ವಿಜಯಪುರ: ಡಬಲ್ ಎಂಜಿನ್ ಸರಕಾರ ಪೆಟ್ರೋಲ್ ಮತ್ತು ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಿಸುವ ಮೂಲಕ ಯುವಕರಿಗೆ ಟೋಪಿ ಹಾಕಿದೆ. ರೈತರ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ನೀಡದೇ ಬೆಳೆಗಳ ನಿರ್ವಹಣೆ ವೆಚ್ಚ ಮೂರ್ನಾಲ್ಕು ಪಟ್ಟು ಹೆಚ್ಚು ಮಾಡುವ ಮೂಲಕ ಅನ್ನದಾತರಿಗೂ ಅನ್ಯಾಯ ಮಾಡಿದೆ ಎಂದು ಕೆ.ಪಿ.ಸಿ.ಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.
ಬಬಲೇಶ್ವರ ತಾಲೂಕಿನ ಹಂಚಿನಾಳ ಪಿ. ಎಂ. ಮಂಗಳೂರ, ಕೊಡಬಾಗಿ ಮತ್ತು ಮಮದಾಪುರಗಳಲ್ಲಿ ಅವರು ಪ್ರಚಾರ ಕೈಗೊಂಡು ಮಾತನಾಡಿದರು.
ಮಮದಾಪುರದಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಪೆಟ್ರೋಲ್ ಬೆಲೆ ಏರಿಕೆ, ದ್ವಿಚಕ್ರ ವಾಹನಗಳ ಬೆಲೆ ಹೆಚ್ಚಳ ಮಾಡುವ ಮೂಲಕ ಯುವಕರಿಗೆ ಮೊದಲು ಟೋಪಿ ಹಾಕಿದ್ದಾರೆ. ರೂ. 60 ಇದ್ದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ಈಗ ರೂ. 100 ದಾಟಿದೆ. ರೂ. 45 ಸಾವಿರ ಇದ್ದ ದ್ವಿಚಕ್ರ ವಾಹನಗಳ ಬೆಲೆ ಈಗ ರೂ. 1 ಲಕ್ಷ ಮೀರಿದೆ. ಪ್ರತಿ ವರ್ಷ ಎರಡು ಕೋಟಿ ಉದ್ಯೋಗ ನೀಡುವುದಾಗಿ ಹೇಳಿದ್ದ ಪ್ರಧಾನಿ ಕಳೆದ ಒಂಬತ್ತು ವರ್ಷಗಳಲ್ಲಿ 18 ಕೋಟಿ ಉದ್ಯೋಗ ಸೃಷ್ಠಿಸಿಲ್ಲ. ಬದಲಾಗಿ ಈ ಮುಂಚೆಯಿಂದ ಇದ್ದ ಹುದ್ದೆಗಳನ್ನೂ ಭರ್ತಿ ಮಾಡಿಲ್ಲ. ಈ ಮೂಲಕ ಅವರು ತಮ್ಮ ಪರ ಜೈಕಾರ ಹಾಕುವ ಯುವಕರಿಗೆ ನಾನಾ ರೀತಿಯಲ್ಲಿ ಟೋಪಿ ಹಾಕಿದ್ದಾರೆ ಎಂದು ಹೇಳಿದರು.
ರೈತರನ್ನೂ ಬಿಡದ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳಿಗೆ ಉತ್ತಮ ಬೆಲೆ ದೊರಕಿಸುವ ಕೆಲಸ ಮಾಡಿಲ್ಲ. ಬದಲಾಗಿ ಬೆಳೆಗಳ ನಿರ್ವಹಣೆ ವೆಚ್ಚ ಮೂರ್ನಾಲ್ಕು ಪಟ್ಟು ಹೆಚ್ಚಾಗುವಂತೆ ಮಾಡಿದ್ದಾರೆ. ಈ ಮುಂಚೆ ಕ್ವಿಂಟಾಲ್ ಗೆ ರೂ. 2000-ರೂ. 3000 ಇದ್ದ ಈರುಳ್ಳಿ ಬೆಲೆ ಈಗ ರೂ. 500ಕ್ಕೆ ಇಳಿದಿದೆ. ಕಬ್ಬಿನ ಬೆಲೆ ಹಿಂದಿನಷ್ಟೇ ಇದೆ. ಈ ಮುಂಚೆ ಪ್ರತಿ ಕೆಜಿಗೆ ರೂ. 200 ಒಣ ದ್ರಾಕ್ಷಿ ಬೆಲೆ ರೂ. 100ಕ್ಕೆ ಇಳಿದಿದೆ. ಕಾಂಗ್ರೆಸ್ ಪ್ರಧಾನಿಗಳಾದ ಪಿ. ವಿ. ನರಸಿಂಹರಾವ ಮತ್ತು ಮನಮೋಹನ್ ಸಿಂಗ್ ಅವರು ರೂಪಿಸಿದ್ದ ಭಾರತದ ಸುಭದ್ರ ಆರ್ಥಿಕತೆಯನ್ನು ನೋಟ್ ಬ್ಯಾನ್ ಮೂಲಕ ಪ್ರಧಾನಿ ಕುಸಿಯುವಂತೆ ಮಾಡಿದ್ದಾರೆ ಎಂದು ಅವರು ಹೇಳಿದರು.
ಮಮದಾಪುರ ಗ್ರಾಮಕ್ಕೆ ಕಾಂಕ್ರಿಟ್ ರಸ್ತೆ, ಗುಡಿ, ಗುಂಡಾರಗಳಿಗೆ ಅನುದಾನ ನೀಡಿದ್ದೇನೆ. ಆದಿಲ್ ಶಾಹಿ ನಿರ್ಮಿಸಿರುವ ಐತಿಹಾಸಿಕ ಮಮದಾಪುರ ಕೆರೆಯನ್ನು ಪುನರುಜ್ಜೀವನಗೊಳಿಸಿದ್ದೇವೆ. ಇದರಿಂದ ಸುತ್ತಮುತ್ತಲಿನ ಎಲ್ಲ ಹಳ್ಳಿಗಳಲ್ಲಿಯೂ ಅಂತರ್ಜಲ ಹೆಚ್ಚಾಗಿ ಜನರು ಬದುಕು ಕಟ್ಟಿಕೊಡುವ ಕೆಲಸ ಮಾಡಿದ್ದೇನೆ. ಶ್ರೀ ಸಿದ್ದೇಶ್ವರ ಮಹಾಸ್ವಾಮೀಜಿಯವರು 2013ರಲ್ಲಿ ಜಲಸಂಪನ್ಮೂಲ ಸಚಿವನಾದಾಗ, 20 ವರ್ಷಗಳ ಹಿಂದೆ ಒಳ್ಳೆಯ ಫಲವತ್ತಾದ ಭೂಮಿ ಇದೆ. ದೇವರು ಒಳ್ಳೆಯ ಬಿಸಿಲು ಕೊಟ್ಟಿದ್ದಾನೆ. ಆ ಭೂಮಿ ಮತ್ತು ಬಿಸಿಲಿನ ಮಧ್ಯೆ ಈ ಭೂಮಿಗೆ ಬೊಗಸೆ ನೀರು ಕೊಡಿ. ಇದು ಅಮೇರಿಕಾದ ಕ್ಯಾಲಿಫೋರ್ನಿಯಾವನ್ನು ಮೀರಿಸಲಿದೆ ಎಂದು ಅವರು ಹೇಳಿದ್ದರು. ಅವರ ಆಶಯದಂತೆ ಕೆಲಸ ಮಾಡಿದ್ದೇನೆ ಎಂದು ಅವರು ತಿಳಿಸಿದರು.
2013- 2018ರ ವರೆಗೆ ಸಿದ್ಧರಾಮಯ್ಯ ಸರಕಾರ 165ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. 30 ಭರವಸೆಗಳನ್ನು ಹೆಚ್ಚುವರಿಯಾಗಿ ಈಡೇರಿಸಿದ್ದೇವೆ. ಆದರೆ, ಈಗಿನ ಸರಕಾರ ನೀಡಿದ್ದ ಭರವಸೆಗಳಲ್ಲಿ ಶೇ. 10ರಷ್ಟನ್ನೂ ಈಡೇರಿಸಿಲ್ಲ. ತೋಟಗಾರಿಕೆ ಇಲಾಖೆ ಕಳೆದ ನಾಲ್ಕು ವರ್ಷಗಳಿಂದ ರೈತಪರ ಯೋಜನೆಗಳನ್ನು ನಿಲ್ಲಿಸಿವೆ. ಕೃಷಿ ಹೊಂಡ, ಪೈಪ್, ಸ್ಪ್ರಿಂಕ್ಲರ್, ಡ್ರಿಪ್ ಏನೂ ಇಲ್ಲ. ಕೃಷಿ ಇಲಾಖೆ ಕೂಡ ರೈತರಿಗೆ ಅನುಕೂಲಕರ ಯೋಜನೆಗಳನ್ನು ನೀಡಿಲ್ಲ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ 15 ಲಕ್ಷ ಮನೆಗಳ ನಿರ್ಮಾಣ. ಕಳೆದ ನಾಲ್ಕು ವರ್ಷಗಳಲ್ಲಿ ಒಂದೂ ಮನೆ ಕಟ್ಟಿಲ್ಲ. ಹಳೆಯ ಮನೆಗಳ ಹಣವನ್ನೂ ನೀಡಿಲ್ಲ. ಕಾಂಗ್ರೆಸ್ ಬದುಕು ಕಟ್ಟಿ ಕೊಡುವ ಕೆಲಸ ಮಾಡಿದರೆ, ಬಿಜೆಪಿ ಭಾವನೆಗಳನ್ನು ಕೆರಳಿಸುವ ಕೆಲಸ ಮಾಡುತ್ತಿದೆ. ಆ ಪಕ್ಷದ ನಾಯಕರು ಹಿಜಾಬ್, ಹಲಾಲ್ ವಿಷಯಗಳನ್ನು ಪ್ರಸ್ತಾಪಿಸಿ ಕಿಸೆಯಲ್ಲಿ ಕಡ್ಡಿ ಡಬ್ಬಿ ಇಟ್ಟುಕೊಂಡು ತಿರುಗಾಡುತ್ತಿರುತ್ತಾರೆ. ಎಸ್.ಸಿ.ಎಸ್.ಟಿ ಜನರಿಗೆ ಯೋಜನೆಗಳು ಸರಿಯಾಗಿ ಜಾರಿಯಾಗುತ್ತಿಲ್ಲ ಎಂದು ಅವರು ಹೇಳಿದರು.
ರಾಜ್ಯ ಬಿಜೆಪಿ ಸರಕಾರ ರೂ. 3.50 ಲಕ್ಷ ಕೋಟಿ ಸಾಲ ಮಾಡಿದೆ. ಸಿದ್ಧರಾಮಯ್ಯ ಸಿಎಂ ಆಗಿದ್ದಾಗ ರೂ. 1.20 ಲಕ್ಷ ಕೋಟಿ ಸಾಲ ಇತ್ತು. ಆದರೆ, ಬಿಜೆಪಿ ಅವಧಿಯಲ್ಲಿ ಬಡವರಿಗೆ ಒಂದೂ ಮನೆ ಕಟ್ಟಿಲ್ಲ. ರೈತರಿಗೆ ಕೃಷಿ ಯೋಜನೆ ಮತ್ತು ತೋಟಗಾರಿಕೆ ಯೋಜನೆ ರೂಪಿಸಿಲ್ಲ. ಆದರೂ, ಏತಕ್ಕಾಗಿ ರೂ. 3.50 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಗೊತ್ತಿಲ್ಲ. 40 ಪರ್ಸೆಂಟ್ ಕಮಿಷನ್ ಇವರ ದೊಡ್ಡ ಸಾಧನೆಯಾಗಿದೆ. ಪೇಮೆಂಟ್ ಆಗದೇ ಗುತ್ತಿಗೆದಾರರು ಸಂಕಷ್ಟದಲ್ಲಿದ್ದಾರೆ ಎಂದು ಅವರು ಹೇಳಿದರು.
ವಿರೋಧಿಗಳು ಸುಳ್ಳು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಮಮದಾಪುರ ಕೆರೆ ತುಂಬಿದ್ದೇನೆ. ರಸ್ತೆ ನಾನೇ ಮಾಡಿದ್ದೇನೆ ಎಂದು ಬೊಗಳೆ ಬಿಡುತ್ತಿದ್ದಾರೆ. ಈ ಮುಂಚೆ ಮುಂಚೆ ಹೆದರಿಸಿ, ಬೆದರಿಸುತ್ತ ಗೂಂಡಾಗಿರಿ ಮಾಡಿದ್ದರು. ಈಗ ಮೊಸಳೆ ಕಣ್ಣೀರು ಸುರಿಸುತ್ತ, ಅಡ್ಡ ಬೀಳುವ ನಾಟಕವಾಡುವ ಮೂಲಕ ಪ್ರಚಾರ ನಡೆಸಿದ್ದಾರೆ ಎಂದು ಅವರು ಟೀಕಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬಸವರಾಜ ದೇಸಾಯಿ, ಸಂಗಮೇಶ ಬಬಲೇಶ್ವರ, ಹಂಚನಾಳ ಗ್ರಾಮದ ಬಸನಗೌಡ ಬಿರಾದಾರ, ಭೀಮನಗೌಡ ಬಿರಾದಾರ, ಸದಪ್ಪ ಜೋಗೀನ, ಮಲ್ಲಪ್ಪ ಸತ್ತಿಗೇರಿ, ಮಂಗಳೂರ ಗ್ರಾಮದ ಮಲ್ಲಪ್ಪ ಹಂಗರಗಿ, ಭೀಮಪ್ಪ ಗುಡದಿನ್ನಿ, ಸುರೇಶ ಕಮ್ಮಾರ, ಗಂಗಯ್ಯ, ಕೊಡಬಾಗಿ ಗ್ರಾಮದ ಜಿ. ಬಿ. ಹರನಟ್ಟಿ, ಎಚ್. ಬಿ. ಹರನಟ್ಟಿ, ವೆಂಕಟೇಶ ಬಿರಾದಾರ, ಮಹಾದೇವಸ್ವಾಮಿ ಹಿರೇಮಠ, ಮುಖಂಡರಾದ ಕೃಷ್ಣಾ ಕುಲಕರ್ಣಿ, ಲಕ್ಷ್ಮಣ ತೇಲಿ, ಡಾ. ಕೌಸರನಿಯಾಜ್ ಅತ್ತಾರ, ಮಲ್ಲಿಕಾರ್ಜುನ ಗಂಗೂರ, ಚನ್ನಪ್ಪ ಕೊಪ್ಪದ, ಪ್ರಕಾಶ ಸೊನ್ನದ, ಶಂಕರ ಸಿದರೆಡ್ಡಿ, ಮುನ್ನಾ ಗಣಿ ಮಕ್ಬುಲ್ ಭಾಗವಾನ್, ಶಿವನಗೌಡ ಪಾಟೀಲ, ಸುರೇಶ ಕರಿಕಲ್ಲ ಮುಂತಾದವರು ಉಪಸ್ಥಿತರಿದ್ದರು.