ವಕ್ಪ್ ಬೋರ್ಡ ಹೆಸರು ಹಿಂಪಡೆಯದಿದ್ದರೆ ರಾಜ್ಯಾದ್ಯಂತ ಹೋರಾಟ
ಉದಯರಶ್ಮಿ ದಿನಪತ್ರಿಕೆ
ಇಂಡಿ: ಪಹಣಿಯಲ್ಲಿ ವಕ್ಪ್ ಬೋರ್ಡ ಹೆಸರು ಸೇರಿಸಿದ್ದನ್ನು ಕೂಡಲೆ ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯದ್ಯಂತ ಹೋರಾಟಕ್ಕೆ ಅಣಿಯಾಗುತ್ತೇವೆ ಎಂದು ರೈತ ಸಂಘಟನೆ, ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.
ಮಂಗಳವಾರ ಪಟ್ಟಣದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಅಕ್ಟೋಬರ್ ೮ ಮತ್ತು ೧೦ರಂದು ರೈತರ ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದವರು ಯಾರು ಮುಖ್ಯಮಂತ್ರಿಗಳೋ, ಜಿಲ್ಲಾಧಿಕಾರಿಗಳೋ, ಇಲ್ಲದಿದ್ದರೆ ಮತ್ಯಾರು, ಯಾವ ಪುರುಷಾರ್ಥಕ್ಕಾಗಿ ರೈತರಿಗೆ ತೊಂದರೆ ನೀಡಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು.
ನಿಮಗೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ, ಸರಕಾರದಿಂದ ಅವರಿಗೆ ನೀವು ಸಹಾಯ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ, ಆದರೆ ರೈತರ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ನೀವು ಈ ಕೂಡಲೇ ಅದನ್ನು ಕೈ ಬಿಟ್ಟು, ಪಹಣಿಯಲ್ಲಿ ಸೇರಿದ ವಕಪ್ ಬೋರ್ಡ್ ಹೆಸರನ್ನು ತೆಗೆದುಹಾಕಿ, ರೈತರ ಜಮೀನು ರೈತರಿಗೆ ಇರುವಂತೆ ಮಾಡಬೇಕು, ಒಂದು ವೇಳೆ ನೀವು ವಕಪ್ ಬೋರ್ಡ್ ಗೆ ರೈತರ ಜಮೀನನ್ನು ಸೇರಿಸುವ ಹುನ್ನಾರ ಮುಂದುವರಿಸಿದರೆ, ರಾಜ್ಯಾದ್ಯಂತ ರೈತರು ಉಗ್ರ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ, ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲು ನಾವೆಲ್ಲ ಒಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ವಕಪ್ ಬೋರ್ಡಿಗೆ ಇನಾಮು ಕೊಟ್ಟಿದ್ದು ಯಾವಾಗ, ದಾನ ಪಡೆದ ಜಮೀನನ್ನು ಇಲ್ಲಿಯವರೆಗೂ ಏಕೆ ವಕಪ್ ಬೋರ್ಡ್ ಗೆ ಸೇರಿಸಿಕೊಂಡಿಲ್ಲ, ಈಗ ಒಮ್ಮಿಂದೊಮ್ಮೆಲೆ, ಪಹಣಿಗಳಲ್ಲಿ ವಕಪ್ ಬೋರ್ಡ್ ಹೆಸರು ಸೇರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು, ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರು ಪಹಣಿಯಲ್ಲಿ ವಕಪ್ ಭೋರ್ಡ ಎಂದು ನಮೂದಿಸಿರುವುದು ಸರಿ ಮಾಡುತ್ತೇವೆ, ಎಂದು ಹೇಳಿಕೆ ನೀಡುತ್ತಿದ್ದೀರಿ, ಈ ಮೊದಲು ಏಕೆ ವಕಪ್ ಬೋರ್ಡ ಹೆಸರು ತೇಲಿಸಿದ್ದೀರಿ? ನೀವು ರೈತರಿಗೆ ದ್ರೋಹ ಮಾಡಲು ಮುಂದಾಗಿದ್ದೀರಿ ಮೊದಲು ಪಹಣಿಯಲ್ಲಿನ ವಕಪ್ ಬೋರ್ಡ ಹೆಸರು ತೆಗೆದು ಜಿಲ್ಲೆಯ ರೈತರ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಇನ್ನು ೧೫ ದಿನಗಳಲ್ಲಿ ಪಹಣಿಗಳಲ್ಲಿ ತೇಲಿಸಿದ ವಾಕಪ್ ಬೋರ್ಡ್ ಹೆಸರನ್ನು ತೆಗೆದು ಹಾಕಬೇಕು ಇಲ್ಲವಾದಲ್ಲಿ ನಮ್ಮ ಹೋರಾಟಕ್ಕೆ ನಾವು ಅಣೆಯಾಗುತ್ತೇವೆ ಎಂದು ತಿಳಿಸಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಸ್.ಬಿ ಕೆಂಭೋಗಿ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ರಾಯಚೂರ ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್ಪಾಟೀಲ, ದಾವಣಗೆರೆ ತಾಲೂಕಾಧ್ಯಕ್ಷ ವಿಶ್ವನಾಥ ಮಂಡಲೂರು, ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾದೇನಹಳ್ಳಿ, ನಾಗೇಶ ಹೆಗಡ್ಯಾಳ, ಮಲ್ಲಿಕಾರ್ಜುನ ಹಾವಿನಾಳಮಠ, ಸೇರಿದಂತೆ ಮತ್ತಿತರರು ಇದ್ದರು.
ರೈತನ ಅಳಲು
ಪತ್ರಿಕಾಗೋಷ್ಠಿ ನಡೆದ ಸಂದರ್ಭದಲ್ಲಿಯೇ ಇಂಡಿ ತಾಲೂಕಿನ ಹಿಂಗಣಿಯ ರೈತ ಮಂಜುನಾಥ ಗುಬ್ಯಾಡ ನಮ್ಮ ಜಮೀನಿನ ಪಹಣಿಯಲ್ಲಿಯೂ ವಕ್ಪ್ ಭೋರ್ಡ ಹೆಸರು ತೇಲಿಸಿದ್ದಾರೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಇದು ನಮ್ಮ ಆಸ್ತಿ ಇದೆ. ಈಗ ಏಕಾಏಕಿ ನೋಟಿಸ್ ನೀಡದೇ ಪಹಣಿಯಲ್ಲಿ ವಕಪ್ಬೋರ್ಡ ಹೆಸರು ತೇಲಿಸಿದ್ದಾರೆ ಎಂದು ಅಳಲು ತೋಡಿಕೊಂಡರು.
ಒಂದು ಸಮುದಾಯದ ಓಲೈಕೆ ಏಕೆ?
ಈ ಹಿಂದೆ ವಿಜಯಪುರ ಜಿಲ್ಲೆಯನ್ನು ಸುಲ್ತಾನರು ಆಳ್ವಿಕೆ ಮಾಡಿದ್ದಾರೆ ಅದಕ್ಕಿಂತ ಮೊದಲು ಬಾದಾಮಿ ಚಾಲುಕ್ಯರು ಸೇರಿದಂತೆ ಹಲವು ಹಿಂದೂ ರಾಜರು ಆಳ್ವಿಕೆ ಮಾಡಿದ್ದಾರೆ, ಆ ಸಂದರ್ಭದಲ್ಲಿ ರೈತರು ತಾವು ಉಳುಮೆ ಮಾಡುತ್ತಿದ್ದ ಜಮೀನಿಗೆ ರಾಜರಿಗೆ ತೆರಿಗೆ ಕಟ್ಟುತ್ತಿದ್ದರು, ತದನಂತರ ಬ್ರಿಟಿಷ್ ಕಂಪನಿ ರೈತರಿಗೆ ತಾವು ಉಳುಮೆ ಮಾಡುತ್ತಿದ್ದ ಸ್ಥಳವನ್ನು ಅಳತೆ ಮಾಡಿ ರೈತರ ಹೆಸರಿಗೆ ಎಕರೆ ಗುಂಟೆ ವಿಸ್ತೀರ್ಣದ ಬಗ್ಗೆ ದಾಖಲಾತಿ ನೀಡಿದರು, ೧೯೭೪ರಲ್ಲಿ ಡಿ ದೇವರಾಜ್ ಅರಸ್ ಅವರು ರೈತರು ಉಳುಮೆ ಮಾಡುತ್ತಿದ್ದ ಜಮೀನಿಗೆ ಉಳುವವನೇ ಒಡೆಯ ಎಂದು ಘೋಷಿಸಿ ಆ ಜಮೀನನ್ನು ನೇರವಾಗಿ ರೈತರ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿದರು, ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ರೈತರು ಬೆವರು ಸುರಿಸಿ ದುಡಿದು, ತಮಗಾಗಿ ಅಲ್ಲದೆ ದೇಶದ ಜನರಿಗಾಗಿ ಅನ್ನ ಹಾಕುವ ಕಾರ್ಯ ಮಾಡುತ್ತಿದ್ದಾರೆ.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕಾಏಕಿ ಒಂದು ಧರ್ಮ ಅಥವಾ ಸಮುದಾಯದ ಓಲೈಕೆಗಾಗಿ ವಕಫ್ ಬೋರ್ಡ್ ಹೆಸರನ್ನು ರೈತರ ಪಹಣಿಯಲ್ಲಿ ಸೇರಿಸುತ್ತಿರುವುದು ಏಕೆ ಎಂದು ಕೋಡಿಹಳ್ಳಿ ಚಂದ್ರಶೇಖರ ಪ್ರಶ್ನಿಸಿದರು.

