ವಿನಾಕಾರಣ ವಿಳಂಬ ನೀತಿ ಆರೋಪ | ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ | ಸಿಎಂ ಸಿದ್ದರಾಮಯ್ಯ ದಲಿತ ವಿರೋಧಿ | ಕಾರಜೋಳ ಆರೋಪ
ಉದಯರಶ್ಮಿ ದಿನಪತ್ರಿಕೆ
ಸಿಂದಗಿ: ರಾಜ್ಯದಲ್ಲಿ ಅನ್ಯಾಯಕ್ಕೊಳಗಾದ ಪರಿಶಿಷ್ಟ ಜಾತಿ ಸಮುದಾಯದವರಿಗೆ ಕೂಡಲೇ ಒಳ ಮೀಸಲಾಯಿತಿಯನ್ನು ಜಾರಿಗೊಳಿಸಬೇಕು ಎಂದು ಸಂಸದ ಗೋವಿಂದ ಕಾರಜೋಳ ಆಗ್ರಹಿಸಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಒಳ ಮೀಸಲಾತಿ ಜಾರಿ ವಿಷಯದಲ್ಲಿ ಮೂಗಿಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದೆ. ಒಳ ಮೀಸಲಾತಿ ಜಾರಿಗೊಳಿಸುವಲ್ಲಿ ವಿನಾಕಾರಣ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಸಂಸದರು ಆರೋಪಿಸಿದರು.
ಯಡಿಯೂರಪ್ಪನವರ ಸರಕಾರದ ಅವಧಿಯಲ್ಲಿ ೧೩ಕೋಟಿ ಅನುದಾನ ಬಿಡುಗಡೆಗೊಳಿಸಿ ಸದಾಶಿವ ಆಯೋಗವನ್ನು ನೇಮಿಸಲಾಗಿತ್ತು. ೪ವರ್ಷಗಳ ಕಾಲ ಸಮೀಕ್ಷೆ ಮಾಡಿ ೨೦೧೨ರಲ್ಲಿ ವರದಿ ಒಪ್ಪಿಸಿತು. ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ನಂಬಿ ೨೦೧೩ರಲ್ಲಿ ದಲಿತರು ಕಾಂಗ್ರೆಸ್ಗೆ ಮತ ಚಲಾಯಿಸಿದ್ದರು, ಪ್ರಸ್ತುತ ಒಳ ಮೀಸಲಾತಿಯ ಭರವಸೆಯನ್ನು ನೀಡಿ ಅಧಿಕಾರಕ್ಕೆ ಬಂದ ಮರುದಿನವೇ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಆಶ್ವಾಸನೆ ಕೊಟ್ಟಿದ್ದ ಸಿದ್ದರಾಮಯ್ಯನವರು ದಲಿತರ ಕಣ್ಣಿರೊರೆಸುವ ಬದಲು ಕಣ್ಣಲ್ಲಿ ಮಣ್ಣೆರೆಚುವ ಕಾರ್ಯವೆಸಗಿದ್ದಾರೆ. ಆನರ ಗಮನ ಬೆರೆಡೆ ಸೆಳೆಯುವ ಉದ್ದೇಶದಿಂದ ಗ್ಯಾರಂಟಿ ಭಾಗ್ಯಗಳಿಂದ ಅಧಿಕಾರಕ್ಕೆ ಬಂದು ಒಂದುವರೆ ವರ್ಷವಾದರೂ ಅದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಸಿದ್ದರಾಮಯ್ಯ ದಲಿತ ವಿರೋಧಿ ಮಹಾ ಮೋಸಗಾರ ಎಂದು ಹರಿಹಾಯ್ದ ಅವರು, ಒಳ ಮೀಸಲಾತಿಯನ್ನು ಜಾರಿ ತರದೇ ಇದ್ದರೇ ತೀವ್ರ ಹೋರಾಟ ಮಾಡುತ್ತೇವೆ. ಇವರನ್ನು ತಿರುಗಾಡಲೂ ಸಹ ಬಿಡದೆ ಬೋಗಳೆ ಸರಕಾರವನ್ನು ಓಡಿಸುವವರೆಗೂ ಬಿಡುವುದಿಲ್ಲ ಎಂದರು.
ಈ ವೇಳೆ ಶಾಸಕ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಎಂ.ಬಿ.ಜಿರಲಿ, ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಲ್ಲಿಕಾರ್ಜುನ ಜೋಗುರ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಈರಣ್ಣ ರಾವೂರ, ಶಿವಕುಮಾರ ಬಿರಾದಾರ, ಗುರು ತಳವಾರ, ಎಸ್.ಎನ್.ಹಿರೇಮಠ, ಪೀರು ಕೆರೂರ ಸೇರಿದಂತೆ ಅನೇಕರಿದ್ದರು.

ಜಾತಿಗಳ ಮದ್ಯೆ ವಿಷಬೀಜ ಬಿತ್ತುವ ಹುನ್ನಾರ
ಸಿಂದಗಿ: ತಾಲೂಕಿನಲ್ಲಿ ರೈತರು ಅನ್ಯಾಯಕ್ಕೆ ಒಳಗಾಗಿದ್ದಾರೆ. ಆ ರೈತರು ಇಂದು ನಮಗೆ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಸಾವಿರ ವರ್ಷದ ಇತಿಹಾಸವಿರುವ ಸಿಂದಗಿ ವಿರಕ್ತಮಠ, ಮಠದ ಆಸ್ತಿಯ ಉತಾರಿಯಲ್ಲಿ ಏಕಾಏಕಿ ವಕ್ಪ್ ಬೋರ್ಡ್ ಹೆಸರು ತೆಲಿಸಿದ್ದು ದುರಾದೃಷ್ಠಕರ ಸಂಗತಿ ಎಂದು ಸಂಸದ ಗೋವಿಂದ ಕಾರಜೋಳ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಿರಕ್ತಮಠಕ್ಕೆ ಸಂಸದರ ನೇತೃತ್ವದ ತಂಡ ಭೇಟಿ ನೀಡಿ ಹಲವಾರು ರೈತರ ಹಾಗೂ ಸಾರ್ವಜನಿಕರ ಆಸ್ತಿಯ ಪಹಣಿ ಪರಿಶೀಲಿಸಿ ಅಹವಾಲು ಸ್ವೀಕರಿಸಿ ಮಾತನಾಡಿದ ಅವರು, ಧರ್ವ ಧರ್ಮಗಳ ಮದ್ಯೆ, ಜಾತಿ ಜಾತಿಗಳ ಮದ್ಯೆ ವಿಷಬೀಜ ಬಿತ್ತುವಂತಹ ಹುನ್ನಾರವನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಸಾವಿರ ವರ್ಷ ಇತಿಹಾಸವುಳ್ಳ ಮಠದ ಆಸ್ತಿ ವಕ್ಪ್ ಆಸ್ತಿಯಾಗಲು ಹೇಗೆ ಸಾಧ್ಯ.? ದೇಶಕ್ಕೆ ಸ್ವಾತಂತ್ರ್ಯ ಬಂದ ಮೇಲೆ ಕಾಂಗ್ರೆಸ್ ಸರಕಾರ ಜಾತಿ ಜಾತಿಗಳ ಮದ್ಯೆ ವಿಷಬೀಜ ಬಿತ್ತಿ ೬೦ವರ್ಷಗಳ ಕಾಲ ಆಡಳಿತ ಮಾಡಿದರೂ ಇಷ್ಟೊಂದು ಒಲೈಕೆಯ ಅರಾಜಕತೆಯ ರಾಜಕಾರಣ ನೋಡಿರಲಿಲ್ಲ. ಆದರೆ ಕರ್ನಾಟಕದ ಸಿದ್ದರಾಮಯ್ಯನವರ ಸರಕಾರ ಖುರ್ಚಿ ಹೋಗುತ್ತದೆ ಎಂಬ ಭಯದಿಂದ ಇಂತಹ ಕುತಂತ್ರ ಕಾರ್ಯ ಮಾಡಿ ಮತ ಬ್ಯಾಂಕ ರಾಜಕಾರಣ ಮಾಡುತ್ತಿರುವುದು ನಾಚಿಕೆಗೇಡಿತನದ ಸಂಗತಿ ಎಂದು ಹರಿಹಾಯ್ದರು.
ಇಡೀ ರಾಜ್ಯದಲ್ಲಿ ಇಂದು ರೈತರ ಆಸ್ತಿಯನ್ನು ಕಬಳಿಸಬೇಕು ಎನ್ನುವ ಹುನ್ನಾರ ನಡೆದಿದೆ. ರೈತರ ಆಸ್ತಿಗೆ ಕನ್ನ ಹಾಕುವಂತಹ ಕೆಲಸ ವಕ್ಪ್ ಬೋರ್ಡ್ ಮೂಲಕ ಸರಕಾರ ಮಾಡುತ್ತಿದೆ. ಇಡೀ ದೇಶದಲ್ಲಿ ಜನ ಜಾತಿ, ಧರ್ಮ ಬೇಧ ಭಾವ ಇಲ್ಲದೇ ಭಾವನಾತ್ಮಕ ಜೀವನವನ್ನು ನಡೆಸುತ್ತಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ವಿಷಬೀಜ ಬಿತ್ತಿ ಅವರನ್ನು ದೂರ ಮಾಡಿ ಹೋಡೆದಾಡುವಂತಹ ಕಾರ್ಯಮಾಡಿದೆ ಇದನ್ನು ಖಂಡಿಸುತ್ತೇನೆ.
ಈ ವೇಳೆ ಶಾಸಕ ಹರೀಶ್ ಪೂಂಜಾ, ಮಹೇಶ ಟೆಂಗಿನಕಾಯಿ, ಮಾಜಿ ವಿಪ ಸದಸ್ಯ ಅರುಣ ಶಹಾಪೂರ, ರೈತ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲ್ಮರುಡಪ್ಪ, ಎಂ.ಬಿ.ಜಿರಲಿ, ಮಾಜಿ ಶಾಸಕ ರಮೇಶ ಭೂಸನೂರ, ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಮಲ್ಲಿಕಾರ್ಜುನ ಜೋಗುರ ತಾಲೂಕಾಧ್ಯಕ್ಷ ಸಂತೋಷ ಪಾಟೀಲ ಡಂಬಳ, ಈರಣ್ಣ ರಾವೂರ ಸೇರಿದಂತೆ ಅನೇಕರಿದ್ದರು.

