ವಿಜಯಪುರ: ನಗರದಲ್ಲಿ ಭಾನುವಾರ ಸಂಜೆ ನಡೆದ ಬಣಜಿಗ ಸಮಾಜದ ಮುಖಂಡರ ಸಭೆಯಲ್ಲಿ, ನಗರದ ಅಭಿವೃದ್ಧಿ ಹಾಗೂ ಸುರಕ್ಷತೆಗಾಗಿ ಬಸನಗೌಡ ಪಾಟೀಲ ಯತ್ನಾಳ ಅವರ ಗೆಲುವಿಗಾಗಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು.
ಗೊಂದಲ ಸೃಷ್ಟಿಸಲು ಕೆಲವರು ತಪ್ಪು ಸಂದೇಶ ನೀಡಿ, ಪಂಚಮಸಾಲಿ ಹಾಗೂ ಬಣಜಿಗ ಸಮುದಾಯಗಳ ಮಧ್ಯೆ ಇದ್ದ ಅನ್ಯೋನ್ಯತೆ ಕೆಡಿಸಲು ಯತ್ನಿಸಿದ್ದರು. ಇದರಿಂದ ಆಗುತ್ತಿದ್ದ ಸಮಸ್ಯೆ ತಪ್ಪಿಸಲು ಸಭೆ ನಡೆಸುವ ಮೂಲಕ ಸಮಾಜಕ್ಕೆ ಸಂದೇಶ ನೀಡಲಾಗುತ್ತಿದೆ.
ಬಸನಗೌಡ ಪಾಟೀಲ ಯತ್ನಾಳರು ಎಂದೂ ನಮ್ಮ ಸಮಾಜಕ್ಕೆ ಬೈದಿರುವುದಿಲ್ಲ. ಸಣ್ಣಸಣ್ಣ ಸಮಾಜದಿಂದ ದೊಡ್ಡ ಸಮಾಜಗಳ ಪರವಾಗಿ ವಿಧಾನಸಭೆ ಒಳಗೂ ಹೊರಗೂ ಧ್ವನಿ ಎತ್ತಿ ನ್ಯಾಯ ಕೊಡಿಸಲು ಶ್ರಮಿಸುತ್ತಿರುವ ಅವರು, ಸದಾ ನಮ್ಮ ಸಮದಾಯದ ಜೊತೆಗೆ ಇದ್ದಾರೆ. ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಾರೆ. ನಾವು ಕೂಡ ಅವರ ಬೆಂಬಲವಾಗಿ ಹಿಂದೆಯೂ ಇದ್ದೇವು. ಮುಂದೆಯೂ ಇರುತ್ತೇವೆ. ಆದರೆ, ಕೆಲವೇ ಕೆಲವರು ಕಾಂಗ್ರೆಸ್ ಜೊತೆ ಸೇರಿ ಒಪ್ಪಂದ ಮಾಡಿಕೊಂಡು, ಹೆಸರು ಕೆಡಿಸಲು ಯತ್ನಿಸುತ್ತಿದ್ದಾರೆ. ಇಂತವರ ಮಾತಿಗೆ ಸಮಾಜದ ಯಾರೊಬ್ಬರೂ ಕಿವಿಗೊಡಬಾರದು. ಸದಾ ಕುಟುಂಬದ ಸಂಬಂಧ, ವ್ಯಾಪಾರ ಸಂಬಂಧವಾಗಿ ನಾವೆಲ್ಲರೂ ಒಂದಾಗಿ ಕೆಲಸ ನಿರ್ವಹಿಸುತ್ತಿದ್ದೇವೆ. ಹೀಗಾಗಿ ಸಾಮಾಜಿಕ ಜಾಲತಾಣದ ಮೂಲಕ ದಾರಿ ತಪ್ಪಿಸುವ ಕೆಲ ಕುತಂತ್ರಿಗಳಿಗೆ ಸ್ಪಂದಿಸಬಾರದು. ನಗರದ ಅಭಿವೃದ್ದಿ, ಸುರಕ್ಷತೆ, ಯಾವುದೇ ತೊಂದರೆ ಇಲ್ಲದೆ ವ್ಯಾಪಾರ ನಡೆಸಲು ಬಸನಗೌಡರು ನಗರ ಶಾಸಕರಾಗುವುದು ಅವಶ್ಯವಿದೆ. ಯಾರದೋ ಮಾತು ಕೇಳಿ ತಪ್ಪು ಮಾಡಿದರೆ, ಬೇರೆಯವರ ಮನೆಯ ಎದುರು ಕೈ ಕಟ್ಟಿ ನಿಲ್ಲುವ ದುಸ್ಥಿತಿ ಬರುತ್ತದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿ ನಾವೆಲ್ಲ ಈಗಾಗಲೇ ಬಸನಗೌಡರನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ. ನಮ್ಮ ಸಮಾಜದ ಪ್ರತಿಯೊಬ್ಬರ ಮನೆಗೆ ತೆರಳಿ ಯತ್ನಾಳರ ಪರ ಮತಯಾಚನೆ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಬಣಜಿಗ ಸಮಾಜದ ಮುಖಂಡರಾದ ಸಿದ್ರಾಮಪ್ಪ ಉಪ್ಪಿನ, ಅನೀಲ ಆಣೆಪ್ಪನವರ, ರಾಜಶೇಖರ ತಾಳಿಕೋಟಿ, ಕಾಂತು ಬೋಗಶೆಟ್ಟಿ, ಸದಾನಂದ ಗುಡ್ಡೋಡಗಿ, ಜಯ ತಾಳಿಕೋಟಿ, ಅಪ್ಪು ವಾರದ, ಚಂದು ಇಂಡಿ, ಆನಂದ ಅಕ್ಕಿ, ಅನೀಲ ಧಾರವಾಡಕರ, ಡಾ.ಬಾಗಲಕೋಟ ಸೇರಿದಂತೆ ಹಲವಾರು ಮುಖಂಡರು ಭಾಗವಹಿಸಿ ಮಾತನಾಡಿದರು.