ಜತ್ ಶಾಸಕ ವಿಕ್ರಮದಾದಾ ಸಾವಂತರಿಂದ ಎಂ.ಬಿ.ಪಾಟೀಲ ಪರ ಮತಯಾಚನೆ
ವಿಜಯಪುರ: ನಮಗೆ ರೈಲು ಬಿಡುವವರು ಬೇಡ, ನೀರು ಕೊಡುವವರು ಬೇಕು ಎಂದು ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಯ ಜತ್ ಶಾಸಕ ವಿಕ್ರಮದಾದಾ ಸಾವಂತ ಹೇಳಿದ್ದಾರೆ.
ತಿಕೋಟಾ ತಾಲೂಕಿನ ಬಾಬಾನಗರ ಮತ್ತು ಹೊನವಾಡ ಗ್ರಾಮಗಳಲ್ಲಿ ಕೆ.ಪಿ.ಸಿ.ಸಿ. ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಪರ ಮತಯಾಚಿಸಿ ಅವರು ಮಾತನಾಡಿದರು.
ಮಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್ ಇತ್ತೀಚೆಗೆ ನೀಡಿದ ಹೇಳಿಕೆ ಬಗ್ಗೆ ಅವರು ಖಾರವಾಗಿ ಪ್ರತಿಕ್ರಿಯೆ ನೀಡಿದರು. ತುಬಚಿ-ಬಬಲೇಶ್ವರ ಏತ ನೀರಾವರಿ ಜನಕ ಮತ್ತು ಆಧುನಿಕ ಭಗೀರಥ ಎಂ. ಬಿ. ಪಾಟೀಲರು ಹುಲ್ಲು ಕಡ್ಡಿಯೂ ಬೆಳೆಯದ ಬರಡು ಭೂಮಿಯಲ್ಲಿ ಬಂಗಾರದ ಬೆಳೆ ಬೆಳೆಯಲು ಕಾರಣರಾಗಿದ್ದಾರೆ. ಜನನಾಯಕ ಹೇಗೆ ಇರಬೇಕು ಎಂಬುದಕ್ಕೆ ಎಂ. ಬಿ. ಪಾಟೀಲರು ಮಾದರಿಯಾಗಿದ್ದಾರೆ. ಕರ್ನಾಟಕವಷ್ಟೇ ಅಲ್ಲ ಮಹಾರಾಷ್ಟ್ರದ ಜತ ತಾಲೂಕಿನ ಗಡಿ ಗ್ರಾಮಗಳ ಜನ ಜಾನುವಾರುಗಳು ಮತ್ತು ಕೃಷಿ ಭೂಮಿಗೂ ನೀರು ಕೊಡುವ ಮೂಲಕ ನೆರವಾಗಿದ್ದಾರೆ ಎಂದು ಹೇಳಿದರು.
ದಶಕಗಳೇ ಕಳೆದರೂ ಪೂರ್ಣವಾಗದ ನೀರಾವರಿ ಯೋಜನೆಗಳನ್ನು ಎಂ. ಬಿ. ಪಾಟೀಲರು ಐದೇ ವರ್ಷಗಳಲ್ಲಿ ಪೂರ್ಣಗೊಳಿಸಿ ಕುಡಿಯಲು ನೀರಿಗಾಗಿ ಪರದಾಡುತ್ತಿದ್ದ ಜನರಿಗೆ ತೋಟಗಾರಿಕೆ ಬೆಳೆ ಬೆಳೆಯಲು ನೆರವಾಗಿದ್ದಾರೆ. ಬಾರಾಮತಿಯಲ್ಲಿ ಶರದ ಪವಾರ ಮಾಡಿರುವ ಮಾದರಿ ಕೆಲಸಗಳನ್ನು ವಿಜಯಪುರ ಜಿಲ್ಲೆ ಮತ್ತು ಬಬಲೇಶ್ವರ ಮತಕ್ಷೇತ್ರದಲ್ಲಿ ಮಾಡಿದ್ದಾರೆ. ಇಂಥ ಜನ ನಾಯಕರನ್ನು ಪ್ರಚಂಡ ಬಹುಮತದಿಂದ ಆಯ್ಕೆ ಮಾಡಬೇಕು ಈ ಮೂಲಕ ಜಾತಿವಾದಿ ರಾಜಕಾರಣಿಗಳಿಗೆ ತಕ್ಕ ಉತ್ತರ ಕೊಡಬೇಕು. ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದ್ದು, ಸರಕಾರದಲ್ಲಿ ಉನ್ನತ ಸ್ಥಾನಕ್ಕೆ ಏರಲಿರುವ ಎಂ. ಬಿ. ಪಾಟೀಲರಿಗೆ ಮತ ಹಾಕಿ ನಾಡನ್ನು ಸುಜಲಾಂ ಸುಫಲಾಂ ಮಾಡಲು ಬೆನ್ನೆಲಬಾಗಿ ನಿಲ್ಲಬೇಕು ಎಂದು ಅವರು ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ರೈತರು ಕಷ್ಟಪಟ್ಟು ಬ್ಯಾಂಕಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಹಣವನ್ನು ಶ್ರೀಮಂತ ಉದ್ಯಮಿಗಳಿಗೆ ಸಾಲ ನೀಡಿ, ನಂತರ ಅವರ ಸಾಲ ಮನ್ನಾ ಮಾಡಿ ರೈತರಿಗೆ ಅನ್ಯಾಯ ಮಾಡಿದೆ. ಕಾಂಗ್ರೆಸ್ ಜನರಿಗಾಗಿ ಮಾಡಿರುವ ಕೆಲಸಗಳು ಮತ್ತು ಬಿಜೆಪಿ ಮತದಾರರಿಗೆ ಮಾಡಿರುವ ಮೋಸಗಳ ಕುರಿತು ಸಾರ್ವಜನಿಕರು ಜಾಗೃತರಾಗಿರಬೇಕು ಎಂದು ವಿಕ್ರಮದಾದಾ ಸಾವಂತ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರೈತಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ. ರೈತರು ಕಷ್ಟಪಟ್ಟು ಬ್ಯಾಂಕಿನಲ್ಲಿ ಸಂಗ್ರಹಿಸಿ ಇಟ್ಟಿದ್ದ ಹಣವನ್ನು ಶ್ರೀಮಂತ ಉದ್ಯಮಿಗಳಿಗೆ ಸಾಲ ನೀಡಿ, ನಂತರ ಅವರ ಸಾಲ ಮನ್ನಾ ಮಾಡಿ ರೈತರಿಗೆ ಅನ್ಯಾಯ ಮಾಡಿದೆ.
ಹೊನವಾಡ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ, ಮೂರ್ನಾಲ್ಕು ಸರಕಾರಗಳು ಬಂದರೂ ನೀರಾವರಿ ಯೋಜನೆಗಳು ಮುಗಿಯುವುದಿಲ್ಲ. ಆದರೆ, ಎಂ. ಬಿ. ಪಾಟೀಲರು ಸಿದ್ದರಾಮಯ್ಯನವರ ನೇತೃತ್ವದ ಸರಕಾರದಲ್ಲಿ ಕೇವಲ ಐದು ವರ್ಷಗಳಲ್ಲಿ ನೀರಾವರಿ ಯೋಜನೆ ರೂಪಿಸಿ ಕಾಮಗಾರಿ ಪೂರ್ಣ ಮಾಡಿ ಮಕ್ಕಳು, ಮೊಮ್ಮಕ್ಕಳು ನೆಮ್ಮದಿಯಿಂದ ಇರುವ ಕೆಲಸ ಮಾಡಿದ್ದಾರೆ. ಸೂರ್ಯ- ಚಂದ್ರರಿರುವ ತನಕ ನೀರು ಸಿಗಲಿದೆ. ಇನ್ನುಳಿದ ಯೋಜನೆಗಳನ್ನು ಪೂರ್ಣಗೊಳಿಸಲು ಎಂ. ಬಿ. ಪಾಟೀಲರನ್ನು ತಾವೆಲ್ಲರೂ ಮತ್ತೆ ಗೆಲ್ಲಿಸಬೇಕಿದೆ. ನಿಮ್ಮ ಸಲುವಾಗಿ ದುಡಿದಿರುವ, ದುಡಿಯುತ್ತಿರುವ ಮತ್ತು ದುಡಿಯಲಿರುವ ಎಂ. ಬಿ. ಪಾಟೀಲರಿಗೆ ತಾವೆಲ್ಲರೂ ಮತ ಹಾಕಬೇಕು ಎಂದು ಅವರು ಮನವಿ ಹೇಳಿದರು.
ಜತ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಪ್ಪುಗೌಡ ಬಿರಾದಾರ ಮಾತನಾಡಿ, ಪುಣ್ಯವಮಂತರು ವಿಜಯಪುರ ಜಿಲ್ಲೆಯಲ್ಲಿಯೇ ಜನಿಸುತ್ತಾರೆ. ಶ್ರೀ ಸಿದ್ಧೇಶ್ವರ ಶ್ರೀಗಳ ಆಶಯದಂತೆ ಎಂ. ಬಿ. ಪಾಟೀಲರು ಕೊಟ್ಟಿರುವ ಬೊಗಸೆ ನೀರು ಕರ್ನಾಟವಷ್ಟೇ ಅಲ್ಲ, ಮಹಾರಾಷ್ಟ್ರದ ಜತ ತಾಲೂಕಿನ 42 ಗ್ರಾಮಗಳಿಗೆ ತಲುಪಿದೆ. ಒಂಬತ್ತು ಕೆರೆಗಳು ತುಂಬಿವೆ. ಅಷ್ಟೇ ಅಲ್ಲ, ಅಂತರ್ಜಕ ಕೂಡ ಹೆಚ್ಚಾಗಿ ಬೋರವೆಲ್ ಗಳು ಪುನಶ್ಚೇನತವಾಗಿವೆ. ಆದರೆ, ಮಹಾರಾಷ್ಟ್ರ ಸರಕಾರ ನಮ್ಮ ಭಾಗಕ್ಕೆ ಘೋಷಿಸಿರುವ ಮೈಶಾಳ ನೀರಾವರಿ ಯೋಜನೆ 45 ವರ್ಷ ಕಳೆದ ಆರಂಭವಾಗಿಲ್ಲ. ನಮ್ಮ ಕರ್ನಾಟಕಕ್ಕೆ ಸೇರಿಸಿ ಎಂದು ಹೋರಾಟ ನಡೆಸಿದಾಗ ಮಹಾರಾಷ್ಟ್ರ ಸರಕಾರ ಈಗ ಕೇವಲ ಒಂದಿಷ್ಟು ಹಣ ಮಂಜೂರು ಮಾಡಿದೆ. ಇದಕ್ಕೂ ಎಂ. ಬಿ. ಪಾಟೀಲರೆ ಕಾರಣ. ನಗುತ್ತಾ ಜನರ ಕೆಲಸ ಮಾಡುವ ಎಂ. ಬಿ. ಪಾಟೀಲರನ್ನು ಮಹಾರಾಷ್ಟ್ರದ ಜನರೂ ಮೆಚ್ಚಿದ್ದಾರೆ. ಅವರ ಆಶೀರ್ವಾದದಿಂದ ಜತ ಮತಕ್ಷೇತ್ರದಿಂದ ವಿಕ್ರಮದಾದಾ ಸಾವಂತ ಶಾಸಕರಾಗಿ ಆಯ್ಕೆಯಾಗುವಲ್ಲಿ ಸಂಪೂರ್ಣ ಸಹಕಾರಿಯಾಗಿದೆ. ಎಂ. ಬಿ. ಪಾಟೀಲರಂಥ ನಾಯಕರು ಸಿಕ್ಕಿರುವುದು ಬಸವನಾಡಿನ ಪುಣ್ಯ. ಕೆಲಸ ಮಾಡುವವರು ನಿಜವಾದ ಜನ ನಾಯಕ ಅಳುವವರಲ್ಲ. ಎಲ್ಲರೂ ಎಂ. ಬಿ. ಪಾಟೀಲರಿಗೆ ಬೆಂಬಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯಲ್ಲಾಲಿಂಗ ಹೊನವಾಡ ಮತ್ತು ಉತ್ತಮ ಪಾಟೀಲ, ಮೀರಸಾಬ ಮುಜಾವರು ಮಾತನಾಡಿದರು. ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಈರಣಗೌಡ ರುದ್ರಗೌಡರ, ಪಿ.ಆರ್. ಆಯತವಾಡ, ಕೆ. ಎಂ. ಡೆಂಗನವರ, ಯಲ್ಲಪ್ಪ ಹೊನಕಟ್ಟಿ, ತಮ್ಮಣ್ಣ ಹಂಗರಗಿ, ಸಂತೋಷ ಕೋಲಾರ, ಅಕ್ಕುತಾಯಿ ಧನಗೊಂಡ, ಬಾಬುಲಾಲ ಗೌಂಡಿ, ಅರವಿಂದ ಮಾಲಗಾರ, ವಿಜಯಕುಮಾರ ಹಿರೇಮಠ, ಸಿದ್ದು ಬೆಳಗಾವಿ, ರಾಮಗೊಂಡ ಚಾವರ, ಸಾಬು ಖಂಡೆಕಾರ, ಅಕ್ಬರ ತಿಕೋಟಿ ಮುಂತಾದವರು ಉಪಸ್ಥಿತರಿದ್ದರು.