ಕೂಡಲಸಂಗಮಕ್ಕೆ ರಾಹುಲ ಗಾಂಧಿ ಭೇಟಿ | ಬಸವ ಐಕ್ಯಮಂಟಪ ದರ್ಶನ | ಬಸವ ಜಯಂತಿ ಕಾರ್ಯಕ್ರಮದಲ್ಲಿ ಭಾಗಿ
ವಿಜಯಪುರ: ನಗರಕ್ಕೆ ಏ. 23 ರವಿವಾರದಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಭೇಟಿ ನೀಡಲಿದ್ದು, ಅಂದು ಸಂಜೆ ಬೃಹತ್ ರೋಡ್ ಶೋ ನಡೆಸಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಡಾ.ಎಂ.ಬಿ ಪಾಟೀಲ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರಣೆ ನೀಡಿದ ಅವರು, ಏ.23 ರಂದು ಕೂಡಲಸಂಗಮದಿAದ ಸಂಜೆ 5 ಗಂಟೆಗೆ ವಿಜಯಪುರ ನಗರಕ್ಕೆ ಆಗಮಿಸಲಿದ್ದು, ನಗರದ ಶಿವಾಜಿ ವೃತ್ತದಿಂದ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಅಲ್ಲಿಂದ ಆರಂಭವಾಗುವ ರೋಡ್ ಷೋ ಗಾಂಧೀ ವೃತ್ತ, ಬಸವೇಶ್ವರ ವೃತ್ತ, ಡಾ.ಬಿ.ಆರ್. ಅಂಬೇಡ್ಕರ ವೃತ್ತದ ಮಾರ್ಗವಾಗಿ ಕನಕದಾಸ ವೃತ್ತಕ್ಕೆ ತಲುಪಿ ಸಂಪನ್ನಗೊಳ್ಳಲಿದೆ. ಅಲ್ಲಿ ಸಾರ್ವಜನಿಕರನ್ನುದ್ದೇಶಿಸಿ ರಾಹುಲ್ ಗಾಂಧೀ ಮಾತನಾಡಲಿದ್ದು, ಅಂದು ವಿಜಯಪುರದಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ ಎಂದು ವಿವರಿಸಿದರು.
ಸುಮಾರು 1 ಲಕ್ಷಕ್ಕೂ ಅಧಿಕ ಜನರು ಈ ರ್ಯಾಲಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪ್ರೊ.ರಾಜು ಆಲಗೂರ, ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಹಮೀದ್ ಮುಶ್ರೀಫ್, ಡಾ.ಮಹಾಂತೇಶ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠೀಯಲ್ಲಿ ಉಪಸ್ಥಿತರಿದ್ದರು.
ಕೂಡಲಸಂಗಮ: ಬಸವ ಜಯಂತಿಯಲ್ಲಿ ರಾಹುಲ್ ಭಾಗಿ
ಎಐಸಿಸಿ ನಾಯಕ ರಾಹುಲ್ ಗಾಂಧಿ ಏ.23 ರಂದು ಬೆಳಿಗ್ಗೆ ಹುಬ್ಬಳ್ಳಿಯಿಂದ ೧೧.೫೦ಕ್ಕೆ ಕೂಡಲಸಂಗಮಕ್ಕೆ ಆಗಮಿಸಲಿದ್ದು, ಅಲ್ಲಿ ಬಸವಣ್ಣನವರ ಐಕ್ಯಮಂಟಪಕ್ಕೆ ನಮನ ಸಲ್ಲಿಸಲಿದ್ದಾರೆ. ನಂತರ ಬಸವ ಭವನದಲ್ಲಿ ಬಸವ ಸಂಘಟನೆಗಳು ಆಯೋಜಿಸಿದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಹೇಳಿದರು.
ಕೂಡಲಸAಗಮದಲ್ಲಿ ನಡೆಯಲಿರುವ ಕಾರ್ಯಕ್ರಮವು ಪಕ್ಷಾತೀತವಾಗಿದ್ದು, ಗದಗ ತೋಂಟದಾರ್ಯ ಮಠದ ಡಾ.ಸಿದ್ಧರಾಮ ಮಹಾಸ್ವಾಮೀಜಿ ಅವರು ಬಸವಾದಿ ಶರಣರು, ಬಸವ ತತ್ವದ ಬಗ್ಗೆ ಮಾತನಾಡಲಿದ್ದಾರೆ. ಇಲಕಲ್ ಗುರುಮಹಾಂತ ಶ್ರೀಗಳು, ಕೂಡಲಸಂಗಮ ಪಂಚಮಸಾಲಿ ಜಗದ್ಗುರು, ಭಾಲ್ಕಿ ಬಸವಲಿಂಗ ಶ್ರೀಗಳು ಸೇರಿದಂತೆ ಹಲವಾರು ಮಠಾಧೀಶರು ಪಾಲ್ಗೊಳ್ಳಲಿದ್ದಾರೆ ಎಂದರು.
ಕಾರ್ಯಕ್ರಮ ಬಳಿಕ ಜನಸಾಮಾನ್ಯರೊಂದಿಗೆ ದಾಸೋಹ ಭವನದಲ್ಲಿ ದಾಸೋಹ ಸ್ವೀಕರಿಸುವ ಆಶಯ ವ್ಯಕ್ತಪಡಿಸಿದ್ದಾರೆ ಎಂದು ಪಾಟೀಲ ತಿಳಿಸಿದರು.
ಇದು ಸಂಪೂರ್ಣ ರಾಜಕೀಯ ರಹಿತ ಕಾರ್ಯಕ್ರಮವಾಗಿದ್ದು, ಯಾವ ಪಕ್ಷದ ಬ್ಯಾನರ್ ಅಲ್ಲಿರುವುದಿಲ್ಲ ಎಂದರು.
ಏ.23 ಮಹಾತ್ಮ ಬಸವೇಶ್ವರರು ಜನ್ಮತಾಳಿದ ಪವಿತ್ರ ದಿನ, ಬಸವೇಶ್ವರರು 12 ನೇ ಶತಮಾನದಲ್ಲಿ ದೊಡ್ಡ ಸಾಮಾಜಿಕ ಕ್ರಾಂತಿ ಮಾಡಿದ ಮಹಾನ್ ಚೇತನ, ಜಗತ್ತಿನ ಪ್ರಥಮ ಪಾರ್ಲಿಮೆಂಟ್ ರೂವಾರಿ. ಅಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ವಚನಗಳ ಮೂಲಕ ಸಾಮಾಜಿಕ ಕ್ರಾಂತಿಗೆ ಮುನ್ನುಡಿ ಬರೆದವರು ಅಣ್ಣ ಬಸವಣ್ಣನವರು.
ಮೌಢ್ಯಗಳನ್ನು ಬದಿಗೊತ್ತಿ ಕಾರ್ಲಮಾರ್ಕ್ಸಗಿಂತಲೂ ನಾಲ್ಕು ದಶಕಗಳ ಮುಂಚೆ ಕಾಯಕದ ಸ್ವಾಭಿಮಾನ ಹಾಗೂ ದಾಸೋಹದ ತತ್ವ ಸಾರಿದವರು ಅಣ್ಣ ಬಸವಣ್ಣವರು ಎಂದು ವಿವರಿಸಿದರು.
ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯ; ಮರಳಿ ಮನೆಗೆ ಲಿಂಗಾಯತರು
ಲಿಂಗಾಯತ ನಾಯಕರು ಬಿಜೆಪಿಯಲ್ಲಿರುವ ವಾತಾವರಣದಿಂದ ರೋಸಿಹೋಗಿದ್ದು, ಈಗ ಮರಳಿ ಕಾಂಗ್ರೆಸ್ ಮನೆಗೆ ಬರುತ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲಿಂಗಾಯತ ನಾಯಕರನ್ನು ಬಿಜೆಪಿ ದಮನ ಮಾಡುತ್ತಿದೆ. ಈಗ ವಿರೇಂದ್ರ ಪಾಟೀಲರ ಹೆಸರನ್ನು ಪ್ರಸ್ತಾಪಿಸುತ್ತಿದೆ, ವಿರೇಂದ್ರ ಪಾಟೀಲರಿಗೆ ಆಗ ತೀವ್ರ ಅನಾರೋಗ್ಯ ಸಮಸ್ಯೆ ಎದುರಾಗಿತ್ತು, ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲು ಅವರಿಗೆ ಅಸಾಧ್ಯವಾದ ಕಾರಣ ರಾಜ್ಯದ ಹಿತದೃಷ್ಟಿಯಿಂದ ಅವರನ್ನು ಬದಲಾಯಿಸಲಾಯಿತು. ಆದರೆ ಯಡಿಯೂರಪ್ಪನವರಿಗೆ ಯಾವ ಸಮಸ್ಯೆಯೂ ಇರಲಿಲ್ಲ. ಆಪರೇಷನ್ ಕಮಲ ಮಾಡಿಸಲು ಯಡಿಯೂರಪ್ಪನವರಿಗೆ ಪ್ರೋತ್ಸಾಹಿಸಿ, ಅವರಿಗೆ ಕೆಟ್ಟ ಹೆಸರು ತಂದು, ನಂತರ ಅವರನ್ನು ಕೈ ಬಿಡಲಾಯಿತು. ಒಬ್ಬ ಲಿಂಗಾಯತ ಹಿರಿಯ ಮುತ್ಸದ್ಧಿ ನಾಯಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರಿಗೆ ಪ್ರತಿಷ್ಠಾಪನೆ ಮಾಡಿದ ಹಿನ್ನೆಲೆಯಲ್ಲಿ ಅಂದು ಬಿಜೆಪಿ ಬೇರೆಯಾದ ಹಿಡನ್ ಅಜೆಂಡಾ ಇರಿಸಿಕೊಂಡಿತ್ತು. ಆಗಿನ ಪರಿಸ್ಥಿತಿಗೆ ಹೆದರಿ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡಲಾಯಿತು. ಅವರು ಆಕಸ್ಮಿಕ ಮತ್ತು ಅನಿವಾರ್ಯದ ಮುಖ್ಖಮಂತ್ರಿ.
ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿಗೆ ಆಗಿರುವ ಪರಿಸ್ಥಿತಿ ಚುನಾವಣೆ ಬಳಿಕ ಬಸವರಾಜ ಬೊಮ್ಮಾಯಿ ಅವರಿಗೂ ಬರಲಿದೆ, ಬಿಜೆಪಿ ಹಿಡನ್ ಅಜೆಂಡಾ ಈಗ ಸ್ಪಷ್ಟವಾಗುತ್ತಾ ಸಾಗಿದೆ ಎಂದರು.
ನಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಶಾಸಕಾಂಗ ಪಕ್ಷದ ಸಭೆ ನಡೆಯುತ್ತದೆ. ಎಐಸಿಸಿಯಿಂದ ವೀಕ್ಷಕರು ಆಗಮಿಸುತ್ತಾರೆ. ಎಲ್ಲ ಶಾಸಕರ ಒಟ್ಟಾಭಿಪ್ರಾಯ ಸಂಗ್ರಹಿಸಿ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗುತ್ತದೆ, ಈ ಸಂಪ್ರದಾಯ ಜನರಿಗೂ ಗೊತ್ತಿದೆ. ಆದರೂ ಸಹ ಬಿಜೆಪಿ ಈ ವಿಷಯದಲ್ಲಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬಿಜೆಪಿ ಹಿಡನ್ ಅಜೆಂಡಾ ಬಗ್ಗೆ ಲಿಂಗಾಯತರಿಗೆ ಈಗ ಅರಿವಾಗಿದೆ ಎಂದರು.
ನಮ್ಮ ಹೈಕಮಾಂಡ್ ಬಯಸಿದರೆ ಯಾರೂ ಬೇಕಾದರೂ ಮುಖ್ಯಮಂತ್ರಿ ಆಗಬಹುದು, ಸಿದ್ಧರಾಮಯ್ಯ, ಡಿ.ಕೆ. ಶಿವಕುಮಾರ, ಡಾ.ಪರಮೇಶ್ವರ, ನಾನು, ಕೃಷ್ಣ ಭೈರೇಗೌಡ, ಆರ್.ವಿ.ದೇಶಪಾಂಡೆ ಸೇರಿದಂತೆ ಅನೇಕ ಸಮರ್ಥ ನಾಯಕರಿದ್ದಾರೆ. ನಾನೂ ಸಹ ಸಮರ್ಥನಿದ್ದು ಹೈಕಮಾಂಡ್ ಬಯಸಿದರೆ ನಾನೂ ಆಗಬಹುದು ಎಂದರು.
ಮಹಾತ್ಮಾ ಗಾಂಧೀಜಿ, ಇಂದಿರಾಗಾAಧೀ, ರಾಜೀವ ಗಾಂಧಿ ಅವರು ಅಲಂಕರಿಸಿದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಹುದ್ದೆಯಲ್ಲಿ ಖರ್ಗೆಜಿ ಅವರು ಇದ್ದಾರೆ. ಅವರು ಪ್ರಧಾನಮಂತ್ರಿ ಆಗುವಂತಹ ದೊಡ್ಡ ಹುದ್ದೆಯಲ್ಲಿ ಇದ್ದಾರೆ. ಅವರಿಗೆ ಮುಖ್ಯಮಂತ್ರಿ ಸಣ್ಣ ಸ್ಥಾನ, ಆದರೂ ಸಹ ಹೈಕಮಾಂಡ್ ನಿರ್ಧಾರವೇ ಅಂತಿಮ ಎಂದು ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.