ವಿಜಯಪುರ:
ನನ್ನ ಕೊನೆಯ ಚುನಾವಣೆ ಮತ ಕೊಡಿ ಎಂದು ಅನುಕಂಪದ ಅಲೆಯಲ್ಲಿ ಕಾಂಗ್ರೆಸ್ ನಾಯಕರು ಮತ ಕೇಳುತ್ತಿದ್ದಾರೆ, ಆದರೆ ನಾಡಿನ ಎಲ್ಲ ಜಾತಿ-ಮತ ವರ್ಗಗಳ ಜನರು ಉತ್ಸಾಹದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಲು ನಿರ್ಧರಿಸಿದ್ದಾರೆ. ಹೀಗಾಗಿ ಈ ಬಾರಿ ಬಹುಮತದ ಬಿಜೆಪಿ ಸರ್ಕಾರ ರಚನೆಗೆ ಖಚಿತ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದರು.
ವಿಜಯಪುರದ ಸೈನಿಕ ಶಾಲೆಯಲ್ಲಿ ಶನಿವಾರ ನಡೆದ ಭಾರತೀಯ ಜನತಾ ಪಕ್ಷದ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡು ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು.
ತಮ್ಮ ಭಾಷಣದುದ್ದಕ್ಕೂ ಅವರು ಡಬಲ್ ಇಂಜಿನ್ ಸರ್ಕಾರದ ಯಶಸ್ಸುಗಳನ್ನು ಉಲ್ಲೇಖಿಸಿದರು. ಬಸವಣ್ಣನವರ ಆಶಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಡಬಲ್ ಇಂಜಿನ್ ಸರ್ಕಾರದ ಸಾರ್ಥಕತೆ ಕುರಿತು ಸುದೀರ್ಘವಾಗಿ ವಿವರಿಸಿದರು.
ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ 1 ರೂ. ಅನುದಾನ ಫಲಾನುಭವಿಗೆ ತಲುಪುವ ಹೊತ್ತಿಗೆ 15 ಪೈಸೆಯಾಗಿರುತ್ತದೆ ಎಂದು ಕಾಂಗ್ರೆಸ್ ಪಕ್ಷದ ಪ್ರಧಾನಮಂತ್ರಿಯೊಬ್ಬರು ಗಂಭೀರವಾಗಿ ಹೇಳಿದ್ದರು. ಆದರೆ ಈಗ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗುವ ಸಂಪೂರ್ಣ ಹಣ ಪೂರ್ಣ ಪ್ರಮಾಣದಲ್ಲಿ ಫಲಾನುಭವಿಗೆ ತಲುಪುತ್ತಿದೆ.
ಗರೀಬಿ ಹಟಾವೋ ಹೆಸರಿನಲ್ಲಿ ರೂಪಿಸಿದ ಅನೇಕ ಯೋಜನೆಗಳಿಂದ ಏನೂ ಪ್ರಯೋಜನವಾಗಿಲ್ಲ, ಶೇ.85 ಅನುದಾನ ಭ್ರಷ್ಟಾಚಾರವೆಂದು ಪ್ರಧಾನಮಂತ್ರಿಯೊಬ್ಬರು ಸಾರಿದ್ದರು, ಪಂಚಾಯತನಿAದ ಪಾರ್ಲಿಮೆಂಟ್ವರೆಗೆ ಕಾಂಗ್ರೆಸ್ ಸರ್ಕಾರ ಲೂಟಿಯನ್ನು ತಡೆಗಟ್ಟಲು ಏನೂ ಮಾಡಲಿಲ್ಲ, ಬಡವರ ಕಣ್ಣೀರು ಒರೆಸಲಿಲ್ಲ, ಇಂದಿನ ಪರಿಸ್ಥಿತಿಗೆ ಹೋಲಿಕೆ ಮಾಡಿ ನೋಡಿದಾಗ ಬಡವರ ದೊಡ್ಡ ಪ್ರಮಾಣದ ಹಣವನ್ನು ಕಾಂಗ್ರೆಸ್ ಲೂಟಿ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದರೆ ಇಂದು ಬಿಜೆಪಿ ಸರ್ಕಾರದ ಸಾರಥ್ಯದಲ್ಲಿ 29 ಲಕ್ಷ ಕೋಟಿ ರೂ. ಹಣವನ್ನು ಬಿಪಿಟಿ ಮೂಲಕ ಯೋಜನಾ ಫಲಾನುಭವಿಗಳಿಗೆ ಅವರ ಖಾತೆಗಳಿಗೆ ವರ್ಗಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ ಬರುವ 100 ರೂ. ಅನುದಾನ ಪೂರ್ಣಪ್ರಮಾಣದಲ್ಲಿ 100 ರೂ. ಫಲಾನುಭವಿಗಳಿಗೆ ದೊರಕುತ್ತಿದೆ ಎಂದರು.
ಕಾAಗ್ರೆಸ್ ಈ ಕಾರ್ಯ ಮಾಡಿದ್ದರೆ ಬಡವರ ಹಕ್ಕಿನ ಶೇ.85 ರಷ್ಟು ಹಣ ಗಾಯಬ್ ಆಗುತ್ತಿತ್ತು. ಆದರೆ ಡಬಲ್ ಇಂಜಿನ್ ಸರ್ಕಾರ ಇದೇ ಹಣವನ್ನು ಬಳಸಿ ಬಡವರಿಗೆ ಪಡಿತರ ನೀಡುತ್ತಿದೆ,
ಕಾಂಗ್ರೆಸ್ ಸರ್ಕಾರ ಅನ್ನದಾತನ ಹೆಸರಿನಲ್ಲಿ ಘೋಷಣೆ ಕೂಗುತ್ತಿತ್ತು, ಆದರೆ ಬಡ ರೈತರಿಗೆ ಯಾವ ಪ್ರಯೋಜನವನ್ನೂ ದೊರಕಿಸಿಲ್ಲ, ಕಿಸಾನ್ ಸಮ್ಮಾನ ಯೋಜನೆ 1.5 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ 600 ಕೋಟಿ ರೂ. ಕಾಂಗ್ರೆಸ್ ಸರ್ಕಾರ ಇದ್ದಿದ್ದರೆ ಈ ಹಣ ಯಾವತ್ತೂ ನಿಮಗೆ ಸೇರುತ್ತಿರಲಿಲ್ಲ ಎಂದು ಗುಡುಗಿದರು.
ಅನ್ನದಾತನ ಸಮಸ್ಯೆಯನ್ನು ಕಾಂಗ್ರೆಸ್ ಅರ್ಥ ಮಾಡಿಕೊಳ್ಳಲಿಲ್ಲ. ಆದರೆ ಬಿಜೆಪಿಗೆ ಅನ್ನದಾತನ ಸಮಸ್ಯೆಗಳ ಬಗ್ಗೆ ಅರಿವಿದೆ, ವಿಜಯಪುರ ಪಂಚನದಿಗಳ ಬೀಡಾಗಿದ್ದರೂ ನೀರಾವರಿಗೆ ಎಷ್ಟು ದೊಡ್ಡ ಪ್ರಯತ್ನಗಳು ನಡೆಯಬೇಕಿದ್ದವೋ ಅಷ್ಟು ಪ್ರಯತ್ನ ಹಿಂದೆ ನಡೆದಿಲ್ಲ. ಆದರೀಗ ಅನೇಕ ನೀರಾವರಿ ಯೋಜನೆಗಳ, ವಿಮಾನ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಯುಕೆಪಿ ಮೂರನೇಯ ಹಂತದ ಕೃಷ್ಣಾ ಕೊಳ್ಳದ ನೀರಾವರಿ ಯೋಜನೆ, ನಾರಾಯಣಪುರ ಜಲಾಶಯಕ್ಕೆ ಆಧುನಿಕ ಸ್ಪರ್ಶ, ಮುಳವಾಡ ಲಿಫ್ಟ್ ಇರಿಗೇಷನ್, ಹೊರ್ತಿ-ರೇವಣಸಿದ್ದೇಶ್ವರ ಯೋಜನೆ ಹೀಗೆ ಡಬಲ್ ಇಂಜಿನ್ ಸರ್ಕಾರ ಮಾಡಿದ ಸಾಧನೆ ದೊಡ್ಡದಿದೆ ಎಂದರು.
ಕಾAಗ್ರೆಸ್ ಸರ್ಕಾರದ ಅಲಕ್ಷ್ಯದಿಂದ ತೊಂದರೆ ಎದುರಿಸಿದ್ದು ಮಹಿಳೆಯರು. ಮಹಿಳೆಯರ ಸುರಕ್ಷತೆ, ಉದ್ಯೋಗದ ಬಗ್ಗೆ ಅದು ಚಿಂತೆಯೇ ಮಾಡ್ಲಿಲ್ಲ. ಡಬಲ್ ಇಂಜನ್ ಸರ್ಕಾರ ಆಯಷ್ಮಾನ್ ಕಾರ್ಡ್ ಮೂಲಕ ಆರೋಗ್ಯ ಯೋಜನೆ ಜಾರಿ ಮಾಡಿ ಮಹಿಳೆಯರಿಗೆ ಆರೋಗ್ಯದ ಅಭಯ ನೀಡಿದೆ ಎಂದರು.
ಕಾಯಕ, ದಾಸೋಹದ ಮಾರ್ಗವನ್ನು ಅಣ್ಣ ಬಸವಣ್ಣ ತೋರಿದ್ದಾರೆ. ಬಿಜೆಪಿಯ ವಿಚಾರಧಾರೆಯಾಗಿರುವ ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ ಎನ್ನುವ ಉಕ್ತಿಗೆ ಬಸವಣ್ಣನವರ ಆಶಯವೇ ಆಧಾರ, ಅಣ್ಣ ಬಸವಣ್ಣನವರ ಕಾಯಕ-ದಾಸೋಹದ ಪ್ರಭಾವ ಬಿಜೆಪಿ ಎಲ್ಲ ಯೋಜನೆಗಳಲ್ಲಿ ಕಾಣಿಸಿಗುತ್ತಿದೆ, ಬಿಜೆಪಿ ಸರ್ಕಾರ ಎಲ್ಲ ವರ್ಗಗಳ ಶ್ರೇಯೋಭಿವೃದ್ಧಿಗೆ ಪ್ರಾತಿನಿಧ್ಯ, ಆರ್ಥಿಕ-ಸಾಮಾಜಿಕ ಸುರಕ್ಷೆ ನೀಡಿದೆ,
9 ಲಕ್ಷ ಕುಟುಂಬಗಳಿಗೆ ಅನೇಕ ಪೀಳಿಗೆಯ ನಂತರ ಪಕ್ಕಾ ಮನೆಯಲ್ಲಿ ಪಾದಾರ್ಪಣೆ ಮಾಡಿದ್ದಾರೆ, ದಲಿತ, ಶೋಷಿತರು, ಹಿಂದುಳಿದ ವರ್ಗಗಳ ಕುಟುಂಬದವರೇ ಹೆಚ್ಚು ಎಂದು ಮೋದಿ ಉಲ್ಲೇಖಿಸಿದರು.

ಸಂಸದ ರಮೇಶ ಜಿಗಜಿಣಗಿ, ಬಾಗಲಕೋಟೆ ಸಂಸದ ಪಿ.ಸಿ. ಗದ್ದಿಗೌಡರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್. ಪಾಟೀಲ, ಶಾಸಕ ಹಾಗೂ ಮುದ್ದೇಬಿಹಾಳ ಬಿಜೆಪಿ ಅಭ್ಯರ್ಥಿ ಎ.ಎಸ್. ಪಾಟೀಲ ನಡಹಳ್ಳಿ, ಶಾಸಕ ಹಾಗೂ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮನಗೌಡ ಪಾಟೀಲ ಸಾಸನೂರ, ಬಬಲೇಶ್ವರ ಅಭ್ಯರ್ಥಿ ವಿಜುಗೌಡ ಪಾಟೀಲ, ಇಂಡಿ ಅಭ್ಯರ್ಥಿ ಕಾಸುಗೌಡ ಬಿರಾದಾರ, ನಾಗಠಾಣ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಂಜೀವ ಐಹೊಳಿ, ಸಿಂದಗಿ ಶಾಸಕ ಹಾಗೂ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ, ಬಸವನ ಬಾಗೇವಾಡಿ ಕ್ಷೇತ್ರದ ಅಭ್ಯರ್ಥಿ ಎಸ್.ಕೆ ಬೆಳ್ಳುಬ್ಬಿ ಜಮಖಂಡಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಜಗದೀಶ ಗುಡಗಂಟಿ, ವಿಧಾನ ಪರಿಷತ್ ಸದಸ್ಯರಾದ ಹಣಮಂತ ನಿರಾಣಿ, ಪಿ.ಎಚ್. ಪೂಜಾರ ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಮನೆ-ಮನೆಗೆ ಹೋಗಿ ನನ್ನ ನಮಸ್ಕಾರ ತಿಳಿಸಿ
ಬಿಜೆಪಿ ಕಾರ್ಯಕರ್ತರು ನನ್ನ ಈ ಕೆಲಸ ಮಾಡಬೇಕು, ನೀವು ನನ್ನನ್ನು ಕರೆದಿದ್ದೀರಿ, ನಾನು ಬಂದಿದ್ದೇನೆ, ಒಂದು ಸಣ್ಣ ಕೆಲಸವಿದೆ, ಅದನ್ನು ನೀವು ಮಾಡಬೇಕು, ಮಾಡುತ್ತೀರಾ ಎಂದು ನೆರೆದ ಜನಸ್ತೋಮಕ್ಕೆ ಪ್ರಧಾನಿ ನರೇಂದ್ರ ಮೋದಿ ಆತ್ಮೀಯತೆಯಿಂದ ಪ್ರಶ್ನಿಸಿದರು.
ನನ್ನ ಕೆಲಸವನ್ನು ನೀವು ಮಾಡಲೇಬೇಕು, ಆ ಕೆಲಸ ಏನೆಂದರೆ ಪ್ರತಿ ಮನೆಗೆ ಹೋಗಿ ನಮಸ್ಕಾರ ಮಾಡಿ, ಮೋದಿ ನಿಮ್ಮ ಸೇವಕ ದೆಹಲಿಯಿಂದ ವಿಜಯಪುರಕ್ಕೆ ಬಂದಿದ್ದರು, ಅವರ ನಮಸ್ಕಾರವನ್ನು ನಿಮಗೆ ತಿಳಿಸಿದ್ದಾರೆ ಎಂದು ಹೇಳಿ, ಮೋದಿ ಅವರಿಗೆ ನಿಮ್ಮ ಆಶೀರ್ವಾದ ಬೇಕಾಗಿದೆ ಅಂತಾ ಹೇಳಿ ಎಂದು ಮೋದಿ ಕೋರಿದಾಗ ಕಾರ್ಯಕರ್ತರು ಉತ್ಸಾಹಭರಿತವಾಗಿ ಕೈಎತ್ತುವ ಮೂಲಕ ಸಮ್ಮತಿ ಸೂಚಿಸಿದರು.
ಕನ್ನಡದಲ್ಲಿ ಮೋದಿ ಮಾತು
ಕನ್ನಡದಲ್ಲಿ ಮಾತುಗಳನ್ನಾರಂಭಿಸಿದ ಪ್ರಧಾನಿ ಮೋದಿ ಅವರು, `ಪಂಚನದಿಗಳ ನಾಡು ವಿಜಯಪುರದ ಎಲ್ಲ ಜನತೆಗೆ ನಮಸ್ಕಾರಗಳು…ಎಂದು ಕನ್ನಡದಲ್ಲಿಯೇ ಉಲ್ಲೇಖಿಸಿದರು. ಅದೇ ತೆರನಾಗಿ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ…ಎನ್ನುವ ಸಾಲುಗಳನ್ನು ಕನ್ನಡದಲ್ಲಿ ಹಲವಾರು ಬಾರಿ ಉಚ್ಚರಿಸಿದರು. ಮೋದಿ ಅವರು ಕನ್ನಡದಲ್ಲಿ ಸಾಲು ಉಚ್ಛರಿಸಿದಾಗ ಜನಸಾಗರದ ಹರ್ಷೋದ್ಘಾರ ಮುಗಿಲು ಮುಟ್ಟಿತು.
ಮೋದಿ ಎಂದರೆ ರಕ್ಷಣೆ
ಹಿಂದಿಯಲ್ಲಿ ತಮ್ಮ ಸಂದೇಶ ನೀಡಿದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು, ದೇಶಕ್ಕಾಗಿ ನಾವು ಪ್ರಾಣ ತ್ಯಾಗ ಮಾಡಲು ಸಿದ್ಧ, ನಾವು ಭಾರತದ ಅಪಮಾನ ಯಾವ ಕಾಲಕ್ಕೂ ಸಹಿಸುವುದಿಲ್ಲ, ಪ್ರತಿಪಕ್ಷ ನಾಯಕರು ಕೆಟ್ಟ ನಾಲಿಗೆಯಿಂದ ನಮ್ಮ ನಾಯಕರನ್ನು ಟೀಕಿಸಿದರೆ ಅದೇ ಪರಿಭಾಷೆಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದರು.
ನೇತಾಜಿ ಸುಭಾಸಚಂದ್ರ ಭೋಸ್ ಅವರ ಅಪರಾವತಾರರಾಗಿರುವ ನರೇಂದ್ರ ಮೋದಿ ಅವರ ಸಾರಥ್ಯದಲ್ಲಿ ಭಾರತ ವಿಶ್ವಗುರುವಾಗಿ ಮುನ್ನಡೆಯುತ್ತಿದೆ. ಮೋದಿ ಎಂದರೆ ದೇಶ, ಮೋದಿ ಎಂದರೆ ರಕ್ಷಣೆ, ಮೋದಿ ಎಂದರೆ ಹಿಂದುತ್ವ, ಮೋದಿ ಎಂದರೆ ಭ್ರಷ್ಟರಿಗೆ ಸಿಂಹ ಸ್ವಪ್ನ, ಮೋದಿ ಎಂದರೆ ಪ್ರಾಮಾಣಿಕತೆ, ಮೋದಿ ಎಂದರೆ ಸಂಸ್ಕೃತಿ, ಮೋದಿ ಎಂದರೆ ದೂರದೃಷ್ಟಿ, ಮೋದಿ ಎಂದರೆ ಅಜಾತಶತ್ರು ಎಂದು ಯತ್ನಾಳ ಉಲ್ಲೇಖಿಸಿದರು.
ಅಂತಿಮ ಅಭಿವಂದನ ಪತ್ರ ಸಲ್ಲಿಕೆ
ಸಹಸ್ರಮಾನದ ಸಂತ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಅಂತಿಮ ಅಭಿವಂದನ ಪತ್ರದ ಭಾವಚಿತ್ರವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಜಿಲ್ಲೆಯ ಮುಖಂಡರಿಂದ ಸಮರ್ಪಿಸಲಾಯಿತು.
ಸೈನಿಕ ಶಾಲೆಯಲ್ಲಿ ನೆರೆದಿದ್ದ ಸಾವಿರಾರು ಕಾರ್ಯಕರ್ತರು ಮೋದಿ ಆಗಮಿಸುತ್ತಿದ್ದಂತೆ ಮೋದಿ ಮೋದಿ ಎಂಬ ಘೋಷಣೆಯನ್ನು ಮೊಳಗಿಸಿದರು. ಈ ಘೋಷಣೆಯ ಉತ್ಸಾಹ ಮುಗಿಲು ಮುಟ್ಟಿತ್ತು.