ಉದಯರಶ್ಮಿ ದಿನಪತ್ರಿಕೆ
ಆಲಮಟ್ಟಿ: ಆಲಮಟ್ಟಿಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಬೆಳಗಾವಿ ವಿಭಾಗ ಮಟ್ಟ ಹಾಗೂ ಕರ್ನಾಟಕ ರಾಜ್ಯ ಮಟ್ಟದ ಖೋಖೋ ಪಂದ್ಯಾವಳಿಗಳು ನ.೧೧ ರಿಂದ ನಾಲ್ಕು ದಿನಗಳ ಕಾಲ ಜರುಗಲಿವೆ.
ಆಲಮಟ್ಟಿಡ್ಯಾಂಸೈಟ್ ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದ ಮೈದಾನದಲ್ಲಿ ಈ ಪಂದ್ಯಾವಳಿಗಳು ಜರುಗಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಸಂತ ರಾಠೋಡ ಹಾಗೂ ಕ್ರೀಡಾಕೂಟದ ಸಂಘಟನೆಯ ಉಸ್ತುವಾರಿ ವಹಿಸಿಕೊಂಡಿರುವ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ಈ ಬಗ್ಗೆ ಮಂಗಳವಾರ ಸುದ್ದಿಗಾರರಿಗೆ ಮಾಹಿತಿ ನೀಡಿದರು.
ಶಾಲೆಯ ಮೈದಾನದಲ್ಲಿ ನಾಲ್ಕು ಖೋಖೋ ಸ್ಪರ್ಧೆಗಳು ಏಕಕಾಲದಲ್ಲಿಯೇ ಜರುಗುವಂತೆ ನಾಲ್ಕು ಖೋಖೋ ಮೈದಾನ ನಿರ್ಮಿಸಲಾಗುತ್ತಿದೆ. ಕ್ರೀಡಾಭಿಮಾನಿಗಳಿಗೆ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತಿದೆ. ನಾಲ್ಕು ಕಡೆ ಎಲ್ ಇಡಿ ಪರದೆಗಳ ಮೂಲಕ ಪಂದ್ಯ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಅವಿಭಜಿತ ಬಸವನಬಾಗೇವಾಡಿ ತಾಲ್ಲೂಕಿನ ಇತಿಹಾಸದಲ್ಲಿಯೇ ರಾಜ್ಯ ಮಟ್ಟದ ಪಂದ್ಯಾವಳಿಗಳನ್ನು ಸಂಘಟಿಸುತ್ತಿರುವುದು ಇದೇ ಪ್ರಥಮ, ರಾಜ್ಯದ ನಾನಾ ಕಡೆಯಿಂದ ಕ್ರೀಡಾಪಟುಗಳು ಆಗಮಿಸಲಿದ್ದು, ಕ್ರೀಡಾಕೂಟ ಸ್ಮರಣೀಯವಾಗಿಸಲು ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿವೆ ಎಂದರು.
ನ.೧೧ ರಂದು ಬೆಳಗಾವಿ ವಿಭಾಗ ಮಟ್ಟದ ಪ್ರಾಥಮಿಕ (೧೪ ವಯಸ್ಸಿನ ಒಳಗಿನ) ಬಾಲಕ,ಬಾಲಕಿಯರ ಖೋಖೋ ತಂಡಗಳ ನೋಂದಣಿ, ನ.೧೨ ರಂದು ಖೋಖೋ ಸ್ಪರ್ಧೆಗಳು ನಡೆಯಲಿವೆ. ನ.೧೩ ರಂದು ರಾಜ್ಯ ಮಟ್ಟದ ಪ್ರಾಥಮಿಕ (೧೪ ವಯೋಮಾನ ಒಳಗಿನ) ಹಾಗೂ ಪ್ರೌಢಶಾಲೆ (೧೭ ವಯೋಮಾನ ಒಳಗಿನ) ಬಾಲಕ/ಬಾಲಕಿಯರ ಖೋಖೋ ತಂಡಗಳ ನೋಂದಣಿ ಜರುಗಲಿದೆ. ಅದೇ ದಿನ ಸಂಜೆ ರಾಜ್ಯ ಮಟ್ಟದ ಪಂದ್ಯಾವಳಿಗಳ ಉದ್ಘಾಟನೆ ಜರುಗಲಿದೆ.
ನ.೧೪ ರಂದು ಖೋಖೋ ಸ್ಪರ್ಧೆಗಳು ಜರುಗಲಿವೆ ಎಂದರು.
ಬೆಳಗಾವಿ ವಿಭಾಗ ಮಟ್ಟದ ೯ ಜಿಲ್ಲೆಗಳ ತಲಾ ಎರಡು ತಂಡಗಳAತೆ ೧೮ ತಂಡಗಳು ಹಾಗೂ ರಾಜ್ಯ ಮಟ್ಟದ ಪಂದ್ಯಾವಳಿಗೆ ನಾಲ್ಕು ವಿಭಾಗಗಳಿಂದ ತಲಾ ೪ ರಂತೆ ೧೬ ತಂಡಗಳು ಸೇರಿ ಸುಮಾರು ೬೨೦ ಕ್ಕೂ ಅಧಿಕ ಕ್ರೀಡಾಪಟುಗಳು ಆಗಮಿಸಲಿದ್ದಾರೆ. ಖೋಖೋ ಪಂದ್ಯಾವಳಿಯ ನಿರ್ಣಾಯಕ್ಕಾಗಿ ರಾಜ್ಯದ ನಾನಾ ಭಾಗಗಳಿಂದ ೫೦ ಕ್ಕೂ ಅಧಿಕ ಪರಿಣಿತ ಖೋಖೋ ನಿರ್ಣಾಯಕರು ಆಗಮಿಸಲಿದ್ದಾರೆ. ಇವರಿಗೆಲ್ಲರಿಗೂ ಆಲಮಟ್ಟಿ ಸುತ್ತಮುತ್ತ ನಾನಾ ಕಡೆ ವಸತಿ ವ್ಯವಸ್ಥೆ ಕಲ್ಪಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಉತ್ತರಕರ್ನಾಟಕ ಶೈಲಿಯ ಊಟ:
ನಾಲ್ಕು ದಿನಗಳ ಕಾಲ ಕ್ರೀಡಾಪಟುಗಳಿಗೆ ಉತ್ತರಕರ್ನಾಟಕ ಶೈಲಿಯ ರುಚಿಕಟ್ಟಾದ ನಿತ್ಯವೂ ಬೇರೆ, ಬೇರೆ ರೀತಿಯ ಊಟದ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ, ಅದಕ್ಕಾಗಿ ಹಲವು ಶಿಕ್ಷಕರ ತಂಡ ಕಾರ್ಯ ಆರಂಭಿಸಿದೆ. ಪಂದ್ಯಾವಳಿ ವೀಕ್ಷಿಸಲು ಆಗಮಿಸುವ ಕ್ರೀಡಾಭಿಮಾನಿಗಳಿಗೂ ಪ್ರತ್ಯೇಕ ಊಟದ ವ್ಯವಸ್ಥೆ ಮಾಡಲಾಗುವುದು ಎಂದರು.
ಖೋಖೋ ಪಂದ್ಯಾವಳಿಗಳ ಯಶಸ್ವಿಗೆ ನಾನಾ ಸಮಿತಿಗಳನ್ನು ರಚಿಸಲಾಗಿದ್ದು, ಎಲ್ಲರೂ ಸಂಯೋಜಿತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲಾ ಮತ್ತು ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರು ಸೇರಿ ನಾನಾ ಅಧಿಕಾರಿಗಳು ಈಗಾಗಲೇ ಪೂರ್ವಭಾವಿ ಸಭೆ ನಡೆಸಿ ನಾನಾ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿಸಿದರು.
ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳು ಭೇಟಿ ನೀಡಿ ಮೈದಾನ ಸುತ್ತಮುತ್ತಲಿನ ಪರಿಸರ ಸ್ವಚ್ಛತೆಗೆ ನೆರವಾಗುವುದಾಗಿ ತಿಳಿಸಿದ್ದಾರೆ. ರಾಜ್ಯದ ನಾನಾ ಭಾಗಗಗಳಿಂದ ಆಗಮಿಸುವ ಕ್ರೀಡಾಪಟುಗಳಿಗೆ ಆಲಮಟ್ಟಿ ಸುತ್ತಮುತ್ತಲಿನ ಉದ್ಯಾನಗಳನ್ನು ಉಚಿತ ವೀಕ್ಷಣೆಗೆ ಅವಕಾಶ ಮಾಡಿಕೊಡಲು ನಿಗಮದ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್. ಎಸ್. ಅವಟಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಸ್.ಎಚ್. ಬಿರಾದಾರ, ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ, ಬಸವರಾಜ ಯರವಿನತೆಲಿಮಠ, ಎಂ.ಆರ್. ಮಕಾನದಾರ, ಎಂ.ಎಂ. ಮುಲ್ಲಾ, ಸಲೀಂ ದಡೆದ, ಆರ್.ಬಿ.ಗೌಡರ, ವಿ.ಕೆ.ಮಸೂತಿ, ಸುರೇಶ ಆಲೂರ ಇದ್ದರು.

