ಉದಯರಶ್ಮಿ ದಿನಪತ್ರಿಕೆ
ಇಂಡಿ: ರಾಜ್ಯ ರೈತ ಸಂಘಟನೆಯ ಹಾಗೂ ಹಸಿರು ಸೇನೆಯ ಅಧ್ಯಕ್ಷ ಚಂದ್ರಶೇಖರ್ ಕೋಡಿಹಳ್ಳಿ ಅವರು ಇಂಡಿ ತಾಲೂಕಿನ ತೇನ್ನಿಹಳ್ಳಿ ಗ್ರಾಮಕ್ಕೆ ಮಂಗಳವಾರ ಭೇಟಿ ನೀಡಿ ಪಹಣಿಯಲ್ಲಿ ವಕ್ಪ್ ಬೋರ್ಡ್ ಹೆಸರು ತೇಲಿಸಿದ ಪ್ರಯುಕ್ತ ಚರ್ಚೆ ನಡೆಸಿದರು.
ಈ ಸಂದರ್ಭದಲ್ಲಿ ಹಲವು ರೈತರು ಮಾತನಾಡಿ, ನಮ್ಮ ಜಮೀನಿನ ಪಹಣಿಗಳಲ್ಲಿ ಕಾಲಂ ನಂಬರ್ ೯ ಹಾಗೂ ೧೧ರಲ್ಲಿ ವಕ್ಪ್ ಬೋರ್ಡ್ ಎಂಬ ಹೆಸರು ಬಂದಿದೆ ಇದರಿಂದ ನಮಗೆ ಸಾಲ ಸಹ ಸಿಗುವುದಿಲ್ಲ, ಅಲ್ಲದೆ ಇದು ನಮ್ಮ ಹಿರಿಯರ ಆಸ್ತಿಯಾಗಿದ್ದು, ಇದನ್ನು ನಾವು ದಾನವು ಕೊಟ್ಟಿಲ್ಲ ಮಾರಾಟವು ಮಾಡಿಲ್ಲ ಆದರೂ ಸಹ ನಮ್ಮ ಪಹಣಿಗಳಲ್ಲಿ ವಕ್ಪ್ ಬೋರ್ಡ್ ಎಂಬ ಹೆಸರು ಬಂದಿದೆ. ಈ ಕುರಿತು ತಹಸೀಲ್ದಾರ್ ಅವರನ್ನು ಕೇಳಿದರೆ ಅವರು ಸಹ ಸಮರ್ಪಕ ಉತ್ತರ ನೀಡುತ್ತಿಲ್ಲ, ಏನು ಮಾಡಬೇಕು ಎಂಬುದೇ ನಮಗೆ ತಿಳಿಯುತ್ತಿಲ್ಲ ನಮ್ಮ ಜಮೀನನ್ನು ನಮಗೆ ಉಳಿಸಿಕೊಡಿ ಎಂದು ರೈತರು ಪರಿಪರಿಯಾಗಿ ಕೋಡಿಹಳ್ಳಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡರು.
ಹಸಿರುಸೇನೆ ಜಿಲ್ಲಾ ಅಧ್ಯಕ್ಷ ಎಸ್.ಬಿ. ಕೆಂಭೋಗಿ ಮಾತನಾಡಿ, ಸರಕಾರಗಳು, ಜನಪ್ರತಿನಿಧಿಗಳು ರೈತರನ್ನು ಈ ದೇಶದ ಬೆನ್ನೆಲುಬು ಎಂದು ಕೇವಲ ಭಾಷಣಗಳಲ್ಲಿ ಹೇಳುತ್ತಾರೆ, ಆದರೆ ನೈಜವಾಗಿ ರೈತರ ವಿರುಧ್ಧವಾಗಿರುತ್ತಾರೆ ಎನ್ನುವುದಕ್ಕೆ ಈಗ ನಡೆಯುತ್ತಿರುವ ವಕ್ಪ ಬೋರ್ಡ ಹೆಸರು ಸೇರಿಸುತ್ತಿರುವ ಪ್ರಸಂಗವೇ ನಿದರ್ಶನವಾಗಿದೆ. ಇನ್ನಾದರೂ ರೈತರು ಎಚ್ಚೆತ್ತುಕೊಂಡು ಸರಕಾರದ ನಿಲುವು ಖಂಡಿಸಿ ಪ್ರತಿಭಟನೆಗೆ ಮುಂದಾಗಬೇಕು. ಇಲ್ಲವಾದಲ್ಲಿ ನಮ್ಮ ರೈತರ ಜಮೀನು ಶೀಘ್ರವೇ ಬೇರೆಯವರ ಪಾಲಾಗುವುದರಲ್ಲಿ ಸಂಶಯವಿಲ್ಲ ಎಂದರು.
ಸರಕಾರ, ಜಿಲ್ಲಾಧಿಕಾರಿಗಳು ಈ ಕೂಡಲೆ ಪಹಣಿಗಳಲ್ಲಿ ವಕಫ್ ಬೋರ್ಡ ಹೆಸರು ತೆಗೆದು ಹಾಕಬೇಕು. ಇಲ್ಲವಾದರೆ ಪ್ರತಿಭಟನೆ ನಡೆಸಲು ಸಜ್ಜಾಗಿದ್ದೇವೆ. ನಮ್ಮ ಜಮೀನಿಗಾಗಿ ನಮ್ಮ ಪ್ರಾಣ ಕಳೆದುಕೊಳ್ಳಲು ಸಹ ಸಿಧ್ಧರಿದ್ದೇವೆ. ನಮ್ಮ ಸಹನೆ, ತಾಳ್ಮೆ ಪರೀಕ್ಷಿಸಬೇಡಿ ಎಂದು ಸರಕಾರಕ್ಕೆ ಎಚ್ಚರಿಸಿದರು.
ಈ ಸಂದರ್ಭದಲ್ಲಿ ರೈತರಾದ ಮಹಾಂತೇಶ ಕುಂಬಾರ, ನಾಗಪ್ಪ ನಾವಿ, ರಮೇಶ ನಾವಿ, ಕಲಾವತಿ ಮೇತ್ರಿ, ನಂದಕುಮಾರ ನಾಕ್ಕೆತ್ತಿನವರ, ಗುರಪ್ಪ ಅಗಸರ, ಮಳ ಸಿದ್ದಪ್ಪ ಅಗಸರ, ಮಾಂತೇಶ ಗುಡ್ಡೆನವರ, ಲಕ್ಷ್ಮಿ ಗಣವಲಗ, ಮಹಿಮೂದಾಬೇಗಂ ಜಾಗೀರದಾರ, ಅಸ್ಪಾಕ್ ಅಹಮದ್ ಜಾಹೀರಾದಾರ, ಶರಣು ಬಿಸನಾಳ, ನಿಂಗಪ್ಪ ಬಿಸನಾಳ, ಅಶೋಕ ಕುಂಬಾರ, ಚಾಂದಸಾಬ ಜಮಾದಾರ, ಮಹಿಬೂಬ ಜಿನ್ನೆದಿ, ಪ್ರೇಮಸಿಂಗ್ ಚವ್ಹಾಣ, ಭರಮಣ್ಣ ನಾವದಗಿ, ವಿಶ್ವನಾಥ ಮಣಗಿರಿ, ಮಲಿಕಾರ್ಜುನ ಹೋರ್ತಿ ಸೇರಿದಂತೆ ಇನ್ನಿತರರು ಇದ್ದರು.

