ದೂರು ನೀಡಿದ್ದಾರೆ.
ಕೊಲೆ, ಸುಲಿಗೆ, ಕಳ್ಳತನದ ಘಟನೆಗಳಿಂದ ನಗರದಲ್ಲಿ ಮಹಿಳೆಯರು, ಮಕ್ಕಳು, ವೃದ್ಧರು ಭಯಬೀತರಾಗಿದ್ದಾರೆ. ಭಯದಲ್ಲಿರುವ ಸಾರ್ವಜನಿಕರನ್ನು ಭಯ ಮುಕ್ತಗೊಳಿಸುವಂತೆ ಮಾಡುವುದು, ರಕ್ಷಣೆ ನೀಡುವುದು ಪೊಲೀಸ್ ಇಲಾಖೆಯ ಕರ್ತವ್ಯ. ನಗರದ ಎಲ್ಲ ಭಾಗಗಳಲ್ಲಿ ಹಾಗೂ ವಿಶೇಷವಾಗಿ ನಗರ ಹೊರವಲಯದಲ್ಲಿ ಹೊಸದಾಗಿ ಅಭಿವೃದ್ಧಿಗೊಂಡಿರುವ ಬಡಾವಣೆ, ಕಾಲೊನಿಗಳಲ್ಲಿ ಪೊಲೀಸ್ ಬೀಟ್ ನಿಯೋಜಿಸಿ, ರಾತ್ರಿ ಎರಡ್ಮೂರು ಬಾರಿ ಸಂಚರಿಸುವಂತೆ ಕ್ರಮ ಕೈಗೊಳ್ಳಬೇಕು.
ಕಾನೂನು ಕೈಗೆತ್ತಿಕೊಳ್ಳುವವರಿಗೆ ಹಾಗೂ ದರೋಡೆಕೋರರಿಗೆ ಭೀತಿ ಮೂಡಿಸುವ ಕೆಲಸವಾಗಬೇಕು. ಕೇವಲ ಪ್ರಕರಣ ದಾಖಲು ಮಾಡಿದರೆ ಸಾಲದು, ಅಗತ್ಯವಿದ್ದಲ್ಲಿ ಆಯುಧಗಳ ಮೂಲಕವೂ ಉತ್ತರಿಸಬೇಕು. ಆಗ ತಪ್ಪು ಮಾಡುವವರಿಗೆ ಎಚ್ಚರಿಕೆ ಆಗಲಿದೆ. ಜೊತೆಗೆ ಭಯದಲ್ಲಿರುವ ಜನರಿಗೆ ಧೈರ್ಯ ಬರಲಿದೆ. ಹೀಗಾಗಿ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು.
ಕಳ್ಳರು, ದರೋಡೆಕೋರರ ಮೇಲೆ ನಿಗಾ ಇಡಲು ಸಿಸಿ ಕ್ಯಾಮೆರಾಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂಬುದರ ಬಗ್ಗೆ ಪೊಲೀಸ್ ಇಲಾಖೆ ಗಮನಹರಿಸಿ, ಹಾಳಾಗಿದ್ದರೆ ತಕ್ಷಣ ಸರಿಪಡಿಸಬೇಕು. ಇನ್ನೂ ಕೆಲಕಡೆ ಸಿಸಿ ಕ್ಯಾಮೆರಾಗಳ ಅಗತ್ಯವಿದ್ದರೆ, ಅಳವಡಿಕೆ ಮಾಡಬೇಕು. ಅದೇ ರೀತಿ ಮಹಾನಗರ ಪಾಲಿಕೆಯವರು ಎಲ್ಲ ಪ್ರದೇಶಗಳಲ್ಲಿ ಬೀದಿ ದೀಪಗಳು ಬೆಳಗುವಂತೆ ನೋಡಿಕೊಳ್ಳಬೇಕು. ಸಮಸ್ಯೆ ಇದ್ದರೆ ತಕ್ಷಣ ದುರಸ್ತಿ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

