ಉದಯರಶ್ಮಿ ದಿನಪತ್ರಿಕೆ
ಮುದ್ದೇಬಿಹಾಳ: ಬೇಂದ್ರೆಯವರು ಪತ್ರಕರ್ತರಾಗಿ, ಸಾಹಿತಿಗಳಾಗಿ, ಪ್ರಾಧ್ಯಾಪಕರಾಗಿ, ಕವಿಗಳಾಗಿ ಅಷ್ಟೇ ಅಲ್ಲದೇ ಇನ್ನೀತರ ಕ್ಷೇತ್ರಗಳಲ್ಲಿ ಈ ನಾಡಿಗೆ ನೀಡಿದ ಸೇವೆ ಅಪಾರ. ಅವರ ಪ್ರತಿಯೊಂದು ಸಾಹಿತ್ಯದ ನುಡಿಗಳು ಇಡೀ ಕನ್ನಡ ಸಾಹಿತ್ಯವನ್ನೇ ಶ್ರೀಮಂತಗೊಳಿಸಿದೆ ಎಂದು ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ ಹೇಳಿದರು.
ಪಟ್ಟಣದ ಹಳೆಯ ತರಕಾರಿ ಮಾರುಕಟ್ಟೆಯಲ್ಲಿರುವ ಶ್ರೀ ಖಾಸ್ಗತೇಶ್ವರ ಮಠದಲ್ಲಿ ಕಸಾಪ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬೇಂದ್ರೆಯವರ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೇಂದ್ರೆಯವರು ಇಡೀ ತಮ್ಮ ಜೀವನದ ತುಂಬಾ ನಿಸ್ವಾರ್ಥ ಸೇವೆ ಗೈದಿದ್ದಾರೆ. ಸಾಹಿತ್ಯ ರಚನೆ ಅವರ ಮೊದಲ ಒಲವಾಗಿತ್ತು. ಕವಿತೆಗಳನ್ನಷ್ಟೇ ಅಲ್ಲದೇ ನಾಟಕಗಳು, ಸಂಶೋಧನಾತ್ಮಕ ಲೇಖನಗಳನ್ನೂ ಬರೆದಿದ್ದಾರೆ. ಕವನಗಳ ಮೂಲಕ ಸಾಕಷ್ಟು ಜನತೆಯ ಮನದಲ್ಲಿ ಮನೆ ಮಾಡಿರುವ ಅವರು ನರಬಲಿ ಎಂಬ ಕವನ ಬರೆದು ಬ್ರಿಟೀಷರ ಕೋಪಕ್ಕೂ ಕಾರಣರಾಗಿದ್ದರು ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಸಾಹಿತಿ ಬಿ.ಎಂ.ಹಿರೇಮಠ ಮಾತನಾಡಿ, ಬೇಂದ್ರೆಯವರು ಅತ್ಯಂತ ನಿಷ್ಟೂರ ಮನುಷ್ಯ. ಅವರ ಕವಿತೆಗಳಲ್ಲಿ ಆಧ್ಯಾತ್ಮಿಕ ಶಕ್ತಿ ಇರುತ್ತಿತ್ತು. ಅವರನ್ನು ನೆನೆಸಿಕೊಂಡರೆ ಇಡೀ ಕನ್ನಡ ನಾಡು ಮೈಮರೆತಂತೆ ಎಂದರು.
ಪ್ರವಚನಕಾರ, ಪ್ರೊ.ಐ.ಬಿ.ಹಿರೇಮಠರು ಉಪನ್ಯಾಸ ನೀಡಿದರು. ಮಠದ ಶರಣೆ ತಾಯಿ ನೀಲಮ್ಮನವರು ದಿವ್ಯ ಸಾನಿಧ್ಯ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಗಣ್ಯ ವ್ಯಾಪಾರಸ್ಥರಾದ ವಾಸುದೇವ ಶಾಸ್ತ್ರಿ, ಅಶೋಕ ಚಟ್ಟೇರ, ತಾ.ಪಂ ಮಾಜಿ ಅಧ್ಯಕ್ಷ ವಾಯ್.ಎಚ್.ವಿಜಯಕರ ಇದ್ದರು. ಶಿಕ್ಷಕ ಸಿ.ಜಿ.ನಾಗರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ಧನಗೌಡ ಬಿರಾದಾರ, ಪ್ರಭುಗೌಡ ರೆಡ್ಡಿ, ಅಶೋಕ ಅಜಮನಿ ಕಾರ್ಯಕ್ರಮ ನಿರ್ವಹಿಸಿದರು.

